ಗುಜರಾತ್ ಚುನಾವಣೆ – “ಏನಾದರೂ ವಿಭಿನ್ನವಾಗಿ ಮಾಡಿ” ಎಂದ ಕೇಜ್ರಿವಾಲ್

ಗುಜರಾತ್ ಚುನಾವಣೆ – “ಏನಾದರೂ ವಿಭಿನ್ನವಾಗಿ ಮಾಡಿ” ಎಂದ ಕೇಜ್ರಿವಾಲ್

ಅಹಮದಾಬಾದ್: ಗುಜರಾತ್‌ನಲ್ಲಿ ಎರಡನೇ ಹಂತದ ವಿಧಾನಸಭಾ ಚುನಾವಣೆಗೆ ಇಂದು ಮತದಾನ ನಡೆಯುತ್ತಿದೆ. ಈ ನಡುವೆ ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಮತದಾರರಿಗೆ ಮನವಿ ಮಾಡಿದ್ದಾರೆ. ಇಂದು ಮತ ಚಲಾಯಿಸುತ್ತಿರುವ ಗುಜರಾತ್‌ ಮತದಾರರಿಗೆ “ಏನಾದರೂ ವಿಭಿನ್ನವಾಗಿ ಮಾಡಿ” ಎಂದು ಒತ್ತಾಯಿಸಿ ಟ್ವೀಟ್ ಮಾಡಿದ್ದಾರೆ.

“ಗುಜರಾತ್‌ನಲ್ಲಿ 93 ಸ್ಥಾನಗಳಲ್ಲಿ ಎರಡನೇ ಹಂತದ ಮತದಾನ ಇಂದು ನಡೆಯುತ್ತಿದೆ. ಎಲ್ಲಾ ಮತದಾರರಿಗೆ ನನ್ನ ಮನವಿ ಏನೆಂದರೆ ಈ ಚುನಾವಣೆ ಗುಜರಾತ್‌ನ ಹೊಸ ಭರವಸೆ ಮತ್ತು ಆಕಾಂಕ್ಷೆಗಳಿಂದ ಕೂಡಿದೆ. ಇದು ದಶಕಗಳ ನಂತರ ಬಂದಿರುವ ಉತ್ತಮ ಅವಕಾಶ. ಭವಿಷ್ಯವನ್ನು ನೋಡಿ ಗುಜರಾತ್‌ನ ಪ್ರಗತಿಗಾಗಿ ಮತ ಚಲಾಯಿಸಿ. ಈ ಬಾರಿ ವಿಭಿನ್ನವಾದ ಮತ್ತು ಅದ್ಭುತವಾದದ್ದನ್ನು ಮಾಡಿ” ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ‘ಚುನಾವಣೆ ಗೆಲ್ಲಲು ಬಿಜೆಪಿ ಹಣ, ಹೆಂಡದ ಹೊಳೆ ಹರಿಸುತ್ತಿದೆ’ – ಡಿಂಪಲ್ ಯಾದವ್  

ಈ ಬಾರಿ ಗುಜರಾತ್‌ಗೆ ಕಾಲಿಡಲು ಆಪ್ ತೀವ್ರ ಪ್ರಯತ್ನ ನಡೆಸುತ್ತಿದೆ. ಬಿಜೆಪಿ ಭದ್ರಕೋಟೆಯಲ್ಲಿ ಆಪ್ ಪಕ್ಷವು ವ್ಯಾಪಕ ಪ್ರಚಾರವನ್ನು ಮಾಡಿದೆ. ಕೇಜ್ರಿವಾಲ್ ನೇತೃತ್ವದಲ್ಲಿ ಆಮ್‌ ಆದ್ಮಿ ಪಕ್ಷ ಹಲವಾರು ಭರವಸೆಗಳನ್ನು ಗುಜರಾತ್‌ ಮತದಾರರಿಗೆ ನೀಡಿದೆ.

ಕೇಂದ್ರ ಮತ್ತು ಉತ್ತರ ಗುಜರಾತ್‌ನ ಪ್ರಮುಖ ಸ್ಥಾನಗಳನ್ನು ಒಳಗೊಂಡಿರುವ ರಾಜ್ಯ ಚುನಾವಣೆಯಲ್ಲಿ, ಎರಡನೇ ಹಂತದ ಚುನಾವಣೆಯಲ್ಲಿ ಸುಮಾರು 833 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಎಎಪಿ ಈ ಬಾರಿ ಎಲ್ಲಾ 93 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ಕಳೆದ ಬಾರಿ ಉತ್ತಮ ಪ್ರದರ್ಶನ ನೀಡಿದ ಕಾಂಗ್ರೆಸ್, ಬಿಜೆಪಿಯಿಂದ ಅಧಿಕಾರವನ್ನು ಕಸಿದುಕೊಳ್ಳಲು ವಿಫಲವಾಯಿತು. ಈಗ 90 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ಅದರ ಮಿತ್ರ ಪಕ್ಷವಾದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಎರಡು ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

suddiyaana