ಡೆಲ್ಲಿಗೆ ಹೋದ್ರೂ ಸಿಎಂ ಆಗಲ್ವಾ ಡಿಕೆ? – ನವೆಂಬರ್ ಕ್ರಾಂತಿಗೆ ಬ್ರೇಕ್

ಡೆಲ್ಲಿಗೆ ಹೋದ್ರೂ ಸಿಎಂ ಆಗಲ್ವಾ ಡಿಕೆ? –  ನವೆಂಬರ್ ಕ್ರಾಂತಿಗೆ ಬ್ರೇಕ್

ನವೆಂಬರ್‌ನಲ್ಲಿ ರಾಜ್ಯ ರಾಜಕೀಯದಲ್ಲಿ ಕ್ರಾಂತಿ ಆಗುತ್ತೆ.. ಡಿಕೆ ಶಿವಕುಮಾರ್ ಸಿಎಂ ಆಗೇ ಆಗ್ತಾರೆ ಅನ್ನೋ ಬ್ರೇಕಿಂಗ್ ನ್ಯೂಸ್‌ಗಳು ಬರ್ತಾನೆ ಇವೆ.. ಡಿಕೆಶಿ ಬೆಂಬಲಿಗರು ತಮ್ಮ ಬಾಸ್ ಸಿಎಂ ಅಂತ ಖುಷಿಯಲ್ಲಿ ಕುಣಿಯುತ್ತಿದ್ದಾರೆ. ಆದ್ರೆ ಈ ಬಗ್ಗೆ ಡಿಕೆಶಿ ಆಗಲಿ, ಸಿದ್ದು ಆಗಲಿ ಬಾಯಿ ಬಿಟ್ಟಿಲ್ಲ.. ಈ ನಡುವೆ ಡಿಕೆಶಿ ಪದೇ ಪದೇ ಡೆಲ್ಲಿ ಫ್ಲೈಟ್ ಹತ್ತುತ್ತಾ ಇರೋದು ಸಾಕಷ್ಟು ಕುತೂಹಲ ಕೆರಳಿಸಿದೆ.  ಬಿಹಾರಕ್ಕೆ ಹೋಗಬೇಕಿದ್ದ ಡಿಕೆಶಿ ಈಗ ಸಿಎಂಗೂ ಮೊದಲೇ ಡೆಲ್ಲಿಗೆ ಹೋಗಿದ್ದಾರೆ.

ಕಳದ ವಾರವಷ್ಟೇ ಡೆಲ್ಲಿಗೆ ಹೋಗಿ ಡೀಲ್ ಮಾಡಿಕೊಂಡು ಬಂದಿರೋ ಡಿಕೆಶಿ ಈಗ ಮತ್ತೆ ಡೆಲ್ಲಿ ವಿಮಾನ ಹತ್ತಿದ್ದಾರೆ. ಮೇಲಿಂದ ಮೇಲಿಂದ ಡಿಕೆಶಿವಕುಮಾರ್ ಡೆಲ್ಲಿಗೆ ಹೋಗ್ತಾ ಇರೋದ್ ಯಾಕೆ ಅನ್ನೋ ಕುತೂಹಲ ಕೂಡ ಮನೆ ಮಾಡಿದೆ. ಯಾಕಂದ್ರೆ ರಾಜ್ಯರಾಜಕೀಯದಲ್ಲಿ ನವೆಂಬರ್ ಕ್ರಾಂತಿ ಆಗುತ್ತೆ ಅಂತ ಚರ್ಚೆ ಆಗ್ತಿದೆ. ಡಿಕೆಶಿ ಸಿಎಂ ಆಗಿ ಇದೇ ತಿಂಗಳು ಪ್ರಮಾಣವಚನ ಸ್ವೀಕಾರ ಮಾಡ್ತಾರೆ ಅನ್ನೋ ಟಾಕ್ ಇದೆ. ಹೀಗಿರುವಾಗ ಡಿಕೆಶಿ ಸಡನ್ ಆಗಿ ಡೆಲ್ಲಿಗೆ ಹೋಗಿದ್ದು ಯಾಕೆ ಅನ್ನೋ ಪ್ರಶ್ನೆ ಎಳುತ್ತಿದೆ. ಯಾಕಂದ್ರೆ ಇದೇ ತಿಂಗಳು 15ಕ್ಕೆ ಸಿಎಂ ಸಿದ್ದರಾಮಯ್ಯ ಡೆಲ್ಲಿಗೆ ಹೋಗಿ ಸಂಪುಟ ಪನರ್‌ರಚನೆ ಬಗ್ಗೆ ಮಾತುಕತೆ ನಡೆಸ್ತಾರೆ ಎನ್ನಲಾಗಿದೆ. ಈಗ ಸಿಎಂಗೂ ಮೊದಲೇ ಡಿಕೆಶಿ ಹೈಕಮಾಂಡ್‌ ಭೇಟಿ ಮಾಡೋಕೆ ಡೆಲ್ಲಿಗೆ ಹೋಗಿದ್ದಾರಾ? ಡಿಕೆಶಿ ಸಿಎಂ ಆಗೋ ಟೈಂ ಹತ್ರ ಬಂತಾ ಅನ್ನೋ ಚರ್ಚೆ ರಾಜ್ಯರಾಜಕೀಯದಲ್ಲಿ ಶುರುವಾಗಿದೆ.

ಇದನ್ನೂ ಓದಿ: ಹರಿಯಾಣದಲ್ಲಿ 25 ಲಕ್ಷ ನಕಲಿ ಮತದಾರರಿದ್ದಾರೆ – ರಾಹುಲ್ ಮತ್ತೆ ವೋಟ್ ಚೋರಿ ಆರೋಪ

ಹೌದು.. ಡಿಕೆಶಿ ಡೆಲ್ಲಿಗೆ ಹೋಗ್ತಾರೆ ಅಂದ್ರೆ  ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಯಾಗುತ್ತೆ.  ಹೈಕಮಾಂಡ್ ಜೊತೆ ಮಾತಾಡಿ ಸಿಎಂ ಸ್ಥಾನವನ್ನ ಪಡೆದುಕೊಳ್ತಾರಾ ಅನ್ನೋ ಪ್ರಶ್ನೆ ಕೂಡ ಹುಟ್ಟು ಹಾಕುತ್ತೆ. ಮೇಕದಾಟು ಯೋಜನೆ ವಿಚಾರಕ್ಕೆ ಡೆಲ್ಲಿಗೆ  ಡಿಕೆಶಿಿ ಹೋಗಿದ್ದಾರೆ ಅಂತ ಹೇಳಲಾಗ್ತಿದೆ. ಆದ್ರೆ ಅಸಲಿ ಕಾರಣ ಬೇರೆ ಇದೆ.. ಮೇಕದಾಟು ಯೋಜನೆ ಹೆಸರಲ್ಲಿ ಡೆಲ್ಲಿಗೆ ಹೋದ್ರೂ  ಹೈಕಮಾಂಡ್ ಭೇಟಿಯಾಗಿ ಅಧಿಕಾರ ಹಂಚಿಕೆ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಅಂದ್ರೆ ಇದೇ ತಿಂಗಳು 20ಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಎರಡೂವರೆ ವರ್ಷ ಆಗುತ್ತೆ.. ಹೀಗಾಗಿ ಅಧಿಕಾರ ಹಂಚಿಕೆಯ ಬಗ್ಗೆ ಹೈಕಮಾಂಡ್‌ಗೆ ನೆನಪಿಸುವ ಕೆಲಸವನ್ನ ಡಿಕೆಶಿ ಕಳೆದ ಸಾಕಷ್ಟು ದಿನಗಳಿಂದ ಮಾಡುತ್ತಿದ್ದು, ಈಗ ಅದೇ ಕಾರಣಕ್ಕೆ ಹೋಗಿದ್ದಾರೆ ಅಂತ ಹೇಳಲಾಗ್ತಿದೆ.  ನೀವು ಸರ್ಕಾರ ರಚನೆ ಆಗುವಾಗ ನನಗೆ ಮಾತು ಕೊಟ್ಟಿದ್ರಿ, ಅದರಂತೆ ನನಗೆ ಸಿಎಂ ಸ್ಥಾನ ನೀಡಿ ಅಂತ ಹೈಕಮಾಂಡ್‌ ಮುಂದೆ ಡಿಕೆಶಿ ಮನವಿ ಕೂಡ ಮಾಡಬಹುದು. ಆದ್ರೆ ಇಲ್ಲಿ ಇಟ್ರೆಸ್ಟಿಂಗ್ ವಿಷ್ಯ ಏನಪ್ಪ ಅಂದ್ರೆ ಡಿಕೆಶಿ ಡೆಲ್ಲಿಗೆ ಹೋದ್ರೂ ನವೆಂಬರ್ ಕ್ರಾಂತಿ ಆಗಲ್ಲ. ಡಿಕೆಶಿಗೆ ನವೆಂಬರ್ 21ಕ್ಕೆ ಸಿಎಂ ಆಗಿ ಪಟ್ಟಾಭಿಷೇಕ ಆಗಲ್ಲ.. ಅದ್ದಕ್ಕೆ ಕಾರಣ ರಾಹುಲ್ ಗಾಂಧಿ.. ಬಿಹಾರ ರಿಸಲ್ಟ್ ಬರ್ತಿದ್ದಂತೆ  ರಾಹುಲ್ ಗಾಂಧಿ ಫಾರಿನ್ ಟ್ರಿಪ್ ಹೋಗಲಿದ್ದಾರೆ.  ನವೆಂಬರ್ 15 ರಿಂದ ನವೆಂಬರ್ 22ರ ತನಕ ರಾಹುಲ್‌ ಗಾಂಧಿ ಪಿನ್‌ಲ್ಯಾಂಡ್ ಪ್ರವಾಸ ಕೈಗೊಂಡಿದ್ದಾರೆ. ಹೀಗಾಗಿ ರಾಹುಲ್ ಗಾಂಧಿ ಯಾರ ಕೈಗೂ ಸಿಗಲ್ಲ.. ನವೆಂಬರ್ 20ಕ್ಕೆ 100 ಕಾಂಗ್ರೆಸ್ ಕಚೇರಿ ಶಂಕು ಸ್ಥಾಪನೆಯನ್ನ ರಾಹುಲ್ ಗಾಂಧಿ ಅವರಿಂದ ಮಾಡಬೇಕು ಅಂತ ಡಿಕೆಶಿ ಪ್ಲ್ಯಾನ್ ಮಾಡಿದ್ರು. ಆದ್ರೆ  ನಾನು ಫಿನಲ್ಯಾಂಡ್‌ಗೆ ಹೋಗ್ತಾ ಇರೋದ್ರಿಂದ ನಾನು ಬರಲ್ಲ ನೀವೇ ಮಾಡಿ, ಇಲ್ಲ ಅಂದ್ರೆ ಡೇಟ್ ಮುಂದಕ್ಕೆ ಹಾಕಿ ಅಂತ ರಾಹುಲ್‌ ಗಾಂಧಿ ಹೇಳಿದ್ದಾರೆ. ಹೀಗಾಗಿ ನವೆಂಬರ್ 22ರ ತನಕ ಏನು ಆಗಲ್ಲ.. ಯಾಕಂದ್ರೆ ರಾಹುಲ್‌ ಗಾಂಧಿನೇ ಇಲ್ಲ ಅಂದ್ರೂ ಮೇಲೆ ಕಾಂಗ್ರೆಸ್‌ನಲ್ಲಿ ಯಾವ ಬದಲಾವಣೆ ಆಗಲ್ಲ.. ರಾಹುಲ್‌ ಹೇಳಿದ್ದಂತೆಯೇ ನಡೆಯೋದ್ರಿಂದ ಸಂಪುಟ ಪನರ್‌ರಚನೆ ಆಗಲಿ, ಸಿಎಂ ಬದಲಾವಣೆ ಆಗಲಿ ಆಗಲ್ಲ..   ನವೆಂಬರ್ 22 ರತನಕ ರಾಹುಲ್ ಗಾಂಧಿ ಡಿಕೆಶಿ ಸಿದ್ದರಾಮಯ್ಯ ಸೇರಿದಂತೆ ಯಾರಿಗೂ ಕೂಡ ಟೈಂ ಕೊಟ್ಟಿಲ್ಲ.. ಹೀಗಾಗಿ  ಡಿಕೆಶಿ ಸಿಎಂ ಕನಸು ನವೆಂಬರ್‌ನಲ್ಲಿ ನನಸಾಗಲ್ಲ.. ಸುಮ್ನೆ ಹೈಕಮಾಂಡ್‌ನ ಭೇಟಿಯಾಗಿ ಬರಬೇಕು ಅಷ್ಟೇ. ಈಗಾಗಲೇ ಕಾಂಗ್ರೆಸ್ ಹೈಕಮಾಂಡ್ ಬಿಹಾರ ಎಲೆಕ್ಷನ್‌ನಲ್ಲಿ ಬ್ಯುಸಿ ಇದೆ, ಒಂದು ವೇಳೆ ಬಿಹಾರದಲ್ಲಿ ಕಾಂಗ್ರಸ್ ಅಧಿಕಾರಕ್ಕೆ ಬಂದ್ರೆ ಅಲ್ಲಿ ರಾಹುಲ್ ಗಾಂಧಿ ಬ್ಯುಸಿ ಆಗ್ತಾರೆ. ಹೀಗಾಗಿ ಸದ್ಯಕ್ಕೆ ರಾಹುಲ್‌ ಗಾಂಧಿ ಡಿಕೆಶಿ ಕೈಗೆ ಸಿಗಲ್ಲ.. ಡಿಕೆಶಿ ನವೆಂಬರ್‌ನಲ್ಲಿ ಸಿಎಂ ಆಗಲ್ಲ ಅನ್ನೋ ಮಾತಿದೆ.

ಇನ್ನೂ ಮತ್ತೊಂದ್ಕಡೆ ಸಿಎಂ ಸಿದ್ದರಾಮಯ್ಯ ಕೂಡ ರಾಜಣ್ಣನ ಮನೆಯ ಲಂಚ್ ಕ್ಯಾನ್ಸಲ್ ಮಾಡಿದ್ದಾರೆ. ನವೆಂಬರ್ 7ಕ್ಕೆ ತುಮಕೂರು ಪ್ರವಾಸಕ್ಕೆ ಹೋಗೋಗುವ ಸಿಎಂ ಸಿದ್ದರಾಮಯ್ಯರಿಗೆ ರಾಜಣ್ಣ ಲಂಚ್ ವ್ಯವಸ್ಥೆ ಮಾಡಿದ್ರು. ಆದ್ರೆ ರಾಜಣ್ಣ ಮನೆಗೆ ಹೋದ್ರೆ ಹಲವು ರಾಜಕೀಯ ಆಯಾಮಕ್ಕೆ ಕಾರಣ ಆಗುತ್ತೆ ಅಂತ ಅದ್ದನ್ನ ಕ್ಯಾನ್ಸಲ್ ಕೂಡ ಮಾಡಿದ್ದಾರೆ. ಆಪ್ತರ ಸಲಹೆ ಮೇರೆಗೆ ಕ್ಯಾನ್ಸಲ್ ಮಾಡಿದ್ದು,  ರಾಜಣ್ಣ ಮನೆಯ ಬದಲಾಗಿ  ಗೃಹ ಸಚಿವ ಪರಮೇಶ್ವರ್ ಅವರ ಮನೆಗೆ ಲಂಚ್‌ಗೆ ಹೋಗುವ ಸಾಧ್ಯತೆಯಿದೆ.

ಇನ್ನೂ ಸಿದ್ದರಾಮಯ್ಯ ನವೆಂಬರ್  15ಕ್ಕೆ ಡೆಲ್ಲಿಗೆ ಹೋಗಿ 2-3 ದಿನ ಅಲ್ಲೇ ಇರುವ ಸಾಧ್ಯತೆಯಿದೆ. ಸಂಪುಟ ಪುನರ್‌ರಚನೆ  ಬಗ್ಗೆ ಮಾತನಾಡಿ, ಪವರ್ ಶೇರಿಂಗ್ ಮಾತಿಗೆ ಬ್ರೇಕ್‌ ಹಾಕೋಕೆ ಸಿದ್ದು ಪ್ಲ್ಯಾನ್ ಮಾಡ್ತಿದ್ದಾರೆ. ಹೀಗಿದ್ದೂ ಒಂದು ವೇಳೆ ಸಿಎಂ ಸ್ಥಾನ ಬಿಟ್ಟು ಕೂಡುವ ಮಾತು ಬಂದ್ರೆ ದಲಿತ ಸಿಎಂ ದಾಳ ಉರಳಿಸೋ ಲೆಕ್ಕಚಾರದಲ್ಲಿ ಸಿದ್ದು ಇದ್ದಾರೆ.

Kishor KV