ಲೋಕಸಭೆ ಕಲಾಪದಲ್ಲಿ ಮುಂದುವರಿದ ಭದ್ರತಾ ಉಲ್ಲಂಘನೆ ಪ್ರಕರಣದ ಕೋಲಾಹಲ – ಮತ್ತೆ 49 ಸದಸ್ಯರು ಅಮಾನತು!

ಲೋಕಸಭೆ ಕಲಾಪದಲ್ಲಿ ಮುಂದುವರಿದ ಭದ್ರತಾ ಉಲ್ಲಂಘನೆ ಪ್ರಕರಣದ ಕೋಲಾಹಲ – ಮತ್ತೆ 49 ಸದಸ್ಯರು ಅಮಾನತು!

ಡಿ. 13 ರಂದು ಸಂಸತ್‌ನಲ್ಲಿ ಸಂಭವಿಸಿದ ಭದ್ರತಾ ಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹಸಚಿವರ ಉತ್ತರಕ್ಕೆ ವಿರೋಧ ಪಕ್ಷಗಳ ಸಂಸದರು ಒತ್ತಾಯಿಸುತ್ತಿದ್ದಾರೆ. ಈ ವಿಚಾರವಾಗಿಯೇ ಮಂಗಳವಾರ ಕೂಡ ಸದನದಲ್ಲಿ ಗದ್ದಲ, ಕೋಲಾಹಲ ಮುಂದುವರಿದಿದೆ. ಕಲಾಪ ನಡೆಯುತ್ತಿರುವ ವೇಳೆ ಭಾರಿ ಗದ್ದಲ ಉಂಟುಮಾಡಿದ ವಿರೋಧ ಪಕ್ಷಗಳ 49 ಸದಸ್ಯರನ್ನು ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ ಅವರು ಅಮಾನತು ಮಾಡಿದ್ದಾರೆ.

ಹೌದು, ಡಿ13 ರಂದು ಲೋಕಸಭೆ ಕಲಾಪದ ವೇಳೆ ಭದ್ರತಾ ವೈಫಲ್ಯ ಸಂಭವಿಸಿದೆ. ಇಬ್ಬರು ಒಳನುಸುಳುಕೋರರು ಲೋಕಸಭೆಯ ಸಭಾಂಗಣಕ್ಕೆ ಪ್ರವೇಶಿಸಿ, ಡಬ್ಬಿಗಳಿಂದ ಬಣ್ಣದ ಹೊಗೆಯನ್ನು ಬಿಡುಗಡೆ ಮಾಡಿದ ಭದ್ರತಾ ವೈಫಲ್ಯದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂಸತ್ತಿನಲ್ಲಿ ಮಾತನಾಡಬೇಕೆಂದು ವಿಪಕ್ಷ ಸಂಸದರು ಒತ್ತಾಯಿಸುತ್ತಿದ್ದಾರೆ. ಲೋಕಸಭೆಯಲ್ಲಿ ಭಾರೀ ಭದ್ರತಾ ಲೋಪದ ಬಗ್ಗೆ ವಿರೋಧ ಪಕ್ಷದ ಸಂಸದರು ಸಂಸತ್ತಿನ ಉಭಯ ಸದನಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ವಿಪಕ್ಷಕ್ಕೆ ಮತ್ತೊಂದು ಶಾಕ್‌! – 33 ಸಂಸದರು ಲೋಕಸಭೆಯಿಂದ ಅಮಾನತು!

ಕಳೆದ ವಾರದಿಂದ ಅಮಾನತು ಕ್ರಮ ಆರಂಭವಾಗಿದ್ದು, ಭದ್ರತಾ ಉಲ್ಲಂಘನೆಯ ಒಂದು ದಿನದ ನಂತರ, ಪ್ರತಿಪಕ್ಷ ಸಂಸದರು ಗೃಹ ಸಚಿವರ ಹೇಳಿಕೆಗೆ ಒತ್ತಾಯಿಸಲು ಪ್ರಾರಂಭಿಸಿದ್ದಾರೆ. ಅಶಿಸ್ತಿನ ವರ್ತನೆಯ ಆಧಾರದ ಮೇಲೆ 13 ಲೋಕಸಭಾ ಸಂಸದರು ಮತ್ತು ಒಬ್ಬ ರಾಜ್ಯಸಭಾ ಸಂಸದರನ್ನು ಶನಿವಾರ ಅಮಾನತುಗೊಳಿಸಲಾಗಿತ್ತು. ಬಳಿಕ ಸೋಮವಾರ ಕೂಡ ಕಲಾಪದ ವೇಳೆ ಗದ್ದಲ ಮುಂದುವರಿದಿದ್ದು, ಒಂದೇ ದಿನದಲ್ಲಿ 79 ವಿರೋಧ ಪಕ್ಷದ ಸಂಸದರನ್ನು ಸಂಸತ್ತಿನಿಂದ ಅಮಾನತುಗೊಳಿಸಲಾಗಿದೆ. ಇದೀಗ ಮಂಗಳವಾರ ಕೂಡ 49 ಸದಸ್ಯರನ್ನು ಅಮಾನತು ಮಾಡಲಾಗಿದೆ. ಇದೀಗ ಈ ಅಧಿವೇಶನದಲ್ಲಿ ಅಮಾನತುಗೊಂಡ ಒಟ್ಟು ಸಂಸದರ ಸಂಖ್ಯೆ 141ಕ್ಕೇರಿದೆ.

ಕಲಾಪಕ್ಕೆ ಅಡ್ಡಿಪಡಿಸಿದ ನ್ಯಾಶನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ, ಕಾಂಗ್ರೆಸ್ ನಾಯಕರಾದ ಶಶಿ ತರೂರ್ ಮತ್ತು ಕಾರ್ತಿ ಚಿದಂಬರಂ, ಎನ್‌ಸಿಪಿಯ ಸುಪ್ರಿಯಾ ಸುಳೆ ಮತ್ತು ಸಮಾಜವಾದಿ ಪಕ್ಷದ ಡಿಂಪಲ್ ಯಾದವ್ ಸೇರಿದಂತೆ ವಿಪಕ್ಷ ಎಂಪಿಗಳನ್ನು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅಮಾನತು ಮಾಡಿದ್ದಾರೆ.

ಈ 141 ಸಂಸದರ ಪೈಕಿ ಹೆಚ್ಚಿನವರನ್ನು ಅಧಿವೇಶನದ ಉಳಿದ ಅವಧಿಗೆ ಅಮಾನತುಗೊಳಿಸಲಾಗಿದ್ದು, ಕೆಲವರು ಸದನದಲ್ಲಿ ಅವರ ನಡವಳಿಕೆಯ ಕುರಿತು ವಿಶೇಷಾಧಿಕಾರ ಸಮಿತಿಯ ವರದಿಗಾಗಿ ಕಾಯುತ್ತಿದ್ದಾರೆ. ತಮ್ಮ ಅಮಾನತು ಖಂಡಿಸಿ ಪ್ರತಿಪಕ್ಷಗಳ ಸಂಸದರು ಸಂಸತ್ ಆವರಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

Shwetha M