‘ಸಲಾಂ ಆರತಿ’ ಬದಲು ‘ಆರತಿ ನಮಸ್ಕಾರ’ – ದೇವಾಲಯಗಳಲ್ಲಿ ‘ಸಲಾಂ’ಗೆ ಕೊಕ್

‘ಸಲಾಂ ಆರತಿ’ ಬದಲು ‘ಆರತಿ ನಮಸ್ಕಾರ’ – ದೇವಾಲಯಗಳಲ್ಲಿ ‘ಸಲಾಂ’ಗೆ ಕೊಕ್

ಬೆಂಗಳೂರು : ಕರ್ನಾಟಕ ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ದೇವಾಲಯಗಳಲ್ಲಿ ರೂಢಿಯಾಗಿ ಬಂದಿರುವ ‘ದೀವಟಿಗೆ ಸಲಾಂ’, ‘ಸಲಾಂ ಆರತಿ’ ಮತ್ತು ‘ಸಲಾಂ ಮಂಗಳಾರತಿ’ ಎಂಬ ಪೂಜಾಕಾರ್ಯಗಳ ಹೆಸರನ್ನು ಬದಲಾಯಿಸಿ ನಮ್ಮ ಸಂಪ್ರದಾಯದ ಹೆಸರನ್ನು ಇಡುವ ಬಗ್ಗೆ ರಾಜ್ಯ ಧಾರ್ಮಿಕ ಪರಿಷತ್ತಿನಲ್ಲಿ ಚರ್ಚಿಸಲಾಗಿದೆ. ಈ ಪೂಜಾಕಾರ್ಯಗಳ ಹೆಸರನ್ನ ಆಯಾ ಸ್ಥಳೀಯ ಭಾಷೆಯ ಪದಗಳಿಗೆ ಬದಲಿಸುವ ಬಗ್ಗೆ ಮಾತ್ರ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮುಜರಾಯಿ ಸಚಿವೆ ಶಶಿಕಲಾ  ಜೊಲ್ಲೆ ಹೇಳಿದ್ದಾರೆ. ಕರ್ನಾಟಕದ ಯಾವುದೇ ದೇವಾಲಯದಲ್ಲಿ ಸಂಜೆ ಆರತಿ ಪದ್ಧತಿ ರದ್ದಾಗುವುದಿಲ್ಲ. ‘ಸಲಾಂ ಆರತಿ’ ಹೆಸರಿನಲ್ಲಿರುವ ‘ಸಲಾಂ’ ಪದವನ್ನು ಮಾತ್ರ ಕೈಬಿಡಲಾಗುತ್ತದೆ ಎಂದು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ :  ಶಿರಾಡಿ ಘಾಟ್‌ನಲ್ಲಿ ಹಸಿರು ಸುರಂಗ ಮಾರ್ಗ ಯೋಜನೆ ಸಾಧ್ಯವಿಲ್ಲ – ಕೇಂದ್ರ ಸಚಿವ ನಿತಿನ್ ಗಡ್ಕರಿ

ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯ ಕೆಲವು ದೇವಾಲಯಗಳಲ್ಲಿ ಬೆಳಿಗ್ಗೆ, ಮಧ್ಯಾಹ್ನ ಮತ್ತು ಸಂಜೆಯ ವೇಳೆ ದೀವಟಿಗೆ ಹಿಡಿದು ದೇವಾಲಯಕ್ಕೆ ಮತ್ತು ದೇವರಿಗೆ ಆರತಿಯಂತೆ ನಡೆಸುವ ಕಾರ್ಯಕ್ಕೆ ದೀವಟಿಗೆ ಸಲಾಂ, ಸಲಾಂ ಮಂಗಳಾರತಿ ಮತ್ತು ಸಲಾಂ ಆರತಿ ಎಂದು ಕೆಲವು ದೇವಾಲಯಗಳಲ್ಲಿ ಕರೆಯಲಾಗುತ್ತಿದೆ. ಇದನ್ನ ಬದಲಾಯಿಸಬೇಕು ಎಂದು ಸಾಕಷ್ಟು ಒತ್ತಾಯ ಇರುವ ಬಗ್ಗೆ ಧಾರ್ಮಿಕ ಪರಿಷತ್ತಿನ ಸದಸ್ಯರು ಸಭೆಯ ಗಮನಕ್ಕೆ ತಂದಿದ್ದಾರೆ. ಈ ಇದರ ಹಿನ್ನಲೆಯಲ್ಲಿ ರಾಜ್ಯ ಧಾರ್ಮಿಕ ಪರಿಷತ್ತಿನಲ್ಲಿ ಈ ವಿಚಾರದ ಬಗ್ಗೆ ವಿಸ್ತ್ರತ ಚರ್ಚೆ ನಡೆದಿದೆ. ಈ ಹಿನ್ನಲೆಯಲ್ಲಿ ಧಾರ್ಮಿಕ ದತ್ತಿ ಇಲಾಖೆಯ ಹಿರಿಯ ಆಗಮ ಪಂಡಿತರ ಅಭಿಪ್ರಾಯದಂತೆ ದೇವಾಲಯಗಳಲ್ಲಿ ಇನ್ನು ಮುಂದೆ

‘ದೀವಟಿಗೆ ಸಲಾಂ’ ಎಂಬ ಪದದ ಬದಲಾಗಿ ‘ದೀವಟಿಗೆ ನಮಸ್ಕಾರ’ ಎಂದೂ, ‘ಸಲಾಂ ಆರತಿ’ ಎಂಬ ಪದದ ಬದಲಾಗಿ ‘ಆರತಿ ನಮಸ್ಕಾರ’ ಎಂದು ‘ಸಲಾಂ ಮಂಗಳಾರತಿ’ ಎಂಬ ಪದದ ಬದಲಾಗಿ ‘ಮಂಗಳಾರತಿ ನಮಸ್ಕಾರ’ ಎಂದು ಹೆಸರನ್ನು ಬದಲಾಯಿಸಿಕೊಂಡು ಸೇವೆಗಳನ್ನು ಮುಂದುವರೆಸಲು ಸುತ್ತೋಲೆ ಹೊರಡಿಸಲು ನಿರ್ಧರಿಸಲಾಗಿದೆ ಎಂದು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.  ಕೇವಲ ಬೇರೆ ಭಾಷೆಯ ಪದಗಳನ್ನು ಬದಲಾಯಿಸಿ, ನಮ್ಮ ಭಾಷೆಯ ಪದವನ್ನು ಅಳವಡಿಸಿ ಈ ಹಿಂದಿನಿಂದ ನಡೆದುಕೊಂಡು ಬಂದಿರುವ ಸಂಪ್ರದಾಯವನ್ನು ಮತ್ತು ಪೂಜೆಗಳನ್ನು ಮುಂದುವರೆಸಲಾಗುವುದು. ಪೂಜಾ ಕಾರ್ಯಗಳನ್ನು ರದ್ದುಪಡಿಸಲಾಗುವುದಿಲ್ಲ ಎಂದು ಸಚಿವೆ ಸ್ಪಷ್ಟಪಡಿಸಿದ್ದಾರೆ.

suddiyaana