ಐಪಿಎಲ್‌ನಲ್ಲಿ ಮತ್ತೆ ನಿವೃತ್ತಿ ಸುಳಿವು ಕೊಟ್ಟಿದ್ಯಾಕೆ ಧೋನಿ – ಮಹಿ ಮುಗುಳ್ನಗೆಯ ಹಿಂದಿರುವ ಸತ್ಯವೇನು?

ಐಪಿಎಲ್‌ನಲ್ಲಿ ಮತ್ತೆ ನಿವೃತ್ತಿ ಸುಳಿವು ಕೊಟ್ಟಿದ್ಯಾಕೆ ಧೋನಿ – ಮಹಿ ಮುಗುಳ್ನಗೆಯ ಹಿಂದಿರುವ ಸತ್ಯವೇನು?

ಎಂ.ಎಸ್ ಧೋನಿ ಎಂಬ ಹೆಸರು ಕೇಳುವುದೇ ಅಭಿಮಾನಿಗಳಿಗೆ ಪುಳಕ. ಧೋನಿ ಇದ್ದಲ್ಲಿ ಫ್ಯಾನ್ಸ್ ಕ್ರೇಜ್ ಸ್ವಲ್ಪ ಜಾಸ್ತಿಯೇ ಇರುತ್ತದೆ. ಆದರೆ, 2024ರ ಐಪಿಎಲ್‌ನಲ್ಲಿ ಧೋನಿ ಪಾಲ್ಗೊಳ್ಳುವ ಬಗ್ಗೆ ಮತ್ತೆ ಚರ್ಚೆ ಶುರುವಾಗಿದೆ. 16ನೇ ಆವೃತ್ತಿಯ ಐಪಿಎಲ್ ಟೂರ್ನಿ ಬಳಿಕ ನಿವೃತ್ತಿ ಸುಳಿವು ನೀಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂ.ಎಸ್ ಧೋನಿ ಈಗ ಮತ್ತೊಂದು ಹೇಳಿಕೆ ನೀಡುವ ಮೂಲಕ ಅಭಿಮಾನಿಗಳಲ್ಲಿ ಗೊಂದಲ ಮೂಡಿಸಿದ್ದಾರೆ.

ಇದನ್ನೂ ಓದಿ: ವಿಶ್ವಕಪ್ ಬಗ್ಗೆ ಧೋನಿ ಭವಿಷ್ಯ ನಿಜವಾಗುತ್ತಾ? – ಟೀಮ್ ಇಂಡಿಯಾ ಈ ಬಾರಿ ಚಾಂಪಿಯನ್ ಗ್ಯಾರಂಟಿನಾ?

ಈಗಾಗಲೇ ಈ ಬಾರಿಯ ಐಪಿಎಲ್‌ ಟೂರ್ನಿಯ ಚಟುವಟಿಕೆಗಳು ಗರಿಗೆದರಿದೆ. ಮಿನಿ ಹರಾಜಿಗೂ ಮುನ್ನ ಆಟಗಾರರ ಪಟ್ಟಿ ಸಲ್ಲಿಸುವಂತೆ ನವೆಂಬರ್ 15ರ ವರೆಗೆ ಗಡುವು ನೀಡಲಾಗಿದೆ. ಈ ನಡುವೆ ಮತ್ತೊಮ್ಮೆ ಧೋನಿ ವಿಚಾರ ಚರ್ಚೆಗೆ ಬಂದಿದೆ. ಅದಕ್ಕೆ ಕಾರಣ ಧೋನಿ ಕೊಟ್ಟ ಒಂದು ಹೇಳಿಕೆ. ಪ್ರಸಕ್ತ ವರ್ಷದ ಐಪಿಎಲ್‌ನಲ್ಲಿ ಸಿಎಸ್‌ಕೆ ಚಾಂಪಿಯನ್ ಆಗಿ ಹೊರಹೊಮ್ಮಿತು. ಇದಾದ ಬಳಿಕ ನಾಯಕ ಎಂ.ಎಸ್ ಧೋನಿ ಮೊಣಕಾಲು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಶಸ್ತ್ರಚಿಕಿತ್ಸೆ ಬಳಿಕ ಚೇತರಿಸಿಕೊಳ್ಳುತ್ತಿರುವ ಧೋನಿ, 2024ರ ಐಪಿಎಲ್ ಕುರಿತು ಮಾತನಾಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ಮಹಿ, ನನಗೆ ಮೊಣಕಾಲಿನ ಶಸ್ತ್ರಚಿಕಿತ್ಸೆಯಾಗಿದೆ ಎಲ್ಲವೂ ಅಂದುಕೊಂಡಂತೆ ನಡೆದರೆ, ನಾನು ಒಂದು ವರ್ಷ ಐಪಿಎಲ್ ಆಡುವುದನ್ನು ನೋಡುತ್ತೀರಿ. ಇಲ್ಲದಿದ್ದರೆ ಅಭಿಮಾನಿಗಳೊಂದಿಗೆ ಕುಳಿತು ಪಂದ್ಯವನ್ನು ವೀಕ್ಷಣೆ ಮಾಡುತ್ತೇನೆ ಎಂದು ಮುಗುಳ್ನಕ್ಕಿದ್ದಾರೆ.

ಧೋನಿ ಟೀಂ ಇಂಡಿಯಾ ಬಳಿಕ ಅತೀ ಹೆಚ್ಚು ಭಾವನಾತ್ಮಕವಾಗಿ ಸಂಬಂಧ ಹೊಂದಿರುವ ತಂಡವೆಂದರೆ ಅದು ಚೆನ್ನೈ ಸೂಪರ್ ಕಿಂಗ್ಸ್ ತಂಡ. ಐಪಿಎಲ್ 2008ರಲ್ಲಿ ಆರಂಭವಾದ ಬಳಿಕ ಚೆನ್ನೈ ಪರ ಆಡುತ್ತಿರುವ ಧೋನಿ ವಿಶೇಷವಾದ ಸಂಬಂಧ ಚೆನ್ನೈ ತಂಡ ಮತ್ತು ತಮಿಳುನಾಡಿನ ಜನರೊಂದಿಗೆ ಹೊಂದಿದ್ದಾರೆ. 16ನೇ ಐಪಿಎಲ್ ಆವೃತ್ತಿಯಲ್ಲೇ ಮಹಿ ನಿವೃತ್ತಿ ಘೋಷಣೆ ಮಾಡುವ ಎಲ್ಲ ಸುಳಿವು ನೀಡಿದ್ದರು. 5ನೇ ಬಾರಿ ಟ್ರೋಫಿ ಗೆದ್ದ ಬಳಿಕ ಮಹಿ 2024ರ ಐಪಿಎಲ್‌ನಲ್ಲೂ ಆಡುವುದಾಗಿ ಘೋಷಣೆ ಮಾಡಿದರು.

16ನೇ ಆವೃತ್ತಿ ಐಪಿಎಲ್ ಬಳಿಕ ಮಹಿ ಒಂದು ಹೇಳಿಕೆ ನೀಡಿದ್ದರು. ಈಗಿನ ಪರಿಸ್ಥಿತಿಯನ್ನು ಗಮನಿಸಿದರೆ, ನನಗೆ ನಿವೃತ್ತಿ ಘೋಷಿಸಲು ಇದು ನನಗೆ ಉತ್ತಮ ಸಮಯವಾಗಿದೆ. ಈ ವರ್ಷ ನಾನು ಎಲ್ಲೇ ಹೋಗಿದ್ದರು ನನ್ನ ಮೇಲೆ ಪ್ರೀತಿ ಮತ್ತು ವಾತ್ಸಲ್ಯ ತೋರಿಸಿದರು. ಎಲ್ಲರಿಗೂ ತುಂಬಾ ಧನ್ಯವಾದಗಳು ಎಂದು ಹೇಳುವುದು ಸುಲಭದ ವಿಷಯ. ಆದ್ರೆ ಕಠಿಣ ವಿಷಯವೆಂದರೆ ಇನ್ನೂ 9 ತಿಂಗಳು ಕಷ್ಟಪಟ್ಟು ಮುಂದಿನ ಐಪಿಎಲ್ ಆಡುವುದು. ಇದು ನನ್ನ ದೈಹಿಕ ಸಾಮರ್ಥ್ಯಕ್ಕೆ ಸುಲಭವಲ್ಲ. ಆದ್ರೆ ಅಭಿಮಾನಿಗಳಿಗೆ ಉಡುಗೊರೆಯಾಗಲಿದೆ ಎಂದು ತಿಳಿಸಿದ್ದರು. ಇದಾದ ನಂತರ ಧೋನಿ ಮತ್ತೆ ಹೇಳಿಕೆ ನೀಡಿರುವುದು ಅಭಿಮಾನಿಗಳಲ್ಲಿ ಗೊಂದಲ ಮೂಡಿಸಿದೆ.

 

Sulekha