₹50 ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ತಹಶೀಲ್ದಾರ್!

ಧಾರವಾಡದಲ್ಲಿ ಲಂಚ ಸ್ವೀಕರಿಸುತ್ತಿದ್ದ ಆರೋಪದ ಮೇಲೆ ತಹಶೀಲ್ದಾರ್ ಸಚ್ಚಿದಾನಂದ ಕುಚನೂರ್ ಅವರನ್ನು ಲೋಕಾಯುಕ್ತ ಅಧಿಕಾರಿಗಳು ರೆಡ್ಹ್ಯಾಂಡ್ ಆಗಿ ಹಿಡಿದಿದ್ದಾರೆ. ಜಮೀನಿನ ದಾಖಲೆ ಸರಿಪಡಿಸುವುದು ಹಾಗೂ ‘ಪೋಡಿ’ ಪ್ರಕ್ರಿಯೆ ನಡೆಸಿಕೊಡುವ ವಿಚಾರಕ್ಕೆ ಸಂಬಂಧಿಸಿದಂತೆ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಧಾರವಾಡ ತಾಲೂಕಿನ ಯರಿಕೊಪ್ಪ ಗ್ರಾಮದ ಬಳಿ ಡೆವಲಪರ್ ಒಬ್ಬರು ಸುಮಾರು 33 ಎಕರೆ ಜಮೀನು ಖರೀದಿಸಿದ್ದರು. ಈ ಜಮೀನಿನ ದಾಖಲೆಗಳಲ್ಲಿ ಕೃಷಿ ಮತ್ತು ಖರಾಬ್ ಭಾಗಕ್ಕೆ ಸಂಬಂಧಿಸಿದ ತಿದ್ದುಪಡಿ ಅಗತ್ಯವಿತ್ತು. ಈ ಕೆಲಸಕ್ಕಾಗಿ ತಹಶೀಲ್ದಾರ್ ಅವರು ಒಂದು ಎಕರೆ ಜಮೀನು ಹಾಗೂ ₹50 ಲಕ್ಷ ನಗದು ಕೇಳಿದ್ದರು ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂಓದಿ: ವೈಭವ್ ಬೆನ್ನಿಗೆ ನಿಂತ ಶ್ರೇಯಸ್ – ರೋಬೋಟ್ ಅಲ್ಲ ಎಂದಿದ್ದೇಕೆ ಸಂಜು?
ಈ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ತಕ್ಷಣ ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಬುಧವಾರ ದೂರು ದಾಖಲಾಗಿದ್ದು, ಬಳಿಕ ಅಧಿಕಾರಿಗಳು ಬಲೆ ಬೀಸಿದ್ದಾರೆ. ತಹಶೀಲ್ದಾರ್ ಸೂಚಿಸಿದ ಸ್ಥಳಕ್ಕೆ ದೂರುದಾರರು ₹50 ಲಕ್ಷ ಹಣವನ್ನು ಕೆಂಪು ಬಣ್ಣದ ಬ್ಯಾಗ್ನಲ್ಲಿ ತೆಗೆದುಕೊಂಡು ಹೋಗಿದ್ದರು. ಹಣವನ್ನು ಸ್ವೀಕರಿಸಿ ತಮ್ಮ ಬ್ಯಾಗ್ಗೆ ಹಾಕಿಕೊಳ್ಳುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಅವರನ್ನು ವಶಕ್ಕೆ ಪಡೆದಿದ್ದಾರೆ.
ಈ ಪ್ರಕರಣದಲ್ಲಿ ಮುಂದಿನ ಕಾನೂನು ಕ್ರಮ ಹಾಗೂ ತನಿಖೆ ಮುಂದುವರಿದಿದ್ದು, ತಹಶೀಲ್ದಾರ್ ಅವರ ಇತರೆ ಸ್ಥಳಗಳ ಪರಿಶೀಲನೆ ಸೇರಿದಂತೆ ಮುಂದಿನ ಕ್ರಮಗಳ ಬಗ್ಗೆ ಲೋಕಾಯುಕ್ತ ಅಧಿಕಾರಿಗಳು ನಿರ್ಧರಿಸಲಿದ್ದಾರೆ.

ನೋಡಿರಿ

