ರಾಜ್ಯದಲ್ಲಿ ಹೆಚ್ಚಾಗುತ್ತಿದೆ ಡೆಂಘೀ ಪ್ರಕರಣ – 20 ದಿನಗಳಲ್ಲಿ 1,160 ಕೇಸ್‌!

ರಾಜ್ಯದಲ್ಲಿ ಹೆಚ್ಚಾಗುತ್ತಿದೆ ಡೆಂಘೀ ಪ್ರಕರಣ – 20 ದಿನಗಳಲ್ಲಿ 1,160 ಕೇಸ್‌!

ಬೆಂಗಳೂರು: ಹವಾಮಾನ ಬದಲಾವಣೆಯಿಂದಾಗಿ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಡೆಂಘೀ ಪ್ರಕರಣ ಹೆಚ್ಚಾಗುತ್ತಲೇ ಇದೆ. ಕಳೆದ 20 ದಿನಗಳಲ್ಲಿ 1,160 ಮಂದಿಯಲ್ಲಿ ಡೆಂಘೀ ಜ್ವರಕ್ಕೆ ತುತ್ತಾಗಿದ್ದಾರೆ ಎಂದು ವರದಿಯಾಗಿದೆ.

ಕಳೆದ 20 ದಿನಗಳಲ್ಲಿ ರಾಜ್ಯದ ಹಲವು ಭಾಗಗಳಲ್ಲಿ ಡೆಂಘೀ ಪ್ರಕರಣ ಹಚ್ಚಾಗುತ್ತಿದೆ. 20 ದಿನಗಳ ಅಂತರದಲ್ಲಿ 1,160 ಮಂದಿ ಡೆಂಘೀಗೆ ತುತ್ತಾಗಿದ್ದಾರೆ.  ಇದರೊಂದಿಗೆ ರಾಜ್ಯದಲ್ಲಿ ಡೆಂಘೀ ಪ್ರಕರಣಗಳ ಒಟ್ಟು ಸಂಖ್ಯೆ 13 ಸಾವಿರ ಗಡಿ ದಾಟಿದ್ದು, ಈವರೆಗೂ 9 ಮಂದಿ ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಭಾರತ್‌ ಜೋಡೋ ಯಾತ್ರೆ ವೇಳೆ ದಣಿದಿದ್ದ ರಾಹುಲ್‌ ಗಾಂಧಿ ಸೌತೆಕಾಯಿ ನೀಡಿದ್ದ ಅಜ್ಜಿ ನಿಧನ

ಈಗಾಗಲೇ ರಾಜ್ಯದಲ್ಲಿ ಒಂದು ಲಕ್ಷಕ್ಕೂ ಅಧಿಕ ಶಂಕಿತರನ್ನು ತಪಾಸಣೆಗೆ ಒಳಪಡಿಸಲಾಗಿದೆ. 75 ಸಾವಿರಕ್ಕೂ ಅಧಿಕ ಮಂದಿಯ ರಕ್ತದ ಮಾದರಿ ಪರೀಕ್ಷೆ ಮಾಡಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 7,062 ಹಾಗೂ ಇತರ ಜಿಲ್ಲೆಗಳಲ್ಲಿ 6,634 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಕಳೆದ ವರ್ಷ 9,620 ಮಂದಿ ಬಳಲಿದ್ದು, ಒಂಬತ್ತು ಮಂದಿ ಮೃತಪಟ್ಟಿದ್ದರು.

ಇನ್ನು ಬಿಬಿಎಂಪಿ ವ್ಯಾಪ್ತಿಯಲ್ಲಿ 46,164 ಶಂಕಿತರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಅವರಲ್ಲಿ 29,509 ಮಂದಿಯ ರಕ್ತದ ಮಾದರಿ ಪರೀಕ್ಷಿಸಲಾಗಿದೆ. ಕಳೆದ 20 ದಿನಗಳಲ್ಲಿ 463 ಮಂದಿಯಲ್ಲಿ ಸೋಂಕು ವರದಿಯಾಗಿದೆ. ಇನ್ನು ಉಡುಪಿಯಲ್ಲಿ 628, ಮೈಸೂರು 610, ಕಲಬುರಗಿ 577, ದಕ್ಷಿಣ ಕನ್ನಡದಲ್ಲಿ 426 ಪ್ರಕರಣಗಳು ಖಚಿತಪಟ್ಟಿವೆ. ಉಳಿದ ಜಿಲ್ಲೆಗಳಲ್ಲಿ ಈ ಸಂಖ್ಯೆ 400ಕ್ಕಿಂತ ಕಡಿಮೆ ಇದೆ ಎಂದು ವರದಿಯಾಗಿದೆ.

ಚಿಕೂನ್ ಗುನ್ಯಾ ಏರಿಕೆ

28 ಜಿಲ್ಲೆಗಳಲ್ಲಿ ಚಿಕೂನ್ ಗುನ್ಯಾ ಪ್ರಕರಣಗಳು ಪತ್ತೆಯಾಗಿವೆ. 55 ಸಾವಿರಕ್ಕೂ ಅಧಿಕ ಶಂಕಿತರನ್ನು ಗುರುತಿಸಲಾಗಿದ್ದು, 29 ಸಾವಿರಕ್ಕೂ ಅಧಿಕ ಮಂದಿಯ ರಕ್ತ ಪರೀಕ್ಷೆ ನಡೆಸಲಾಗಿದೆ. ಅವರಲ್ಲಿ 1,359 ಮಂದಿಯಲ್ಲಿ ಜ್ವರ ಕಾಣಿಸಿಕೊಂಡಿದೆ. ಮೈಸೂರು 184, ವಿಜಯಪುರ 146, ಶಿವಮೊಗ್ಗ 124 ಹಾಗೂ ಕಲಬುರಗಿಯಲ್ಲಿ 108ಕ್ಕೂ ಅಧಿಕ ಪ್ರಕರಣಗಳು ವರದಿಯಾಗಿವೆ.

Shwetha M