ಪ್ರೇಯಸಿ ಕೊಂದು ಶವ ಫ್ರಿಡ್ಜ್ ನಲ್ಲಿಟ್ಟು ಮರುದಿನವೇ ಮತ್ತೊಬ್ಬಳ ಜತೆ ಮದುವೆ – ಪಾಪಿಯ ಕೃತ್ಯವೇ ಭಯಾನಕ..!

ಪ್ರೇಯಸಿ ಕೊಂದು ಶವ ಫ್ರಿಡ್ಜ್ ನಲ್ಲಿಟ್ಟು ಮರುದಿನವೇ ಮತ್ತೊಬ್ಬಳ ಜತೆ ಮದುವೆ – ಪಾಪಿಯ ಕೃತ್ಯವೇ ಭಯಾನಕ..!

ದೆಹಲಿಯಲ್ಲಿ ಕೆಲ ದಿನಗಳ ಹಿಂದಷ್ಟೇ ಪಾಪಿ ಪ್ರೇಮಿ ತನ್ನ ಪ್ರೇಯಸಿಯನ್ನ ಕೊಂದು ಬರೋಬ್ಬರಿ 35 ಪೀಸ್ ಮಾಡಿ ಫ್ರಿಡ್ಜ್​ನಲ್ಲಿಟ್ಟಿದ್ದ. ಬಳಿಕ ನಿತ್ಯ ಒಂದೊಂದೇ ತುಂಡುಗಳನ್ನ ಹೊರಗೆ ತೆಗೆದುಕೊಂಡು ಹೋಗಿ ಬಿಸಾಡಿ ಬರ್ತಿದ್ದ. ಈತನ ಕ್ರೌರ್ಯ ಕಂಡು ಇಡೀ ದೇಶವೇ ಬೆಚ್ಚಿ ಬಿದ್ದಿತ್ತು. ಆದ್ರೀಗ ಇದನ್ನೂ ಮೀರಿಸುವಂಥ ಕೃತ್ಯ ದೆಹಲಿಯಲ್ಲೇ ನಡೆದಿದೆ. ಪ್ರೇಯಸಿಯನ್ನ ಕೊಂದು ಫ್ರಿಡ್ಜ್​ನಲ್ಲಿಟ್ಟಿದ್ದ ಕ್ರೂರಿ ಮರುದಿನವೇ ಮತ್ತೊಬ್ಬಳನ್ನ ಮದುವೆಯಾಗಿದ್ದಾನೆ.

ಇದನ್ನೂ ಓದಿ : ಕೆನಡಾದಲ್ಲಿ ಹಿಂದೂ ದೇಗುಲಗಳೇ ಟಾರ್ಗೆಟ್ – ಮೋದಿ ವಿರುದ್ಧವೂ ಆಕ್ಷೇಪಾರ್ಹ ಬರಹ..!

ಪಶ್ಚಿಮ ದೆಹಲಿಯ ಮಿತ್ರಾನ್ ಹಳ್ಳಿಯಲ್ಲಿ ಇಂಥಾದ್ದೊಂದು ಭೀಭತ್ಸ್ಯ ಘಟನೆ ನಡೆದಿದೆ. 26 ವರ್ಷದ ಸಾಹಿಲ್ ಗೆಹ್ಲೋಟ್ ಎಂಬಾತನೇ ಇಂಥಾ ಅಟ್ಟಹಾಸ ಮೆರೆದಿದ್ದಾನೆ. ದ್ವಾಕರಾ ನಗರದಲ್ಲಿ 24 ವರ್ಷದ ನಿಕ್ಕಿ ಯಾದವ್ ಎಂಬ ಯುವತಿ ಜೊತೆ ಆರೋಪಿ ಸಾಹಿಲ್ ಬಾಡಿಗೆ ಮನೆಯಲ್ಲಿ ಒಟ್ಟಿಗೆ ವಾಸವಿದ್ದ. ಈ ನಡುವೆ ಸಾಹಿಲ್ ನಿಕ್ಕಿಗೆ ಗೊತ್ತಾಗದಂತೆ ಮತ್ತೊಬ್ಬಳನ್ನ ಮದುವೆಯಾಗಲು ಗುಟ್ಟಾಗೇ ಪ್ಲ್ಯಾನ್ ಮಾಡಿದ್ದ. ಸಾಹಿಲ್ ನಿಶ್ಚಿತಾರ್ಥ ಫೆಬ್ರವರಿ 9ರಂದು ಫಿಕ್ಸ್ ಆಗಿದ್ದು, ಮರುದಿನವೇ ಮದುವೆ ಕೂಡ ಇದೆ ಅನ್ನೋದು ನಿಕ್ಕಿಗೆ ಗೊತ್ತಾಗಿತ್ತು. ಬಳಿಕ ಮದುವೆ ಕ್ಯಾನ್ಸಲ್ ಮಾಡುವಂತೆ ನಿಕ್ಕಿ ಜಗಳ ತೆಗೆದಿದ್ದಳು.

ನಿಕ್ಕಿ ಜಗಳ ಶುರು ಮಾಡಿದ ಬಳಿಕ ರಾತ್ರಿ 11 ಗಂಟೆ ಸುಮಾರಿಗೆ ನಿಕ್ಕಿಯನ್ನ ತನ್ನ ಕಾರಿನಲ್ಲಿ ಕರೆದುಕೊಂಡು ಸಾಹಿಲ್ ಉತ್ತರ ದೆಹಲಿಯಲ್ಲಿರುವ ಕಾಶ್ಮೀರಿ ಗೇಟ್ ಬಳಿ ಬಂದಿದ್ದ. ಬಳಿಕ ಅಲ್ಲಿಂದ ಹಿಮಾಚಲ ಪ್ರದೇಶದ ಗಡಿಯಲ್ಲಿರುವ ಗಿರಿಧಾಮಕ್ಕೆ ಕರೆದೊಯ್ದು ನನ್ನ ಮದುವೆ ನಿಶ್ಚಯವಾಗಿಲ್ಲ ಅದು ಸುಳ್ಳು ಎಂದಿದ್ದ. ಆದ್ರೆ ಇದನ್ನ ನಂಬದ ನಿಕ್ಕಿ ನನಗೆ ಸತ್ಯ ಗೊತ್ತಾಗಬೇಕು ಎಂದು ಕ್ಯಾತೆ ಶುರು ಮಾಡಿದ್ದಳು. ಇಬ್ಬರ ನಡುವೆ ಜೋರು ಜೋರಾಗಿ ವಾಗ್ವಾದ ಕೂಡ ನಡೆದಿತ್ತು. ಈ ವೇಳೆ ಮೊಬೈಲ್ ಡೇಟಾ ಕೇಬಲ್ ತೆಗೆದುಕೊಂಡ ಸಾಹಿಲ್ ನಿಕ್ಕಿಯ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದ.

ಶವವನ್ನ ತನ್ನ ಕಾರಿಗೆ ಸಾಗಿಸಿದ ಸಾಹಿಲ್ ಡ್ರೈವರ್ ಸೀಟ್ ಪಕ್ಕದ ಸೀಟ್​ಗೆ ಮೃತದೇಹ ಇಟ್ಟು ಅಲುಗಾಡದಂತೆ ಸೀಟ್ ಬೆಲ್ಟ್ ಹಾಕಿದ್ದ.  ಬಳಿಕ ಮಿತ್ರಾನ್ ಹಳ್ಳಿಯಲ್ಲಿರೋ ತನ್ನದೇ ಡಾಬಾಗೆ ಶವ ಕೊಂಡೊಯ್ದು ಫ್ರಿಡ್ಜ್​ನಲ್ಲಿಟ್ಟು ತನಗೇನು ಗೊತ್ತಿಲ್ಲದಂತೆ ಅಲ್ಲಿಂದ ಹೊರಟಿದ್ದ. ಬಳಿಕ ಮಾರನೇ ದಿನವೇ ತನ್ನ ತಂದೆ ತಾಯಿ ತೋರಿಸಿದ ಹುಡುಗಿ ಜೊತೆ ಮದುವೆ ಮಾಡಿಕೊಂಡಿದ್ದ. ಫ್ರಿಡ್ಜ್​ನಲ್ಲಿ ನಿಕ್ಕಿ ಮೃತದೇಹ ಪತ್ತೆಯಾದ ಬಳಿಕ ಅಲ್ಲಿನ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ರು. ತನಿಖೆ ನಡೆಸಿದ ಖಾಕಿ ಪಡೆ ಸಾಹಿಲ್​ನನ್ನ ಬಂಧಿಸಿದೆ.

ಸಾಹಿಲ್ ಹಾಗೂ ನಿಕ್ಕಿ ನಡುವೆ ಪ್ರೀತಿಯಾಗಿದ್ದೇ ಬಸ್​ನಲ್ಲಿ. ಹೌದು 2018ರಲ್ಲಿ ಆರೋಪಿ ಸಾಹಿಲ್ ಉತ್ತಮ್ ನಗರದಲ್ಲಿ SSC ಪರೀಕ್ಷೆಗಾಗಿ ಕೋಚಿಂಗ್ ಸೆಂಟರ್​ಗೆ ಸೇರಿದ್ದ. ಮತ್ತೊಂದೆಡೆ ನಿಕ್ಕಿ ಕೂಡ ಮೆಡಿಕಲ್ ಪ್ರವೇಶಾತಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಳು. ಹೀಗಾಗಿ ಕೋಚಿಂಗ್​ಗಾಗಿ ಇಬ್ಬರು ಕೂಡ ಒಂದೇ ಬಸ್​ನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಇಬ್ಬರ ನಡುವೆ ಸ್ನೇಹವಾಗಿ ಆ ಸ್ನೇಹ ಪ್ರೀತಿಗೆ ತಿರುಗಿತ್ತು. ನಂತರದ ದಿನಗಳಲ್ಲಿ ಸಾಹಿಲ್ ಗ್ರೇಟರ್ ನೋಯ್ಡಾದಲ್ಲಿ ಕಾಲೇಜಿಗೆ ಪ್ರವೇಶಾತಿ ಪಡೆದಿದ್ದ. ನಿಕ್ಕಿ ಕೂಡ ಪದವಿಗೆ ಅಡ್ಮಿಷನ್ ಆಗಿದ್ಲು. ಬಳಿಕ ಇಬ್ಬರು ಕೂಡ ನೋಯ್ಡಾದಲ್ಲೇ ಬಾಡಿಗೆ ಮನೆ ಮಾಡಿ ಒಟ್ಟಿಗೆ ವಾಸ ಮಾಡಲು ಶುರು ಮಾಡಿದ್ರು. ಪ್ರಣಯ ಪಕ್ಷಿಗಳಂತಿದ್ದ ಇಬ್ಬರು  ಮನಾಲಿ, ರಿಷಿಕೇಶ್, ಹರಿದ್ವಾರ, ಡೆಹ್ರಾಡೂನ್ ಸೇರಿದಂತೆ ಹಲವೆಡೆ ಸುತ್ತಾಡಿದ್ರು.

ಹೀಗೆ ಸುತ್ತಾಡುವಾಗಲೇ ಕೊರೊನಾ ಎಂಟ್ರಿ ಕೊಟ್ಟಿತ್ತು. ಕೊರೊನಾ ಲಾಕ್​ಡೌನ್ ವೇಳೆ ಇಬ್ಬರು ಕೂಡ ತಮ್ಮ ತಮ್ಮ ಮನೆಗೆ ತೆರಳಿದ್ರು. ಕೊರೊನಾ ಬಳಿಕ ಮತ್ತೆ ಒಂದಾದ ಈ ಜೋಡಿ ದ್ವಾರಕಾ ನಗರದಲ್ಲಿ ಬಾಡಿಗೆ ಮನೆ ಮಾಡಿ ಒಟ್ಟಿಗೆ ವಾಸಿಸುತ್ತಿದ್ರು. ಇಷ್ಟದ್ರೂ ಸಾಹಿಲ್ ಮಾತ್ರ ನಿಕ್ಕಿ ಬಗ್ಗೆ ತನ್ನ ಕುಟುಂಬಸ್ಥರಿಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಇದ್ಯಾವುದೂ ತಿಳಿಯದ ಸಾಹಿಲ್ ಕುಟುಂಬಸ್ಥರು ಮದುವೆಯಾಗುವಂತೆ ಒತ್ತಾಯ ಮಾಡಿ ಹುಡುಗಿಯನ್ನೂ ಫಿಕ್ಸ್ ಮಾಡಿದ್ದರು. ಫೆಬ್ರವರಿ 9ರಂದು ಪ್ರೇಯಸಿಯನ್ನ ಕೊಲೆ ಮಾಡಿದ್ದ ಸಾಹಿಲ್ ಫೆಬ್ರವರಿ 10ರಂದು ಹೆತ್ತವರು ನೋಡಿದ ಹುಡುಗಿಯನ್ನೇ ಮದುವೆಯಾಗಿದ್ದ. ಸದ್ಯ ಪೊಲೀಸರು ಫ್ರಿಡ್ಜ್​ನಲ್ಲಿಟ್ಟಿದ್ದ ಶವವನ್ನ ಹಾಗೂ ಕೊಲೆ ಮಾಡಲು ಬಳಸಿದ್ದ ಡಾಟಾ ಕೇಬಲನ್ನ ಆತನ ಕಾರಿನಲ್ಲಿ ವಶಕ್ಕೆ ಪಡೆದಿದ್ದಾರೆ. ಆರೋಪಿ ಸಾಹಿಲ್​ನನ್ನ ವಶಕ್ಕೆ ಪಡೆದಿರೋ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

 

suddiyaana