ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ 80ಕ್ಕೂ ಹೆಚ್ಚು ಪಟಾಕಿ ಅವಘಡ ಪ್ರಕರಣ

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ 80ಕ್ಕೂ ಹೆಚ್ಚು ಪಟಾಕಿ ಅವಘಡ ಪ್ರಕರಣ

ಬೆಂಗಳೂರು: ಜನರ ಬಾಳಲ್ಲಿ ಬೆಳಕಾಗಬೇಕಾಗಿದ್ದ ದೀಪಾವಳಿ ಹಬ್ಬ ಕೆಲವರ ಬಾಳನ್ನ ಕತ್ತಲಾಗಿಸುತ್ತಿದೆ. ಪ್ರತಿ ವರ್ಷದ ಹಾಗೇ ಈ ಬಾರಿ ಕೂಡ ಅಗತ್ಯವಾದ ಸುರಕ್ಷತಾ ಕ್ರಮಗಳನ್ನು ಕೈಗೊಂಡರೂ ಹಬ್ಬದ ವೇಳೆ ಪಟಾಕಿ ಅವಗಢಗಳಿಂದ  ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಸುಮಾರು 80 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಕಳೆದ ಭಾನುವಾರದಿಂದ ಇಲ್ಲಿವರೆಗೆ  ಬೆಂಗಳೂರಿನ ವಿವಿಧ ಆಸ್ಪತ್ರೆಗಳಲ್ಲಿ ಸುಮಾರು 80 ಕ್ಕೂ ಹೆಚ್ಚು ಪಟಾಕಿ ಸಂಬಂಧಿತ ಗಾಯಗಳ ಪ್ರಕರಣಗಳು ವರದಿಯಾಗಿವೆ. ಮಂಗಳವಾರ ಒಂದೇ ದಿನ 13 ಜನರಿಗೆ ಗಾಯಗಳಾಗಿವೆ. ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೂವರು ಗಾಯಾಳುಗಳು ಗಂಭೀರವಾದ ಗಾಯಗಳಿಂದ ಬಳಲುತ್ತಿದ್ದು, ಅವರ ಒಂದು ಕಣ್ಣಿನ ದೃಷ್ಟಿ ಹಾಳಾಗುವ ಸಾಧ್ಯತೆಯಿದೆ ಎಂದು ವೈದ್ಯರು ಹೇಳಿದ್ದಾರೆ. ಇನ್ನು ಶ್ರೀರಾಂಪುರದಲ್ಲಿ 18 ವರ್ಷದ ಯುವಕ ಭಾನುವಾರ ಮಿಂಟೋ ಆಸ್ಪತ್ರೆಗೆ ದಾಖಲಾಗಿದ್ದು ಆತನ ಕಣ್ಣಿನ ಭಾಗಕ್ಕೆ ಹೆಚ್ಚಿನ ಗಾಯಗಳಾಗಿವೆ. ಧರ್ಮಾವರಂನ 10 ವರ್ಷದ ಬಾಲಕಿ ಮತ್ತು ಬೆಂಗಳೂರಿನ 22 ವರ್ಷದ ಯುವಕಿಗೂ ಕಣ್ಣಿನ ಭಾಗಕ್ಕೆ ಹೆಚ್ಚಿನ ಗಾಯಗಳಾಗಿವೆ. ಇದರಿಂದಾಗಿ ಅವರಿಗೆ ದೃಷ್ಟಿ ಸಮಸ್ಯೆ ಎದುರಾಗಿದೆ.

ಇದನ್ನೂ ಓದಿ: ಕರೆಂಟ್‌ ಕಳ್ಳ ಕುಮಾರಸ್ವಾಮಿ ಎಂಬ ಆರೋಪ – ಶುರುವಾಯ್ತು ಮತ್ತೊಂದು ಸುತ್ತಿನ ಕಾಂಗ್ರೆಸ್‌ – ಜೆಡಿಎಸ್‌ ಕಾಳಗ!

ಈ ಬಗ್ಗೆ ಮಿಂಟೋ ಆಸ್ಪತ್ರೆಯ ನಿರ್ದೇಶಕ ಜಿ.ನಾಗರಾಜು  ಮಾಹಿತಿ ನೀಡಿದ್ದು, ಮೂವರಿಗೂ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ದೀರ್ಘಾವಧಿ ಚಿಕಿತ್ಸೆ ಅಗತ್ಯವಿದೆ. ಸೋಮವಾರ ಸಂಜೆಯವರೆಗೆ ಮಿಂಟೋದಲ್ಲಿ ಒಟ್ಟು ಒಂಬತ್ತು ಪ್ರಕರಣಗಳಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ನವೆಂಬರ್ 12 ರಂದು ಬಿಹಾರದಲ್ಲಿ ಬಿಹಾರಿ ಕುಟುಂಬ ಮೂಲದ ಆರು ವರ್ಷದ ಬಾಲಕ ಕೂಡ ಪಟಾಕಿ ಸಿಡಿಸಿ ಗಾಯಗೊಂಡಿದ್ದು ಬಾಲಕನಿಗೆ ಸ್ಥಳೀಯ ಚಿಕಿತ್ಸಾಲಯದಲ್ಲಿ ಪ್ರಥಮ ಚಿಕಿತ್ಸೆ ನೀಡಿ ನಂತರ ಅವನನ್ನು ನಾರಾಯಣ ನೇತ್ರಾಲಯಕ್ಕೆ ಶಿಫ್ಟ್ ಮಾಡಲಾಗಿದೆ ಎಂದರು.

ಆಸ್ಪತ್ರೆಯ ಅಧ್ಯಕ್ಷ ರೋಹಿತ್ ಶೆಟ್ಟಿ ಮಾತನಾಡಿ, ಮಗು ದೃಷ್ಟಿ ಕಳೆದುಕೊಳ್ಳಬಹುದು ಎಂಬ ಆತಂಕದಲ್ಲಿ ಕುಟುಂಬಸ್ಥರು ತಕ್ಷಣವೇ ರೈಲಿನಲ್ಲಿ ಬೆಂಗಳೂರಿಗೆ ಬಂದಿದ್ದು ಆಸ್ಪತ್ರೆಗೆ ಸೇರಿಸಿದ್ದಾರೆ. ಅವರು ತಮ್ಮ ಲಗೇಜ್​ನೊಂದಿಗೆ ರೈಲ್ವೆ ನಿಲ್ದಾಣದಿಂದ ನೇರವಾಗಿ ಆಸ್ಪತ್ರೆಗೆ ಬಂದರು. ಅದೃಷ್ಟವಶಾತ್, ಹುಡುಗನಿಗೆ ಗಂಭೀರವಾದ ಗಾಯವಾಗಿಲ್ಲ. ಅವನಿಗೆ ಚಿಕಿತ್ಸೆ ನೀಡುತ್ತಿದ್ದೇವೆ ಎಂದು ತಿಳಿಸಿದರು.

ಇನ್ನು ನಾರಾಯಣ ನೇತ್ರಾಲಯದಲ್ಲಿ ಈ ವರ್ಷ ಒಟ್ಟು 24 ಪ್ರಕರಣಗಳು ದಾಖಲಾಗಿವೆ. ಶಂಕರ ಕಣ್ಣಿನ ಆಸ್ಪತ್ರೆ ಮತ್ತು ಅಗರ್ವಾಲ್ ಕಣ್ಣಿನ ಆಸ್ಪತ್ರೆಯಲ್ಲಿ ಕ್ರಮವಾಗಿ 28 ಮತ್ತು ಮೂರು ಪ್ರಕರಣಗಳು ದಾಖಲಾಗಿವೆ. ಆಸ್ಪತ್ರೆಯಲ್ಲಿ ಕಂಡುಬರುವ 24 ಪ್ರಕರಣಗಳಲ್ಲಿ 13 ಪ್ರಕರಣಗಳು 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಎಂದು ಡಾ. ಶೆಟ್ಟಿ ಹೇಳಿದರು.

ಸುಮಾರು 90% ಪ್ರಕರಣಗಳು ಪಟಾಕಿ ಸಿಡಿಸುವುದನ್ನು ನೋಡಿ ಗಾಯಗೊಂಡವರೇ ಆಗಿದ್ದಾರೆ, “ಮೂರು ವರ್ಷದ ಮಗು ಸೇರಿದಂತೆ ಆರು ಮಕ್ಕಳು ಬಳಲುತ್ತಿದ್ದಾರೆ. ಉಳಿದವರಿಗೆ ಕಣ್ಣಿನ ರೆಪ್ಪೆಯ ಮೇಲೆ ಸುಟ್ಟಗಾಯಗಳು ಅಥವಾ ಕಣ್ಣಿಗೆ ಗಾಯಗಳಾಗಿವೆ. ಚಿಕ್ಕ ಚಿಕ್ಕ ರಸ್ತೆಗಳಲ್ಲಿ, ಜನ ಹೆಚ್ಚಾಗಿ ಓಡಾಡುವ ಸ್ಥಳಗಳಲ್ಲಿ ಪಟಾಕಿ ಸಿಡಿಸಲು ಸರ್ಕಾರ ಅನುಮತಿ ನೀಡಬಾರದು. ಇದರಿಂದ ರಸ್ತೆಯಲ್ಲಿ ನಡೆದುಕೊಂಡು ಹೋಗುವವರು ಗಾಯಗೊಳ್ಳದಂತೆ ರಕ್ಷಿಸಲು ಸಹಾಯ ಮಾಡುತ್ತದೆ ಎಂದರು.

Shwetha M