ಮೊಟ್ಟೆ ಉದ್ಯಮ ನಂಬಿದವರ ಹೊಟ್ಟೆಗೆ ಬೀಳುತ್ತಾ ತಣ್ಣೀರು ಬಟ್ಟೆ? – ಯುದ್ಧದಿಂದಾಗಿ ಮೊಟ್ಟೆ ರಫ್ತು ಸ್ಥಗಿತ
ರಾಜ್ಯದಲ್ಲಿ ಕುಕ್ಕುಟೋದ್ಯಮದಲ್ಲಿ ಏರುಪೇರು – ಮೊಟ್ಟೆ ಬೆಲೆಯಲ್ಲಿ ಇಳಿಕೆ

ಮಧ್ಯಪ್ರಾಚ್ಯಗಳಲ್ಲಿ ನಡೆಯುತ್ತಿದ್ದ ಯುದ್ಧದ ಪರಿಣಾಮ ಭಾರತದ ಮೇಲಾಗಿದೆ. ಅದರಲ್ಲೂ ಕರ್ನಾಟಕದ ರೈತರು ಕಂಗಾಲಾಗುವಂತಾ ಪರಿಸ್ಥಿತಿ ಎದುರಾಗಿದೆ. ಅದರಲ್ಲೂ ಕುಕ್ಕುಟೋದ್ಯಮ ನಂಬಿಕೊಂಡವರ ಪರಿಸ್ಥಿತಿ ಹೇಳತೀರದಾಗಿದೆ. ಈ ಯುದ್ಧದಿಂದಾಗಿ ವಿಮಾನಗಳ ಸಂಚಾರ ಹಾಗೂ ಹಡಗು ಮಾರ್ಗಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ. ಇದರ ಪರಿಣಾಮವಾಗಿ, ಗಲ್ಫ್ ರಾಷ್ಟ್ರಗಳಿಗೆ ರಫ್ತಾಗಬೇಕಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಮೊಟ್ಟೆ ರಾಜ್ಯದಲ್ಲೇ ಉಳಿದಿದೆ.
ಇದನ್ನೂ ಓದಿ:ಅಲ್ಲಿ ಯುದ್ಧ.. ಇಲ್ಲಿ ಬೆಲೆ ಏರಿಕೆಯ ಬಿಸಿ – ಅಡುಗೆ ಎಣ್ಣೆ ದರ ದಿಢೀರ್ ಜಾಸ್ತಿ..!
ಯುದ್ಧದ ಪರಿಣಾಮ ಮೊಟ್ಟೆ ಉದ್ಯಮದ ಮೇಲೂ ಬೀರಿದೆ. ಭಾರತದಿಂದ ಮಧ್ಯಪ್ರಾಚ್ಯ ದೇಶಗಳಾದ ಸೌದಿ ಅರೇಬಿಯಾ, ಓಮನ್ ಮತ್ತು ಕತಾರ್ಗೆ ಪ್ರತಿತಿಂಗಳು ಒಂದು ಕೋಟಿಗೂ ಹೆಚ್ಚು ಮೊಟ್ಟೆಗಳು ರಫ್ತಾಗುತ್ತಿದ್ದವು. ಆದರೆ, ಪ್ರಸ್ತುತ ಯುದ್ಧದ ಭೀತಿಯಿಂದ ಈ ರಫ್ತು ಸಂಪೂರ್ಣ ಸ್ಥಗಿತಗೊಂಡಿದೆ. ಇರಾನ್ನಿಂದ ಗಲ್ಫ್ ರಾಷ್ಟ್ರಗಳ ಮೇಲಿನ ದಾಳಿಗಳು ಮತ್ತು ಹಾರ್ಮುಜ್ ಜಲಸಂಧಿಯಲ್ಲಿನ ಸಂಘರ್ಷಗಳಿಂದಾಗಿ ಸಾಗಣೆ ದೊಡ್ಡ ಸವಾಲಾಗಿದೆ. ರಫ್ತು ನಿಲುಗಡೆಯಿಂದಾಗಿ ಉತ್ಪಾದನೆಯಾದ ಮೊಟ್ಟೆ ಇಲ್ಲೇ ಉಳಿದುಕೊಂಡಿದೆ. ಇದು ಉತ್ಪಾದಕರಿಗೆ ಭಾರಿ ನಷ್ಟವನ್ನುಂಟು ಮಾಡಿದೆ.
ಬೇಸಿಗೆಯಲ್ಲಿ ಮೊಟ್ಟೆಗಳ ಬಳಕೆ ಕಡಿಮೆಯಾಗುವುದರಿಂದ ಈಗಾಗಲೇ ದಾಸ್ತಾನು ಹೆಚ್ಚಾಗಿರುತ್ತದೆ. ಯುದ್ಧದ ಪರಿಣಾಮದಿಂದ ರಫ್ತು ಕೂಡ ನಿಂತುಹೋಗಿರುವುದು ಸಮಸ್ಯೆಗಳನ್ನು ಇನ್ನಷ್ಟು ಹೆಚ್ಚಿಸಿದೆ. ಮುಂದಿನ ದಿನಗಳಲ್ಲಿ ಮೊಟ್ಟೆಯ ಬೆಲೆ ಕುಸಿಯುವ ಸಾಧ್ಯತೆಯಿದೆ. ಕಳೆದ ವಾರ ಒಂದು ಮೊಟ್ಟೆಗೆ 5.50ರೂಪಾಯಿ ಆಗಿತ್ತು. ಈಗ ಮೊಟ್ಟೆ ಬೆಲೆ 4.50 ರಷ್ಟು ಕಡಿಮೆಯಾಗಿದೆ. ಇನ್ನು ಯುದ್ಧ ಮುಂದುವರೆದರೆ, ಉತ್ಪಾದನಾ ವೆಚ್ಚಕ್ಕಿಂತಲೂ ಕಡಿಮೆ ಬೆಲೆಗೆ ಮೊಟ್ಟೆಗಳನ್ನು ಮಾರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿ ಇನ್ನಷ್ಟು ನಷ್ಟ ಉಂಟಾಗುವ ಭೀತಿಯಿದೆ.

ನೋಡಿರಿ

