ಬಾಹ್ಯಾಕಾಶದಲ್ಲೇ ಬಂಧಿಯಾದ ಸುನೀತಾ – ಟೂರ್ ಟ್ರಯಲ್ ಫೇಲ್ಯೂರ್ ಆಗಿದ್ದೇಗೆ?
ಮರಳಿ ಭೂಮಿಗೆ ಬರಲು ಸವಾಲುಗಳೆಷ್ಟು?

ಬಾಹ್ಯಾಕಾಶದಲ್ಲೇ ಬಂಧಿಯಾದ ಸುನೀತಾ – ಟೂರ್ ಟ್ರಯಲ್ ಫೇಲ್ಯೂರ್ ಆಗಿದ್ದೇಗೆ?ಮರಳಿ ಭೂಮಿಗೆ ಬರಲು ಸವಾಲುಗಳೆಷ್ಟು?

ಸುನೀತಾ ವಿಲಿಯಮ್ಸ್​. ಬಹುಶಃ ಇತ್ತೀಚಿನ ವರ್ಷಗಳಲ್ಲಿ ಈ ಹೆಸರು ಕೇಳದವರೇ ಇಲ್ಲ. ಇವ್ರ ಹೆಸ್ರು ಇಡೀ ವಿಶ್ವಕ್ಕೆ ಮಾತ್ರವಲ್ಲ, ಭೂಮಂಡಲದ ಹೊರಗೂ ಸದ್ದು ಮಾಡಿದೆ. ಮೂರನೇ ಬಾರಿಗೆ ಬಾಹ್ಯಾಕಾಶ ಯಾನ ಕೈಗೊಳ್ಳುವ ಮೂಲಕ ಇತಿಹಾಸ ಸೃಷ್ಟಿಸಿದ ಭಾರತ ಮೂಲದ ವಿಶ್ವವಿಖ್ಯಾತ ಗಗನಯಾತ್ರಿ ಸುನೀತಾ ವಿಲಿಯಮ್ಸ್‌ ಮತ್ತು ಅವರ ತಂಡ ಬಾಹ್ಯಾಕಾಶದಲ್ಲೇ ಸಿಲುಕಿದ್ದಾರೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿ ಮಾಡಿರುವ ಸುನಿತಾ ವಿಲಿಯಮ್ಸ್ ಈಗ ಬಾಹ್ಯಾಕಾಶದಲ್ಲೇ ಕಳೆದು ಹೋಗ್ತಾರಾ ಎಂಬ ಆತಂಕ ಶುರುವಾಗಿದೆ. ಭೂಮಿಗೆ ಮರಳಿ ಬಾರದಂಥ ಪರಿಸ್ಥಿತಿ ಸೃಷ್ಟಿಯಾಗಿದೆ. ತಾಂತ್ರಿಕ ಸಮಸ್ಯೆಯಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲೇ ಸಿಲುಕಿಕೊಂಡಿರುವ ನಾಸಾ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್​ ಹಾಗೂ ಬುಚ್​ ವಿಲ್ಮೋರ್​ ಇನ್ನೂ ಕೆಲವು ದಿನಗಳ ಕಾಲ ಅಲ್ಲೇ ಉಳಿಯಬೇಕಾದ ಪರಿಸ್ಥಿತಿ ಉಂಟಾಗಿದೆ. ಅಷ್ಟಕ್ಕೂ ಇದು ಜನರನ್ನು ಭೂಮಿಯಿಂದ ಬಾಹ್ಯಾಕಾಶಕ್ಕೆ ಕೊಂಡೊಯ್ಯುವ ಟ್ರಿಪ್‌ಗೆ ಮಾಡಿದ ಟ್ರಯಲ್. ಮೊದಲಿಗೆ ಗಗನಯಾತ್ರಿಗಳನ್ನು ಕಳುಹಿಸಿ ಅವರ ಅನುಭವದ ಆಧಾರದಲ್ಲಿ ಸಾಮಾನ್ಯ ಜನರನ್ನು ಬಾಹ್ಯಾಕಾಶಕ್ಕೆ ಕರೆದೊಯ್ಯುವ ಪ್ಲಾನ್ ಮಾಡಿಕೊಳ್ಳಲಾಗಿತ್ತು. ಆದ್ರೆ ಟ್ರಯಲ್​ನಲ್ಲೇ ದೊಡ್ಡ ಆಘಾತ ಉಂಟಾಗಿದೆ.

ಸಂಕಷ್ಟದಲ್ಲಿ ಸುನಿತಾ ವಿಲಿಯಮ್ಸ್!

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ. ಇಲ್ಲಿಗೆ ನಾಸಾ ತನ್ನ ಗಗನಯಾತ್ರಿಗಳನ್ನ ಕಳಿಸಿತ್ತು. ಮಾನವರನ್ನ ಬಾಹ್ಯಾಕಾಶಕ್ಕೆ ಟೂರ್ ಕರೆದೊಯ್ಯೋ ಪ್ಲಾನ್​ನಲ್ಲಿರೋ ನಾಸಾ ಇದರ ಮೊದಲ ಭಾಗವಾಗಿ ಬೋಯಿಂಗ್ ಸಹಯೋಗದೊಂದಿಗೆ ಗಗನಯಾತ್ರಿಗಳನ್ನ ಕಳಿಸಿತ್ತು. ಕಕ್ಷೆಯಲ್ಲಿರುವ ಬಾಹ್ಯಾಕಾಶ ಪ್ರಯೋಗಾಲಯದಲ್ಲಿ 8 ದಿನಗಳನ್ನು ಕಳೆಯಲು ಗಗನಯಾತ್ರಿಗಳು ನಿರ್ಧರಿಸಿದ್ದರು. ಇದರ ಭಾಗವಾಗಿ ಬುಚ್ ವಿಲ್ಮೋರ್ ಎಂಬ ಮತ್ತೊಬ್ಬ ಖಗೋಳ ವಿಜ್ಞಾನಿಯೊಂದಿಗೆ ಜೂನ್ 5ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸುನೀತಾ ಲ್ಯಾಂಡ್ ಆಗಿದ್ದರು. ಅಂದು ಕುಣಿದು ಕುಪ್ಪಳಿಸಿದ್ದರು ಸುನೀತಾ ವಿಲಿಯಮ್ಸ್. ಹೀಗೆ ಸಂತಸ ವ್ಯಕ್ತಪಡಿಸಿದ್ದ ಸುನೀತಾ ವಿಲಿಯಮ್ಸ್ ಬಾಹ್ಯಾಕಾಶ ನಿಲ್ದಾಣದಲ್ಲೇ ದಿನಗಳನ್ನ ಕಳೆದಿದ್ರು. ಎಲ್ಲಾ ಅಂದುಕೊಂಡಂತೆ ಆಗಿದ್ರೆ ಜೂನ್ 14 ರಂದು ಭೂಮಿಗೆ ಹಿಂದಿರುಗಬೇಕಿತ್ತು. ಆದ್ರೆ ತಾಂತ್ರಿಕ ಸಮಸ್ಯೆ ಎದುರಾಗಿ ದೊಡ್ಡ ಆಘಾತ ನೀಡಿದೆ. ಬಾಹ್ಯಾಕಾಶ ನೌಕೆಯಲ್ಲಿ ತಾಂತ್ರಿಕ ದೋಷಗಳು ಕಾಣಿಸಿಕೊಂಡ ಹಿನ್ನೆಲೆ ವಾಪಸ್ ಬರೋ ದಿನಾಂಕವನ್ನ ಮುಂದೂಡಲಾಗಿತ್ತು. ಜೂನ್ 14 ರ ಬದಲಾಗಿ, ಜೂನ್ 26ರಂದು ಭೂಮಿಗೆ ಮರಳೋದಕ್ಕೆ ಡೇಟ್ ಫಿಕ್ಸ್ ಮಾಡಲಾಗಿತ್ತು. ನೌಕೆಯಲ್ಲಿ ಉಂಟಾದ ಸಣ್ಣ ಹೀಲಿಯಂ ಸಿಸ್ಟಮ್ ಸೋರಿಕೆಯಿಂದಾಗಿ ಭೂಮಿಗೆ ಮರಳುವುದು ವಿಳಂಬವಾಗಿತ್ತು. ಇದನ್ನ ಸರಿಪಡಿಸೋ ಕಾರ್ಯ ನಾಸಾದ ತಜ್ಞರಿಂದ ನಡೀತಿತ್ತು. ಆದ್ರೆ, ಮತ್ತಷ್ಟು ತಾಂತ್ರಿಕ ತೊಂದರೆಗಳು ಎದುರಾಗಿದ್ದು, ಸಮಸ್ಯೆ ಮತ್ತಷ್ಟು ಬಿಗುಡಾಯಿಸಿದೆ. ಹೀಗಾಗಿ ಭೂಮಿಗೆ ವಾಪಸ್ ಆಗೋ ದಿನಾಂಕವನ್ನ ಮತ್ತೆ ಮುಂದೂಡಲಾಗಿದೆ. ಆದ್ರೆ ಯಾವಾಗ ಅಂತಾ ನಿಖರವಾಗಿ ಹೇಳಿಲ್ಲ. ಆದ್ರೆ ಟೆಕ್ನಿಕಲ್ ಇಶ್ಯೂ ಸರಿಯಾಗುತ್ತೆ ಅನ್ನೋದು ಸರಿಯಾಗಿ ತಿಳಿಯದೇ ಇರೋದು ಆತಂಕ ಹೆಚ್ಚಲು ಕಾರಣವಾಗಿದೆ.

ಸದ್ಯ ಬಾಹ್ಯಾಕಾಶ ನೌಕೆಯಲ್ಲಿ ಉಂಟಾಗಿರೋ ತಾಂತ್ರಿಕ ಸಮಸ್ಯೆ ಸರಿ ಪಡಿಸೋ ಕಾರ್ಯ ನಡೀತಿದೆ. ಅದರಲ್ಲಿರುವ ಇಂಧನ 45 ದಿನಗಳಿಗೆ ಸಾಕಾಗುತ್ತೆ. ವಿಶೇಷ ಸಂದರ್ಭಗಳಲ್ಲಿ ಅದನ್ನು ಕೆಲವು ದಿನಗಳ ಮಟ್ಟಿಗೆ ಹೆಚ್ಚಿಸಬಹುದು. ಆದರೆ, ದಿನಕಳೆದಂತೆ ಇಂಧನ ಖಾಲಿಯಾಗುತ್ತಾ ಹೋಗುತ್ತೆ. ಆಗ ಮರಳಿ ಭೂಮಿಗೆ ಹಿಂದಿರುಗಲು ಸಾಧ್ಯವಾಗಲ್ಲ. ಹೀಗಾಗಿ ವಿಜ್ಞಾನಲೋಕ ಸೇರಿದಂತೆ ಕೋಟಿ ಕೋಟಿ ಭಾರತೀಯರು ಸುನೀತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಸೇಫಾಗಿ ಬರಲಿ ಎಂದು ಪ್ರಾರ್ಥನೆ ಮಾಡ್ತಿದ್ದಾರೆ.

Shwetha M

Leave a Reply

Your email address will not be published. Required fields are marked *