ಶೆಟ್ಟರ್, ಸವದಿಯನ್ನ ಭೇಟಿಯಾದ ಡಿಸಿಎಂ ಡಿಕೆಶಿ – ಇಬ್ಬರು ನಾಯಕರಿಗೆ ಉನ್ನತ ಸ್ಥಾನದ ಭರವಸೆ!

ಶೆಟ್ಟರ್, ಸವದಿಯನ್ನ ಭೇಟಿಯಾದ ಡಿಸಿಎಂ ಡಿಕೆಶಿ – ಇಬ್ಬರು ನಾಯಕರಿಗೆ ಉನ್ನತ ಸ್ಥಾನದ ಭರವಸೆ!

ಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿದ ಯಶಸ್ಸು ಗಳಿಸಿರುವ ಕಾಂಗ್ರೆಸ್ ಪಕ್ಷ ಸದ್ಯ 5 ಗ್ಯಾರಂಟಿ ಯೋಜನೆಗಳ ಜಾರಿ ಲೆಕ್ಕಾಚಾರದಲ್ಲಿದೆ. ಇದರ ನಡುವೆ ಡಿಸಿಎಂ ಡಿ.ಕೆ ಶಿವಕುಮಾರ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಇಬ್ಬರು ಪ್ರಬಲ ನಾಯಕರನ್ನ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಬಿಜಪಿಯಿಂದ ಕಾಂಗ್ರೆಸ್ ಪಕ್ಷ ಸೇರಿದ ಲಕ್ಷ್ಮಣ ಸವದಿ (Laxman Savadi) ಮತ್ತು ಜಗದೀಶ್ ಶೆಟ್ಟರ್ (Jagadish Shettar) ಅವರನ್ನು ಭೇಟಿಯಾಗಿ ಚರ್ಚಿಸಿದ್ದಾರೆ.

ಇದನ್ನೂ ಓದಿ : ಶಾಲೆಗೆ ಹೊರಟ ವಿದ್ಯಾರ್ಥಿಗಳಿಗೆ KSRTCಯಿಂದ ಗುಡ್ ನ್ಯೂಸ್ – ಹಳೇ ಪಾಸ್ ತೋರಿಸಿ ಪ್ರಯಾಣಕ್ಕೆ ಅವಕಾಶ!

ಕಾಂಗ್ರೆಸ್ ಪಕ್ಷದಿಂದ ಹುಬ್ಬಳ್ಳಿ ಧಾರವಾಡ ಕೇಂದ್ರ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋತಿರುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್‌ ಅವರಿಗೆ ಉನ್ನತ ಸ್ಥಾನಮಾನ ನೀಡುವ ನಿರೀಕ್ಷೆ ಇದೆ. ಇದೇ ವಿಚಾರವಾಗಿ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಇಂದು ಹುಬ್ಬಳ್ಳಿಯಲ್ಲಿ ಕಾಂಗ್ರೆಸ್​ ನಾಯಕ ಜಗದೀಶ್​ ಶೆಟ್ಟರ್​ ಅವರೊಂದಿಗೆ ಗೌಪ್ಯ ಸಭೆ ನಡೆಸಿದ್ದಾರೆ. ಸಭೆ ಬಳಿಕ ಮಾತನಾಡಿದ ಜಗದೀಶ್​ ಶೆಟ್ಟರ್​​, ಡಿ.ಕೆ ಶಿವಕುಮಾರ್ ಜೊತೆ ಔಪಚಾರಿಕವಾದ ಮಾತುಕತೆಯಾಗಿದೆ. ಉತ್ತರ ಕರ್ನಾಟಕ ಭಾಗದ ಸಂಘಟನೆ ಬಗ್ಗೆ ಡಿಕೆಶಿ ಸಂತೋಷ ವ್ಯಕ್ತಪಡಿಸಿದರು. ಮುಂಬರುವ ಚುನಾವಣೆ ಕುರಿತು ಚರ್ಚೆ ಮಾಡಿದ್ದೇವೆ. ಅವರೂ ಸಹ ಕೆಲವು ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಪಕ್ಷ ನನ್ನ ಜೊತೆಗಿದೆ ಅನ್ನೋ ಭರವಸೆಯನ್ನ ನೀಡಿದ್ದಾರೆ ಎಂದರು. ಇನ್ನು ಲೋಕಸಭೆ ಚುನಾವಣೆಯಲ್ಲಿ ಜಗದೀಶ್​ ಶೆಟ್ಟರ್ ಕೂಡ​ ಅಭ್ಯರ್ಥಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ನಾನು  ಅಭ್ಯರ್ಥಿ ಅನ್ನುವ ಬಗ್ಗೆ ಯಾವುದೂ ಚರ್ಚೆ ಮಾಡಿಲ್ಲ. ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆ ತಯಾರಿ ಬಗ್ಗೆ ಚರ್ಚೆ ಮಾಡಿದ್ದೇವೆ. ಪಕ್ಷ ಸಂಘಟನೆ ಹಾಗೂ ಚುನಾವಣಾ ತಯಾರಿ ಬಗ್ಗೆ ಹಲವು ಚರ್ಚೆ ನಡೆಸಲಾಯಿತು ಎಂದು ಮಾಹಿತಿ ನೀಡಿದರು.

ಶೆಟ್ಟರ್ ಭೇಟಿ ಬಗ್ಗೆ ಮಾತನಾಡಿದ ಡಿ.ಕೆ ಶಿವಕುಮಾರ್, ಬಿ ಫಾರಂ ಕೊಟ್ಟ ಮೇಲೆ ನಾನು ಜಗದೀಶ್ ಶೆಟ್ಟರ್ ಅವರ ಜೊತೆ ಮಾತಾಡಿರಲಿಲ್ಲ. ನಾನು ಪ್ರಚಾರದಲ್ಲಿ ಬ್ಯುಸಿ ಆಗಿದ್ದೆ. ಹೀಗಾಗಿ ಮಾತಾಡೋಕೆ ಆಗಿರಲಿಲ್ಲ. ಜಗದೀಶ್​ ಶೆಟ್ಟರ್, ಲಕ್ಷ್ಮಣ ಸವದಿ, ಗುಬ್ಬಿ ಶ್ರೀನಿವಾಸ್ ಅವರಿಂದ ನಮಗೆ ಶಕ್ತಿ ಬಂದಿದೆ. ಸೋಲು ಗೆಲುವು ಇರೋದೆ. ಅವರು ನಮಗೆ ಮಾರ್ಗದರ್ಶನ ಕೊಟ್ಟಿದ್ದಾರೆ ಅವರಿಂದ ಬದಲಾವಣೆ ಆಯ್ತು. ಜಗದೀಶ್​ ಶೆಟ್ಟರ್ ಅವರ ಜೊತೆ ನಾವು ಇರುತ್ತೇವೆ. ನಮಗೆ ವರಿಷ್ಠರ ಆದೇಶ ಇದೆ. ರಾಷ್ಟ್ರೀಯ ಅಧ್ಯಕ್ಷರ ಆದೇಶದ ಮೇಲೆ ಕೆಲ ಸಂದೇಶ ಹೇಳಬೇಕಿತ್ತು. ಶೆಟ್ಟರ್​​ಗೆ ಸಂದೇಶ ತಲುಪಿಸಿದ್ದೇನೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು. ನಾವು ಪ್ರತಿಯೊಂದು ಹಂತದಲ್ಲೂ ಸರಕಾರದ ತಪ್ಪು ಮುಂದಿಟ್ಟಿದ್ದೇವೆ. ಇವತ್ತು ನಮಗೆ ದೊಡ್ಡ ಅವಕಾಶ ನಮಗೆ ಸಿಕ್ಕುದೆ. ದೇವರೂ ವರನೂ ಕೊಡಲ್ಲ, ಶಾಪನೂ ಕೊಡಲ್ಲ, ಅವಕಾಶ ಮಾತ್ರ ಕೊಡುತ್ತಾನೆ. ನಾವು ಅದನ್ನು ಉಪಯೋಗಿಸಿಕೊಳ್ಳಬೇಕು ಎಂದರು. ಹಾಗೇ ಜಗದೀಶ್​ ಶೆಟ್ಟರ್ ಅವರ ಜೊತೆ ನಾವು ಇರುತ್ತೇವೆ. ಕಾಂಗ್ರೆಸ್ ಪಕ್ಷ ಅವರ ಜೊತೆ ಇದೆ. ಜಗದೀಶ್​ ಶೆಟ್ಟರ್ ಅವರಿಗೆ ಸ್ಥಾನ ಮಾನ ಕೊಡುವ ವಿಚಾರವಾಗಿ ಮಾತನಾಡಿ ನಾನು ಒಂದೇ ಮಾತಿನಲ್ಲಿ ಹೇಳುತ್ತೇನೆ, ಪಕ್ಷ ಅವರ ಜೊತೆ ಇದೆ ನಾವೇನು ಗೌಪ್ಯವಾಗಿ ಇಡಲ್ಲ ಎಂದರು.

 

suddiyaana