‘ಸುದೀಪ್’ ಟ್ವೀಟ್‌ಗೆ ‘ಡಿ ಬಾಸ್’ ಪ್ರತಿಕ್ರಿಯೆ – ಮತ್ತೆ ಒಂದಾದ್ರಾ ದಚ್ಚು-ಕಿಚ್ಚ ?
ಸ್ನೇಹಿತರು ಮತ್ತೆ ಒಂದಾಗಲಿ ಎಂದು ಅಭಿಮಾನಿಗಳ ಹಾರೈಕೆ

‘ಸುದೀಪ್’ ಟ್ವೀಟ್‌ಗೆ ‘ಡಿ ಬಾಸ್’ ಪ್ರತಿಕ್ರಿಯೆ – ಮತ್ತೆ ಒಂದಾದ್ರಾ ದಚ್ಚು-ಕಿಚ್ಚ ?ಸ್ನೇಹಿತರು ಮತ್ತೆ ಒಂದಾಗಲಿ ಎಂದು ಅಭಿಮಾನಿಗಳ ಹಾರೈಕೆ

ಕ್ರಾಂತಿ ಸಿನಿಮಾದ ಸಾಂಗ್ ರಿಲೀಸ್ ಕಾರ್ಯಕ್ರಮದಲ್ಲಿ ಡಿ ಬಾಸ್ ಮೇಲೆ ಚಪ್ಪಲಿ ಎಸೆದ ಘಟನೆ ನಡೆದ ಮೇಲೆ ದರ್ಶನ್ ಪರ ಇಡೀ ಸ್ಯಾಂಡಲ್‌ವುಡ್ ನಿಂತಿದೆ. ಹ್ಯಾಟ್ರಿಕ್ ಹೀರೋ ಶಿವಣ್ಣನಿಂದ ಹಿಡಿದು ನಟ, ನಟಿಯರು ದರ್ಶನ್ ಪರ ನಿಂತಿದ್ದರು. ಆದರೆ, ಇದರಲ್ಲಿ ಅಭಿಮಾನಿಗಳ ಮನಗೆದ್ದಿದ್ದು ಕಿಚ್ಚ ಸುದೀಪ್ ಮಾಡಿರುವ ಟ್ವೀಟ್. ಈಗ ಕಿಚ್ಚನಿಗೆ ದಚ್ಚು ಕೂಡಾ ರಿಪ್ಲೈ ಮಾಡಿದ್ದು, ನಿಮ್ಮ ಪ್ರೀತಿಯ ಸಾಲುಗಳಿಗೆ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ. ಇದರಿಂದಾಗಿ ಕಿಚ್ಚ ಮತ್ತು ಡಿ ಬಾಸ್ ಅಭಿಮಾನಿಗಳ ಖುಷಿಗೆ ಪಾರವೇ ಇಲ್ಲದಂತಾಗಿದೆ.

ಇದನ್ನೂ ಓದಿ:  ‘ದ್ವೇಷವೇ ಎಲ್ಲದಕ್ಕೂ ಉತ್ತರವಲ್ಲ’ -ದರ್ಶನ್ ಮೇಲೆ ಚಪ್ಪಲಿ ಎಸೆತಕ್ಕೆ ಕಿಚ್ಚ ಸುದೀಪ್ ಪ್ರತಿಕ್ರಿಯೆ

ಕಿಚ್ಚ ದಚ್ಚು ಒಂದಾಗಿದ್ದಾರೆ ಅನ್ನೋ ರೀತಿ ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ಸರಿಯಾಗಿ ನವರಸ ನಾಯಕ ಜಗ್ಗೇಶ್ ಕೂಡಾ ನೀವಿಬ್ಬರೂ ಒಂದಾದ ಸುದ್ದಿ ಖುಷಿಕೊಟ್ಟಿದೆ ಎಂದು ಹೇಳಿದ್ದಾರೆ. ಸುದೀಪ್ ಮಾಡಿರುವ ಟ್ವೀಟ್‌ಗೆ ದರ್ಶನ್ ಪ್ರತಿಕ್ರಿಯಿಸಿದ ಟ್ವೀಟ್‌ಗೆ ರಾಕೆಟ್ ವೇಗದಲ್ಲಿ ಲೈಕ್ಸ್ ಮತ್ತು ಕಮೆಂಟ್ಸ್ ಬರುತ್ತಿದೆ. ಅಭಿಮಾನಿಗಳು ನೀವಿಬ್ಬರೂ ಒಂದಾದರೆ ಅಷ್ಟೇ ಸಾಕು. ನಿಮ್ಮ ಗೆಳೆತನ ಮೊದಲಿನಂತಾಗಲಿ ಎಂದು ಹಾರೈಸುತ್ತಿದ್ದಾರೆ. ಎರಡು ದಿನಗಳ ಹಿಂದೆ ಸುದೀಪ್, ಹೊಸಪೇಟೆ ಘಟನೆ ಬಗ್ಗೆ ಸುದೀರ್ಘ ಟ್ವೀಟ್ ಮಾಡಿದ್ದರು. ಈ ಘಟನೆಯಿಂದಾಗಿ ನಾನು ವಿಚಲಿತನಾದೆ. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಕೂಡಾ ಇಂಥಾ ಘಟನೆಗಳನ್ನ ಸಹಿಸುತ್ತಿರಲಿಲ್ಲ ಎಂದು ಸುದೀರ್ಘ ಸಾಲುಗಳಲ್ಲಿ ಟ್ವೀಟ್ ಮಾಡಿದ್ದರು. ಕಿಚ್ಚ ಸುದೀಪ್ ಮಾಡಿರುವ ಟ್ವೀಟ್‌ಗೆ ಡಿ ಬಾಸ್ ದರ್ಶನ್ ಪ್ರತಿಕ್ರಿಯೆ ನೀಡಿ @KicchaSudeep ನಿಮ್ಮ ಪ್ರೀತಿಯ ಸಾಲುಗಳಿಗೆ ಧನ್ಯವಾದಗಳು” ಎಂದು ಸ್ಮೈಲ್ ಎಮೋಜಿಯೊಂದಿಗೆ ಬರೆದುಕೊಂಡಿದ್ದಾರೆ. ‘ಕ್ರಾಂತಿ’ ಚಿತ್ರದ ಮೊದಲ ಹಾಡು ಮೈಸೂರಿನಲ್ಲಿ, ಎರಡನೇ ಹಾಡು ಬಳ್ಳಾರಿಯಲ್ಲಿ ಬಿಡುಗಡೆ ಆಗಿದೆ. ಮೂರನೇ ಹಾಡು ಬಿಡುಗಡೆಗೆ ಕೂಡಾ ಸ್ಥಳ ಹಾಗೂ ದಿನಾಂಕ ನಿಗದಿಯಾಗಿದೆ. ಕ್ರಿಸ್ ಮಸ್ ಹಬ್ಬದಂದು, ಅಂದರೆ ಡಿಸೆಂಬರ್ 25 ರಂದು ಹುಬ್ಬಳ್ಳಿಯ ಚನ್ನಮ್ಮ ಸರ್ಕಲ್‌ನಲ್ಲಿ ಚಿತ್ರದ ಮೂರನೇ ಹಾಡನ್ನು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. 2023 ಜನವರಿ 26 ರಂದು ‘ಕ್ರಾಂತಿ’ ಸಿನಿಮಾ ಬಿಡುಗಡೆ ಆಗುತ್ತಿದೆ.

suddiyaana