ಮಿಚಾಂಗ್‌ ಚಂಡಮಾರುತದ ರೌದ್ರಾವತಾರ – ಸೆಲೆಬ್ರಿಟಿಗಳ ಮನೆಗಳಿಗೂ ನುಗ್ಗಿದ ನೀರು!

ಮಿಚಾಂಗ್‌ ಚಂಡಮಾರುತದ ರೌದ್ರಾವತಾರ – ಸೆಲೆಬ್ರಿಟಿಗಳ ಮನೆಗಳಿಗೂ ನುಗ್ಗಿದ ನೀರು!

ಮಿಚಾಂಗ್ ಚಂಡಮಾರುತದಿಂದಾಗಿ ಚೆನ್ನೈನಲ್ಲಿ ಭಯಾನಕ ಪರಿಸ್ಥಿತಿ ಉಂಟಾಗಿದೆ. ನಿರಂತರ ಮಳೆ ಜನರ ನಿದ್ದೆಗೆಡಿಸಿದೆ. ಸಿಕ್ಕ ಸಿಕ್ಕ ಜಾಗಗಳಿಗೆ ನೀರು ನುಗ್ಗಿ ಆವಾಂತರವನ್ನೇ ಸೃಷ್ಟಿ ಮಾಡಿದೆ. ಭಾರೀ ಮಳೆಯಿಂದ ಮನೆಗಳು ಜಲಾವೃತಗೊಂಡಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ. ಮಿಚಾಂಗ್‌ ಚಂಡಮಾರುತದಿಂದಾಗಿ ನಟಿ ನಮಿತಾ ಮನೆಗೆ ಭಾರೀ ಪ್ರಮಾಣದಲ್ಲಿ ನೀರು ನುಗ್ಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಮಿಚಾಂಗ್‌ ಅಬ್ಬರ: ಆಂಧ್ರಪ್ರದೇಶದಲ್ಲಿ 40 ಲಕ್ಷ ಜನರಿಗೆ ಸಂಕಷ್ಟ – ತಮಿಳುನಾಡಿನಲ್ಲೂ ಭಯಾನಕ ಪರಿಸ್ಥಿತಿ

ಚೆನ್ನೈ ಸಮೀಪದಲ್ಲಿರುವ ಪಲ್ಲಿಕರಣ ನಾರಾಯಣಪುರಂ ಕೆರೆ ಒಡೆದಿದೆ. ಇದರ ಪರಿಣಾಮ ನಟಿ ನಮಿತಾ ವಾಸವಿದ್ದ ಪಳ್ಳಿಕರಣ ಸಮೀಪದ ಅಪಾರ್ಟ್ ಮೆಂಟ್ ಗೆ ನೀರು ನುಗ್ಗಿದೆ. ಇಬ್ಬರು ಮಕ್ಕಳು ಮತ್ತು ಪತಿಯೊಂದಿಗೆ ಮನೆಯಲ್ಲೇ ಇದ್ದ ಸಂದರ್ಭದಲ್ಲಿ ಭಾರೀ ಪ್ರಮಾಣದಲ್ಲಿ ನೀರು ಹರಿದು ಬಂದಿದೆ. ಮನೆಯಲ್ಲಿ ಆರು ಅಡಿಗಳಷ್ಟು ನೀರು ತುಂಬಿದೆ. ಕೂಡಲೇ ರಕ್ಷಣಾ ಸಿಬ್ಬಂದಿಗೆ ಕರೆ ಮಾಡಿ, ಬಚಾವ್ ಆಗಿದ್ದಾರೆ ಎಂದು ನಟಿ ಹೇಳಿಕೊಂಡಿದ್ದಾರೆ.

ಮನೆಯಲ್ಲಿ ಸಿಲುಕಿದ್ದ ಆಮೀರ್, ವಿಶಾಲ್ ರಕ್ಷಣೆ

ಎಡಬಿಡದೆ ಸುರಿದ ಭಾರೀ ಮಳೆಯಿಂದಾಗಿ ಕಾಲಿವುಡ್ ಹೀರೋ ವಿಷ್ಣು ವಿಶಾಲ್ ಮನೆಯಿರುವ ಪ್ರದೇಶ ಜಲಾವೃತ್ತಗೊಂಡಿದೆ. ಈ ಪರಿಣಾಮ, ಮನೆಯಿಂದ ಯಾರೂ ಹೊರಬರಲಾರದ ಸ್ಥಿತಿಯಲ್ಲಿದ್ದಾರೆ. ಇದೇ ವೇಳೆ, ಬಾಲಿವುಡ್ ನಟ ಆಮೀರ್ ಖಾನ್ ಅವರು ನಟ ವಿಷ್ಣು ಮನೆಯಲ್ಲೇ ಲಾಕ್ ಆಗಿದ್ದಾರೆ.

ಚೆನ್ನೈನ ಕರಪಾಕ್ಕಂ ಪ್ರದೇಶದಲ್ಲಿರುವ ತಮಿಳು ನಟ ವಿಷ್ಣು ವಿಶಾಲ್ ಮನೆಗೆ ಆಮೀರ್ ಖಾನ್ ಭೇಟಿ ನೀಡಿದ್ದರು. ಪ್ರವಾಹ ಪರಿಸ್ಥಿತಿಯಿಂದಾಗಿ ವಿಷ್ಣು ವಿಶಾಲ್ ಅವರ ನಿವಾಸದಲ್ಲೇ ಆಮೀರ್ ಖಾನ್ ಸಿಲುಕಿದ್ದರು. ಈ ಸಂದರ್ಭದಲ್ಲಿ ನೀರಿನ ಮಟ್ಟ ತೀವ್ರವಾಗಿ ಏರುತ್ತಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ನೆಟ್‌ವರ್ಕ್, ವೈಫೈ ಯಾವುದೂ ಇಲ್ಲವಾಗಿದೆ. ಇದೇ ಸಮಯದಲ್ಲಿ ವಿಷ್ಣು ವಿಶಾಲ್ ಮನೆಯೊಳಗೆ ನೀರು ನುಗ್ಗಿದ್ರಿಂದ ಸಹಾಯಕ್ಕಾಗಿ ನಟ ವಿಷ್ಣು ವಿಶಾಲ್ ಅವರು ಸೋಷಿಯಲ್ ಮೀಡಿಯಾದಲ್ಲಿ ಮೂಲಕ ಮನವಿ ಮಾಡಿದ್ದರು. ಕೂಡಲೆ ಅಗ್ನಿಶಾಮಕ ದಳ ನಟ ವಿಷ್ಣು ವಿಶಾಲ್ ಮತ್ತು ಆಮೀರ್ ಖಾನ್ ಅವರನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಕರೆತಂದಿದ್ದಾರೆ.  ಅಗ್ನಿಶಾಮಕ ತಂಡಕ್ಕೆ ವಿಷ್ಣು ಮತ್ತು ಆಮೀರ್‌ ಖಾನ್‌ ಧನ್ಯವಾದ ತಿಳಿಸಿದ್ದಾರೆ.

Shwetha M