ರಾಜ್ಯಕ್ಕೆ ಮತ್ತೊಮ್ಮೆ ಶಾಕ್‌ ಕೊಟ್ಟ ಸಿಡಬ್ಲ್ಯೂಎಂಎ! – ಅ.15 ರವರೆಗೆ ತಮಿಳುನಾಡಿಗೆ 3,000 ಕ್ಯೂಸೆಕ್‌ ನೀರು ಹರಿಸಲು ಕರ್ನಾಟಕಕ್ಕೆ ಸೂಚನೆ

ರಾಜ್ಯಕ್ಕೆ ಮತ್ತೊಮ್ಮೆ ಶಾಕ್‌ ಕೊಟ್ಟ ಸಿಡಬ್ಲ್ಯೂಎಂಎ! – ಅ.15 ರವರೆಗೆ ತಮಿಳುನಾಡಿಗೆ 3,000 ಕ್ಯೂಸೆಕ್‌ ನೀರು ಹರಿಸಲು ಕರ್ನಾಟಕಕ್ಕೆ ಸೂಚನೆ

ನವದಹೆಲಿ: ರಾಜ್ಯದಲ್ಲಿ ಕಾವೇರಿ ಕಿಚ್ಚು ಹೊತ್ತಿ ಉರಿಯುತ್ತಿದೆ. ಈ ಬೆನ್ನಲ್ಲೇ ಕರ್ನಾಟಕಕ್ಕೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ರಾಜ್ಯಕ್ಕೆ ಮತ್ತೊಂದು ಶಾಕ್‌ ನೀಡಿದೆ.  ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರದಲ್ಲಿ ಯಾವುದೇ ಬದಲಾವಣೆ ಇಲ್ಲ. ಅಕ್ಟೋಬರ್‌ 15 ರ ವರೆಗೆ ನಿತ್ಯ 3,000 ಕ್ಯೂಸೆಕ್‌ ನೀರನ್ನು ಹರಿಸಬೇಕು ಎಂದು ಕರ್ನಾಟಕಕ್ಕೆ CWMAಆದೇಶಿಸಿದೆ.

ನವದೆಹಲಿಯಲ್ಲಿ ಇಂದು (ಶುಕ್ರವಾರ) ಪ್ರಾಧಿಕಾರದ ಅಧ್ಯಕ್ಷ ಎಸ್‌.ಕೆ ಹಲ್ದಾರ್ ನೇತೃತ್ವದಲ್ಲಿ ಸಭೆ ನಡೆದಿದ್ದು, ಈ ಸಭೆಯಲ್ಲಿ ಮತ್ತೆ ಸಿಡಬ್ಲ್ಯೂಆರ್‌ಸಿ ಆದೇಶವನ್ನು ಪ್ರಾಧಿಕಾರ ಎತ್ತಿ ಹಿಡಿಯಿತು. 18 ದಿನಗಳ ಕಾಲ ನಿತ್ಯ 3,000 ಕ್ಯೂಸೆಕ್‌ ನೀರನ್ನು ತಮಿಳುನಾಡಿಗೆ ಬಿಡಬೇಕು ಎಂದು ಸೂಚನೆ ನೀಡಿತು. ಆ ಮೂಲಕ CWRC ಆದೇಶ ಪರಿಷ್ಕರಿಸಲು ನಿರಾಕರಿಸಿತು.

ಇದನ್ನೂ ಓದಿ: ಮತ್ತೆ 5,000 ಕ್ಯೂಸೆಕ್ ನೀರು ಬಿಡುಗಡೆ ಮಾಡಬೇಕೆಂದು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ತಮಿಳುನಾಡು

ಕಾವೇರಿ ನೀರು ಹಂಚಿಕೆ ಬಗ್ಗೆ ಚರ್ಚೆ ವೇಳೆ, ತಮಿಳುನಾಡಿಗೆ ನಿತ್ಯ 12,500 ಕ್ಯೂಸೆಕ್ ನೀರು ಬಿಡಬೇಕು. ಮಾಸಿಕ ನಿಗದಿಯಂತೆ ಅಕ್ಟೋಬರ್‌ನಲ್ಲಿ ಬಿಡಬೇಕಾದ 22.14 ಟಿಎಂಸಿ ನೀರನ್ನು ಸಕಾಲಕ್ಕೆ ಬಿಡಬೇಕು. ಕರ್ನಾಟಕದ ಹೊಸ ಕೊರತೆ ಮಾಪನ ಪ್ರಸ್ತಾವನೆಯನ್ನು ಒಪ್ಪಿಕೊಳ್ಳದಂತೆ ಪ್ರಾಧಿಕಾರದ ಮುಂದೆ ತಮಿಳುನಾಡು ಮನವಿ ಮಾಡಿತು. CWRC ಆದೇಶ ಪರಿಷ್ಕರಿಸಲು ಕರ್ನಾಟಕ ಸಭೆಯಲ್ಲಿ ಮನವಿ ಮಾಡಿತು. ಸಂಕಷ್ಟ ಸೂತ್ರದ ಅಡಿಯಲ್ಲಿ ಮಾಸಿಕವಾರು ನೀರು ಹಂಚಿಕೆಗೆ ಹೊಸ ಪಟ್ಟಿ ಸಿದ್ಧಪಡಿಸಿರುವ ಕರ್ನಾಟಕ, ಹೊಸ ಹಂಚಿಕೆ ಪ್ರಕಾರ ನೀರು ಹರಿಸಲು ಮನವಿ ಮಾಡಿತು. ಕರ್ನಾಟಕದ ಮನವಿಯನ್ನು ಪರಿಗಣಿಸದಂತೆ ತಮಿಳುನಾಡು ಒತ್ತಡ ಹಾಕಿತು. ಎರಡೂ ಕಡೆಯ ಮನವಿ ಆಲಿಸಿದ ಪ್ರಾಧಿಕಾರ ಕೊನೆಗೆ CWRC ಆದೇಶವನ್ನು ಎತ್ತಿ ಹಿಡಿಯಿತು. 18 ದಿನಗಳ ಕಾಲ ನಿತ್ಯ 3,000 ಕ್ಯೂಸೆಕ್ ನೀರು ಹರಿಸಲು ಕರ್ನಾಟಕಕ್ಕೆ ಸೂಚನೆ ನೀಡಿತು. ಸಿಡಬ್ಲ್ಯೂಆರ್‌ಸಿ ಆದೇಶದಲ್ಲಿ ಯಾವುದೇ ಬದಲಾವಣೆ ಇಲ್ಲ. ಅ.15 ರ ವರೆಗೂ ನೀರು ಹರಿಸಬೇಕು ಎಂದು ತಿಳಿಸಿತು.

Shwetha M