ಗಂಟು ಮೂಟೆ ಕಟ್ಟಿದ CSK – ರುತುರಾಜ್ ನಾಯಕನಾಗಿದ್ದೇ ತಪ್ಪಾ?
RCB ಹತ್ರಕ್ಕೂ ಸುಳಿಯದ GT

ಗಂಟು ಮೂಟೆ ಕಟ್ಟಿದ CSK – ರುತುರಾಜ್ ನಾಯಕನಾಗಿದ್ದೇ ತಪ್ಪಾ?RCB ಹತ್ರಕ್ಕೂ ಸುಳಿಯದ GT

ಕೊನೆಯ ಪಂದ್ಯವನ್ನು ಭರ್ಜರಿಯಾಗಿ ಜಯಿಸಿ ಐಪಿಎಲ್ 2026ರ ಪ್ಲೇ ಆಫ್ ಹಂತಕ್ಕೇರಬೇಕೆಂಬ ನಿರೀಕ್ಷೆಯಿಂದ ಕಣಕ್ಕಿಳಿಸಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಭಾರೀ ನಿರಾಸೆಯಾಗಿದೆ.  ಗುಜರಾತ್‌ ವಿರುದ್ಧ ನಿರ್ಣಾಯಕ ಪಂದ್ಯದಲ್ಲಿ 89 ರನ್‌ಗಳ ಹೀನಾಯ ಸೋಲುಂಡ 5 ಬಾರಿ ಚಾಂಪಿಯನ್‌ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಬಾರಿ ಐಪಿಎಲ್‌ನ ಪ್ಲೇ-ಆಫ್‌ ರೇಸ್‌ನಿಂದ ಅಧಿಕೃತವಾಗಿ ಹೊರಬಿದ್ದು ಮನೆ ಕಡೆ ಗಂಟುಮೂಟೆ ಕಟ್ಟಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್, ಸಾಯಿ ಸುದರ್ಶನ್ 84  ಮತ್ತು ಶುಭಮನ್ ಗಿಲ್ 64 ಅವರ ಜೊತೆಯಾಟದ ನೆರವಿನಿಂದ 229 ರನ್ ಗಳಿಸಿತು. ಬೃಹತ್ ಗುರಿ ಬೆನ್ನಟ್ಟಿದ ಸಿಎಸ್‌ಕೆ, ಶಿವಂ ದುಬೆ 47 ಅವರ ಸ್ಫೋಟಕ ಆಟದ ಹೊರತಾಗಿಯೂ 140 ರನ್‌ಗಳಿಗೆ ಆಲೌಟ್ ಆಯಿತು. ಗುಜರಾತ್ ಪರ ಮೊಹಮ್ಮದ್ ಸಿರಾಜ್, ರಬಾಡಾ ಮತ್ತು ರಶೀದ್ ಖಾನ್ ತಲಾ 3 ವಿಕೆಟ್ ಕಬಳಿಸಿದರು.

ಸಿಎಸ್‌ಕೆ ಆಡಿರೋ 14 ಪಂದ್ಯಗಳ ಪೈಕಿ 8ರಲ್ಲಿ ಸೋತು 7ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಮತ್ತೊಂದೆಡೆ ಗುಜರಾತ್‌ 14 ಪಂದ್ಯಗಳ ಪೈಕಿ 9ರಲ್ಲಿ ಗೆದ್ದಿದ್ದು, ಅಂಕಪಟ್ಟಿಯಲ್ಲಿ 2ನೇ ಸ್ಥಾನ ಭದ್ರಪಡಿಸಿಕೊಂಡಿತು.

ಕ್ವಾಲಿಫೈಯರ್ 1 ಪಂದ್ಯ ಆಡಲಿರೋ GT

ಶುಭ್‌ಮನ್ ಗಿಲ್ ನೇತೃತ್ವದ ಗುಜರಾತ್ ಟೈಟಾನ್ಸ್‌ ಇದೀಗ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನುಅನಾಯಾಸವಾಗಿ ಮಣಿಸುವ ಮೂಲಕ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದು, ಬಹುತೇಕ ಕ್ವಾಲಿಫೈಯರ್-1 ಪಂದ್ಯವನ್ನಾಡಲು ಅರ್ಹತೆ ಗಿಟ್ಟಿಸಿಕೊಂಡಿದೆ. ಈಗಾಗಲೇ ಆರ್‌ಸಿಬಿ ಹಾಗೂ ಗುಜರಾತ್ ತಂಡಗಳು ತಲಾ 18 ಅಂಕಗಳನ್ನು ಗಳಿಸಿ ಮೊದಲೆರಡು ಸ್ಥಾನದಲ್ಲಿವೆ. ಒಂದು ವೇಳೆ ಇಂದು ನಡೆಯಲಿರುವ ಪಂದ್ಯದಲ್ಲಿ ಸನ್‌ರೈಸರ್ಸ್ ಎದುರು ಆರ್‌ಸಿಬಿ ಗೆದ್ದರೇ, ಗುಜರಾತ್ ಹಾಗೂ ಆರ್‌ಸಿಬಿ ಮೊದಲ ಕ್ವಾಲಿಫೈಯರ್ ಪಂದ್ಯವನ್ನಾಡಲಿವೆ.

ಧೋನಿ ಇಲ್ಲದೇ 2026ರ ಸೀಸನ್ ಮುಗಿಸಿದ CSK

ಇನ್ನು ಹಾಲಿ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮಹೇಂದ್ರ ಸಿಂಗ್ ಧೋನಿ ಇಲ್ಲದೇ ತನ್ನ ಅಭಿಯಾನ ಮುಗಿಸಿದೆ. ಆರಂಭದಲ್ಲಿ ಗಾಯದ ಸಮಸ್ಯೆಯಿಂದ ತಂಡದಿಂದ ದೂರ ಉಳಿದಿದ್ದ ಮಹೇಂದ್ರ ಸಿಂಗ್ ಧೋನಿ ಬಳಿಕ ಕಾರಣಾಂತರಗಳಿಂದ ತಂಡಕ್ಕೆ ಸೇರ್ಪಡೆಯಾಗಲೇ ಇಲ್ಲ. ಚೆನ್ನೈ ನಲ್ಲಿ ನಡೆದ ಕಳೆದ ಪಂದ್ಯದಲ್ಲಿ ಧೋನಿ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡರಾದರೂ ತಂಡದ ಭಾಗವಾಗಲಿಲ್ಲ. ಬಹುಶಃ ಧೋನಿಗೆ ಇದೇ ಕೊನೆಯ ಐಪಿಎಲ್ ಟೂರ್ನಿಯಾಗಿರಬಹುದು ಎಂದು ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಇನ್ನೂ ಲೀಗ್ ಹಂತದಲ್ಲಿ ಧೋನಿ ಆಡಿಲ್ಲ. ಆದ್ರೆ ಸಿಎಸ್‌ಕೆ ಕೊನೆ ಪಂದ್ಯವನ್ನ ಗೆದ್ದು ಪ್ಲೇ ಆಫ್‌ಗೆ ಹೋಗುತ್ತೆ.. ಧೋನಿ ಫ್ಲೇ ಆಫ್‌ನಲ್ಲಿ ಬಂದು ಆಡ್ತಾರೆ ಅನ್ನೋ ನಿರೀಕ್ಷೆ ಕೂಡ ಫ್ಯಾನ್ಸ್‌ಗೆ ಇತ್ತು. ಆದ್ರೆ ಈಗ ಸಿಎಸ್‌ಕೆ GT ವಿರುದ್ಧ ಸೋತು ಐಪಿಎಲ್‌ 2026ರ ಟೂರ್ನಿಯಿಂದ ಹೊರ ಬಿದಿದ್ದು.. ಈ ಸೀಸನ್‌ನಲ್ಲಿ ಧೋನಿ ಆಟ ನೋಡುವುದು ಅಭಿಮಾನಿಗಳಿಗೆ ಕನಸಾಗಿಯೇ ಉಳಿದಿದೆ. ಮುಂದಿನ ಸೀಸನ್‌ನಲ್ಲಿ ಧೋನಿ ಆಡ್ತಾರಾ ಆಡಲ್ವಾ ಅನ್ನೋದು ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ. ಈ ಬಗ್ಗೆ ನಿಮ್ಮ ಅನಿಸಿಕೆಯನ್ನ ಕಾಮೆಂಟ್ ಮೂಲಕ ತಿಳಿಸಿ.

Kishor KV

Leave a Reply

Your email address will not be published. Required fields are marked *