RCB ಕೋಚ್ ಫ್ಲವರ್ ಗೆ ದಂಡ – 7 ವರ್ಷಗಳ ನಂತರ ಇತಿಹಾಸ ಬರೆದ ಚೆನ್ನೈ!

ಆರ್ ಸಿಬಿ ತಂಡ ಮುಂಬೈ ವಿರುದ್ಧದ ರೋಚಕವಾಗಿ ಗೆದ್ದಿದೆ. ಕೃನಾಲ್ ಪಾಂಡ್ಯ ಬಗ್ಗೆ ಬದರಿನಾಥ್ ನಾಲಗೆ ಹರಿಬಿಟ್ಟಿದ್ದಾರೆ. ಹಾಗೇ ಆರ್ ಸಿಬಿ ಕೋಚ್ ಗೆ ದಂಡ ಹಾಕಲಾಗಿದೆ. ಹೀಗೆ ಐಪಿಎಲ್ ಬಗೆಗಿನ ಹಲವು ಸುದ್ದಿಗಳ ಬಗ್ಗೆ ಮಾಹಿತಿ ಇಲ್ಲಿದೆ.
- RCB ತಂಡದ ಮುಖ್ಯ ಕೋಚ್ ಆ್ಯಂಡಿ ಫ್ಲವರ್ ಅವರಿಗೆ ಪಂದ್ಯದ ಶುಲ್ಕದ ಶೇ. 15 ರಷ್ಟು ದಂಡ ವಿಧಿಸಲಾಗಿದೆ. ಭಾನುವಾರ RCB ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಮ್ಯಾಚ್ ನಡುವೆ ಆರ್ಸಿಬಿ ಕೋಚ್ ನಾಲ್ಕನೇ ಅಂಪೈರ್ ಜೊತೆ ವಾಗ್ವಾದ ನಡೆಸಿದ್ದರು. ಈ ಸಂದರ್ಬದಲ್ಲಿ ಆ್ಯಂಡಿ ಫ್ಲವರ್ ಬಳಸಿದ ಕೆಲವು ‘ಅಸಭ್ಯ ಪದಗಳು’ ಮೈದಾನದ ಮೈಕ್ರೋಫೋನ್ನಲ್ಲಿ ಸೆರೆಯಾಗಿದ್ದವು. ಇದು ಐಪಿಎಲ್ ನೀತಿ ಸಂಹಿತೆಯ ಉಲ್ಲಂಘನೆಯಾಗಿದ್ದು, ‘ಲೆವೆಲ್ 1’ ಅಪರಾಧವೆಂದು ಪರಿಗಣಿಸಲಾಗಿದೆ.
- ಐಪಿಎಲ್ ನಲ್ಲಿ ಕಾಮೆಂಟ್ರಿ ವೇಳೆ ಕೆಲ ಕಾಮೆಂಟೇಟರ್ಸ್ ನಾಲಗೆ ಹರಿ ಬಿಡ್ತಿದ್ದಾರೆ. ಇದೀಗ ಕೃನಾಲ್ ಪಾಂಡ್ಯ ಬಗ್ಗೆ ಮಾಜಿ ಕ್ರಿಕೆಟಿಗ ಸುಬ್ರಮಣ್ಯಂ ಬದರಿನಾಥ್ ತಮಾಷೆ ಮಾಡಲು ಹೋಗಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಮುಂಬೈ ವಿರುದ್ಧದ ಮ್ಯಾಚಲ್ಲಿ ತೀವ್ರ ಸ್ನಾಯು ಸೆಳೆತದಿಂದ ಮೈದಾನದಲ್ಲೇ ಬಿದ್ದು ಒದ್ದಾಡುತ್ತಿದ್ರು. ಈ ವೇಳೆ ಮುಂಬೈ ವಿಕೆಟ್ ಕೀಪರ್ ರಯಾನ್ ರಿಕೆಲ್ಟನ್ ಕೃನಾಲ್ ಸಹಾಯಕ್ಕೆ ಧಾವಿಸಿದ್ದರು. ಈ ದೃಶ್ಯದ ವೇಳೆ ಸ್ಟಾರ್ ಸ್ಪೋರ್ಟ್ ತಮಿಳು ಭಾಷೆಯ ಕಾಮೆಂಟೇಟರ್ ಬದರಿನಾಥ್ ತಮ್ಮ ನೀಚತನ ತೋರಿದ್ದಾರೆ. ಸೆಳೆತ ಅಲ್ಲ, ಮುಂಬೈ ಇಂಡಿಯನ್ಸ್ ತಂಡವರು ನೀ ಅಲ್ಲೇ ಸಾಯಿ ಎಂದರೂ ಪರವಾಗಿಲ್ಲ ಎಂಬಾರ್ಥದಲ್ಲಿ ಕಾಮೆಂಟ್ರಿ ಮಾಡಿದ್ದಾರೆ. ಈ ಕಾಮೆಂಟ್ರಿ ಇದೀಗ ವಿವಾದಕ್ಕೆ ಕಾರಣವಾಗಿದೆ.
- ಮುಂಬೈ ತಂಡದ ತಿಲಕ್ ವರ್ಮಾ ಮತ್ತು ನಮನ್ ಧೀರ್ ಮೈದಾನದಲ್ಲೇ ಕಿತ್ತಾಡಿಕೊಂಡಿದ್ದಾರೆ. ನಮನ್ಧೀರ್ ಬೌಂಡರಿ ಲೈನ್ನಲ್ಲಿ ಕೃನಾಲ್ ಬಾರಿಸಿದ ಚೆಂಡನ್ನು ಹಿಡಿದಿದ್ದರು. ನಂತರ ತಿಲಕ್ ವರ್ಮಾಗೆ ಚೆಂಡು ಹಿಡಿಯಲು ನೀಡಿದ್ರು. ತಿಲಕ್ ವರ್ಮಾ ಚೆಂಡನ್ನು ಹಿಡಿಯಲಿಲ್ಲ. ತಿಲಕ್ ವರ್ಮಾ ನಿರ್ಲಕ್ಷ್ಯದಿಂದಾಗಿ ಕೃನಾಲ್ ವಿಕೆಟ್ ಕೈತಪ್ಪಿತು. ಇದರಿಂದ ಕೋಪಗೊಂಡ ನಮನ್ ಧೀರ್ ಮೈದಾನದಲ್ಲೇ ತಿಲಕ್ ಮೇಲೆ ವಾಕ್ಸಮರ ನಡೆಸಿದರು. ಇಬ್ಬರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು.
- ಮತ್ತೊಂದೆೆಡೆ ಮುಂಬೈ ವಿರುದ್ಧ ಆರ್ಸಿಬಿ ಪ್ಲೇಯರ್ ಟಿಮ್ ಡೇವಿಡ್ ಅಸಭ್ಯವರ್ತನೆ ತೋರಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ. ಲಾಸ್ಟ್ ಓವರ್ನಲ್ಲಿ ಆರ್ಸಿಬಿ ತಂಡಕ್ಕೆ ರಸಿಖ್ ದಾರ್ ರೋಚಕ ಗೆಲುವು ತಂದು ಕೊಟ್ಟಿದ್ದರು. ಇತ್ತ ಆರ್ಸಿಬಿ ಗೆಲ್ಲುತ್ತಿದ್ದಂತೆ ಡಗೌಟ್ನಲ್ಲಿದ್ದ ಟಿಮ್ ಡೇವಿಡ್ ಮುಂಬೈ ಇಂಡಿಯನ್ಸ್ ತಂಡವನ್ನು ಗುರಿಯಾಗಿಸಿ ಅಸಭ್ಯವಾಗಿ ಬೆರಳು ತೋರಿಸಿ ಸಂಭ್ರಮಿಸಿದ್ದಾರೆ ಎನ್ನಲಾಗಿದೆ. ಆದ್ರೆ ಇದು ಹಳೆಯ ವಿಡಿಯೋ ಎನ್ನಲಾಗಿದೆ.
- ಲಕ್ನೋ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಆಟಗಾರ ಉರ್ವಿಲ್ ಪಟೇಲ್ ಕೇವಲ 13 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಐಪಿಎಲ್ ಇತಿಹಾಸದ ಅತಿ ವೇಗದ ಅರ್ಧಶತಕದ ದಾಖಲೆಯನ್ನು ಸರಿಗಟ್ಟಿದ್ದಾರೆ. ಇದಾದ ನಂತರ ಉರ್ವಿಲ್ ಒಂದು ಸಣ್ಣ ಚೀಟಿ ತೋರಿಸಿದರು. ಅದರಲ್ಲಿ ಉರ್ವಿಲ್ ಪಟೇಲ್ ತನ್ನ ತಂದೆ ಮುಖೇಶ್ ಪಟೇಲ್ ಅವರಿಗಾಗಿ ಬರೆದ ಸಾಲುಗಳಿದ್ದವು. ಇಂದು ನಾನು ದೊಡ್ಡ ಕ್ರಿಕೆಟಿಗನಾಗಿ ನಿಮ್ಮ ಕನಸನ್ನು ನನಸು ಮಾಡಿ ತೋರಿಸಿದ್ದೇನೆ ಎಂಬ ಸಾಲು ಬರೆಯುವ ಮೂಲಕ ತನ್ನ ಸಾಧನೆಯನ್ನು ತಂದೆಗೆ ಅರ್ಪಿಸಿದ್ದಾರೆ.
- ಚೆಪಾಕ್ನಲ್ಲಿ ಗೆಲ್ಲಲೇಬೇಕಾದ ಪಂದ್ಯದಲ್ಲಿ ಲಕ್ನೋ ತಂಡವನ್ನು ಸೋಲಿಸಿದ ಚೆನ್ನೈ ತಂಡ ಪ್ಲೇಆಪ್ಗೆ ಮತ್ತಷ್ಟು ಹತ್ತಿರವಾಗಿದೆ. ಪಾಯಿಂಟ್ಸ್ ಟೇಬಲ್ನಲ್ಲಿ ಚೆನ್ನೈ ತಂಡಕ್ಕೆ ಟಾಪ್ ಫೈವ್ ಪ್ಲೇಸ್ಗೆ ಲಗ್ಗೆಯಿಟ್ಟಿದೆ. ಜೊತೆಗೆ ಚೆನ್ನೈ ತಂಡ ಪ್ಲೇಆಪ್ ಗೆ ಎಂಟ್ರಿಪಡೆಯುವ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಲಕ್ನೋ ವಿರುದ್ಧ ಗೆದ್ದ ಸಿಎಸ್ಕೆಗೆ ಇದು 6ನೇ ಗೆಲುವು.
- 7 ವರ್ಷಗಳ ನಂತರ 200 ರನ್ಗಳನ್ನ ಚೇಸ್ ಮಾಡಿ ಗೆದ್ದ ಸಿಎಸ್ಕೆ ಇತಿಹಾಸ ಸೃಷ್ಟಿಸಿದೆ. ಚೆನ್ನೈ ಸೂಪರ್ ಕಿಂಗ್ಸ್ 2019ರ ಬಳಿಕ 180ಕ್ಕಿಂತ ಹೆಚ್ಚು ಮೊತ್ತವನ್ನ ಚೇಸ್ ಮಾಡಿರಲಿಲ್ಲ. ಬರೋಬ್ಬರಿ 7 ವರ್ಷಗಳ ಬಳಿಕ 180+ ಹಾಗೂ 8 ವರ್ಷಗಳ ಬಳಿಕ 200+ ಸ್ಕೋರ್ ಚೇಸ್ ಮಾಡಿ ಗೆದ್ದಿದೆ. ಐಪಿಎಲ್ ಇತಿಹಾಸದಲ್ಲಿಯೇ 3ನೇ ಗರಿಷ್ಠ ಸ್ಕೋರ್ ಇದಾಗಿದೆ. ಈ ಹಿಂದೆ ಆರ್ಸಿಬಿ ವಿರುದ್ಧ 2012 ರಲ್ಲಿ 208 ರನ್, 2018ರಲ್ಲಿ ಆರ್ಸಿಬಿ ವಿರುದ್ಧ 207 ರನ್ಗಳ ಗುರಿಯನ್ನ ಚೇಸ್ ಮಾಡಿದ್ದು ಚೆನ್ನೈನ ಗರಿಷ್ಠ ಚೇಸ್ ಆಗಿತ್ತು.
- ಲಕ್ನೋ ಸೂಪರ್ ಜೈಂಟ್ಸ್ ತಂಡ ಈ ಸೀಸನ್ನ ಐಪಿಎಲ್ ಟೂರ್ನಿಯಿಂದ ಹೊರಬಿದ್ದ ಮೊಟ್ಟ ಮೊದಲ ತಂಡವಾಗಿದೆ. ಲಕ್ನೋ ತಂಡ ಪಾಯಿಂಟ್ಸ್ ಟೇಬಲ್ನಲ್ಲಿ 10ನೇ ಸ್ಥಾನದಲ್ಲೇ ಉಳಿಯುವುದರ ಜೊತೆಗೆ ಪ್ಲೇ ಆಫ್ ರೇಸ್ನಿಂದ ಅಧಿಕೃತವಾಗಿ ಹೊರಬಿದ್ದಿದೆ. ಅಂದರೆ ಲೀಗ್ ಹಂತದಲ್ಲೇ ತನ್ನ ಪ್ರಯಾಣ ಮುಗಿಸಿದ ಮೊದಲ ತಂಡವಾಗಿದೆ ಲಕ್ನೋ. ಮತ್ತೊಂದೆಡೆ ಮುಂಬೈ ಇಂಡಿಯನ್ಸ್ ತಂಡ ಕೂಡಾ ಪ್ಲೇಆಪ್ ರೇಸ್ನಿಂದ ಅಧಿಕೃತವಾಗಿ ಹೊರಬಿದ್ದಿದೆ.
- ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವೆ ಮುಖಾಮುಖಿಗೆ ಕೌಂಟ್ಡೌನ್ ಶುರುವಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ಪಾಯಿಂಟ್ಸ್ ಟೇಬಲ್ನಲ್ಲಿ 8ನೇ ಸ್ಥಾನದಲ್ಲಿದೆ. 11 ಪಂದ್ಯದಿಂದ 4 ಗೆಲುವಿನ ಮೂಲಕ 8 ಅಂಕ ಸಂಪಾದಿಸಿದೆ. ಇನ್ನುಳಿದ ಎಲ್ಲಾ ಪಂದ್ಯ ಗೆದ್ದರೂ ಒಟ್ಟು 14 ಪಾಯಿಂಟ್ಸ್ ಡಿಸಿಗೆ ಸಿಗಲಿದೆ. ಆದರೂ ಕೂಡಾ ಡಿಸಿಗೆ ಪ್ಲೇಆಪ್ ರೇಸ್ ಗೆ ಎಂಟ್ರಿಯಾಗಲು ಕಷ್ಟ ಎಂದು ಹೇಳಲಾಗುತ್ತಿದೆ.
- ಐಪಿಎಲ್ನ ಸೆನ್ಷೇಷನ್ ಆಗಿರುವ ಸೂರ್ಯವಂಶಿಗೆ ಗುಜರಾತ್ ಟೈಟನ್ಸ್ ತಂಡದ ಬ್ಯಾಟಿಂಗ್ ಕೋಚ್ ಮ್ಯಾಥ್ಯೂ ಹೇಡನ್, ಸಲಹೆ ನೀಡಿದ್ದಾರೆ. ಕೇವಲ ಆಕ್ರಮಣಕಾರಿಯಾಗಿ ಆಡುವುದಲ್ಲ, ತಂಡದ ಗೆಲುವಿನ ಕಡೆಗೂ ಗಮನ ಕೊಡಬೇಕು. ಪವರ್ಪ್ಲೇ ಸಮಯದಲ್ಲಿ ಆಡುವುದು ಸಾಕಾಗುವುದಿಲ್ಲ. ಬದಲಾಗಿ, ತಂಡದ ಯಶಸ್ಸನ್ನು ಖಚಿತಪಡಿಸಿಕೊಳ್ಳಲು ಕೊನೆಯವರೆಗೂ ಕ್ರೀಸ್ನಲ್ಲಿರಲು ಶ್ರಮಿಸಬೇಕು ಎಂದು ಮ್ಯಾಥ್ಯೂ ಹೇಡನ್ ವೈಭವ್ಗೆ ಸಲಹೆ ನೀಡಿದ್ದಾರೆ.

ನೋಡಿರಿ

