ಕರುನಾಡ ಜನರ ಹೃದಯ ಗೆದ್ದ ಕೆ.ಎಲ್ ರಾಹುಲ್! – ಬಡ ವಿದ್ಯಾರ್ಥಿಗೆ ನೆರವಾದ ಕನ್ನಡಿಗ
![ಕರುನಾಡ ಜನರ ಹೃದಯ ಗೆದ್ದ ಕೆ.ಎಲ್ ರಾಹುಲ್! – ಬಡ ವಿದ್ಯಾರ್ಥಿಗೆ ನೆರವಾದ ಕನ್ನಡಿಗ](https://suddiyaana.com/wp-content/uploads/2023/06/10-2.jpg)
ಭಾರತೀಯ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟ್ಸ್ಮನ್ ಕೆಎಲ್ ರಾಹುಲ್ ಸದ್ಯ ಗಾಯದ ಸಮಸ್ಯೆಯಿಂದ ತಂಡದಿಂದ ದೂರವುಳಿದಿದ್ದಾರೆ. ಆದರೆ ಇದೀಗ ಕೆ.ಎಲ್ ರಾಹುಲ್ ಅವರು ಪ್ರತಿಭಾವಂತ, ಬಡ ವಿದ್ಯಾರ್ಥಿಯ ವಿದ್ಯಾಭ್ಯಾಸದ ಖರ್ಚನ್ನು ವಹಿಸಿಕೊಳ್ಳುವ ಮೂಲಕ ಆರ್ಥಿಕ ನೆರವು ನೀಡಿದ್ದಾರೆ. ಇವರ ಈ ಕೆಲಸ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಇದನ್ನೂ ಓದಿ: ಈಡೇರಲಿಲ್ಲ ಭಾರತದ ದಶಕದ ಕನಸು – ಚಾಂಪಿಯನ್ ಆದ ಆಸ್ಟ್ರೇಲಿಯಾ
ಕೆಎಲ್ ರಾಹುಲ್ ಮೂಲತಃ ಕರ್ನಾಟಕದವರು. ಕನ್ನಡಿಗರಾದ ರಾಹುಲ್ ವಿದ್ಯಾರ್ಥಿಯೊಬ್ಬನ ಬಾಳಿಗೆ ಬೆಳಕಾಗಿದ್ದಾರೆ. ಮೂಲತಃ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದ ವಿದ್ಯಾರ್ಥಿ ಅಮೃತ್ ಮಾವಿನಕಟ್ಟಿ ಸದ್ಯ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದಾರೆ. ಬಿ.ಕಾಂ ಓದುವಿನ ಮಧ್ಯೆಯೇ ಸಿ.ಎ ಓದಬೇಕೆಂಬುದು ವಿದ್ಯಾರ್ಥಿಯ ಕನಸು. ಪಿಯುಸಿಯಲ್ಲಿ 600ಕ್ಕೆ 571 ಅಂಕಗಳನ್ನು ಗಳಿಸುವ ಮುಖೇನ ಕಾಲೇಜಿಗೆ, ಪೋಷಕರಿಗೆ ಕೀರ್ತಿಯನ್ನು ತಂದಿದ್ದಾರೆ.
ಕೌಟುಂಬಿಕ ಹಾಗೂ ಆರ್ಥಿಕ ಸಮಸ್ಯೆಯಿಂದ ಓದನ್ನು ಮುಂದುವರಿಸಲು ತೊಂದರೆ ಅನುಭವಿಸುತ್ತಿದ್ದರು. ವಿದ್ಯಾರ್ಥಿ ಅಮೃತ್ ಹುಬ್ಬಳ್ಳಿಯ ಸಾಮಾಜಿಕ ಕಾರ್ಯಕರ್ತ ಮಂಜುನಾಥ್ ಹೆಬಸೂರು ಎಂಬುವವರ ಬಳಿ ತನ್ನ ಸಮಸ್ಯೆ ಹೇಳಿಕೊಂಡಿದ್ದರು. ಮಂಜುನಾಥ್ ಅವರು ಕೆಎಲ್ ರಾಹುಲ್ ಅವರುನ್ನು ಸಂಪರ್ಕಿಸಿ ವಿಚಾರ ತಿಳಿಸಿದ್ದರು. ಇದೀಗ ಅಮೃತ್ಗೆ ಕೆ.ಎಲ್. ರಾಹುಲ್ ಅವರಿಂದ ಆರ್ಥಿಕ ಸಹಾಯ ಮತ್ತು ಪ್ರಶಂಸೆ ದೊರಕಿದೆ.
ಕೆಎಲ್ ರಾಹುಲ್ ಅವರು ವಿದ್ಯಾರ್ಥಿ ಅಮೃತ್ ನ ಪ್ರಸಕ್ತ ವರ್ಷದ ವಿದ್ಯಾಭ್ಯಾಸಕ್ಕೆ 75 ಸಾವಿರ ರೂ. ಹಣ ನೀಡಿದ್ದಾರೆ. ಮುಂದಿನ ನಾಲ್ಕು ವರ್ಷಗಳ ವಿದ್ಯಾಭ್ಯಾಸದ ಖರ್ಚನ್ನು ತಾನೇ ವಹಿಸಿಕೊಳ್ಳುವುದಾಗಿ ವಿದ್ಯಾರ್ಥಿಯ ಕುಟುಂಬದವರಿಗೆ ಭರವಸೆ ನೀಡಿದ್ದಾರೆ.