‘ಸ್ವಾತಿ ಮುತ್ತಿನ ಮಳೆ ಹನಿಯೇ’ ಶೀರ್ಷಿಕೆಗೆ ಕೋರ್ಟ್ ತಡೆಯಾಜ್ಞೆ

 ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಶೀರ್ಷಿಕೆಗೆ ಕೋರ್ಟ್ ತಡೆಯಾಜ್ಞೆ

ಸ್ಯಾಂಡಲ್ ವುಡ್ ನಟಿ ರಮ್ಯಾ ನಿರ್ಮಾಪಕಿಯಾಗಿ ಕಮ್ ಬ್ಯಾಕ್  ಆಗಿದ್ದರು. ಆದರೆ, ಮೊದಲ ಚಿತ್ರದಲ್ಲಿಯೇ ರಮ್ಯಾಗೆ ಕಾನೂನಿನ ಸಂಕಷ್ಟ ಎದುರಾಗಿದೆ. ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಶೀರ್ಷಿಕೆಗೆ ವಿಘ್ನ ಎದುರಾಗಿದೆ.

ನಟಿ ರಮ್ಯಾ ಅವರ ಬ್ಯಾನರ್ ನಿಂದ ಮೂಡಿಬರುತ್ತಿರುವ ಮೊದಲ ಸಿನಿಮಾ ‘ಸ್ವಾತಿ ಮುತ್ತಿನ ಮಳೆ ಹನಿಯೇ…’ ಎಂದು ಘೋಷಿಸಲಾಗಿತ್ತು. ಇದೀಗ ಚಿತ್ರದ ಶೀರ್ಷಿಕೆಗೆ ಕಾನೂನಿನ ಸಂಕಷ್ಟ ಎದುರಾಗಿದೆ.  ‘ಸ್ವಾತಿ ಮುತ್ತಿನ ಮಳೆ ಹನಿಯೇ’ಶೀರ್ಷಿಕೆಯನ್ನು ಬಳಸಬಾರದು ಅಂತ ಹಿರಿಯ ನಿರ್ದೇಶಕ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಅವರು  ನ್ಯಾಯಾಲಯಕ್ಕೆ ಆಕ್ಷೇಪ ಅರ್ಜಿಯನ್ನು ಸಲ್ಲಿಸಿದ್ದರು. ಈ ಅರ್ಜಿಯನ್ನು ಪರಿಶೀಲಿಸಿದ ಹೆಚ್ಚುವರಿ ಸಿವಿಲ್ ನ್ಯಾಯಾಲಯ ‘ಸ್ವಾತಿ ಮುತ್ತಿನ ಮಳೆ ಹನಿಯೇ’ಟೈಟಲ್ ಗೆ ತಡೆಯಾಜ್ಞೆ ನೀಡಿದೆ.

ಇದನ್ನೂ ಓದಿ: ಶಾಕುಂತಲೆಯಾದ ಸುಂದರಿ ಸಮಂತಾ  – ಟಾಲಿವುಡ್ ಬ್ಯೂಟಿ ಲುಕ್​ಗೆ ಫ್ಯಾನ್ಸ್ ಫಿದಾ..!

“1990ರಲ್ಲಿ ‘ಬಣ್ಣದ ಗೆಜ್ಜೆ’ ಚಿತ್ರ ಬಿಡುಗಡೆ ಆಗಿತ್ತು. ಆ ಸಿನಿಮಾಗೆ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ನಿರ್ದೇಶನ ಮಾಡಿದ್ದರು. ‘ಬಣ್ಣದ ಗೆಜ್ಜೆ’ ಚಿತ್ರದ ‘ಸ್ವಾತಿ ಮುತ್ತಿನ ಮಳೆ ಹನಿಯೇ..’ ಹಾಡು ಈಗಲೂ ಫೇಮಸ್. ಇದೇ ಟೈಟಲ್ ಅನ್ನು ಇಟ್ಟುಕೊಂಡು ನಟಿ ರಮ್ಯಾ ಅವರು ಹೊಸ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಆದರೆ ರಾಜೇಂದ್ರ ಸಿಂಗ್ ಬಾಬು ಅವರು ಈ ಶೀರ್ಷಿಕೆಯನ್ನು ತಾವು ನೋಂದಾಯಿಸಿರುವುದಾಗಿ ತಿಳಿಸಿದ್ದಾರೆ.

ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಅವರ ನಿರ್ದೇಶನದಲ್ಲಿ ಮೂಡಿಬರಲಿರುವ ಚಿತ್ರದಲ್ಲಿ ‘ರೆಬಲ್ ಸ್ಟಾರ್’ ಅಂಬರೀಷ್ ಹಾಗೂ ಸುಹಾಸಿನಿ ನಟಿಸಿದ್ದಾರೆ. ಈ ಚಿತ್ರದ ಚಿತ್ರೀಕರಣ ಶೇಕಡ 80ರಷ್ಟು ಮುಗಿದಿತ್ತು. ಆದರೆ ಅಂಬರೀಷ್ ನಿಧನರಾದ ಬಳಿಕ ಕೆಲವು ದೃಶ್ಯಗಳ ಚಿತ್ರೀಕರಣ ಬಾಕಿ ಉಳಿದುಕೊಂಡಿದೆ. ಈಗ ಈ ಶೀರ್ಷಿಕೆಯನ್ನು ಅಂಬರೀಷ್ ಪುತ್ರ ಅಭಿಷೇಕ್ ನಟನೆಯ ಸಿನಿಮಾಗೆ ಬಳಸಬೇಕು ಅಂತ ರಾಜೇಂದ್ರ ಸಿಂಗ್ ಬಾಬು ನಿರ್ಧರಿಸಿದ್ದರು. ಆದರೆ ರಮ್ಯಾ ಕೂಡ ಇದೇ ಶೀರ್ಷಿಕೆಯಲ್ಲಿ ಸಿನಿಮಾ ನಿರ್ಮಾಣ ಮಾಡಿರುವುದರಿಂದ ಈ ವಿವಾದ ಎದ್ದಿದೆ.

ನಟಿ ರಮ್ಯಾ ನಿರ್ಮಾಣದ ‘ಸ್ವಾತಿ ಮುತ್ತಿನ ಮಳೆ ಹನಿಯೇ..’ ಚಿತ್ರದ ವಿವಾದ ಕೋರ್ಟ್ ನಲ್ಲಿ ಇತ್ಯರ್ಥ ಆಗುವವರೆಗೆ ಚಿತ್ರವನ್ನು ಸೆನ್ಸಾರ್ ಮಾಡಬಾರದು ಎಂದು ತಡೆಯಾಜ್ಞೆ ನೀಡಲಾಗಿದೆ. ಈ ಸಿನಿಮಾಗೆ ರಾಜ್ ಬಿ. ಶೆಟ್ಟಿ ನಿರ್ದೇಶನ ಮಾಡುವುದರ ಜೊತೆಗೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅವರಿಗೆ ಜೋಡಿಯಾಗಿ ಸಿರಿ ರವಿಕುಮಾರ್ ಬಣ್ಣ ಹಚ್ಚಿದ್ದಾರೆ. ಚಿತ್ರದ ಹಲವು ಪೋಸ್ಟರ್ ಗಳು ಬಿಡುಗಡೆ ಆಗಿದ್ದು, ಗಮನ ಸೆಳೆದಿವೆ.

suddiyaana