ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ಕ್ಷಣಗಣನೆ –  ಕರ್ನಾಟಕದಲ್ಲಿ ಬಂದೋಬಸ್ತ್ ಹೆಚ್ಚಿಸಿದ್ದೇಕೆ?

ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ಕ್ಷಣಗಣನೆ –  ಕರ್ನಾಟಕದಲ್ಲಿ ಬಂದೋಬಸ್ತ್ ಹೆಚ್ಚಿಸಿದ್ದೇಕೆ?

ಕೋಟ್ಯಂತರ ಹಿಂದೂಗಳ ಕನಸು ನನಸಾಗುವ ಕಾಲ ಹತ್ತಿರವಾಗಿದೆ. ಅಯೋಧ್ಯೆ ರಾಮಮಂದಿರ ಲೋಕಾರ್ಪಣೆಗೆ ಕ್ಷಣಗಣನೆ ಆರಂಭವಾಗಿದೆ. ಕರ್ನಾಟಕದಲ್ಲೂ ಸಂಭ್ರಮ ಮನೆಮಾಡಿದೆ. ಇದೀಗ ಅಯೋಧ್ಯೆ ರಾಮಮಂದಿರ ಲೋಕಾರ್ಪಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಟ್ಟೆಚ್ಚರ ವಹಿಸಲು ಸೂಚನೆ ನೀಡಲಾಗಿದೆ. ಜ.22 ರವರೆಗೆ ರಾಜ್ಯದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಹೈ ಅಲರ್ಟ್‌ ಘೋಷಿಸಲಾಗಿದೆ.

ಹೌದು,  ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ಜನವರಿ 22ರಂದು ನಡೆಯಲಿರುವ ಶ್ರೀ ರಾಮ ಮಂದಿರ  ಲೋಕಾರ್ಪಣೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕಟ್ಟೆಚ್ಚರ  ವಹಿಸಲು ಸೂಚನೆ ನೀಡಲಾಗಿದೆ. ರಾಜ್ಯದ ಎಲ್ಲಾ ಕಮೀಷನರೇಟ್ ಹಾಗೂ ಜಿಲ್ಲಾ ಎಸ್‌ಪಿಗಳಿಗೆ ಡಿಜಿ ಐಜಿಪಿ ಅಲೋಕ್ ಮೋಹನ್ ಅವರು ಕಟ್ಟೆಚ್ಚರದ ಸೂಚನೆ ನೀಡಿದ್ದಾರೆ. ಜನವರಿ 16ರಿಂದಲೇ ಮಂದಿರ ಲೋಕಾರ್ಪಣೆ, ರಾಮ ಮೂರ್ತಿಗೆ ಪ್ರಾಣಪ್ರತಿಷ್ಠೆ ಮಾಡುವುದಕ್ಕೆ ಸಂಬಂಧಿಸಿ ಧಾರ್ಮಿಕ ವಿಧಿ ವಿಧಾನಗಳು ನಡೆಯುತ್ತಿದೆ.ಈ ಬೆನ್ನಲ್ಲೇ ಇಡೀ ರಾಜ್ಯಾದ್ಯಂತ ಪೊಲೀಸರು ಕಟ್ಟೆಚ್ಚರ ವಹಿಸುವಂತೆ ಸೂಚನೆ ನೀಡಲಾಗಿದೆ.

ಇದನ್ನೂ ಓದಿ: ಅಮೆರಿಕ ಅಧ್ಯಕ್ಷೀಯ ಚುನಾವಣಾ ರೇಸ್‌ನಿಂದ ಹಿಂದೆ ಸರಿದ ಭಾರತ ಮೂಲದ ಉದ್ಯಮಿ ವಿವೇಕ್ ರಾಮಸ್ವಾಮಿ!

ಬೆಂಗಳೂರು ನಗರ ಸೇರಿ ಎಲ್ಲಾ ಕಡೆಗಳಲ್ಲಿಯೂ ಜನವರಿ 22ರ ವರೆಗೂ ಹೈ ಅಲರ್ಟ್ ಘೋಷಿಸಲಾಗಿದೆ. ಅದರಲ್ಲೂ ಮುಖ್ಯವಾಗಿ ಬೆಂಗಳೂರು, ಶಿವಮೊಗ್ಗ, ಮಂಗಳೂರು, ಚಿಕ್ಕಮಗಳೂರು, ಹುಬ್ಬಳ್ಳಿ ಮತ್ತು ಉಡುಪಿ ಸೇರಿ ಕೆಲ ಜಿಲ್ಲೆಗಳಲ್ಲಿ ಹೆಚ್ಚಿನ ನಿಗಾ ವಹಿಸುವಂತೆ ಸೂಚಿಸಲಾಗಿದೆ.

ದೇವಸ್ಥಾನಗಳಿಗೂ ಷರತ್ತುಗಳು ಅನ್ವಯ!

ಈ ನಡುವೆ, ರಾಮ ಮಂದಿರ ಉದ್ಘಾಟನೆ ಸಂದರ್ಭ ಊರೂರಿನ ದೇವಾಲಯಗಳಲ್ಲಿ ಪೂಜೆ ಮತ್ತಿತರ ಧಾರ್ಮಿಕ ಮತ್ತು ಸಭಾ ಕಾರ್ಯಕ್ರಮಗಳು ನಡೆಯಲಿವೆ. ಅದಕ್ಕೆ ಸಂಬಂಧಿಸಿಯೂ ಕೆಲವೊಂದು ಕಟ್ಟೆಚ್ಚರದ ಸೂಚನೆಗಳನ್ನು ನೀಡಲಾಗಿದೆ.

ಪೂಜೆ ಪುನಸ್ಕಾರ ಹೊರತುಪಡಿಸಿ ಬೇರೆ ಯಾವುದೇ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡದಿರಲು ಸೂಚನೆ ನೀಡಲಾಗಿದೆ. ದೇವಸ್ಥಾನ ಬಳಿಯಲ್ಲಿ ರಾಜಕೀಯವಾಗಿ ಮಾತನಾಡುವುದು, ಪ್ರತಿಭಟನೆ ಮಾಡುವುದು, ಸಮಾಜದ ಶಾಂತಿ ಭಂಗ ಮಾಡುವ ಘೋಷಣೆ ಕೂಗುವುದನ್ನು ನಿಷೇಧಿಸಲಾಗಿದೆ. ಅದರ ಮೇಲೆ ಖಾಕಿ ಕಣ್ಣು ಇಡಲಿದೆ.  ಇಷ್ಟೇ ಅಲ್ಲದೇ ಸಾಮಾಜಿಕ‌ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದರೆ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ. ಹೀಗಾಗಿ ಅವರು ಸಾಮಾಜಿಕ ಜಾಲ ತಾಣದ ಮೇಲೆ ಕಣ್ಣಿಡಲಿದ್ದಾರೆ.

ಗುಪ್ತಚರ ಇಲಾಖೆಗಳು ಕೂಡಾ ಹೈ ಅಲರ್ಟ್

ರಾಮ ಮಂದಿರ ಲೋಕಾರ್ಪಣೆಯ ಸಂದರ್ಭವನ್ನು ಕೆಲವೊಂದು ದುಷ್ಟ ಶಕ್ತಿಗಳು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ಅದರ ಬಗ್ಗೆಯೂ ರಾಜ್ಯಾದ್ಯಂತ ಅಲರ್ಟ್ ಇರಲು ಕೇಂದ್ರ ಗುಪ್ತಚರ ಇಲಾಖೆಗಳಿಗೆ ಸೂಚನೆ ನೀಡಲಾಗಿದೆ.

ಕರ್ನಾಟಕದಲ್ಲಿ ಈಗಾಗಲೇ ಕೆಲವು ಉಗ್ರರು ಅರೆಸ್ಟ್ ಆಗಿದ್ದಾರೆ. ಇನ್ನೂ ಹಲವು ಸಂಘಟನೆಗಳು ಭೂಗತವಾಗಿ ಕೆಲಸ ಮಾಡಿಕೊಂಡಿವೆ. ಈ ಸಮಯವನ್ನೇ ಬಳಸಿಕೊಳ್ಳಲು ಪ್ಲ್ಯಾನ್‌ ಮಾಡುತ್ತಿರುತ್ತವೆ. ಹೀಗಾಗಿ ಎಲ್ಲಾ ಚಟುವಟಿಕೆಗಳ ಮೇಲೆ ನಿಗಾ ಇಡಲು ಡಿಜಿ ಐಜಿಪಿ ಸೂಚಿಸಿದ್ದಾರೆ. ಅದರ ಜತೆಗೆ ಜ 22.ರ ವರೆಗೂ ಪೊಲೀಸ್ ಅಧಿಕಾರಿಗಳು ಅವರ ಲಿಮಿಟ್ಸ್ ಬಿಟ್ಟು ಹೋಗದಂತೆಯೂ ಸೂಚನೆ ನೀಡಲಾಗಿದೆ.

Shwetha M