ಚಿನ್ನದ ಅಂಬಾರಿ.. ಅಂಬಾರಿಯೊಳಗೆ ಚಾಮುಂಡೇಶ್ವರಿ – ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ ಸಾಗಲಿದೆ ನಾಡದೇವಿಯ ಸವಾರಿ

ಚಿನ್ನದ ಅಂಬಾರಿ.. ಅಂಬಾರಿಯೊಳಗೆ ಚಾಮುಂಡೇಶ್ವರಿ – ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ ಸಾಗಲಿದೆ ನಾಡದೇವಿಯ ಸವಾರಿ

ಮೈಸೂರು ದಸರಾ ಎಷ್ಟೊಂದು ಸುಂದರ ಅನ್ನೋ ಹಾಡೇ ಇದೆ. ನಿಜಕ್ಕೂ ದಸರಾ ಅಂದ್ರೆ ಅದೊಂದು ಉತ್ಸವ. ಗತವೈಭವ ಸಾರುವ ಸಂಭ್ರಮ. ಅದರಲ್ಲೂ ನಾಡಹಬ್ಬ ಅಂದ್ರೆ ನೆನಪಾಗೋದೇ ಜಂಬೂಸವಾರಿ. ಆನೆ ಮೇಲೆ ಚಿನ್ನದ ಅಂಬಾರಿ. ಅಂಬಾರಿಯೊಳಗೆ ಚಾಮುಂಡೇಶ್ವರಿ. ರಾಜಬೀದಿಯಲ್ಲಿ ಗಜಪಡೆಯ ಮೆರವಣಿಗೆ ಸಾಗುತ್ತಿದ್ರೆ ಅದೊಂದು ಅದ್ಭುತ ಕ್ಷಣ. ಈ ಮನಮೋಹಕ ದೃಶ್ಯವನ್ನ ಕಣ್ತುಂಬಿಕೊಳ್ಳುವ ಲಕ್ಷಾಂತರ ಜನರ ಕಣ್ಣಲ್ಲಿ ಸಾರ್ಥಕ ಭಾವ.

ಇದನ್ನೂ ಓದಿ : ನಾಡಿನಾದ್ಯಂತ ಕಳೆಗಟ್ಟಿದ ವಿಜಯದಶಮಿಯ ವೈಭವ – ನವರಾತ್ರಿಯ 10ನೇ ದಿನದಂದು ಆಚರಿಸುವ ಹಬ್ಬದ ಹಿನ್ನೆಲೆಯೇನು?

ನಿಜ. ಮೈಸೂರು ದಸರಾ ಎಂದರೆ ಜಂಬೂಸವಾರಿ. ಅಂದರೆ ಆನೆಗಳೊಂದಿಗೆ ಸವಾರಿ. ಇಡೀ ದಸರಾದಲ್ಲಿ ಪ್ರಮುಖ ಆಕರ್ಷಣೆಯೇ ಗಜ ಪಡೆ ಮತ್ತು ಚಿನ್ನದ ಅಂಬಾರಿಯಲ್ಲಿ ಚಾಮುಂಡೇಶ್ವರಿ ದರ್ಶನ. ಜಂಬೂಸವಾರಿಗೆ ಮೈಸೂರು ಸಂಪೂರ್ಣ ಸಜ್ಜಾಗಿದೆ. ವಿಜಯದಶಮಿ ಮೆರವಣಿಗೆಯನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಜನರು ಕಾತರದಿಂದ ಕಾಯುತ್ತಿದ್ದಾರೆ. ಮಧ್ಯಾಹ್ನ 1.46ರಿಂದ 2.08ರವರೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಅರಮನೆ ಬಲರಾಮ ದ್ವಾರದಲ್ಲಿರುವ ನಂದಿಧ್ವಜಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಲಿದ್ದಾರೆ. ಸಂಜೆ 4.40ರಿಂದ 5 ಗಂಟೆಯೊಳಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಶ್ರೀಚಾಮುಂಡೇಶ್ವರಿದೇವಿಗೆ ಪುಷ್ಪಾರ್ಚನೆ ನೆರವೇರಿಸಲಾಗುತ್ತೆ.

ಗತವೈಭವ ಸಾರುವ ಜಂಬೂಸವಾರಿ ವೀಕ್ಷಿಸಲು ದೇಶ-ವಿದೇಶಗಳಿಂದ ಆಗಮಿಸಿರುವ ಪ್ರವಾಸಿಗರು ಈಗಾಗಲೇ ಮೈಸೂರಿನಲ್ಲಿ ಬೀಡುಬಿಟ್ಟಿದ್ದಾರೆ. ಜಂಬೂಸವಾರಿ ಮೆರವಣಿಗೆ ಸಾಗುವ ರಸ್ತೆ ಇಕ್ಕೆಲಗಳಲ್ಲಿ ಲಕ್ಷಾಂತರ ಮಂದಿ ಜಮಾವಣೆಗೊಳ್ಳಲಿರುವ ಹಿನ್ನೆಲೆಯಲ್ಲಿ ಚಾಮರಾಜೇಂದ್ರ ವೃತ್ತ ಸೇರಿ ಮೆರವಣಿಗೆ ಸಾಗುವ ಮಾರ್ಗದಲ್ಲಿ ಭದ್ರತೆ ಪರಿಶೀಲನೆ ಮಾಡಲಾಗಿದೆ. ಜನರು ರಸ್ತೆಗೆ ಇಳಿಯದಂತೆ ತಡೆ ಬೇಲಿ ನಿರ್ಮಾಣ ಮಾಡಲಾಗಿದೆ. ಈಗಾಗಲೇ ಅರಮನೆ ಎದುರು ವಿಶಾಲವಾದ ಶಾಮಿಯಾನ ಕುರ್ಚಿಗಳನ್ನು ಹಾಕಲಾಗಿದ್ದು, ಜಂಬೂಸವಾರಿ ವೀಕ್ಷಿಸಲು 25 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ.

ಇನ್ನು ಗಜಪಡೆಯ ಕ್ಯಾಪ್ಟನ್ ಅಭಿಮನ್ಯು ನಾಲ್ಕನೇ ಬಾರಿ ಅಂಬಾರಿ ಹೊರಲಿದ್ದಾನೆ. ಈಗಾಗಲೇ ಮರದ ಅಂಬಾರಿ, ಕುಶಾಲುತೋಪು ತಾಲೀಮು, ಮರಳು ಮೂಟೆ ತಾಲೀಮು, ಜಂಬೂಸವಾರಿ ಪುಷ್ಪಾರ್ಚನೆ ರಿಹರ್ಸಲ್‌ ಸೇರಿದಂತೆ ಎಲ್ಲಾ ಬಗೆಯ ತಾಲೀಮುಗಳನ್ನು ಮಾಡಲಾಗಿದೆ. ಗಜಪಡೆಯ ಎಲ್ಲಾಆನೆಗಳು ಆರೋಗ್ಯದಿಂದ ಇವೆ. ಭೀಮ, ಧನಂಜಯ ಪಟ್ಟದ ಆನೆಯಾಗಿ ಅರಮನೆ ಪೂಜಾ ಕಾರ್ಯದಲ್ಲಿ ಪಾಲ್ಗೊಂಡಿವೆ. ಜಂಬೂಸವಾರಿ ಮೆರವಣಿಗೆ ಹಿನ್ನೆಲೆ ಪೊಲೀಸ್‌ ಬಿಗಿ ಬಂದೋಬಸ್ತ್‌ ನಿಯೋಜನೆ ಮಾಡಲಾಗಿದೆ. ಅರಮನೆ ಆವರಣದಿಂದ ಬನ್ನಿಮಂಟಪದವರೆಗೆ ದಸರಾ ಮೆರವಣಿಗೆ ಸಾಗಲಿದ್ದು, ಜಂಬೂಸವಾರಿ ಭದ್ರತೆಗೆ 6 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. ಮೈಸೂರಿಗೆ ಆಗಮಿಸಿರುವ ರಾಜ್ಯದ ವಿವಿಧ ಜಿಲ್ಲೆಗಳ ಪೊಲೀಸರು ಎಲ್ಲೆಡೆ ಹದ್ದಿನ ಕಣ್ಣಿಟ್ಟಿದ್ದಾರೆ.

ಜಂಬೂಸವಾರಿ ಮುಗಿಯುತ್ತಿದ್ದಂತೆ ರಾತ್ರಿ ಬನ್ನಿಮಂಟಪ ಮೈದಾನದಲ್ಲಿರಾತ್ರಿ 7.30ಕ್ಕೆ ಪಂಜಿನ ಕವಾಯತು ನಡೆಯಲಿದೆ. ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ಕವಾಯತು ವೀಕ್ಷಿಸಿ ಗೌರವ ವಂದನೆ ಸ್ವೀಕರಿಸುವರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಜಿಲ್ಲಾಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ, ಸಚಿವ ಕೆ.ವೆಂಕಟೇಶ್‌ ಮೊದಲಾದವರು ಭಾಗವಹಿಸಲಿದ್ದಾರೆ. ಬಳಿಕ 2 ಗಂಟೆಗಳ ಕಾಲ ಮೈನವಿರೇಳಿಸುವ ಬೈಕ್‌, ಅಶ್ವಾರೋಹಿ ಪಡೆಗಳ ಸಾಹಸ ಪ್ರದರ್ಶನ ಮೂಲಕ ಹತ್ತುದಿನಗಳ ಕಾಲದ ನಾಡಹಬ್ಬಕ್ಕೆ ತೆರೆ ಬೀಳಲಿದೆ. ರಾಜ್ಯದ ಸಂಸ್ಕೃತಿ ಬಿಂಬಿಸುವ 31 ಜಿಲ್ಲೆಗಳ ಸ್ತಬ್ಧಚಿತ್ರಗಳು, 95 ಕಲಾತಂಡಗಳು ಮೆರವಣಿಗೆಯ ಮೆರುಗನ್ನು ಹೆಚ್ಚಿಸಲಿವೆ. ಜಂಬೂಸವಾರಿ ಹಾಗೂ ಪಂಜಿನ ಕವಾಯತಿನ ವೆಬ್‌ಕಾಸ್ಟಿಂಗ್‌ ಹಾಗೂ ಲೈವ್‌ ಸ್ಕ್ರೀನಿಂಗ್‌ ಇರಲಿದ್ದು, ದಸರೆ ವೆಬ್‌ಸೈಟ್‌ ಮೂಲಕ ಮೊಬೈಲ್‌ನಲ್ಲೇ ವೀಕ್ಷಿಸಬಹುದು.

Shantha Kumari