ಮಾಧ್ಯಮದ ನಡುವಿನ ವಿವಾದ ಸುಖಾಂತ್ಯ – ಪತ್ರ ಬರೆದು ಕ್ಷಮೆಕೋರಿದ ನಟ ದರ್ಶನ್‌

ಮಾಧ್ಯಮದ ನಡುವಿನ ವಿವಾದ ಸುಖಾಂತ್ಯ – ಪತ್ರ ಬರೆದು ಕ್ಷಮೆಕೋರಿದ ನಟ ದರ್ಶನ್‌

ಮಾಧ್ಯಮಗಳ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಸ್ಯಾಂಡಲ್‌ ವುಡ್‌ ನಟ ದರ್ಶನ್‌ ಕೊನೆಗೂ ಕ್ಷಮೆ ಕೇಳಿದ್ದಾರೆ. ಈ ಹಿಂದೆ ಆಗಿರುವ ಕಹಿ ಘಟನೆಯನ್ನು ಮರೆತು ನಾವೆಲ್ಲ ಮುಂದೆ ಸಾಗೋಣ. ಬನ್ನಿ ಒಟ್ಟಿಗೆ ಕನ್ನಡ, ಕನ್ನಡ ಸಿನಿಮಾ ಕಟ್ಟುವ ಕೆಲಸ ಮಾಡೋಣ ಎಂದು ಬಹಿರಂಗ ಪತ್ರದ ಮೂಲಕ ಮನವಿ ಮಾಡಿದ್ದಾರೆ.

ನಟ ದರ್ಶನ್‌ ಅವರು ಮಾಧ್ಯಮಗಳಿಗೆ ಅವಾಚ್ಯ ಪದಗಳಿಂದ ನಿಂದಿಸಿದ್ದರು ಎನ್ನುವ ಕಾರಣಕ್ಕಾಗಿ ಕಳೆದ ಎರಡು ವರ್ಷಗಳಿಂದ ನಟ ದರ್ಶನ ಮೇಲೆ ಅಘೋಷಿತ ನಿರ್ಬಂಧ ಹೇರಲಾಗಿತ್ತು. ಅವರ ಕುರಿತಾದ ಯಾವುದೇ ಸುದ್ದಿಗಳನ್ನು ಪ್ರಸಾರ ಮತ್ತು ಪ್ರಕಟಿಸದಂತೆ ಮಾಧ್ಯಮ ಸಂಸ್ಥೆಗಳು ನಿರ್ಧಾರ ತೆಗೆದುಕೊಂಡಿದ್ದವು. ಈ ಘಟನೆಗೆ ಸಂಬಂಧಿಸಿದಂತೆ ನಟ ದರ್ಶನ್ ಕ್ಷಮೆ ಕೇಳಿದ್ದರಿಂದ ವಿವಾದ ಸುಖಾಂತ್ಯವಾಗಿದೆ.

ಇದನ್ನೂ ಓದಿ: ಮಾತಾಡದೇ ಭಾವನೆಗಳ ಮೂಲಕವೇ ಮನ ಮುಟ್ಟಿದ ‘ಟೋಬಿ’ – ರಾಜ್ ಬಿ. ಶೆಟ್ಟಿ ಅಭಿನಯಕ್ಕೆ ಪ್ರೇಕ್ಷಕರ ಬಹುಪರಾಕ್

ಈ ಕುರಿತಂತೆ ವರಮಹಾಲಕ್ಷ್ಮೀ ಹಬ್ಬದ ದಿನದಂದು ಪತ್ರ ಬರೆದಿರುವ ದರ್ಶನ್, ‘ಸಮಸ್ತ ಕರ್ನಾಟಕ ಜನತೆಗೆ ನನ್ನ ಸೆಲೆಬ್ರಿಟಿಗಳಿಗೆ ಹಾಗೂ ಹಿರಿಯ ಪತ್ರಕರ್ತರಿಗೆ, ಮಾಧ್ಯಮ ಮಿತ್ರರಿಗೆ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು. ಕಳೆದ ಸುಮಾರು ಎರಡು ವರ್ಷಗಳಿಂದ ನನ್ನ ಹಾಗೂ ಕನ್ನಡ ಮಾಧ್ಯಮ ಮಿತ್ರರ ನಡುವೆ ಒಂದು ಕಂದಕ ಉಂಟಾಗಿತ್ತು. ಈ ವರಮಹಾಲಕ್ಷ್ಮಿ ಹಬ್ಬದ ಮುನ್ನಾದಿನ ಮಿತ್ರಾ ರಾಕ್ ಲೈನ್ ವೆಂಕಟೇಶ್ ನೇತೃತ್ವದಲ್ಲಿ ನನ್ನ ಹಾಗೂ ಕನ್ನಡದ ಪ್ರಮುಖ ಮಾಧ್ಯಮಗಳ ಸಂಪಾದಕರ ನಡುವೆ ಮಾತುಕತೆ ನಡೆದು ಇಡೀ ಪ್ರಕರಣ ಸುಖಾಂತ್ಯಗೊಂಡಿದೆ’ ಎಂದು ಬರೆದಿದ್ದಾರೆ.

ಮುಂದುವರೆದ ಪತ್ರದಲ್ಲಿ, ‘ಕೆಲ ವರ್ಷಗಳ ಹಿಂದಿನ ನನ್ನ ಆಡಿಯೋ ಒಂದು ದುರುದ್ದೇಶಪೂರ್ವಕವಾಗಿ ವೈರಲ್ ಆಗಿ, ಇಡೀ ವಿವಾದಕ್ಕೆ ಕಾರಣವಾಗಿತ್ತು. ಅದು ಯಾವುದೋ ವಿಷಮ ಘಳಿಗೆಯಲ್ಲಿ ಒಬ್ಬ ವ್ಯಕ್ತಿಯ ಮಾತಿಗೆ ಪ್ರತಿಕ್ರಿಯೆಯಾಗಿತ್ತು. ಅದು ಮಾಧ್ಯಮದ ಇತರ ವ್ಯಕ್ತಿಗಳನ್ನು ಕುರಿತು ಆಡಿದ ಮಾತಾಗಿರಲಿಲ್ಲ. ಆ ವ್ಯಕ್ತಿ ಯಾವ ದುರುದ್ದೇಶದಿಂದ ಮಾಡಿದರೋ ಗೊತ್ತಿಲ್ಲ. ಆದರೂ, ಆ ವ್ಯಕ್ತಿಗೆ ಒಳ್ಳೆಯದಾಗಲಿ. ಮುಂದೆ ಆ ವ್ಯಕ್ತಿ ಈ ರೀತಿಯ ದುರುದ್ದೇಶವನ್ನು ಮರುಕಳಿಸದಿರಲಿ’ ಎಂದು ಬರೆದಿದ್ದಾರೆ.

‘ಆದರೂ ಅಂತಹ ಮಾತಿನಿಂದ ನೋವುಂಟಾಗಿದ್ದರೆ ಮಾಧ್ಯಮದ ಹಿರಿಯರಿಗೆ ಕ್ಷಮೆ ಕೋರುವುದರಲ್ಲಿ ತಪ್ಪಿಲ್ಲ. ಈ ಅಯಾಚಿತ ಘಟನೆಗೆ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಮಾಧ್ಯಮ ರಂಗದ ಕ್ಷಮೆ ಇರಲಿ. ಒಂದು ಉತ್ತಮವಾದ ಸಮಾಜಕ್ಕೆ ಒಳ್ಳೆಯ ಮಾಧ್ಯಮಗಳ ಅಗತ್ಯವಿದೆ. ನನಗೂ ಮಾಧ್ಯಮಗಳ ಬಗ್ಗೆ ಗೌರವವಿದೆ. ಚಿತ್ರರಂಗದ ನನ್ನ ಬೆಳವಣಿಗೆಯಲ್ಲಿ ಮಾಧ್ಯಮಗಳು ಪ್ರೀತಿಯಿಂದ ನೀಡಿದ ಪ್ರಚಾರದ ಪಾಲೂ ಸಾಕಷ್ಟಿದೆ. ಈ ಹಿಂದೆ ಆಗಿರುವ ಕಹಿ ಘಟನೆಯನ್ನು ಮರೆತು ನಾವೆಲ್ಲ ಮುಂದೆ ಸಾಗೋಣ. ಕನ್ನಡ, ಕನ್ನಡಿಗರು, ಕನ್ನಡ ನೆಲ ಜಲ, ಕನ್ನಡ ಚಿತ್ರರಂಗದ ಪ್ರಗತಿಗೆ ಜೊತೆಯಾಗಿ ಕೆಲಸ ಮಾಡೋಣ. ಪ್ರೀತಿಯಿರಲಿ. ನನ್ನ ಪ್ರೀತಿಯ ಸೆಲೆಬ್ರಿಟಿಗಳು ನನ್ನ ಭಾವನೆಯನ್ನು ಗೌರವಿಸುತ್ತಾರೆಂದು ಭಾವಿಸುತ್ತೇನೆ’ ಎಂದು ಕ್ಷಮೆ ಕೇಳಿ ಪತ್ರ ಬರೆದಿದ್ದಾರೆ.

suddiyaana