ಮುಂದುವರಿದ ಮಳೆಯ ಆರ್ಭಟ – ಯಮುನಾ ನದಿ ನೀರಿನ ಮಟ್ಟ ಏರಿಕೆ, ಪ್ರವಾಹ ಭೀತಿ

ಮುಂದುವರಿದ ಮಳೆಯ ಆರ್ಭಟ – ಯಮುನಾ ನದಿ ನೀರಿನ ಮಟ್ಟ ಏರಿಕೆ, ಪ್ರವಾಹ ಭೀತಿ

ನವದೆಹಲಿ: ಉತ್ತರಭಾರತದಲ್ಲಿ ವರುಣನ ಆರ್ಭಟ ಮುಂದುವರಿದಿದೆ. ಅಲ್ಲಿನ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ಇದೀಗ ದೆಹಲಿಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಯಮುನಾ ನದಿ ಉಕ್ಕಿ ಹರಿಯುತ್ತಿದೆ. ಮಳೆ ಮುಂದುವರಿದರೆ ಪ್ರವಾಹ ಉಂಟಾಗುವ ಭೀತಿ ಇದ್ದು, ಈ ಹಿನ್ನಲೆಯಲ್ಲಿ ದೆಹಲಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ದೆಹಲಿಯಲ್ಲಿ ಮಹಾಮಳೆಯಿಂದಾಗಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಪ್ರವಾಹ ಪರಿಸ್ಥಿತಿ ಎದುರಾಗಿದೆ. ಅಲ್ಲಲ್ಲಿ ಭೂಕುಸಿತ ಸಂಭವಿಸುತ್ತಿದೆ. ಯಮುನಾ ನದಿ ನೀರಿನ ಮಟ್ಟ 206.24 ಮೀಟರ್‌ಗೆ ಏರಿಕೆಯಾಗಿದ್ದು, ಯಮುನಾ ನದಿ ನೀರಿನ  ಗರಿಷ್ಠ ಮಟ್ಟ 207.49 ಮೀಟರ್ ಆಗಿದ್ದು, ಅಪಾಯಕಾರಿ ಮಟ್ಟ ತಲುಪಿದೆ. ಹೀಗಾಗಿ ದೆಹಲಿಯಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದೆ. ಮಳೆ ಹೆಚ್ಚಾದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಹಳೆ ರೈಲ್ವೆ ಸೇತುವೆ ಮೇಲೆ ರೈಲು ಸಂಚಾರ ಮತ್ತು ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ಕೇಂದ್ರ ಜಲ ಆಯೋಗ (ಸಿಡಬ್ಲ್ಯುಸಿ) ತಿಳಿಸಿದೆ.

ಇದನ್ನೂ ಓದಿ: ಪ್ರತಿಕೂಲ ಹವಾಮಾನ – ಸತತ ನಾಲ್ಕನೇ ದಿನವೂ ಅಮರನಾಥ ಯಾತ್ರೆ ಸ್ಥಗಿತ

ಹರ್ಯಾಣವು ಯಮುನಾನಗರದ ಹತ್ನಿಕುಂಡ್ ಬ್ಯಾರೇಜ್‌ನಿಂದ ನದಿಗೆ ಹೆಚ್ಚಿನ ನೀರನ್ನು ಬಿಡುಗಡೆ ಮಾಡುವುದರೊಂದಿಗೆ ಹಳೆಯ ರೈಲ್ವೆ ಸೇತುವೆಯಲ್ಲಿ ನೀರಿನ ಮಟ್ಟ ಏರಿದೆ. ಮಂಗಳವಾರ ಮಧ್ಯಾಹ್ನದ ವೇಳೆಗೆ ನದಿಯು 206.65 ಮೀಟರ್‌ಗೆ ಏರುವ ನಿರೀಕ್ಷೆಯಿದ್ದು, ನಂತರ ಕ್ರಮೇಣ ಕಡಿಮೆಯಾಗುತ್ತದೆ. ಅಪಾಯಕಾರಿ ಮಟ್ಟ 205.33 ಮೀಟರ್ ಆಗಿದ್ದು ಹರಿಯಾಣದ ಯಮುನಾ ನಗರ್‌ ಜಿಲ್ಲೆಯಲ್ಲಿರುವ ಹಥಿನಿಕುಂಡ್‌ ಬ್ಯಾರೇಜ್‌ನಿಂದ ಮಂಗಳವಾರ (ಇಂದು) ಬೆಳಗ್ಗೆ 8ರ ಹೊತ್ತಿಗೆ 3.21 ಲಕ್ಷ ಕ್ಯೂಸೆಕ್‌ ನೀರನ್ನು ಹೊರ ಬಿಡಲಾಗಿದೆ ಎಂದು ಕೇಂದ್ರ ಜಲ ಆಯೋಗ ತಿಳಿಸಿದೆ.

ಯಮುನಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿರುವ ಹಿನ್ನೆಲೆ ದೆಹಲಿ ಸಿಎಂ ಕೇಜ್ರಿವಾಲ್ ಸ್ಪಷ್ಟನೆ ನೀಡಿದ್ದಾರೆ. ದೆಹಲಿಯಲ್ಲಿ ಸದ್ಯದ ಮಟ್ಟಿಗೆ ಪ್ರವಾಹ ಪರಿಸ್ಥಿತಿ ಇಲ್ಲ. ಒಂದು ವೇಳೆ ಅಂತಹ ಸ್ಥಿತಿ ಎದುರಾದರೆ ಸನ್ನದ್ಧರಾಗಿದ್ದೇವೆ. ನೀರಿನ ಮಟ್ಟ 206 ಮೀಟರ್‌ಗೆ ಏರಿಕೆಯಾದರೆ, ಜನರನ್ನು ಸ್ಥಳಾಂತರಿಸುವ ಕಾರ್ಯ ಆರಂಭಿಸುತ್ತೇವೆ. ನದಿ ತೀರದಲ್ಲಿ ವಾಸಿಸುವ 41 ಸಾವಿರ ಜನರನ್ನು ಗುರುತಿಸಲಾಗಿದ್ದು, ಅವರಿಗಾಗಿ ಪರಿಹಾರ ಶಿಬಿರಗಳನ್ನು ತೆರೆಯಲಾಗಿದೆ. ಅಂತೆಯೇ ಸಿಡಬ್ಲ್ಯುಸಿ ಜೊತೆ ನಿರಂತರ ಸಂಪರ್ಕದಲ್ಲಿರುವುದಾಗಿ ಎಂದು ಹೇಳಿದ್ದಾರೆ.

suddiyaana