ಕರೆಂಟ್ ಕದ್ದರಾ ಕುಮಾರಸ್ವಾಮಿ? – ಅಕ್ರಮ ವಿದ್ಯುತ್ ಸಂಪರ್ಕ ಒಪ್ಪಿಕೊಂಡ ಮಾಜಿ ಸಿಎಂ ಹೇಳಿದ್ದೇನು?

ಕರೆಂಟ್ ಕದ್ದರಾ ಕುಮಾರಸ್ವಾಮಿ? – ಅಕ್ರಮ ವಿದ್ಯುತ್ ಸಂಪರ್ಕ ಒಪ್ಪಿಕೊಂಡ ಮಾಜಿ ಸಿಎಂ ಹೇಳಿದ್ದೇನು?

ದೀಪಾವಳಿ ಹಬ್ಬದ ವೇಳೆ ಮನೆಗೆ ದೀಪಾಲಂಕಾರ ಮಾಡಿಸಿದ್ದ ಮಾಜಿ‌ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಈಗ ಕರೆಂಟ್ ಕದ್ದ ಆರೋಪ ಎದಿರಿಸುತ್ತಿದ್ದಾರೆ. ಮಾಜಿ‌ ಮುಖ್ಯಮಂತ್ರಿ ಕರೆಂಟ್ ಕಳ್ಳತನ ಮಾಡಿದ್ದಾರೆಂದು ಕಾಂಗ್ರೆಸ್ ಎಕ್ಸ್ ನಲ್ಲಿ ಪೋಸ್ಟ್ ‌ಮಾಡಿದೆ‌.

ಕಾಂಗ್ರೆಸ್ ಪೊಸ್ಟ್ ನಲ್ಲಿ ಏನಿದೆ?

ಜಗತ್ತಿನ ಏಕೈಕ ಮಹಾಪ್ರಾಮಾಣಿಕ ಹೆಚ್.ಡಿ ಕುಮಾರಸ್ವಾಮಿಯವರ ಜೆ ಪಿ ನಗರದ ನಿವಾಸದ ದೀಪಾವಳಿಯ ದೀಪಾಲಂಕಾರಕ್ಕೆ ನೇರವಾಗಿ ವಿದ್ಯುತ್ ಕಂಬದಿಂದ ಅಕ್ರಮ ವಿದ್ಯುತ್ ಸಂಪರ್ಕ ಪಡೆದಿದ್ದಾರೆ. ಒಬ್ಬ ಮಾಜಿ ಸಿಎಂ ಆಗಿ ವಿದ್ಯುತ್ ಕಳ್ಳತನ ಮಾಡುವ ದಾರಿದ್ರ್ಯ ಬಂದಿದ್ದು ದುರಂತ! ಕುಮಾರಸ್ವಾಮಿ ಅವರೇ ನಮ್ಮ ಸರ್ಕಾರ ಗೃಹಜ್ಯೋತಿಯಲ್ಲಿ 200 ಯೂನಿಟ್ ಉಚಿತ ಕೊಡುತ್ತಿದೆಯೇ ಹೊರತು 2000 ಯೂನಿಟ್ ಅಲ್ಲ! ತಮಗೆ ಅಷ್ಟೊಂದು ದಾರಿದ್ರ್ಯ ಬಂದಿದ್ದರೆ ಗೃಹಜ್ಯೋತಿ ಯೋಜನೆಗೆ ಒಂದು ಅರ್ಜಿ ಹಾಕಬಹುದಿತ್ತಲ್ಲ, ಒಹ್, ತಿಳಿದಿರಲಿಲ್ಲ ಗೃಹಜ್ಯೋತಿಯಲ್ಲಿ ಒಬ್ಬರಿಗೆ ಒಂದೇ ಮೀಟರ್ ಗೆ ಅವಕಾಶವಿದೆ, ತಮ್ಮ ಹೆಸರಲ್ಲಿ ಹಲವು ಮೀಟರ್ ಗಳಿವೆಯಲ್ಲವೇ!  ಎಂದು ವ್ಯಂಗ್ಯವಾಡಿದೆ.

ಇದನ್ನೂ ಓದಿ: ರಾಜ್ಯಾಧ್ಯಕ್ಷರಾಗಿ ಬಿ.ವೈ ವಿಜಯೇಂದ್ರ ಮುಂದಿರುವ ಸವಾಲುಗಳೇನು? – ವಿಜಯೇಂದ್ರ ಅವರ ವಿಜಯಕ್ಕಿರುವ ಆರು ಮೆಟ್ಟಿಲುಗಳು ಯಾವುದು?

ರಾಜ್ಯದ ವಿದ್ಯುತ್ ಕೊರತೆಯ ನಡುವೆಯೂ ರೈತರಿಗೆ 7 ಗಂಟೆ ವಿದ್ಯುತ್ ಕೊಡುವ ಕ್ರಮ ಕೈಗೊಂಡಿದ್ದರೂ ಪುಂಖಾನುಪುಂಕವಾಗಿ ಮಾತಾನಾಡುವ ತಾವು ಇಂತಹ ಚೀಪ್ ಕಳ್ಳತನಕ್ಕೆ ಇಳಿಯುವಷ್ಟು “ಬರ” ಎದುರಿಸುತ್ತಿದ್ದೀರಾ? ಅದೇನೋ ಪತ್ರಿಕಾಗೋಷ್ಠಿ ನಡೆಸಿ “ಕರ್ನಾಟಕ ಕತ್ತಲಲ್ಲಿದೆ“ ಎನ್ನುತ್ತಾ ಬಡಬಡಿಸಿದ್ದಿರಲ್ಲವೇ, ಈಗ ಕದ್ದ ವಿದ್ಯುತ್ತಿನಲ್ಲಿ ನಿಮ್ಮ ಮನೆಗೆ ಬೆಳಕು ಮಾಡಿಕೊಂಡಿದ್ದೀರಿ, ನಿಮ್ಮ ಮನೆ ಹೀಗೆ ಜಗಮಗ ಹೊಳೆಯುತ್ತಿರುವಾಗ ಅದ್ಯಾವ ಬಾಯಲ್ಲಿ ಕರ್ನಾಟಕ ಕತ್ತಲಲ್ಲಿದೆ ಎನ್ನುವಿರಿ ಸ್ವಾಮಿ?! ಎಂದು ಕಿಡಿಕಾರಿದೆ.

ನಿಮ್ಮದೇ ಶೈಲಿಯ ಪ್ರಶ್ನೆ ಕೇಳಬೇಕೆಂದರೆ, ರಾಜ್ಯ ಬರ ಎದುರಿಸುತ್ತಿರುವಾಗ ನಿಮ್ಮ ಮನೆ ಮಾತ್ರ ಜಗಮಗಿಸಬೇಕೆ? ರೈತರ ಪಾಲಿನ ವಿದ್ಯುತ್ ಕಳ್ಳತನ ಮಾಡಿ ಮೋಜು ಮಾಡಬೇಕೆ? ನಿಮ್ಮ ಮನೆಯ ದೀಪಾವಳಿಗೆ ರಾಜ್ಯದ ಜನರ “ದಿವಾಳಿ”ಯನ್ನು ಬಯಸುತ್ತಿದ್ದೀರಾ? ವಿದ್ಯುತ್ತನ್ನೇ ಬಿಡದೆ ಲೂಟಿ ಮಾಡುವ ತಾವು ರಾಜ್ಯವನ್ನು ಇನ್ನೆಷ್ಟು ಲೂಟಿ ಮಾಡಿರಬಹುದು? ಎಂದು ಕುಮಾರಸ್ವಾಮಿ ವಿರುದ್ಧ ಕಾಂಗ್ರೆಸ್ ಆರೋಪದ ಸುರಿಮಳೆಗೈದಿತ್ತು. ಕಾಂಗ್ರೆಸ್ ಎಕ್ಸ್ ನಲ್ಲಿ ವಿಡಿಯೋ ಸಮೇತ ಆರೋಪ‌ ಮಾಡುತ್ತಿದ್ದಂತೆ ಕುಮಾರಸ್ವಾಮಿ ಎಚ್ಚೆತ್ತುಕೊಂಡಿದ್ದಾರೆ.

ಅಕ್ರಮ ಸಂಪರ್ಕ ಒಪ್ಪಿಕೊಂಡ ಕುಮಾರಸ್ವಾಮಿ!

ದೀಪಾವಳಿ ದೀಪಾಲಂಕಾರ ವೇಳೆ ಅಕ್ರಮ ವಿದ್ಯುತ್ ಸಂಪರ್ಕ ಪಡೆದಿದ್ದನ್ನು ಒಪ್ಪಿಕೊಂಡಿರುವ ಹೆಚ್ ಡಿಕೆ ಘಟನೆಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಅಲ್ಲದೆ  ಡೆಕೋರೇಟರ್ ಈ ರೀತಿ ಮಾಡಿದ್ದಾಗಿ ಹೇಳಿರುವ ಕುಮಾರಸ್ವಾಮಿ, ರಾತ್ರಿ‌ ಮನೆಗೆ ಬಂದಾಗ ವಿಷಯ ಗೊತ್ತಾದ ಕೂಡಲೇ ಸಂಪರ್ಕ ಕಡಿತ ಮಾಡಿಸಿರುವುದಾಗಿ ಸ್ಪಷ್ಟನೆ ನೀಡಿದ್ದಾರೆ.

Shwetha M