ಆಪರೇಷನ್‌ ಸಿಂಧೂರ ಬಗ್ಗೆ ಕೈ ನಾಯಕನಿಗೆ ಅನುಮಾನ – ಅಜಯ್‌ ರಾಯ್‌ ಹೇಳಿಕೆಗೆ ಕೆಂಡಕಾರಿದ ಬಿಜೆಪಿ

ಆಪರೇಷನ್‌ ಸಿಂಧೂರ ಬಗ್ಗೆ ಕೈ ನಾಯಕನಿಗೆ ಅನುಮಾನ –  ಅಜಯ್‌ ರಾಯ್‌ ಹೇಳಿಕೆಗೆ ಕೆಂಡಕಾರಿದ ಬಿಜೆಪಿ

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತ ನಡೆಸಿದ್ದ ಆಪರೇಷನ್ ಸಿಂಧೂರ ಸೇನಾ ಕಾರ್ಯಾಚಣೆಯಲ್ಲಿ ಏನೋ ತಪ್ಪಿದೆ ಎಂದು ಹೇಳುವ ಮೂಲಕ, ಉತ್ತರ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಅಜಯ್‌ ರಾಯ್‌ ಹೊಸ ವಿವಾದವನ್ನು ಸೃಷ್ಟಿಸಿದ್ದಾರೆ.

“ನಾಲ್ಕು ದಿನಗಳ ಕಾರ್ಯಾಚರಣೆಯ ಸಂದರ್ಭದಲ್ಲಿ, ಅಮೆರಿಕ ಮತ್ತು ಚೀನಾ ನಿರ್ಮಿತ ಪಾಕಿಸ್ತಾನದ ಜೆಟ್‌ಗಳನ್ನು ಭಾರತ ಹೊಡೆದುರುಳಿಸಿದೆ” ಎಂದು ವಾಯುಪಡೆಯ ಮುಖ್ಯಸ್ಥ ಏರ್‌ ಚೀಫ್‌ ಮಾರ್ಷಲ್ ಎಪಿ ಸಿಂಗ್‌ ನೀಡಿರುವ ಹೇಳಿಕೆಗೆ, ಕಾಂಗ್ರೆಸ್‌ ನಾಯಕ ಅಜಯ್‌ ರಾಯ್‌ ಅನುಮಾನ ವ್ಯಕ್ತಪಡಿಸಿದ್ದಾರೆ. ವಿಪಕ್ಷಗಳು ಭಾರತದ ಎಷ್ಟು ಯುದ್ಧ ವಿಮಾನಗಳು ನಾಶವಾಗಿವೆ? ಎಂದು ಸರ್ಕಾರವನ್ನು ಪದೇ ಪದೇ ಪ್ರಶ್ನಿಸುತ್ತಿರುವದನ್ನು, ಈ ಹಿಂದೆ ರಾಜನಾಥ್‌ ಸಿಂಗ್‌ ತರಾಟೆಗೆ ತೆಗೆದುಕೊಂಡಿದ್ದರು.

ಇದನ್ನೂ ಓದಿ: 3211 ದಿನಗಳ ಬಳಿಕ ಕೆಎಲ್ ರಾಹುಲ್ ಶತಕ – ಬೆರಳು ಚೀಪುತ್ತಾ ಮಗಳಿಗೆ ಶತಕ ಅರ್ಪಿಸಿದ ಕನ್ನಡಿಗ

“ಭಾರತದ ಸಶಸ್ತ್ರ ಪಡೆಗಳ ಮುಖ್ಯಸ್ಥರು ಪದೇ ಪದೇ ಪತ್ರಿಕಾಗೋಷ್ಠಿ ನಡೆಸುತ್ತಿರುವುದು, ಆಪರೇಷನ್‌ ಸಿಂಧೂರ ಸೇನಾ ಕಾರ್ಯಾಚರಣೆಯಲ್ಲಿ ಏನೋ ತಪ್ಪಾಗಿದೆ ಎಂಬ ಅನುಮಾನ ಮೂಡಲು ಕಾರಣವಾಗಿದೆ. ರಕ್ಷಣಾ ಸಿಬ್ಬಂದಿ ಮುಖ್ಯಸ್ಥರು ವಿಭಿನ್ನ ಹೇಳಿಕೆಗಳನ್ನು ನೀಡಿದ್ದರೆ, ವಾಯುಸೇನೆ ಮುಖ್ಯಸ್ಥರು ಅದಕ್ಕೆ ವ್ಯತಿರಿಕ್ತ ಹೇಳಿಕೆಗಳನ್ನು ನೀಡಿದ್ದಾರೆ. ಇದರಿಂದ ಜನರಲ್ಲಿ ಗೊಂದಲವುಂಟಾಗಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಈ ಗೊಂದಲಗಳನ್ನು ದೂರ ಮಾಡಬೇಕು” ಎಂದು ಅಜಯ್‌ ರಾಯ್‌ ಒತ್ತಾಯಿಸಿದ್ದಾರೆ. ಉನ್ನತ ಸೇನಾಧಿಕಾರಿಗಳ ವ್ಯತಿರಿಕ್ತ ಹೇಳಿಕೆಗಳಿಗೆ ಅನುಮಾನ ವ್ಯಕ್ತಪಡಿಸಿ ಅವರು ನೀಡಿರುವ ಹೇಳಿಕೆಗಳು, ಇದೀಗ ತೀವ್ರ ವಿವಾದ ಸೃಷ್ಟಿಸಿದೆ.

ವಾರಾಣಸಿ ಲೋಕಸಭಾ ಕ್ಷೇತ್ರದಿಂದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮೂರು ಬಾರಿ ಸ್ಪರ್ಧಿಸಿ ಸೋತಿರುವ ಅಜಯ್ ರಾಯ್‌, ಆಪರೇಷನ್‌ ಸಿಂಧೂರ ಸೇನಾ ಕಾರ್ಯಾಚರಣೆ ಕುರಿತು ಅನುಮಾನ ವ್ಯಕ್ತಪಡಿಸಿರುವುದಕ್ಕೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ಕುರಿತು ಮಾತನಾಡಿರುವ ಬಿಜೆಪಿ ವಕ್ತಾರ ಟಾಮ್‌ ವಡಕ್ಕನ್‌, “ಅಜಯ್‌ ರಾಯ್‌ ನೀಡಿರುವ ಹೇಳಿಕೆಗಳು ದೇಶದ ಸಶಸ್ತ್ರ ಪಡೆಗಳ ಮನೋಬಲವನ್ನು ಕುಗ್ಗಿಸುವ ಷಡ್ಯಂತ್ರದ ಭಾಗವಾಗಿದೆ” ಎಂದು ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಬಹುಶಃ ಅಜಯ್‌ ರಾಯ್‌ ಪ್ರಸ್ತುತ ಕೋಲಂಬಿಯಾದಲ್ಲಿರುವ ರಾಹುಲ್‌ ಗಾಂಧಿ ಅವರಿಂದ ನಿರ್ದೇಶನಗಳನ್ನು ಪಡೆಯುತ್ತಿದ್ದಾರೆ. ರಾಹುಲ್‌ ಅಣತಿಯ ಮೇರೆಗೆ ದೇಶದ ಸಶಸ್ತ್ರ ಪಡೆಗಳ ಮನೋಬಲ ಕುಸಿಯಲು ಕಾರಣವಾಗುವ ಹೇಳಿಕೆಗಳನ್ನು ನೀಡುತ್ತಿದ್ದಾರೆ. ನಮ್ಮ ಸೈನಿಕರ ಆತ್ಮಸ್ಥೈರ್ಯವನ್ನು ಕುಗ್ಗಿಸಿ ಕಾಂಗ್ರೆಸ್‌ಗೆ ಏನು ಸಿಗುತ್ತದೆ ಎಂಬುದು ಅರ್ಥವಾಗುತ್ತುಇಲ್ಲ” ಎಂದು ಟಾಮ್‌ ವಡಕ್ಕನ್‌ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮುಂದುವರೆದು, “ಆಪರೇಷನ್‌ ಸಿಂಧೂರದ ಬಗ್ಗೆ ಉನ್ನತ ಸೇನಾಧಿಕಾರಿಗಳ ಹೇಳಿಕೆಗಳಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಎಲ್ಲರೂ ಒಂದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, ಕಾಂಗ್ರೆಸ್‌ ಪಕ್ಷಕ್ಕೆ ಮಾತ್ರ ಇದರಲ್ಲಿ ವ್ಯತ್ಯಾಸ ಕಂಡುಬರುತ್ತಿದೆ. ಇಡೀ ದೇಶ ಆಪರೇಷನ್‌ ಸಿಂಧೂರದ ಬಗ್ಗೆ ಹೆಮ್ಮೆಪಡುತ್ತಿರುವಾಗ, ಕಾಂಗ್ರೆಸ್‌ ಮಾತ್ರ ಅದರ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿರುವುದು ನಾಚಿಕೆಗೇಡಿನ ಸಂಗತಿ” ಎಂದು ಬಿಜೆಪಿ ವಕ್ತಾರ ತರಾಟೆಗೆ ತೆಗೆದುಕೊಂಡಿದ್ದಾರೆ.

Kishor KV