ಶಶಿ ತರೂರ್‌ ಅವರನ್ನ ಬಿಜೆಪಿಯ ಸೂಪರ್ ವಕ್ತಾರ ಎಂದು ಘೋಷಿಸಬೇಕು – ಕಾಂಗ್ರೆಸ್ ನಾಯಕ ಉದಿತ್ ರಾಜ್

ಶಶಿ ತರೂರ್‌ ಅವರನ್ನ ಬಿಜೆಪಿಯ ಸೂಪರ್ ವಕ್ತಾರ  ಎಂದು ಘೋಷಿಸಬೇಕು –  ಕಾಂಗ್ರೆಸ್ ನಾಯಕ ಉದಿತ್ ರಾಜ್

ಕಾಂಗ್ರೆಸ್ ನಾಯಕ ಉದಿತ್ ರಾಜ್ ತಮ್ಮ ಪಕ್ಷದ ನಾಯಕ ಶಶಿ ತರೂರ್ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ಬಿಜೆಪಿಯ ಸೂಪರ್ ವಕ್ತಾರ” ಎಂದು ಘೋಷಿಸಬೇಕು ಎಂದು ಕಿಡಿ ಕಾರಿದ್ದಾರೆ.

ಐದು ದೇಶಗಳಿಗೆ ತೆರಳಿರುವ ಸರ್ವಪಕ್ಷ ನಿಯೋಗದ ನೇತೃತ್ವ ವಹಿಸಿರುವ ಕಾಂಗ್ರೆಸ್ ಸಂಸದ ಶಶಿ ತರೂರ್, ಪನಾಮದಲ್ಲಿ ಮಾತನಾಡುತ್ತಾ, 2016 ರಲ್ಲಿ ಭಯೋತ್ಪಾದಕ ನೆಲೆಗಳ ಮೇಲೆ ನಡೆದ ಸರ್ಜಿಕಲ್ ಸ್ಟ್ರೈಕ್ ಸಮಯದಲ್ಲಿ ಭಾರತ ಮೊದಲ ಬಾರಿಗೆ ಗಡಿ ನಿಯಂತ್ರಣ ರೇಖೆಯನ್ನು(LOC) ಉಲ್ಲಂಘಿಸಿತು ಎಂದು ಹೇಳಿದ್ದಾರೆ. ಇದು ಕಾಂಗ್ರೆಸ್ ನಾಯಕರನ್ನು ಕೆರಳಿಸಿದೆ.

ತರೂರ್ ಅವರ ಹೇಳಿಕೆಯನ್ನು ಟ್ಯಾಗ್ ಮಾಡಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ ಉದಿತ್ ರಾಜ್ ಅವರು, “ನನ್ನ ಪ್ರೀತಿಯ ಶಶಿ ತರೂರ್, ಅಯ್ಯೋ! ಭಾರತಕ್ಕೆ ಇಳಿಯುವ ಮೊದಲು ನಿಮ್ಮನ್ನು ವಿದೇಶಾಂಗ ಸಚಿವ ಎಂದು ಘೋಷಿಸಲು ನಾನು ಪ್ರಧಾನಿ ಮೋದಿಯವರ ಮನವೊಲಿಸಬಲ್ಲೆ. ಆದರೆ ಪ್ರಧಾನಿ ಮೋದಿಗಿಂತ ಮೊದಲು, ಭಾರತ ಎಂದಿಗೂ ಎಲ್‌ಒಸಿ ಮತ್ತು ಅಂತರರಾಷ್ಟ್ರೀಯ ಗಡಿಯನ್ನು ದಾಟಿಲ್ಲ ಎಂದು ಹೇಳುವ ಮೂಲಕ ನೀವು ಕಾಂಗ್ರೆಸ್‌ನ ಸುವರ್ಣ ಇತಿಹಾಸವನ್ನು ಅವಮಾನಿಸಿದ್ದೀರಿ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“1965 ರಲ್ಲಿ ಭಾರತೀಯ ಸೇನೆಯು ಪಾಕಿಸ್ತಾನವನ್ನು ಹಲವು ಹಂತಗಳಲ್ಲಿ ಪ್ರವೇಶಿಸಿತು. ಇದು ಲಾಹೋರ್ ವಲಯದಲ್ಲಿ ಪಾಕಿಸ್ತಾನಿಗಳನ್ನು ಸಂಪೂರ್ಣವಾಗಿ ಅಚ್ಚರಿಗೊಳಿಸಿತು. 1971 ರಲ್ಲಿ, ಭಾರತ ಪಾಕಿಸ್ತಾನವನ್ನು ಎರಡು ತುಂಡುಗಳಾಗಿ ಹರಿದು ಹಾಕಿತು ಮತ್ತು ಯುಪಿಎ ಸರ್ಕಾರದ ಅವಧಿಯಲ್ಲಿ ಹಲವಾರು ಸರ್ಜಿಕಲ್ ಸ್ಟ್ರೈಕ್‌ಗಳನ್ನು ಮಾಡಲಾಯಿತು. ಆದರೆ ರಾಜಕೀಯವಾಗಿ ಲಾಭ ಮಾಡಿಕೊಳ್ಳಲು ಡ್ರಮ್ ಬಾರಿಸುವ ಕೆಲಸ ಮಾಡಿಲ್ಲ” ಎಂದು ಅವರು ಹೇಳಿದ್ದಾರೆ. X ನಲ್ಲಿ ಉದಿತ್ ರಾಜ್ ಅವರ ಪೋಸ್ಟ್ ಅನ್ನು ಕಾಂಗ್ರೆಸ್‌ನ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ಮರು ಪೋಸ್ಟ್ ಮಾಡಿದ್ದಾರೆ.

 

Kishor KV