20ಕ್ಕೂ ಹೆಚ್ಚು ಶಾಸಕರೊಂದಿಗೆ ಮೈಸೂರಿಗೆ ಟ್ರಿಪ್ ಪ್ಲಾನ್! – ಸಚಿವ ಸತೀಶ್ ಜಾರಕಿಹೊಳಿಗೆ ಶಾಕ್ ಕೊಟ್ಟ ಹೈಕಮಾಂಡ್!
![20ಕ್ಕೂ ಹೆಚ್ಚು ಶಾಸಕರೊಂದಿಗೆ ಮೈಸೂರಿಗೆ ಟ್ರಿಪ್ ಪ್ಲಾನ್! – ಸಚಿವ ಸತೀಶ್ ಜಾರಕಿಹೊಳಿಗೆ ಶಾಕ್ ಕೊಟ್ಟ ಹೈಕಮಾಂಡ್!](https://suddiyaana.com/wp-content/uploads/2023/10/8-12.jpg)
ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ನಾಲ್ಕು ತಿಂಗಳೇ ಕಳೆದಿದೆ. ಆದರೂ ಪಕ್ಷದೊಳಗಿನ ಭಿನ್ನಮತ ಶಮನವಾದಂತೆ ಕಾಣುತ್ತಿಲ್ಲ. ಒಂದಲ್ಲ ಒಂದು ವಿಚಾರಕ್ಕೆ ಸಚಿವರು, ಶಾಸಕ ಮಧ್ಯೆ ಗೊಂದಲ ಉಂಟಾಗುತ್ತಿದೆ. ಈಗಾಗಲೇ ಶಾಸಕರು ಕೆಲವು ಸಚಿವರ ಕಾರ್ಯವೈಖರಿ ಬಗ್ಗೆ ಅಸಮಧಾನ ಹೊರಹಾಕಿದ್ದರು. ಈ ವೇಳೆ ಸಿಎಂ ಸಿದ್ದರಾಮಯ್ಯ ಅವರು ಈ ಬಿಕ್ಕಟ್ಟನ್ನು ಶಮನಮಾಡಿದ್ದರು. ಈ ಬೆನ್ನಲ್ಲೇ ಸಚಿವ ಸತೀಶ್ ಜಾರಕಿಹೊಳಿ ಅವರ ನಡೆ ಭಾರಿ ಚರ್ಚೆಗೆ ಗ್ರಾಸವಾಗಿದೆ. ಜಾತರಕಿಹೊಳಿ 20ಕ್ಕೂ ಅಧಿಕ ಶಾಸಕನ್ನು ಜೊತೆಗೆ ಕರೆದುಕೊಂಡು ಪ್ರವಾಸ ಹೋಗುವ ಸುದ್ದಿ ಈಗ ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿದೆ.
ಸತೀಶ್ ಜಾರಕಿಹೊಳಿ ಅವರು 20ಕ್ಕೂ ಅಧಿಕ ಶಾಸಕರೊಂದಿಗೆ ಮೈಸೂರಿಗೆ ತೆರಳಲು ಸಿದ್ದತೆ ನಡೆಸಿದ್ದರು. ತಮ್ಮ ಉಸ್ತುವಾರಿ ಜಿಲ್ಲೆಯ ಎಲ್ಲಾ ಶಾಸಕರನ್ನು ಒಗ್ಗೂಡಿಸಿಕೊಂಡು ಮೈಸೂರು ದಸರಾಗೆ ತೆರಳಲು ಪ್ಲಾನ್ ಮಾಡಿದ್ದರು. ಎಲ್ಲಾ ಶಾಸಕರನ್ನು ಕರೆದುಕೊಂಡಲು ಬಸ್ ಸಹ ಸಿದ್ಧವಾಗಿತ್ತು. ಆದ್ರೆ, ಇದಕ್ಕೆ ಹೈಕಮಾಂಡ್ ಬ್ರೇಕ್ ಹಾಕಿದೆ. ಇದೀಗ ಈ ವಿಚಾರ ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದೆ.
ಇದನ್ನೂ ಓದಿ: ಪಂಚರಾಜ್ಯ ಚುನಾವಣೆಗಾಗಿ ಕಾಂಗ್ರೆಸ್ ನಿಂದ ₹1,000 ಕೋಟಿ ಕಲೆಕ್ಷನ್ – ಯಾವ ರಾಜ್ಯಕ್ಕೆ ಎಷ್ಟೆಷ್ಟು ಹಣ ಸಂಗ್ರಹ?
ಸತೀಶ್ ಜಾರಕಿಹೊಳಿ ಅವರು 20ಕ್ಕೂ ಹೆಚ್ಚು ಶಾಸಕರನ್ನು ಒಗ್ಗೂಡಿಸಿಕೊಂಡು ಪ್ರವಾಸಕ್ಕೆ ತೆರಳುತ್ತಿರುವ ಮಾಹಿತಿ ಕಾಂಗ್ರೆಸ್ ಹೈಕಮಾಂಡ್ಗೆ ಗೊತ್ತಾಗಿತ್ತಿದ್ದಂತೆಯೇ ಇದಕ್ಕೆ ಬ್ರೇಕ್ ಹಾಕಿದೆ. ಈ ಸಮಯದಲ್ಲಿ ಬಸ್ ನಲ್ಲಿ ಶಾಸಕರನ್ನು ಒಗ್ಗೂಡಿಸಿಕೊಂಡು ಹೋಗುವುದು ಬೇಡ. ವಿಪಕ್ಷಗಳಿಗೆ ನಾವೇ ಆಹಾರ ಕೊಟ್ಟಂತೆ ಆಗುತ್ತದೆ. ಹೀಗಾಗಿ ಪ್ರವಾಸವನ್ನು ರದ್ದು ಮಾಡುವಂತೆ ಹೈಕಮಾಂಡ್ ಸೂಚಿಸಿದೆ. ಹೈಕಮಾಂಡ್ ಸೂಚನೆ ಬಂದ ಬೆನ್ನಲ್ಲೇ ಸತೀಶ್ ಜಾರಕಿಹೊಳಿ ಅವರು ಶಾಸಕರನ್ನು ಒಗ್ಗೂಡಿಸಿಕೊಂಡು ಮೈಸೂರು ದಸರಾಗೆ ಹೋಗುವ ಪ್ಲ್ಯಾನ್ ಕೈಬಿಟ್ಟಿದ್ದಾರೆ ಎಂದು ವರದಿಯಾಗಿದೆ.
ಇನ್ನು ಈ ಬಗ್ಗೆ ಸತೀಶ್ ಜಾರಕಿಹೊಳಿ ಅವರು ಸ್ಪಷ್ಟನೆ ನೀಡಿದ್ದಾರೆ. ದಸರಾ ನೋಡುವುದಕ್ಕೆ ಬನ್ನಿ ಎಂದು ಅಲ್ಲಿನ(ಮೈಸೂರು) ಶಾಸಕರೂ ಹೇಳಿದ್ದರು. ಅದರಂತೆ ನಮ್ಮಲ್ಲಿ ಕೆಲವರು ಮೈಸೂರಿಗೆ ಹೋಗಬೇಕು ಎಂದು ಮಾತನಾಡಿದ್ದೆವು. ಸಮಾನ ಮನಸ್ಕ ಶಾಸಕರು ಹೋಗಬೇಕು ಅಂತ ಇತ್ತು. ಮತ್ತೊಂದೆಡೆ ನಮ್ಮನ್ನು ಎಲ್ಲಾದರೂ ಟ್ರಿಪ್ ಕರೆದುಕೊಂಡು ಹೋಗಿ ಎಂದು ಕೆಲವರು ಹೇಳುತ್ತಿದ್ದರು. ಹಾಗೆ ಸಮಾನ ಮನಸ್ಕರರು ಸಹ ಎಲ್ಲಾದರೂ ಹೋಗಬೇಕು ಅಂತ ಹೇಳುತ್ತಿದ್ದರು. ಈಗ ದಸರಾ ಹಬ್ಬ ಬೇಡ ಎಂದು ಸುಮ್ಮನಾಗಿದ್ದೇವೆ. ಮುಂದೆ ಹೋಗಬೇಕು ಅಂತಾದ್ರೆ ಸಿಎಂ ಹಾಗೂ ಅಧ್ಯಕ್ಷರ ಗಮನಕ್ಕೆ ತಂದು ಹೋಗುತ್ತೇವೆ. ಯಾವುದೇ ಬಣ ಗಿಣ ಅಂತೇನಲ್ಲ ಎಂದು ಹೇಳಿದ್ದಾರೆ.