ʼಶ್ಯಾಡೋ ಸಿಎಂʼ ಹಸ್ತಕ್ಷೇಪದಿಂದ ಕಾಂಗ್ರೆಸ್‌ನಲ್ಲಿ ಸಂಘರ್ಷ! – ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಟ್ವೀಟಾಸ್ತ್ರ  

ʼಶ್ಯಾಡೋ ಸಿಎಂʼ ಹಸ್ತಕ್ಷೇಪದಿಂದ ಕಾಂಗ್ರೆಸ್‌ನಲ್ಲಿ ಸಂಘರ್ಷ! – ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಟ್ವೀಟಾಸ್ತ್ರ  

ಬೆಂಗಳೂರು: ರಾಜ್ಯ ಬಿಜೆಪಿ ಹಾಗೂ ಕಾಂಗ್ರೆಸ್‌ ಮಧ್ಯೆ ಟ್ವೀಟ್‌ ಸಮರ ಮುಂದುವರಿದಿದೆ. ಬಿಜೆಪಿ ಹಾಗೂ ಕಾಂಗ್ರೆಸ್‌ ನಾಯಕರು ಪರಸ್ಪರ ಆರೋಪ, ಪ್ರತ್ಯಾರೋಪ ಮಾಡುವುದನ್ನು ಮುಂದುವರಿಸಿದ್ದಾರೆ. ಇದೀಗ ರಾಜ್ಯ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರನ್ನು ಶ್ಯಾಡೋ ಸಿಎಂ ಎಂದು ವ್ಯಂಗ್ಯವಾಡಿದೆ. ಯತೀಂದ್ರ ಅವರ ಅತಿಯಾದ ಹಸ್ತಕ್ಷೇಪದಿಂದ, ಮುಖ್ಯಮಂತ್ರಿ ಮತ್ತು ಸಚಿವರುಗಳ ಮಧ್ಯೆ ಈಗಾಗಲೇ ಆಂತರಿಕ ಸಂಘರ್ಷ ಶುರುವಾಗಿದೆ ಎಂದು ಬಿಜೆಪಿ ಆರೋಪಿಸಿದೆ.

ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ಬಿಜೆಪಿ, ರಾಜ್ಯದ ಎಟಿಎಂ ಸರ್ಕಾರದ ವರ್ಗಾವಣೆ ದಂಧೆಯಲ್ಲಿ ಶ್ಯಾಡೋ ಸಿಎಂ ಯತೀಂದ್ರರ ಅತಿಯಾದ ಹಸ್ತಕ್ಷೇಪದಿಂದ, ಮುಖ್ಯಮಂತ್ರಿ ಮತ್ತು ಸಚಿವರುಗಳ ಮಧ್ಯೆ ಈಗಾಗಲೇ ಆಂತರಿಕ ಸಂಘರ್ಷ ಆರಂಭವಾಗಿದೆ. ಸಿದ್ದರಾಮಯ್ಯರವರು ಅಂತಿಮಗೊಳಿಸಿ ನೇಮಿಸಿದ ಅಧಿಕಾರಿಗಳಿಗೆ, ಸಂಬಂಧಪಟ್ಟ ಸಚಿವರು ಅಧಿಕಾರ ಸ್ವೀಕರಿಸಲು ಬಿಡದೇ ಅಧಿಕಾರಿಗಳನ್ನು ಸತಾಯಿಸುತ್ತಿದ್ದಾರೆಂದು ಆರೋಪ ಮಾಡಿದೆ.

ಇದನ್ನೂ ಓದಿ: ಅನ್ನಭಾಗ್ಯದ ಜೊತೆ ಹಣದ ಭಾಗ್ಯ – ಜಾರಿಯಾಗುತ್ತಿದೆ ಸರ್ಕಾರದ ಎರಡನೇ ಗ್ಯಾರಂಟಿ

ಅವಮಾನಗೊಂಡ ಅಧಿಕಾರಿಗಳು ಈ ಬಗ್ಗೆ ಸಿದ್ದರಾಮಯ್ಯ ಅವರಿಗೆ ಸಚಿವರ ವಿರುದ್ಧ ದೂರು ನೀಡುತ್ತಿದ್ದು, ಕಾರ್ಯಾಂಗ ಮತ್ತು ಸಚಿವಾಂಗದ ಮಧ್ಯೆ ಬಿಕ್ಕಟ್ಟು ಏರ್ಪಡುವ ಸಾಧ್ಯತೆ ನಿಚ್ಚಳವಾಗಿದೆ. ಸಿಎಂ ಆಪ್ತ ಬಣ ಹಾಗೂ ಸಿಎಂ ವಿರೋಧಿ ಬಣದ ಹಗ್ಗ ಜಗ್ಗಾಟದಲ್ಲಿ ಅಧಿಕಾರಿಗಳು ಹೈರಾಣಾಗಿದ್ದಾರೆ. ಇದರಿಂದ ರಾಜ್ಯದ ಅಭಿವೃದ್ಧಿ ಕುಂಠಿತವಾಗಿದೆ ಎಂದು ಕಿಡಿಕಾರಿದೆ.

ಸಿಎಂ ಮತ್ತು ಶ್ಯಾಡೋ ಸಿಎಂರವರೇ ವರ್ಗಾವಣೆ ದಂಧೆಯನ್ನು ಕೈಗೆತ್ತಿಕೊಂಡಿರುವುದರಿಂದ ಸಚಿವರ ಜೇಬುಗಳು ತುಂಬುತಿಲ್ಲ. ಹೀಗಾಗಿ ಅಧಿಕಾರಿಗಳು ತಮ್ಮ ಹುದ್ದೆಗಳನ್ನು ರಕ್ಷಿಸಿಕೊಳ್ಳಲು ಈಗ ಸಚಿವರ ಜೇಬನ್ನು ಸಹ ತುಂಬಿಸಬೇಕಾಗಿದೆ. ರಾಜ್ಯದ ಜನರ ಹಿತ ಕಾಯುತ್ತೇವೆ ಎಂದು ಸುಳ್ಳು ಹೇಳಿಕೊಂಡು ಅಧಿಕಾರ ಪಡೆದ ಕಾಂಗ್ರೆಸ್, ಈಗ ವರ್ಗಾವಣೆ ದಂಧೆಯಿಂದ ಕರ್ನಾಟಕದಲ್ಲಿ ಭರ್ಜರಿ ಲೂಟಿಗಿಳಿದಿದೆ ಎಂದು ಆರೋಪಿಸಿದೆ.

ಇನ್ನು ಬಿಜೆಪಿ ಬೆಲೆ ಏರಿಕೆ ವಿಚಾರವಾಗಿಯೂ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾ‌ರ ಅಧಿಕಾರಕ್ಕೆ ಬಂದಾಗಿನಿಂದ ಯಾವುದೇ ಪತ್ರಿಕೆ ತೆರೆದರೂ ಬೆಲೆ ಏರಿಕೆಯ ಸುದ್ದಿ‌ ಖಾಯಂ. ನಿತ್ಯ ಹೊಸ ದಾಖಲೆ ಬರೆಯುತ್ತಿರುವ ಬೆಲೆಗಳು ಜನಸಾಮಾನ್ಯರ ಬದುಕು ಹೈರಾಣು‌‌ ಮಾಡುತ್ತಿದೆ. ಅತ್ತ ವ್ಯಾಪಾರಿಗಳದ್ದೂ ಸರಕು ಕೊಂಡು ಮಾರಲಾಗದ ಸ್ಥಿತಿ, ಮಕ್ಕಳ ಬಿಸಿಯೂಟಕ್ಕೆ ತಿಳಿಸಾರೇ ಗತಿ. ಹಾಗಿದ್ದರೂ ಸಿದ್ದರಾಮಯ್ಯ ಸರ್ಕಾರ ಮಾತ್ರ ಖಾಸಗಿ ಹೋಟೆಲ್‌ನಲ್ಲಿ ಕಲೆಕ್ಷನ್ ಏಜೆಂಟ್ ಜತೆ ಸಭೆ ಮಾಡುವಷ್ಟಕ್ಕೆ ಆಡಳಿತವನ್ನು ಸೀಮಿತಗೊಳಿಸಿದೆ ಎಂದು ಕಿಡಿಕಾರಿದೆ.

suddiyaana