ಮರ್ಯಾದೆಗೇಡು ಹತ್ಯೆ ಬಗ್ಗೆ ಸಿಎಂ ಸಿದ್ದರಾಮಯ್ಯ ಬೇಸರ – ಸುಮೋಟೊ ಕೇಸ್ ಹಾಕಿ ತನಿಖೆ ಮಾಡಲು ಮುಂದಾದ ಸರ್ಕಾರ

ಮರ್ಯಾದೆಗೇಡು ಹತ್ಯೆ ಬಗ್ಗೆ ಸಿಎಂ ಸಿದ್ದರಾಮಯ್ಯ ಬೇಸರ – ಸುಮೋಟೊ ಕೇಸ್ ಹಾಕಿ ತನಿಖೆ ಮಾಡಲು ಮುಂದಾದ ಸರ್ಕಾರ

ರಾಜ್ಯದಲ್ಲಿ ಹೆಚ್ಚುತ್ತಿರುವ ಮರ್ಯಾದೆಗೇಡು ಹತ್ಯೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದ್ದಾರೆ. ಟ್ವೀಟ್ ಮಾಡುವ ಮೂಲಕ ಬೇಸರ ವ್ಯಕ್ತಪಡಿಸಿದ ಸಿಎಂ ಸಿದ್ದರಾಮಯ್ಯ, ಈ ವಿಚಾರದ ಬಗ್ಗೆ ಸರ್ಕಾರದಿಂದ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುವುದು. ತನಿಖೆಯಲ್ಲಿ ಯಾವುದೇ ಲೋಪವಾಗದಂತೆ ಎಚ್ಚರವಹಿಸಲಾಗುವುದು ಎಂದು ಹೇಳಿದ್ದಾರೆ. ಮತ್ತೊಂದೆಡೆ ರಾಜ್ಯದಲ್ಲಿ ನಡೆದಿರುವ ಮರ್ಯಾದಾ ಹತ್ಯೆ ಕುರಿತು ಸುಮೋಟೊ ಕೇಸ್ ದಾಖಲು ಮಾಡುವ ಬಗ್ಗೆ ಗೃಹ ಇಲಾಖೆ ಕ್ರಮ ಕೈಗೊಳ್ಳಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಇದನ್ನೂ ಓದಿ: ತಂದೆಯಿಂದ ಮಗಳ ಮರ್ಯಾದೆ ಗೇಡು ಹತ್ಯೆ – ಪ್ರೇಯಸಿಯ ಕೊಲೆ ವಿಚಾರ ತಿಳಿದು ಪ್ರಿಯಕರನಿಂದ ಆತ್ಮಹತ್ಯೆ..!

ಎರಡು ದಿನಗಳ ಹಿಂದಷ್ಟೇ ಕೋಲಾರದಲ್ಲಿ ಅನ್ಯಜಾತಿಯ ಯುವಕನನ್ನು ಪ್ರೀತಿಸಿದ್ದಕ್ಕೆ ತಂದೆಯೇ ಮಗಳನ್ನು ಕೊಲೆಗೈದ ಘಟನೆ ನಡೆದಿತ್ತು. ಈ ವಿಚಾರದ ಬಗ್ಗೆ ಬೇಸರ ವ್ಯಕ್ತಪಡಿಸಿದ ಸಿಎಂ ಟ್ವೀಟ್ ಮಾಡಿದ್ದಾರೆ. ಮುಖ್ಯಮಂತ್ರಿಗಳ ಕಚೇರಿಯ ಟ್ವೀಟ್‌ನಲ್ಲಿ, ಕಳೆದ ಕೆಲ ವಾರಗಳಲ್ಲಿ ರಾಜ್ಯದ ಎರಡು ಕಡೆಗಳಲ್ಲಿ ಮರ್ಯಾದೆಗೇಡು ಹತ್ಯೆ ಪ್ರಕರಣಗಳು ನಡೆದಿರುವ ಸುದ್ದಿ ನಮ್ಮೆಲ್ಲರ ಮನ ಕಲಕಿದೆ. ನಮ್ಮ ಸಮಾಜದಲ್ಲಿ ಅಂತರ್ಗತವಾಗಿರುವ ಜಾತಿ ವ್ಯವಸ್ಥೆ, ಸಾಮಾಜಿಕ ಕಟ್ಟುಪಾಡುಗಳ ಹೀನ ಮನಸ್ಥಿತಿಯನ್ನು ಇಂತಹ ಘಟನೆಗಳು ಪ್ರತಿಫಲಿಸುತ್ತವೆ. ಮರ್ಯಾದೆಗೇಡು ಹತ್ಯೆಯಂತಹ ಪ್ರಕರಣಗಳ ವಿಚಾರದಲ್ಲಿ ನಮ್ಮ ಸರ್ಕಾರವು ಕಾನೂನಾತ್ಮಕವಾಗಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಿದೆ. ಪ್ರಕರಣದ ತನಿಖೆ, ವಿಚಾರಣೆಯಲ್ಲಿ ಯಾವುದೇ ಲೋಪವಾಗದಂತೆ ಎಚ್ಚರವಹಿಸಲಿದೆ ಎಂದು ಹೇಳಿದ್ದಾರೆ. ಮರ್ಯಾದೆಗೇಡು ಹತ್ಯೆಗಳನ್ನು ಮಾಡುವಂತಹ ಮನಸ್ಥಿತಿಯನ್ನು ಸೃಷ್ಟಿಸಿರುವ ಜಾತಿಗ್ರಸ್ತ ಸಮಾಜದಲ್ಲಿ ಪರಿವರ್ತನೆ, ಜಾಗೃತಿಯನ್ನು ಮೂಡಿಸುವುದು ಅತ್ಯವಶ್ಯಕವಾಗಿದೆ. ಮನುಷ್ಯ ಚಂದ್ರನ ಮೇಲೆ ಕಾಲಿರಿಸಿದ್ದರೂ ದಲಿತರಿಗೆ ದೇವಸ್ಥಾನಗಳಲ್ಲಿ, ಮನೆಗಳಲ್ಲಿ ಕಾಲಿರಿಸಲು ಅವಕಾಶವನ್ನು ನೀಡದಂತಹ ಆಚರಣೆ, ಸಂಪ್ರದಾಯಗಳು ನಮ್ಮಲ್ಲಿವೆ ಎಂದದು ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ. ಜಾತಿ ಸಂರಚನೆಯ ಕಟ್ಟುಪಾಡುಗಳನ್ನು ಮೀರಲು ಮಾನವೀಯತೆ, ವಿಚಾರಪರತೆಯೇ ದಾರಿ; ಜಾಗೃತಿಯೇ ಅಸ್ತ್ರ. ಸಮಾಜವನ್ನು ಜಾತಿ ಸಂಕೋಲೆಗಳಿಂದ ಬಿಡುಗಡೆಗೊಳಿಸಲು ಪ್ರಯತ್ನಿಸಿದ ಎಲ್ಲ ಸಮಾಜ ಸುಧಾರಕರ ಆಶಯಗಳನ್ನು ವ್ಯಾಪಕವಾಗಿ ಪ್ರಚುರಪಡಿಸುವುದು ಇಂದಿನ ಅಗತ್ಯವಾಗಿದೆ. ಈ ದಿಕ್ಕಿನಲ್ಲಿ ಸರ್ಕಾರವು ರಚನಾತ್ಮಕ ಕಾರ್ಯಕ್ರಮಗಳಿಗೆ ಮುಂದಾಗಲಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ರಾಜ್ಯದಲ್ಲಿ ನಡೆದಿರುವ ಮರ್ಯಾದಾ ಹತ್ಯೆ ಕುರಿತು ಸುಮೋಟೊ ಕೇಸ್ ದಾಖಲು ಮಾಡುವ ಬಗ್ಗೆ ಗೃಹ ಇಲಾಖೆ ಕ್ರಮ ಕೈಗೊಳ್ಳಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ಪ್ರಕರಣದ ಕುರಿತು ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತೇವೆ. ಕಾನೂನು ಪ್ರಕಾರ ಯಾರಾದರೂ ದೂರು ಕೊಡಬೇಕು. ದೂರು ಕೊಡದೇ ಹೋದರೂ ಸುಮೋಟೊ ಕೇಸ್ ದಾಖಲು ಮಾಡಲು ಅವಕಾಶ ಇದೆ. ಸುಮೋಟೊ ಕೇಸ್ ಪೊಲೀಸರು ತೆಗೆದುಕೊಳ್ಳುತ್ತಾರೆ. ಕೇಸ್‌ನ ಪ್ರಾಮುಖ್ಯತೆ ನೋಡಿ ಪೊಲೀಸರೇ ಸುಮೋಟೊ ಕೇಸ್ ತೆಗೆದುಕೊಳ್ಳುವ ಪ್ರಕ್ರಿಯೆ ನಮ್ಮಲ್ಲಿ ಇದೆ ಎಂದು ಹೇಳಿದರು. ಸಮಾಜದಲ್ಲಿ ಇಂತಹ ಘಟನೆ ಆಗಬಾರದು. ಸಮಾಜದಲ್ಲಿ ಇದೊಂದು ದೊಡ್ಡ ಪಿಡುಗು ತರಹ ಆಗುತ್ತಿದೆ. ನಾನು ಕಾನೂನು ಪ್ರಕಾರ ನಿಲ್ಲಿಸಬಹುದು. ಆದರೆ ಜನರು ಇದನ್ನು ಇನ್ನೂ ಹೆಚ್ಚು ಅರ್ಥ ಮಾಡಿಕೊಳ್ಳಬೇಕು ಎಂದರು.

ಅನ್ಯಜಾತಿಯ ಅಪ್ರಾಪ್ತ ವಯಸ್ಕ ಬಾಲಕನನ್ನು ಪ್ರೀತಿಸುತ್ತಿದ್ದ ಮಗಳನ್ನು ತಂದೆಯೇ ಕೊಲೆ ಮಾಡಿರುವ ಘಟನೆ ಕೋಲಾರ ತಾಲೂಕಿನ ತೊಟ್ಲಿ ಗ್ರಾಮದಲ್ಲಿ ಆಗಸ್ಟ್ 24ರಂದು ನಡೆದಿತ್ತು. ಕಳೆದ 2 ತಿಂಗಳಲ್ಲಿ ಜಿಲ್ಲೆಯಲ್ಲಿ ನಡೆದಿರುವ 2ನೇ ಮರ್ಯಾದೆಗೇಡು ಹತ್ಯೆಯ ಪ್ರಕರಣ ಇದಾಗಿತ್ತು.

suddiyaana