ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟ – ಓರ್ವ ಸಾವು, ಹಲವು ವಾಹನಗಳು ಜಖಂ

ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟ – ಓರ್ವ ಸಾವು, ಹಲವು ವಾಹನಗಳು ಜಖಂ

ಹಿಮಾಚಲ ಪ್ರದೇಶದಲ್ಲಿ ಮಾನ್ಸೂನ್ ಆರಂಭವಾದಾಗಿನಿಂದ ಸಾವು ನೋವುಗಳ ಸಂಖ್ಯೆ ಏರುತ್ತಲೇ ಇದೆ. ಇದುವರೆಗೆ 100ಕ್ಕೂ ಹೆಚ್ಚು ಜನ ಪ್ರಾಣಕಳೆದುಕೊಂಡಿದ್ದಾರೆ. ಇದರ ನಡುವೆಯೇ ಸೋಮವಾರ ಮುಂಜಾನೆ ನಡೆದ ಮೇಘಸ್ಫೋಟಕ್ಕೆ ಜನಜೀವನ ಅಸ್ತವ್ಯಸ್ತವಾಗಿದೆ. ಮೇಘಸ್ಫೋಟದ ಪರಿಣಾಮ ಓರ್ವ ಸಾವನ್ನಪ್ಪಿದ್ದಾನೆ. ಹಲವಾರು ವಾಹನಗಳು ಜಖಂಗೊಂಡಿದೆ.

ಇದನ್ನೂ ಓದಿ: ರಣಮಳೆಗೆ ಉತ್ತರ ಭಾರತ ತತ್ತರ – ಹಿಮಾಚಲ ಪ್ರದೇಶದಲ್ಲಿ 88 ಜನರ ಸಾವು

ಹಿಮಾಚಲ ಪ್ರದೇಶದ ಕುಲು ಜಿಲ್ಲೆಯ ಕಿಯಾಸ್ ಮತ್ತು ನ್ಯೋಲಿಯಲ್ಲಿ ಸೋಮವಾರ ಮುಂಜಾನೆ 3.55ರ ಸುಮಾರಿಗೆ ಮೇಘಸ್ಫೋಟ ಸಂಭವಿಸಿದೆ. ಇದರ ಪರಿಣಾಮ ಓರ್ವ ಸಾವನ್ನಪ್ಪಿದ್ದಾನೆ.  ಮೂವರು ಗಾಯಗೊಂಡಿದ್ದಾರೆ. ಮೇಘಸ್ಫೋಟದಿಂದ 9 ವಾಹನಗಳು ಕೂಡ ಜಖಂಗೊಂಡಿವೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ಠಾಕೂರ್ ತಿಳಿಸಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನಾಲ್ಕು ಜಿಲ್ಲೆಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.

ರಾಜ್ಯದಲ್ಲಿ ಭಾರೀ ಮಳೆಯಿಂದಾಗಿ ಇದೂವರೆಗೆ ಸುಮಾರು 8 ಸಾವಿರ ಕೋಟಿ ನಷ್ಟ ಉಂಟಾಗಿದೆ ಎಂದು ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಮಾಹಿತಿ ನೀಡಿದ್ದಾರೆ. ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸಿಎಂ, ರಾಜ್ಯದಲ್ಲಿ ಜುಲೈನಲ್ಲಿ ಇದುವರೆಗೆ 284.1 ಮಿ.ಮೀ ಮಳೆಯಾಗಿದೆ. ಈಗಾಗಲೇ ಸುಮಾರು 70 ಸಾವಿರ ಪ್ರವಾಸಿಗರನ್ನು ರಾಜ್ಯದಿಂದ ಸ್ಥಳಾಂತರಿಸಲಾಗಿದೆ. ಮತ್ತು 15 ಸಾವಿರ ವಾಹನಗಳನ್ನು ಕಳುಹಿಸಲಾಗಿದೆ. ಸುಮಾರು 500 ಪ್ರವಾಸಿಗರು ಸ್ವಯಂಪ್ರೇರಣೆಯಿಂದ ಹಿಂದಿರುಗಲು ನಿರ್ಧರಿಸಿದ್ದಾರೆ ಎಂದು ತಿಳಿಸಿದ್ದಾರೆ. 80% ರಷ್ಟು ವಿಪತ್ತು ಪೀಡಿತ ಪ್ರದೇಶಗಳಲ್ಲಿ ವಿದ್ಯುತ್, ನೀರು ಮತ್ತು ಮೊಬೈಲ್ ಫೋನ್ ಸೇವೆಗಳನ್ನು ತಾತ್ಕಾಲಿಕವಾಗಿ ಮರುಸ್ಥಾಪಿಸಲಾಗಿದೆ. ಉಳಿದ ಪ್ರದೇಶಗಳಲ್ಲಿ ಅಗತ್ಯ ಸೇವೆಗಳನ್ನು ಶೀಘ್ರವಾಗಿ ಪುನಃಸ್ಥಾಪಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ತಿಳಿಸಿದ್ದಾರೆ.

suddiyaana