ಗೇಟ್ ನಂ.20.. ಅವಸರ.. ಅನಾಹುತ.. ಫ್ಯಾನ್ಸ್ ಚಪ್ಪಲಿ ತೂರಿದ್ದೇ ಮುಳುವಾಯ್ತಾ? – RCB ಫ್ರಾಂಚೈಸಿಗೆ ಪ್ರಾಣಗಳು ಲೆಕ್ಕಕ್ಕಿಲ್ವಾ?

ಬಹುಶಃ ಆರ್ಸಿಬಿ ಅಭಿಮಾನಿಗಳಿಗೆ ಈ ಸಲ ಕಪ್ ಗೆಲ್ದೇ ಇದ್ರೂ ಇಷ್ಟು ಸಂಕಟ ಆಗ್ತಾ ಇರ್ಲಿಲ್ಲ. 17ರಲ್ಲಿ ಇನ್ನೊಂದು ಅಂತಾ ಹೇಗೋ ಅರಗಿಸಿಕೊಳ್ತಿದ್ರು. ಆದ್ರೆ ಈ ಸಾವು, ನೋವುಗಳು ನಿಜಕ್ಕೂ ಕೋಟಿ ಕೋಟಿ ಹೃದಯಗಳನ್ನ ಛಿದ್ರ ಮಾಡಿವೆ. ಒಂದೊಂದು ಮನೆಯ ಸಾವಿನ ಕಥೆಯೂ ಕರುಣಾಜನಕವಾಗಿದೆ. ಬಾಳಿ ಬದುಕಬೇಕಿದ್ದ ಜೀವಗಳೇ ಬೀದಿಯಲ್ಲಿ ನರಳಿ ನರಳಿ ಪ್ರಾಣ ಬಿಟ್ಟಿದ್ದಾರೆ. ಅಷ್ಟಕ್ಕೂ ಇಂಥಾದ್ದೊಂದು ಘನಘೋರಕ್ಕೆ ಗೇಟ್ ನಂಬರ್ 20ರಲ್ಲಿ ನಡೆದಿದ್ದ ಅದೊಂದು ಘಟನೆಯೇ ಕಾರಣವಾಯ್ತಾ ಅನ್ನೋ ಪ್ರಶ್ನೆ ಮೂಡಿದೆ. ಹಾಗೇ ಆರ್ಸಿಬಿ ಫ್ರಾಂಚೈಸಿಗೆ ಅಭಿಮಾನಿಗಳ ಪ್ರಾಣವೇ ಲೆಕ್ಕವಿಲ್ಲದಂತಾಯ್ತಾ? ತಪ್ಪು ನಮ್ದಲ್ಲ ಅಂತಿರೋರ ಮಧ್ಯೆ ಹೊಣೆ ಯಾರು? ಈ ಬಗ್ಗೆ ಮಾಹಿತಿ ಇಲ್ಲಿದೆ.
ಜೂನ್ 3ರ ರಾತ್ರಿ.. 18 ವರ್ಷಗಳ ಮಹಾತಪಸ್ಸು ಈಡೇರಿದ ಗಳಿಗೆ. ಜಗದಗಲ ಇರೋ ಆರ್ಸಿಬಿ ಅನ್ನೋ ಕಟ್ಟಾಭಿಮಾನಿಗಳ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ರಾಯಲ್ ಪಡೆಗೆ ಲಾಯಲ್ ಆಗಿರುವಂಥ ಅಭಿಮಾನಿಗಳು ಟ್ರೋಫಿಯನ್ನ ಕಣ್ತುಂಬಿಕೊಳ್ಳೋಕೆ ಕಾಯ್ತಿದ್ರು. ಆದ್ರೆ ಜೂನ್ 4ರ ಸಂಜೆ ನಾಲ್ಕು ಗಂಟೆಯಷ್ಟ್ರಲ್ಲೇ ಮಾರಣಹೋಮ ನಡೆದಿದೆ. ಕಪ್ ಗೆದ್ದ ಖುಷಿ ಕನಿಷ್ಠ 18 ಗಂಟೆಗಳೂ ಉಳೀಲಿಲ್ಲ. 11 ಅಭಿಮಾನಿಗಳು ಕಾಲ್ತುಳಿತಕ್ಕೆ ಸಿಲುಕಿ ಜೀವವನ್ನೇ ಬಿಟ್ಟಿದ್ದಾರೆ. ಅಭಿಮಾನಿಗಳ ಈ ದುರಂತಕ್ಕೆ ಗೇಟ್ ನಂಬರ್ 20ರಲ್ಲಿ ನಡೆದ ಘಟನೆಯೇ ಕಾರಣವಾಯ್ತಾ ಅನ್ನೋ ಚರ್ಚೆ ನಡೀತಿದೆ.
ಗೇಟ್ ನಂ.20 ಮಾತ್ರ ಓಪನ್.. ರೊಚ್ಚಿಗೆದ್ದ ಫ್ಯಾನ್ಸ್!
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ದುರಂತಕ್ಕೆ ಮೂಲ ಕಾರಣವೇ ಗೇಟ್ ನಂ. 20ರಲ್ಲಿ ನಡೆದ ಅವಸರ. ನಿನ್ನೆ ಮಧ್ಯಾಹ್ನ 4 ಗಂಟೆ ನಂತ್ರ ಅಭಿಮಾನಿಗಳನ್ನ ಸ್ಟೇಡಿಯಂ ಒಳಗೆ ಬಿಡಲು ನಿರ್ಧಾರ ಮಾಡಿದ್ರು. ಆದ್ರೆ ನಿಗದಿತ ಸಮಯಕ್ಕಿಂತ 10 ನಿಮಿಷ ಮೊದಲೇ ಈ ಗೇಟ್ ಓಪನ್ ಮಾಡ್ಲಾಗಿತ್ತು. ಒಂದ್ಕಡೆ ಫ್ಯಾನ್ಸ್ ನುಗ್ತಾ ಇದ್ರೆ ಬೇರೆ ಬೇರೆ ಗೇಟ್ಗಳಲ್ಲಿದ್ದ ಫ್ಯಾನ್ಸ್ ತಾಳ್ಮೆ ಕಳ್ಕೊಂಡಿದ್ರು. ಗೇಟ್ಗಳನ್ನ ತೆರೆಯುವಂತೆ ಪೊಲೀಸರು ಹಾಗೇ ಕೆಎಸ್ಸಿಎ ಭದ್ರತಾ ಸಿಬ್ಬಂದಿ ಮೇಲೆ ಚಪ್ಪಲಿಗಳನ್ನ ತೂರಿದ್ದಾರೆ. ಆಕ್ರೋಶ ಜಾಸ್ತಿಯಾಗ್ತಿದ್ದಂರೆ ಸಿಬ್ಬಂದಿ ಇದ್ದಕ್ಕಿದ್ದಂತೆ ಗೇಟ್ ಓಪನ್ ಮಾಡಿದ್ದಾರೆ. ಅಷ್ಟೇ ಆಗಿದ್ದು. ಜನ ಒಮ್ಮೆಲೇ ನುಗ್ಗಿದ್ದಾರೆ. ನೂಕಾಟ ತಳ್ಳಾಟ ಆಗಿ ಕೆಲವರು ಕೆಳಗೆ ಬಿದ್ದಿದ್ದಾರೆ. ಬಿದ್ದವರ ಮೇಲೆಯೇ ಕೆಲವರು ಕಾಲಿಟ್ಟುಕೊಂಡು ಹೋಗಿದ್ದಾರೆ. ಪರಿಣಾಮ ಕಾಲಡಿ ಸಿಲುಕಿದವರು ಅಸ್ವಸ್ಥರಾಗಿ ಪ್ರಾಣವನ್ನೇ ಕಳ್ಕೊಂಡಿದ್ದಾರೆ. ಈಗ್ಲೂ ಕೂಡ 30ಕ್ಕೂ ಹೆಚ್ಚು ಗಾಯಾಳುಗಳು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೀತಿದ್ದಾರೆ. ಹಲವರು ಕೈ, ಕಾಲುಗಳ ಮೂಳೆ ಮುರಿದೆ. ಇಬ್ಬರ ಸ್ಥಿತಿ ಗಂಭೀರವಾಗಿದೆ.
ಸಾವಿನ ಸೂತಕದಲ್ಲೂ ಕಾರ್ಯಕ್ರಮ.. ಪೋಸ್ಟ್ ಹಾಕಲೂ ವಿಳಂಭ!
ನಿನ್ನೆಯ ಅಷ್ಟೂ ಇನ್ಸಿಡೆಂಟ್ಗೆ ಕಾರಣ ಆರ್ಸಿಬಿ ಟೀಮ್ ಮೇಲೆ ಫ್ಯಾನ್ಸ್ ಇಟ್ಟಿರೋ ಅತಿಯಾದ ಅಭಿಮಾನ. ಕಪ್ ಗೆದ್ದು ಬಂದಿರೋ ಆಟಗಾರರ ವಿಜಯೋತ್ಸವದಲ್ಲಿ ನಾವೂ ಭಾಗಿಯಾಗ್ಬೇಕು ಅಂತಾ ಲಕ್ಷಗಟ್ಟಲೆ ಬಂದಿದ್ರು. ಆದ್ರೆ ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಪ್ರಾಣವನ್ನೇ ಬಿಟ್ಟಿದ್ದಾರೆ. ಇಷ್ಟಾದ್ರೂ ಆರ್ಸಿಬಿ ಫ್ರಾಂಚೈಸಿಯ ನಡೆ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಒಂದೆಡೆ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಅಭಿಮಾನಿಗಳು ಸಾವು ನೋವುಗಳಿಂದ ನರಳುತ್ತಿದ್ದರೂ, ಇನ್ನೊಂದೆಡೆ ಕ್ರೀಡಾಂಗಣದೊಳಗೆ ಆರ್ಸಿಬಿ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಹೋಗ್ಲಿ ಒಂದು ಮೌನಾಚರಣೆಯನ್ನೂ ಮಾಡಿಲ್ಲ. ಈ ಸೂತಕದ ನಡುವೆ ಸಂಭ್ರಮ ಬೇಕಿತ್ತಾ ಅಂತಾ ಪ್ರಶ್ನೆ ಮಾಡ್ತಿದ್ದಾರೆ. ಹಾಗೇ ಲಾಯಲ್ ಫ್ಯಾನ್ಸ್, ಟ್ವೆಲ್ತ್ ಮ್ಯಾನ್ ಆರ್ಮಿ ಅಂತಾ ಹೇಳಿಕೊಳ್ಳೋ ಫ್ರಾಂಚೈಸಿ ದುರಂತ ನಡೆದು ನಾಲ್ಕೈದು ಗಂಟೆಗಳೇ ಕಳೆದ್ರೂ ಒಂದೇ ಒಂದು ಪೋಸ್ಟ್ ಹಾಕಿರಲಿಲ್ಲ. ಇದೂ ಕೂಡ ಆಕ್ರೋಶಕ್ಕೆ ಕಾರಣವಾಗಿದೆ.
ಮೃತರ ಕುಟುಂಬಗಳಿಗೆ 10 ಲಕ್ಷ ಪರಿಹಾರ ಘೋಷಣೆ!
ಇನ್ನು ದುರಂತದಲ್ಲಿ ಮೃತಪಟ್ಟ ಕುಟುಂಗಳಿಗೆ ಸರ್ಕಾರದಿಂದ ತಲಾ 10 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡ್ಲಾಗಿತ್ತು. ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಹಾಗೇ ಕೆಎಸ್ಸಿಎ ಜಂಟಿಯಾಗಿ ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂಪಾಯಿ ಘೋಷಣೆ ಮಾಡಿವೆ. ಆಕ್ಚುಲಿ ಇಲ್ಲಿ ಪರಿಹಾರ ಎಷ್ಟು ಕೊಟ್ರು ಅನ್ನೋದು ಮ್ಯಾಟ್ರೇ ಆಗಲ್ಲ. ಯಾಕಂದ್ರೆ ಅಲ್ಲಿ ಜೀವ ಬಿಟ್ಟಿರೋ ಕುಟುಂಬಗಳಿಗೆ ಹಣದ ಅವಶ್ಯಕತೆ ಏನಿರಲಿಲ್ಲ. ಆದ್ರೆ ಜೀವಕ್ಕೆ ಜೀವದಂತಾಗಿದ್ದವ್ರನ್ನೇ ಕಳ್ಕೊಂಡಿದ್ದಾರೆ. ಕೋಟಿ ಕೊಟ್ರೂ ಕೂಡ ಆ ನೋವನ್ನ ಮರೆಸೋಕೆ ಯಾರಿಂದಲೂ ಕೂಡ ಸಾಧ್ಯವಿಲ್ಲ.
ಸದ್ಯ ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತ ಬಿದ್ದಿರೋ ರಾಶಿ ರಾಶಿ ಚಪ್ಪಲಿಗಳು ಇಡೀ ದುರಂತದ ಭೀಕರತೆಗೆ ಸಾಕ್ಷಿಯಾಗಿವೆ. ಮೃತಪಟ್ಟ 11 ಮಂದಿಯ ಮನೆಗಳಲ್ಲಿ ಕಣ್ಣೀರೇ ತುಂಬಿದೆ. ಆರ್ಸಿಬಿ ಕಪ್ ಗೆಲ್ತು ಅನ್ನೋ ಸಂಭ್ರಮವನ್ನ ಸೂತಕದ ಛಾಯೆ ಮುಚ್ಚಿ ಹಾಕಿದೆ. ಇಡೀ ದೇಶ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಕೂಡ ಈ ಘಟನೆಗೆ ಆಘಾತ ವ್ಯಕ್ತಪಡಿಸುತ್ತಿದ್ದಾರೆ. ಒಟ್ನಲ್ಲಿ ಇಲ್ಲಿ ಎಲ್ಲರದ್ದೂ ತಪ್ಪಿದೆ. ತರಾತುರಿಯಲ್ಲಿ ಇವೆಂಟ್ ಆಯೋಜಿಸಿದ ಸರ್ಕಾರ, ಫ್ರೀಪಾಸ್ ಅಂತೇಳಿ ಸುಮ್ಮನಾದ ಕೆಎಸ್ಸಿಎ ಸ್ಟಾಫ್ಸ್, ಜನಸಾಗರ ಕಂಡು ಅಸಹಾಯಕರಾದ ಪೊಲೀಸ್, ಆರ್ಸಿಬಿ ಮೇಲಿನ ಜನರ ಅಂಧಾಭಿನಾನ.. ಎಲ್ಲವೂ ಸೇರಿಯೇ 11 ಜನರನ್ನ ಕೊಂದಿದೆ.