ಕ್ಯಾಲ್ಸಿಯಂ ಕಾರ್ಬೈಡ್ ಗನ್ ಬಳಕೆಯಿಂದ ಹೋಯ್ತು 14 ಮಕ್ಕಳ ಕಣ್ಣು!

ಕ್ಯಾಲ್ಸಿಯಂ ಕಾರ್ಬೈಡ್ ಗನ್ ಬಳಕೆಯಿಂದ ಹೋಯ್ತು 14 ಮಕ್ಕಳ ಕಣ್ಣು!

ಮಧ್ಯಪ್ರದೇಶದಲ್ಲಿ ಕ್ಯಾಲ್ಸಿಯಂ ಕಾರ್ಬೈಡ್ ಗನ್‌ನಿಂದಾಗಿ 122ಕ್ಕೂ ಹೆಚ್ಚು ಮಕ್ಕಳಿಗೆ ಕಣ್ಣಿಗೆ ಗಂಭೀರ ಗಾಯವಾಗಿದ್ದು, ಅವರಲ್ಲಿ 14 ಮಕ್ಕಳು ಶಾಶ್ವತವಾಗಿ ತಮ್ಮ ದೃಷ್ಟಿಯನ್ನೇ ಕಳೆದುಕೊಂಡಿದ್ದಾರೆ ಎಂಬ ಮಾಹಿತಿ ಹೊರ ಬಿದ್ದಿದೆ.

ಇದನ್ನೂ ಓದಿ: ರಕ್ಷಿತಾ ಶೆಟ್ಟಿ S ಕೆಟಗೆರಿ ಎಂದ ಅಶ್ವಿನಿ ಗೌಡಗೆ ಕಾನೂನು ಸಂಕಷ್ಟ! – ನಟಿ ವಿರುದ್ದ ದಾಖಲಾಯ್ತು ಕೇಸ್!

ದೀಪಾವಳಿ ಹಬ್ಬದ ಸಮಯದಲ್ಲಿ ಕ್ಯಾಲ್ಸಿಯಂ ಕಾರ್ಬೈಡ್ ಗನ್ ಬಳಕೆ ವೈರಲ್‌ ಆಗಿತ್ತು. ಸದ್ಯ ಅದನ್ನು ಬಳಕೆ ಮಾಡುತ್ತಿದ್ದ ಮಧ್ಯ ಪ್ರದೇಶ ರಾಜಧಾನಿ ಭೋಪಾಲ್‌ನಲ್ಲಿನ ಮಕ್ಕಳು ಕಣ್ಣು ಕಳೆದುಕೊಂಡಿದ್ದಾರೆ. ಇನ್ನು ಕೆಲವರಿಗೆ ಗಂಭೀರಗಾಯವಾಗಿದೆ. 8 ರಿಂದ 14 ವರ್ಷ ವಯಸ್ಸಿನ ಮಕ್ಕಳು ಇನ್ನು ಭೂಪಾಲ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಹಲವಾರು ಮಂದಿಗೆ ಈಗಾಗಲೇ ಆಸ್ಪತ್ರೆ ಸಿಬ್ಬಂದಿ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಆದರೆ, ಮಕ್ಕಳಿಗಾಗಿರುವ ಈ ದೊಡ್ಡ ಅನಾಹುತದ ಬಗ್ಗೆ ಆಸ್ಪತ್ರೆ ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ.

ಏನಿದು ‘ಪ್ಲಾಸ್ಟಿಕ್ ಪೈಪ್ ಗನ್’?

ಈ ವಿಶೇಷ ಗನ್‌ಗಳನ್ನು ಯಾವುದೇ ವೈಜ್ಞಾನಿಕ ಆಧಾರವಿಲ್ಲದೆ ಪ್ಲಾಸ್ಟಿಕ್ ಪೈಪ್, ಗ್ಯಾಸ್ ಲೈಟರ್ ಮತ್ತು ಕ್ಯಾಲ್ಸಿಯಂ ಕಾರ್ಬೈಡ್ ಬಳಸಿ ಕಚ್ಚಾ ಆಗಿ ತಯಾರಿಸಲಾಗುತ್ತದೆ. ಪೈಪ್‌ನೊಳಗೆ ಕ್ಯಾಲ್ಸಿಯಂ ಕಾರ್ಬೈಡ್ ಹಾಕಿ, ಅದಕ್ಕೆ ನೀರು ಸೇರಿಸಿದಾಗ, ಅದು ಅಸಿಟಲೀನ್ ಎಂಬ ಸ್ಫೋಟಕ ಅನಿಲವನ್ನು ಉತ್ಪಾದಿಸುತ್ತದೆ. ಲೈಟರ್ ಮೂಲಕ ಇದಕ್ಕೆ ಬೆಂಕಿ ಹಚ್ಚಿದಾಗ, ಅದು ದೊಡ್ಡ ಶಬ್ದದೊಂದಿಗೆ ಸ್ಫೋಟಗೊಳ್ಳುತ್ತದೆ. ಈ ಸ್ಫೋಟದ ರಭಸಕ್ಕೆ ಪ್ಲಾಸ್ಟಿಕ್ ಪೈಪ್ ಚೂರುಗಳಾಗಿ ಸಿಡಿದು, ಗುಂಡಿನ ಚೂರು ಗಳಂತೆ ಅತಿ ವೇಗವಾಗಿ ಚಲಿಸುತ್ತವೆ. ಇದು ಮಕ್ಕಳ ಕಣ್ಣು, ಮುಖ ಮತ್ತು ಚರ್ಮಕ್ಕೆ ತೀವ್ರ ಗಾಯಗಳನ್ನುಂಟುಮಾಡುತ್ತದೆ ಎಂದು ಕಣ್ಣಿನ ತಜ್ಞರು ಎಚ್ಚರಿಸಿದ್ದಾರೆ.

ಇಷ್ಟೊಂದು ಅಪಾಯಕಾರಿಯಾದ ಗನ್‌ಗಳು ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಗಾಯಗೊಂಡ ಮಕ್ಕಳ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನಮ್ಮ ಮಕ್ಕಳ ಈ ಸ್ಥಿತಿಗೆ ಅಧಿಕಾರಿಗಳ ಸಂಪೂರ್ಣ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ದೂರುತ್ತಿದ್ದಾರೆ.

ಗನ್‌ ಮಾರಾಟ ನಿಷೇಧವಿದ್ದರೂ ಮಾರಾಟ

ಅಕ್ಟೋಬರ್ 18ರಂದೇ ಮುಖ್ಯಮಂತ್ರಿ ಮೋಹನ್ ಯಾದವ್ ಅವರು, ರಾಜ್ಯದಾದ್ಯಂತ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳಿಗೆ ಇಂತಹ ಸಾಧನಗಳ ಮಾರಾಟವನ್ನು ಕಟ್ಟುನಿಟ್ಟಾಗಿ ತಡೆಯುವಂತೆ ಸ್ಪಷ್ಟ ಸೂಚನೆ ನೀಡಿದ್ದರು. ಆದಾಗ್ಯೂ, ಈ ನಿರ್ದೇಶನವನ್ನು ಗಾಳಿಗೆ ತೂರಿ, ದೀಪಾವಳಿ ಸಮಯದಲ್ಲಿ ಸ್ಥಳೀಯ ಮಾರುಕಟ್ಟೆಗಳಲ್ಲಿ ಈ ಕಾರ್ಬೈಡ್ ಗನ್‌ಗಳು ಮಾರಾಟವಾಗಿವೆ.

Kishor KV