ಶವ ಇಟ್ಟ ಶಾಲೆಗೆ ಹೋಗಲು ವಿದ್ಯಾರ್ಥಿಗಳ ಹಿಂದೇಟು – ಮಕ್ಕಳನ್ನು ಕಾಡುತ್ತಿದೆ ‘ಆತ್ಮಗಳ ಭಯ’?

ಶವ ಇಟ್ಟ ಶಾಲೆಗೆ ಹೋಗಲು ವಿದ್ಯಾರ್ಥಿಗಳ ಹಿಂದೇಟು – ಮಕ್ಕಳನ್ನು ಕಾಡುತ್ತಿದೆ ‘ಆತ್ಮಗಳ ಭಯ’?

ಜೂನ್‌ 2ರಂದು ನಡೆದ ಬಾಲಸೋರ್ ತ್ರಿವಳಿ ರೈಲು ದುರಂತ ನೂರಾರು ನೋವಿನ ಕಥೆಗಳನ್ನು ಹೇಳುತ್ತಿದೆ. ದುರಂತದಲ್ಲಿ ಮಡಿದವರ ಕುಟುಂಬಗಳಲ್ಲಿ ಕಣ್ಣೀರ ಕೋಡಿ ಹರಿಯುತ್ತಿದೆ. ಇದರ ಮಧ್ಯೆ,  ತ್ರಿವಳಿ ರೈಲು ದುರಂತದಲ್ಲಿ ಮಡಿದವರ ಶವಗಳನ್ನು ಇಟ್ಟಿದ್ದ ಶಾಲೆಗೆ ಈಗ ಮಕ್ಕಳು ಬರಲು ಹಿಂದೇಟು ಹಾಕುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.

ಇದನ್ನೂ ಓದಿ:  ಯಾರದ್ದೋ ಶವ ತೋರಿಸಿ ತನ್ನ ಪತಿ ಎಂದಳು – ಒಡಿಶಾ ರೈಲು ದುರಂತದ ₹17 ಲಕ್ಷ ಪರಿಹಾರಕ್ಕಾಗಿ ಮಹಿಳೆ ಕಳ್ಳಾಟ!

ಒಡಿಶಾದ ಬಾಲಸೋರ್ ಜಿಲ್ಲೆಯ ಬಹಾನಾಗ್ ಬಳಿ ತ್ರಿವಳಿ ರೈಲುಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ 288 ಜನರು ದಾರುಣವಾಗಿ ಸಾವನ್ನಪ್ಪಿದ್ದರು.  ಅಪಘಾತದ ನಂತರ ರಕ್ಷಣಾ ಕಾರ್ಯಾಚರಣೆಗೆ ಸಹಾಯವಾಗಲೆಂದು ಮೃತಪಟ್ಟವರ ಶವಗಳನ್ನು ಘಟನೆ ನಡೆದ ಸ್ಥಳದಿಂದ ಕೇವಲ 500 ಮೀಟರ್ ದೂರದಲ್ಲಿರುವ ಶಾಲೆಯ ಕೊಠಡಿಗಳಲ್ಲಿ ಇಡುವುದಕ್ಕೆ ವ್ಯವಸ್ಥೆ ಮಾಡಲಾಗಿತ್ತು. ನಂತರ ಅಲ್ಲಿಂದ ಶವಗಳನ್ನು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಕಳುಹಿಸಲಾಗಿತ್ತು. ಕೆಲ ದಿನಗಳ ಕಾಲ ಶವಾಗಾರವಾಗಿ ಬದಲಾಗಿದ್ದ ಈ ಶಾಲೆಗೆ ಈಗ ಮಕ್ಕಳು ಬರಲು ಹಿಂದೇಟು ಹಾಕುತ್ತಿದ್ದಾರೆ. ಮನುಷ್ಯ ನಂತರ ಆತ್ಮಗಳು ಮೋಕ್ಷವನ್ನು ಪಡೆಯುತ್ತವೆ. ಅಪಘಾತದಂತಹ ಅಪಮೃತ್ಯುವಿನಿಂದ ಮೃತರಾದವರ ಆತ್ಮಗಳು ಆತ್ಮಕ್ಕೆ ಶಾಂತಿ ಸಿಗದೇ ಅಲೆದಾಡುತ್ತಿರುತ್ತವೆ ಎಂಬ ನಂಬಿಕೆ ಹಲವರಲ್ಲಿದೆ. ಸತ್ತ ನಂತರ ಆತ್ಮಗಳು ಕಾಡುತ್ತವೆ ಎಂಬ ಮೂಢನಂಬಿಕೆಯ ಭಯವೇ ಮಕ್ಕಳು ಶಾಲೆಗೆ ಬರಲು ಹಿಂದೇಟು ಹಾಕುತ್ತಿರುವುದಕ್ಕೆ ಕಾರಣ ಎನ್ನಲಾಗುತ್ತಿದೆ.

ಬಹಾನಗಾದ ಈ ಸರ್ಕಾರಿ ನೋಡಲ್ ಪ್ರೌಢ ಶಾಲೆಗೆ ಬಾಲಸೋರ್ ಜಿಲ್ಲಾಧಿಕಾರಿ ದತ್ತಾತ್ರೇಯ ಬಾಬುಸಾಹೇಬ್ ಶಿಂಧೆ ಅವರು ಭೇಟಿ ನೀಡಿದ್ದು, ಈ ರೀತಿ ಮೂಢನಂಬಿಕೆಯನ್ನು ಹಬ್ಬಿಸದಂತೆ ಜನರಲ್ಲಿ ಮನವಿ ಮಾಡಿದ್ದಾರೆ.  ಈ ಬಗ್ಗೆ ಪೋಷಕರ ಹಾಗೂ ಮಕ್ಕಳ ಜೊತೆ ಚರ್ಚಿಸಿ ಅವರಿಗೆ  ಸಮಾಲೋಚನೆ ಮಾಡಲಾಗುವುದು ಎಂದು ಕೂಡ ಅವರು ಹೇಳಿದ್ದಾರೆ.  ಎಳೆಯ ಮಕ್ಕಳ ಮನಸ್ಸಿನಲ್ಲಿ ಮೂಢನಂಬಿಕೆಯನ್ನು ಬಿತ್ತುವ ಬದಲು ಅವರಿಗೆ ವೈಜ್ಞಾನಿಕ ವಿಚಾರಗಳ ಮೂಲಕ ಅರಿವು ಮೂಡಿಸಿ ಎಂದು ಅವರು ಮನವಿ ಮಾಡಿದ್ದಾರೆ. ಬಹಾನಾಗದ ಈ ಸರ್ಕಾರಿ ನೋಡಲ್ ಪ್ರೌಢ ಶಾಲೆ ರೈಲು ದುರಂತ ನಡೆದ ಸ್ಥಳದಿಂದ ಕೇವಲ 500 ಮೀಟರ್ ದೂರದಲ್ಲಿದ್ದು, ತುರ್ತು ರಕ್ಷಣಾ ಕಾರ್ಯದ ಸಲುವಾಗಿ ಶಾಲೆಯನ್ನು ತಾತ್ಕಾಲಿಕ ಶವಾಗಾರ ಮಾಡಲಾಗಿತ್ತು. ಈ ಶಾಲೆಯ ತರಗತಿಯ ಕೊಠಡಿಗಳು ಹಾಗೂ ಹಾಲ್‌ನಲ್ಲಿ ಶವಗಳನ್ನು ಇರಿಸಲಾಗಿತ್ತು. ನಂತರ ಇಲ್ಲಿಂದ ಎಲ್ಲಾ ಶವಗಳನ್ನು ಜಿಲ್ಲಾಸ್ಪತ್ರೆಗೆ ಶವಾಗಾರಕ್ಕೆ ಸಾಗಿಸಲಾಗಿತ್ತು. ಜೊತೆಗೆ ಈ ಶವ ಇಟ್ಟ ಕ್ಲಾಸ್ ರೂಮ್‌ಗಳನ್ನು ಸ್ಯಾನಿಟೈಸರ್‌ ಬಳಸಿ ಸ್ವಚ್ಛ ಮಾಡಲಾಗಿತ್ತು. ಆದರೆ ಶಿಕ್ಷಕರು ಹಾಗೂ ಮಕ್ಕಳು ಈ ಶಾಲೆಗೆ ಬರಲು ಮನಸ್ಸು ಮಾಡುತ್ತಿಲ್ಲ ಎಂದು ಶಾಲಾಡಳಿತ ಮಂಡಳಿ ಜಿಲ್ಲಾಡಳಿತಕ್ಕೆ ತಿಳಿಸಿದೆ.

suddiyaana