ಕೇರಳದಿಂದ ಟ್ರೆಕ್ಕಿಂಗ್ಗೆ ಬಂದಿದ್ದ ಬಾಲಕಿ ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ನಾಪತ್ತೆ!

ಕೊಡಗಿನಲ್ಲಿ ಚಾರಣಕ್ಕೆಂದು ತೆರಳಿದ್ದ ಶರಣ್ಯ ನಾಪತ್ತೆಯಾಗಿ ವಾಪಸಾದ ಬೆನ್ನಲ್ಲೇ ಅದೇ ರೀತಿಯ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಇದೀಗ ಕೇರಳದಿಂದ ಚಿಕ್ಕಮಗಳೂರು ಪ್ರವಾಸಕ್ಕೆಂದು ಬಂದಿದ್ದ ಬಾಲಕಿಯೊಬ್ಬಳು ನಾಪತ್ತೆಯಾಗಿದ್ದಾಳೆ. ಇದೀಗ ಆಕೆಗಾಗಿ ಹುಡುಕಾಟ ನಡೆಸಲಾಗುತ್ತಿದೆ.
ಇದನ್ನೂ ಓದಿ: ವಾಹನ ಸವಾರರಿಗೆ ಮಹತ್ವದ ಸುದ್ದಿ – ಏ. 10 ರಿಂದ ಟೋಲ್ ಪ್ಲಾಜಾಗಳಲ್ಲಿ ನಗದು ಪಾವತಿ ಇಲ್ಲ!
ಕೇರಳದಿಂದ ಚಿಕ್ಕಮಗಳೂರು ಪ್ರವಾಸಕ್ಕೆ ಬಂದಿದ್ದ 40 ಜನರ ತಂಡದಲ್ಲಿದ್ದ ವಿದ್ಯಾರ್ಥಿನಿಯೊಬ್ಬಳು ನಾಪತ್ತೆಯಾಗಿದ್ದಾಳೆ. ಶ್ರೀನಂದನ (16) ನಾಪತ್ತೆಯಾಗಿರುವ 10ನೇ ತರಗತಿ ವಿದ್ಯಾರ್ಥಿನಿ.
ಕೇರಳದಿಂದ ಬಂದಿದ್ದ 40 ಜನರ ತಂಡ ಮಂಗಳವಾರ ಸಂಜೆ 6:30ರ ಸುಮಾರಿಗೆ ಚಂದ್ರದ್ರೋಣ ಸಾಲಿನಲ್ಲಿ ಪ್ರಕೃತಿ ಸೌಂದರ್ಯ ವೀಕ್ಷಣೆಗೆ ತೆರಳಿದ್ದರು. ಈ ವೇಳೆ ಕತ್ತಲಾಗಿದ್ದರಿಂದ ಶ್ರೀನಂದನ ನಾಪತ್ತೆಯಾಗಿದ್ದಾಳೆ. ಜೊತೆಗಿದ್ದವರು ಹುಡುಕಾಡಿದರೂ ಪತ್ತೆಯಾಗಿಲ್ಲ. ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ಅರಣ್ಯ ಇಲಾಖೆ ಹಾಗೂ ಅಗ್ನಿಶಾಮಕದ 30ಕ್ಕೂ ಹೆಚ್ಚು ಸಿಬ್ಬಂದಿ ಟಾರ್ಚ್ ಹಾಕಿಕೊಂಡು ಮಧ್ಯರಾತ್ರಿವರೆಗೂ ಹುಡುಕಾಡಿದರೂ ಬಾಲಕಿಯ ಸುಳಿವು ಸಿಗಲಿಲ್ಲ. ಬೆಟ್ಟಗುಡ್ಡಗಳ ಕಾಡಿನ ಪ್ರದೇಶ, ಮಂಜು ಹಾಗೂ ಭಾರೀ ಕತ್ತಲು ಕವಿದಿದ್ದರಿಂದ ಕಾರ್ಯಾಚರಣೆ ಸ್ಥಗಿತಗೊಳಿಸಿ ಎಲ್ಲರೂ ವಾಪಸ್ಸಾಗಿದ್ದರು. ಸ್ಥಳಕ್ಕೆ ಮಧ್ಯರಾತ್ರಿಯೇ ಎಎಸ್ಪಿ ಜಯಕುಮಾರ್ ಕೂಡ ಭೇಟಿ ನೀಡಿದ್ದರು.
ಇಂದು ಬೆಳಗ್ಗೆ ಮತ್ತೆ 50ಕ್ಕೂ ಹೆಚ್ಚು ಸಿಬ್ಬಂದಿ ಶೋಧ ಕಾರ್ಯ ಮುಂದುವರಿಸಿದ್ದಾರೆ. ಅರಣ್ಯ ಇಲಾಖೆ ಡ್ರೋನ್ ಮೂಲಕ ಬಾಲಕಿಯ ಪತ್ತೆಗೆ ಮುಂದಾಗಿದ್ದಾರೆ. ಬಾಲಕಿ ನಾಪತ್ತೆಯಾದ ಸ್ಥಳದಿಂದ ಹೋಗಿರಬಹುದಾದ ಮಾರ್ಗದ ಅಂದಾಜಿನಲ್ಲಿ ಜಿಲ್ಲಾಡಳಿತದ ವಿವಿಧ ಇಲಾಖೆಯ ಅಧಿಕಾರಿಗಳು ತಂಡಗಳಾಗಿ ಬಾಲಕಿ ಶೋಧ ಕಾರ್ಯಕ್ಕೆ ಮುಂದಾಗಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ನೋಡಿರಿ

