ಉಡುಪಿಯಲ್ಲಿ ನಾಲ್ವರ ಭೀಕರ ಹತ್ಯೆ ಪ್ರಕರಣ – ಚಾರ್ಜ್ ಶೀಟ್ ನಲ್ಲಿ ಬಯಲಾಯ್ತು ಭಯಾನಕ ಸತ್ಯ

ಉಡುಪಿಯಲ್ಲಿ ನಾಲ್ವರ ಭೀಕರ ಹತ್ಯೆ ಪ್ರಕರಣ – ಚಾರ್ಜ್ ಶೀಟ್ ನಲ್ಲಿ ಬಯಲಾಯ್ತು ಭಯಾನಕ ಸತ್ಯ

ಉಡುಪಿಯಲ್ಲಿ ನಡೆದ ಒಂದೇ ಮನೆಯ ನಾಲ್ವರ ಕೊಲೆ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಉಡುಪಿಯಲ್ಲಿ ನಡೆದ ನಾಲ್ವರ ಬರ್ಬರ ಹತ್ಯೆ ಪ್ರಕರಣ ಇದೀಗ ನಿರ್ಣಾಯಕ ಹಂತಕ್ಕೆ ತಲುಪಿದೆ. ಘಟನೆ ನಡೆದು 90 ದಿನಗಳು ಪೂರ್ಣಗೊಂಡು ಚಾರ್ಜ್ ಶೀಟ್ ನ್ನು ಉಡುಪಿ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಸಹೋದ್ಯೋಗಿಯ ಮೇಲಿನ ಅತಿ ವ್ಯಾಮೋಹವೇ ನಾಲ್ಕು ಕೊಲೆಗೆ ಕಾರಣ – ಮನೆಯಲ್ಲಿ ಹೆಂಡತಿಯಿದ್ದರೂ ಬೇರೆ ಹೆಣ್ಣಿನ ಮೇಲೆ ಕಟುಕನಿಗೆ ಮೋಹ..!

ಜೊತೆಯಲ್ಲಿ ಕೆಲಸ ಮಾಡುತ್ತಿದ್ದ ಅಯ್ನಾಜ್ ಮೇಲೆ ಇದ್ದ ಅತಿಯಾದ ಗೆಳೆತನ, ವ್ಯಾಮೋಹವೇ ನಾಲ್ಕು ಕೊಲೆಗಳಿಗೆ ಕಾರಣವಾಗಿದೆ ಎಂದು ಚಾರ್ಜ್ ಶೀಟ್ ಲ್ಲಿ ಬಯಲಾಗಿದೆ. ಉಡುಪಿಯ ನೇಜಾರು ಸಮೀಪದ ತೃಪ್ತಿ ಲೇ ಔಟ್ ನಲ್ಲಿ ದೀಪಾವಳಿಯ ದಿನವೇ ತಾಯಿ ಮತ್ತು ಮಕ್ಕಳ ಭೀಕರ ಹತ್ಯೆ ನಡೆದಿತ್ತು. ಆರೋಪಿ ಪ್ರವೀಣ್ ಚೌಗುಲೆ ಮತ್ತು ಅಯ್ನಾಜ್ ನಡುವೆ ಆತ್ಮೀಯ ಗೆಳೆತನವಿತ್ತಂತೆ. ಇಬ್ಬರ ಗೆಳೆತನದ ಬಗ್ಗೆ ಪ್ರವೀಣ್ ಪತ್ನಿಗೆ ಅನುಮಾನ ಕಾಡಿತ್ತು. ಈ ಅನುಮಾನದಿಂದಾಗಿ ಪ್ರವೀಣ್ ಚೌಗುಲೆ ದಂಪತಿ ಮಧ್ಯೆ ಜಗಳ ನಡೆಯುತ್ತಿತ್ತು. ವಿಚಾರ ತಿಳಿದ ಅಯ್ನಾಜ್ ಸಂಪರ್ಕ ಕಡಿದುಕೊಳ್ಳಲು ತೀರ್ಮಾನಿಸಿದ್ದಳು. ಇದೇ ವೇಳೆ ಮೃತ ಅಯ್ನಾಜ್ ಪ್ರಿಯಕರ ಕತಾರ್ ನಿಂದ ವಾಪಸ್ ಬಂದಿದ್ದ. 2023 ಅಕ್ಟೋಬರ್ ತಿಂಗಳ ಕೊನೆಯ ವಾರದಲ್ಲಿ ವಾಪಸ್ ಆಗಿದ್ದ ಪ್ರಿಯಕರನ ಜೊತೆ ಮದುವೆಯಾಗುವುದಾಗಿ ಪ್ರವೀಣನಿಗೆ ಅಯ್ನಾಜ್ ಹೇಳಿದ್ದಳು. ಅಯ್ನಾಜ್ ಮತ್ತು ಪ್ರಿಯಕರನ ಗೆಳೆತನದಿಂದ ಪ್ರವೀಣ್ ಚೌಗುಲೆ ವಿಪರೀತ ಸಿಟ್ಟಾಗಿದ್ದ. ನನಗೆ ಸಿಗದ ಅಯ್ನಾಜ್ ಯಾರಿಗೂ ಸಿಗಬಾರದು ಎಂದು ಕೊಲೆಗೈಯ್ಯಲು ನಿರ್ಧಾರ ಮಾಡಿದ. ಪೊಲೀಸರ ತನಿಖೆಯಲ್ಲಿ ಸರಣಿ ಹಂತಕ ಆರೋಪಿ ಪ್ರವೀಣ ಈ ಮಹತ್ವದ ಮಾಹಿತಿ ಬಹಿರಂಗಪಡಿಸಿದ್ದಾನೆ.

ಇನ್ನು ಇತ್ತ, ಅಯ್ನಾಜ್ ಜೊತೆ ಪ್ರವೀಣನಿಗೆ ಇದ್ದ ಸಂಬಂಧ ಸಹೋದರಿ ಅಫ್ನಾನ್ ಗೆ ಗೊತ್ತಿತ್ತು. ಹಾಗಾಗಿ ಅವರಿಬ್ಬರನ್ನೂ ಕೊಲೆ ಮಾಡಲು ಪ್ಲಾನ್ ಹಾಕಿಕೊಂಡು ಬಂದಿದ್ದ ಪ್ರವೀಣ್ ಚೌಗುಲೆ. ಆರೋಪಿ ಪ್ರವೀಣ್ ಚೌಗುಲೆ ಸ್ನ್ಯಾಪ್ ಚಾಟ್ ಮೂಲಕ ಅಯ್ನಾಜ್ ಮನೆಯ ವಿಳಾಸ ತಿಳಿದುಕೊಂಡು ಸೀದಾ ಆಕೆಯ ಮನಗೆ ಎಂಟ್ರಿ ಕೊಟ್ಟಿದ್ದ. ಮೊಬೈಲ್ flight modeಗೆ ಹಾಕಿ ತನ್ನ ಮನೆಯಲ್ಲಿಟ್ಟುಬಿಟ್ಟು, ಕೃತ್ಯ ಎಸಗಿ ವಾಪಸ್ ಮಂಗಳೂರಿಗೆ ಬಂದಿದ್ದ ಆರೋಪಿ. ನವೆಂಬರ್ 12 ರಂದು ಏಕಾಏಕಿ ಮನೆಗೆ ನುಗ್ಗಿದ್ದ ಆರೋಪಿ ಪ್ರವೀಣ್ ಚೌಗುಲೆ, ತಾಯಿ ಹಸೀನಾ ಮತ್ತು ಆಕೆಯ ಮೂವರು ಮಕ್ಕಳಾದ ಆಫ್ನಾನ್, ಐನಾಜ್ ಹಾಗೂ ಆಸೀಮ್ ರನ್ನು ಚೂರಿಯಿಂದ ಇರಿದು ಕೊಂದಿದ್ದ.

ಕೊಲೆಪಾತಕಿ ಪ್ರವೀಣ ಈ ಹಿಂದೆಯೂ ಮದುವೆಯಾಗಿದ್ದು ಮುಸ್ಲಿಂ ಯುವತಿಯನ್ನು. ಫ್ಯಾಮಿಲಿ ಫ್ರೆಂಡ್ ಮುಸ್ಲಿಂ ಯುವತಿಯ ಜೊತೆಯೇ ಪ್ರವೀಣ್ ಚೌಗುಲೆ ಮದುವೆಯಾಗಿದ್ದ. 2009ರಲ್ಲಿ ಕದ್ರಿ ದೇವಸ್ಥಾನದಲ್ಲಿ ರಿಯಾ ಎಂಬಾಕೆಯ ಕೈ ಹಿಡಿದಿದ್ದ ಪ್ರವೀಣ್. ಮದುವೆಯ ನಂತರ ರಿಯಾ ಹೆಸರು ಪ್ರಿಯಾ ಆಗಿ ಬದಲಾವಣೆಯಾಗಿತ್ತು.

ಪ್ರಕರಣ ಸಂಬಂಧ 8 ತಂಡಗಳನ್ನು ರಚಿಸಿ ತನಿಖೆ ನಡೆಸಿದ್ದ ಪೊಲೀಸರು, ಘಟನೆ ನಡೆದು ಎರಡು ದಿನಗಳಲ್ಲಿ ಆರೋಪಿಯನ್ನು ಬೆಳಗಾವಿಯಲ್ಲಿ ಬಂಧಿಸಿದ್ದರು. 300 ಸಾಕ್ಷಿಗಳಿರುವ 2,250 ಪುಟಗಳ ದೋಷಾರೋಪಣಾ ಪಟ್ಟಿಯನ್ನು ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಸಿಸಿಟಿವಿ, ಫೋನ್ ಕರೆ, ಹೇಳಿಕೆಗಳು, ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಗಳೇ ಪ್ರಮುಖ ಸಾಕ್ಷಿಗಳು. ತನಿಖಾಧಿಕಾರಿ ಮಂಜುನಾಥ್ ಗೌಡ 15 ವಾಲ್ಯೂಮ್ಸ್ (ಸಂಪುಟ) ಹೊಂದಿದ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದಾರೆ. ಎಫ್‌ಎಸ್‌ಎಲ್‌ನಲ್ಲಿ ಆರೋಪಿಯ ಕೃತ್ಯ ಹೋಲಿಕೆ ಆಗುತ್ತಿದೆ. ಕೃತ್ಯಕ್ಕೆ ಬಳಸಿದ ಚಾಕು, ರಕ್ತಸಿಕ್ಕ ಬಟ್ಟೆಗಳು ಪೊಲೀಸರಿಗೆ ಸಿಕ್ಕಿರುವ ಪ್ರಮುಖ ಸಾಕ್ಷಿಗಳಾಗಿವೆ. ಸ್ಥಳೀಯ ಠಾಣೆಯಲ್ಲಿ ಸುಮಾರು 2000 ಕ್ಕೂ ಹೆಚ್ಚು ಪುಟಗಳ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿದ ಮೊದಲ ಪ್ರಕರಣ ಇದಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸದ್ಯ ಆರೋಪಿ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾನೆ.

Sulekha