ಪ್ರಶ್ನೆಗಾಗಿ ನಗದು ಪ್ರಕರಣ – ಮಹುವಾ ಮೊಯಿತ್ರಾ ಸಂಸತ್ತಿನಿಂದ ಉಚ್ಚಾಟನೆ

ಪ್ರಶ್ನೆಗಾಗಿ ನಗದು ಪ್ರಕರಣ – ಮಹುವಾ ಮೊಯಿತ್ರಾ ಸಂಸತ್ತಿನಿಂದ ಉಚ್ಚಾಟನೆ

ಟಿಎಂಸಿಯ ಫೈರ್ ಬ್ರಾಂಡ್ ನಾಯಕಿ ಮಹುವಾ ಮೊಯಿತ್ರಾ ಅವರನ್ನು ಲೋಕಸಭೆಯಿಂದ ಉಚ್ಛಾಟನೆ ಮಾಡಲಾಗಿದೆ. ಹಣಕ್ಕಾಗಿ ದೇಶದ ಭದ್ರತೆಯನ್ನೇ ಅಡಮಾನ ಇಟ್ಟಿರುವ ಗಂಭೀರ ಆರೋಪದ ಹಿನ್ನೆಲೆ ಮೊಯಿತ್ರಾ ಅವರನ್ನು ಸದನದ ಸದಸ್ಯತ್ವದಿಂದ ಹೊರಹಾಕುವ ನಿರ್ಣಯವನ್ನು ಲೋಕಸಭೆ ಅಂಗೀಕರಿಸಿದೆ.

ಇದನ್ನೂ ಓದಿ: ಬಿಡಿಗಾಸಿನ ಆಸೆಗೆ ಹೆತ್ತ ಮಗಳನ್ನೇ ಮಾರಿದ ತಾಯಿ – ಮದ್ವೆಯಾದ ವ್ಯಕ್ತಿಯಿಂದ ಅನೈತಿಕ ಚಟುವಟಿಕೆಗೆ ಒತ್ತಾಯ

ಅದಾನಿ ಗ್ರೂಪ್ ಬಗ್ಗೆ ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಎತ್ತಲು ಮೊಯಿತ್ರಾ ಅವರಿಗೆ ಹಣ ನೀಡಿದ್ದಾರೆ ಎಂದು ಉದ್ಯಮಿ ದರ್ಶನ್ ಹಿರಾನಂದಾನಿ ಆರೋಪಿಸಿದ್ದರು.  ಪ್ರಧಾನಿ ನರೇಂದ್ರ ಮೋದಿಯವರನ್ನು ಕೆಣಕಲು ಮತ್ತು ಅವರನ್ನು ಮುಜುಗರಕ್ಕೀಡು ಮಾಡಲು ಕೈಗಾರಿಕೋದ್ಯಮಿ ಗೌತಮ್ ಅದಾನಿಯನ್ನು ಮೊಯಿತ್ರಾ ಗುರಿಯಾಗಿಸಿದ್ದಾರೆ ಎಂದು ಸಹಿ ಮಾಡಿದ ಅಫಿಡವಿಟ್‌ನಲ್ಲಿ ಹೇಳಿಕೊಂಡಿದ್ದರು. ನವೆಂಬರ್ 9 ರಂದು ನಡೆದ ಸಭೆಯಲ್ಲಿ, “ಪ್ರಶ್ನೆಗಾಗಿ ನಗದ” ಆರೋಪದ ಮೇಲೆ ಲೋಕಸಭೆಯಿಂದ ಮೊಯಿತ್ರಾ ಅವರನ್ನು ಉಚ್ಚಾಟಿಸಲು ಸಮಿತಿಯು ತನ್ನ ವರದಿಯನ್ನು ಶಿಫಾರಸು ಮಾಡಿತು. ಅಮಾನತುಗೊಂಡಿರುವ ಕಾಂಗ್ರೆಸ್ ಸದಸ್ಯೆ ಪ್ರಣೀತ್ ಕೌರ್ ಸೇರಿದಂತೆ ಸಮಿತಿಯ ಆರು ಸದಸ್ಯರು ವರದಿಯ ಪರವಾಗಿ ಮತ ಹಾಕಿದರು. ವಿರೋಧ ಪಕ್ಷಗಳ ಸಮಿತಿಯ ನಾಲ್ವರು ಸದಸ್ಯರು ಇದಕ್ಕೆ ತದ್ವಿರುದ್ಧ ಅಭಿಪ್ರಾಯಗಳನ್ನು ಸಲ್ಲಿಸಿದ್ದರು. ಇದೀಗ ಈ ವರದಿ ಲೋಕಸಭೆಯಲ್ಲಿ ಮಂಡನೆಯಾಗಿದೆ. ಇದೀಗ ನೈತಿಕ ಸಮಿತಿಯ ವರದಿಯನ್ನು ಆಧರಿಸಿ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರನ್ನು ಸದನದ ಸದಸ್ಯತ್ವದಿಂದ ಹೊರಹಾಕುವ ನಿರ್ಣಯವನ್ನು ಲೋಕಸಭೆ ಅಂಗೀಕರಿಸಿದೆ. ಮಹುವಾ ಮೊಯಿತ್ರಾ ಅವರನ್ನು ಲೋಕಸಭೆಯಿಂದ ಉಚ್ಛಾಟಿಸಿದ ನಂತರ  ಡಿಸೆಂಬರ್ 11ರವರೆಗೆ ಸದನದ ಕಲಾಪಗಳನ್ನು ಮುಂದೂಡವಾಗಿದೆ.

ಸದನದ ನಿರ್ಧಾರವನ್ನು ಓದಿದ ಸ್ಪೀಕರ್  ಓಂ ಬಿರ್ಲಾ,ಸಂಸದೆ ಮಹುವಾ ಮೊಯಿತ್ರಾ ಅವರ ನಡವಳಿಕೆಯು ಸಂಸದರಾಗಿ ಅನೈತಿಕ ಮತ್ತು ಸರಿಯಾದುದಲ್ಲ ಎಂಬ ಸಮಿತಿಯ ತೀರ್ಮಾನಗಳನ್ನು ಈ ಸದನವು ಒಪ್ಪಿಕೊಳ್ಳುತ್ತದೆ. ಹಾಗಾಗಿ ಅವರು ಸಂಸದೆಯಾಗಿ ಮುಂದುವರಿಯುವುದು ಸೂಕ್ತವಲ್ಲ ಎಂದು ಹೇಳಿದ್ದಾರೆ.

Shwetha M