ವಿವಾದಗಳ ಸುಳಿಯಲ್ಲಿ ಡಿಬಾಸ್ – ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೇಲೆ ಕೇಸ್ ದಾಖಲು

ವಿವಾದಗಳ ಸುಳಿಯಲ್ಲಿ ಡಿಬಾಸ್ – ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೇಲೆ ಕೇಸ್ ದಾಖಲು

ನಟ ದರ್ಶನ್​ಗೂ ವಿವಾದಗಳಿಗೂ ಎಲ್ಲಿಲ್ಲದ ನಂಟು. ಒಂದರ ಹಿಂದೆ ಒಂದರಂತೆ ಸಾಲು ಸಾಲು ವಿವಾದಗಳನ್ನ ಮೈ ಮೇಲೆ ಎಳೆದುಕೊಳ್ತಿದ್ದಾರೆ. ಕಾಟೇರ ಸಿನಿಮಾ ಸಕ್ಸಸ್​ನಲ್ಲಿರಬೇಕಾದ ದರ್ಶನ್​ಗೆ ತಮ್ಮ ಮಾತುಗಳೇ ಮುಳುವಾಗ್ತಿವೆ. ಮಹಿಳೆಯ ಬಗ್ಗೆ ಹಗುರ ಮಾತು ಮತ್ತು ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಕುರಿತು ಅಸಂಬದ್ಧವಾಗಿ ಮಾತನಾಡಿದ ದರ್ಶನ್ ವಿರುದ್ಧ ದೂರು ದಾಖಲಾಗಿವೆ. ಮಹಿಳೆಯರು ಕೂಡ ನಟನ ವಿರುದ್ಧ ರೊಚ್ಚಿಗೆದ್ದಿದ್ದು ಕ್ಷಮೆ ಕೇಳುವಂತೆ ಪಟ್ಟು ಹಿಡಿದಿದ್ದಾರೆ. 15 ಕ್ಕೂ ಹೆಚ್ಚು ಮಹಿಳೆಯರು ಸ್ಟೇಷನ್ ಗೆ ಎಂಟ್ರಿ ಕೊಟ್ಟಿದ್ದು, ಪುಟ್ಟೇನಹಳ್ಳಿ ಮಹಿಳಾ ಸ್ವಸಹಾಯ ಸಂಘದಿಂದ ದೂರು ದಾಖಲಾಗಿದೆ. ನಟ ದರ್ಶನ್ ವೇದಿಕೆ ಮೇಲೆ ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಸ್ಟಾರ್ ನಟನಾಗಿ ಮಹಿಳೆಯರ ಬಗ್ಗೆ ಈ ರೀತಿ ಹೇಳಿಕೆ ಕೊಡುವುಡು ಸಮಂಜಸವಲ್ಲ ಎಂದಿದ್ದಾರೆ. ಹಾಗೇ ಆರ್ ಆರ್ ನಗರ ಠಾಣೆಗೆ ಮತ್ತೆರಡು ದೂರು ದಾಖಲಾಗಿದೆ. ಗಣೇಶ್ ಗೌಡ ಹಾಗೂ ಜಗದೀಶ್ ಎನ್ನುವವರು ಕೇಸ್ ದಾಖಲಿಸಿದ್ದಾರೆ.

ಇದನ್ನೂ ಓದಿ:ಜೈದೇವ್‌ ನ ಮೋಸದಾಟ ಅಂತ್ಯ.. ನ್ಯಾಯದ ಪರ ನಿಂತ ಭೂಮಿಕಾ – ನಿಂತೇ ಹೋಯ್ತಾ ಮದುವೆ?

ಇತ್ತೀಚೆಗೆ ಬಿಡುಗಡೆಯಾದ ಕಾಟೇರ ಸಿನಿಮಾ ಭರ್ಜರಿ ಹಿಟ್ ಕಂಡಿದೆ. ಮತ್ತೊಂದೆಡೆ ದರ್ಶನ್ ಚಿತ್ರರಂಗಕ್ಕೆ ಬಂದು 25 ವರ್ಷ ಪೂರೈಸಿದೆ. ಹೀಗಾಗಿ ಮಂಡ್ಯದ ಶ್ರೀರಂಗಪಟ್ಟಣದಲ್ಲಿ ಫೆಬ್ರವರಿ 17ರಂದು ಬೆಳ್ಳಿ ಪರ್ವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ್ದ ದರ್ಶನ್ ತಮ್ಮ ಫ್ಯಾಮಿಲಿ ಸಮಸ್ಯೆ ಬಗ್ಗೆಯೂ ಮಾತನಾಡಿದ್ದರು. ಎಲ್ಲ ಸಮಸ್ಯೆಗಳನ್ನು ಬದಿಗಿಡುತ್ತೀನಿ. ನನ್ನ ಸೆಲೆಬ್ರಿಟಿಗಳು, ನನ್ನ ಕೆಲಸ ಮುಖ್ಯ. ಬೇರೆಯದಕ್ಕೆ ತಲೆಕೆಡಿಸಿಕೊಳ್ಳಲ್ಲ. ಇವತ್ತು ಇವಳಿರ್ತಾಳೆ, ನಾಳೆ ಅವಳಿರ್ತಾಳೆ. ನಾನ್ಯಾಕೆ ಇವರ ಬಗ್ಗೆ ತಲೆ ಕೆಡಿಸಿಕೊಳ್ಳಲಿ ಎಂದಿದ್ದರು. ಇದಿಷ್ಟೇ ಅಲ್ಲದೆ, ಕಾಟೇರ ಚಿತ್ರ 50ನೇ ದಿನ ಸಂಭ್ರಮ ಪ್ರಸನ್ನ ಚಿತ್ರಮಂದಿರದಲ್ಲಿ ನಡೆದಿತ್ತು. ಕಾಟೇರ ಚಿತ್ರದ ಟೈಟಲ್ ಕೊಟ್ಟಿದ್ದು ನಾನೇ ಎಂದಿದ್ದ ನಿರ್ಮಾಪಕ ಉಮಾಪತಿ ವಿರುದ್ಧ ಆಕ್ರೋಶ ಹೊರಹಾಕಿದ್ದ ದರ್ಶನ್, ಅಯ್ಯೋ ತಗಡೇ ನಿನಗೆ ರಾಬರ್ಟ್ ಸಿನಿಮಾ ಕೊಟ್ಟಿದ್ದೇ ನಾನು. ಯಾಕೋ ಪದೇಪದೆ ಸರಿಯಾಗಿ ಗುಮ್ಮಿಸ್ಕೋತ್ತೀಯಾ ಎಂದಿದ್ದರು.

ಹೆಣ್ಣುಮಕ್ಕಳ ಬಗ್ಗೆ ದರ್ಶನ್ ಹೇಳಿದ್ದ ಹೇಳಿಕೆ ಮಹಿಳೆಯರ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಗುರುವಾರ ಒಕ್ಕಲಿಗರ ಗೌಡತಿಯ ಸೇನೆ ಮಹಿಳಾ ಆಯೋಗಕ್ಕೆ ದರ್ಶನ್ ವಿರುದ್ಧ ದೂರು ದಾಖಲಿಸಿದೆ. ಹೆಣ್ಣು ಮಕ್ಕಳ ಬಗ್ಗೆ ಕೀಳುಭಾವನೆಯಿಂದ ಉಡಾಫೆಯಾಗಿ ಮಾತನಾಡಿದ್ದಾರೆ. ಇದು ಅಕ್ಷಮ್ಯ ಅಪರಾಧವಾಗಿದ್ದು, ವಿಚಾರಣೆ ನಡೆಸಿ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ದರ್ಶನ್ ಸಂಪೂರ್ಣವಾಗಿ ಬದಲಾಗಬೇಕು. ತೆರೆಯ ಮೇಲೆ ಹೆಣ್ಣು ಮಕ್ಕಳನ್ನು ಗೌರವಿಸುವಂತೆ ತೆರೆಯ ಹಿಂದೆಯೂ ಗೌರವಿಸಬೇಕು ಎಂದು ಗೌಡತಿಯರ ಸೇನೆ ಎಚ್ಚರಿಸಿದೆ.    ಶುಕ್ರವಾರ ಕೂಡ ಮತ್ತೆರಡು ಕೇಸ್ ದಾಖಲಾಗಿದೆ. ಆದ್ರೆ ಹೀಗೆ ದರ್ಶನ್​ಗೆ ಕಾನೂನು ಸಮರ ಹೊಸದೇನು ಅಲ್ಲ.

ವಿವಾದಗಳ ಒಡೆಯ ದರ್ಶನ್!

ದರ್ಶನ್ ತಮ್ಮ ಪತ್ನಿ ವಿಜಯಲಕ್ಷ್ಮೀಗೆ ಸಿಗರೇಟ್ ನಿಂದ ಸುಟ್ಟು ಮಾನಸಿಕವಾಗಿ ಕಿರುಕುಳ ಕೊಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಬಳಿಕ ಜೈಲುಪಾಲಾಗಿದ್ದು ಇತಿಹಾಸ. ರಿಲೀಸ್ ಆದ ಬಳಿಕ ಸಿನಿಮಾಗಳಲ್ಲಿ ತೊಡಗಿಕೊಂಡಿದ್ದ ದರ್ಶನ್ ಕಳೆದ ಕೆಲ ವರ್ಷಗಳಿಂದ ಮತ್ತೆ ಗಾಸಿಪ್ ಮಾಡಿಕೊಳ್ತಿದ್ದಾರೆ. ನಿರ್ಮಾಪಕ ಉಮಾಪತಿಗೌಡ ಜೊತೆ ಲೋನ್ ವಿಚಾರವಾಗಿ ವೈಷಮ್ಯ ಉಂಟಾಗಿತ್ತು. ಅದೇ ವೇಳೆ ದರ್ಶನ್ ಮಾಧ್ಯಮಗಳ ವಿರುದ್ಧ ಕೆಟ್ಟದಾಗಿ ಮಾತಾಡಿದ್ದ ಆಡಿಯೋ ವೈರಲ್ ಆಗಿತ್ತು. ಬಳಿಕ ಮಾಧ್ಯಮಗಳು ದರ್ಶನ್ ಅವ್ರ ಸುದ್ದಿಗಳನ್ನ ತೆಗೆದುಕೊಳ್ಳದೆ ಬ್ಯಾನ್ ಮಾಡಿದ್ದರು. ಬಳಿಕ ದರ್ಶನ್ ಕ್ಷಮೆಯಾಚನೆ ಬಳಿಕ ಮಾಧ್ಯಮಗಳು ಮತ್ತೆ ದರ್ಶನ್ ಅವ್ರ ಸುದ್ದಿಗಳನ್ನು ಬಿತ್ತರಿಸಿದ್ದವು. ಬಳಿಕ ಕಾಟೇರ ಸಿನಿಮಾ ಸಕ್ಸಸ್ ಆಗಿದ್ದು, ಸೆಲೆಬ್ರೇಷನ್ ವೇಳೆಯೇ ಪವಿತ್ರಾ ಗೌಡ ಜೊತೆಗಿನ ಫೋಟೋಸ್ ವೈರಲ್ ಆಗಿದ್ದವು. ಆಗ ದರ್ಶನ್ ಪತ್ನಿ, ವಿಜಯಲಕ್ಷ್ಮೀ ಹಾಗೂ ಪವಿತ್ರಾಗೌಡ ನಡುವೆ ಸೋಶಿಯಲ್ ಮೀಡಿಯಾದಲ್ಲೇ ವಾರ್ ನಡೆದಿತ್ತು. ಇನ್ನು ಬೆಳಗಿನಜಾವದವರೆಗೂ ಕಾಟೇರ ಚಿತ್ರತಂಡ ಪಬ್​ನಲ್ಲಿ ಪಾರ್ಟಿ ನಡೆಸಿದ್ದಾರೆ ಎಂದು ದೊಡ್ಡ ಸುದ್ದಿಯಾಗಿತ್ತು. ಇದೀಗ ಉಮಾಪತಿ ಗೌಡ ಮತ್ತು ಹೆಣ್ಣುಮಕ್ಕಳ ವಿಚಾರವಾಗಿ ಮತ್ತೆ ವಿವಾದ ಮಾಡಿಕೊಂಡಿದ್ದಾರೆ.

ಮೆಜೆಸ್ಟಿಕ್ ಸಿನಿಮಾದಿಂದ ಕಾಟೇರ ಸಿನಿಮಾವರೆಗೂ ದರ್ಶನ್ ಸಾಲು ಸಾಲು ವಿವಾದ ಮಾಡಿಕೊಂಡಿದ್ದಾರೆ. ಇದೀಗ ಉಮಾಪತಿ ಗೌಡ ಮತ್ತು ಹೆಣ್ಣುಮಕ್ಕಳ ಬಗೆಗಿನ ಹೇಳಿಕೆಗಳು ಆಕ್ರೋಶಕ್ಕೆ ಕಾರಣವಾಗಿವೆ. ವಿವಿಧ ಠಾಣೆಗಳಲ್ಲಿ ದೂರು ದಾಖಲಾಗ್ತಿವೆ. ಈ ವಿವಾದ ಮತ್ತಷ್ಟು ತಾರಕಕ್ಕೇರುವ ಸಾಧ್ಯತೆಗಳೂ ಹೆಚ್ಚಿವೆ.

Sulekha