ಹುತಾತ್ಮ ಯೋಧ ಕ್ಯಾ. ಪ್ರಾಂಜಲ್‌ಗೆ ಕಣ್ಣೀರ ವಿದಾಯ – ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ

ಹುತಾತ್ಮ ಯೋಧ ಕ್ಯಾ. ಪ್ರಾಂಜಲ್‌ಗೆ ಕಣ್ಣೀರ ವಿದಾಯ – ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ

ಬೆಂಗಳೂರು: ಜಮ್ಮು ಕಾಶ್ಮೀರದ ರಜೌರಿಯಲ್ಲಿ ಉಗ್ರರ ವಿರುದ್ಧದ ಹೋರಾಟದ ವೇಳೆ ಹುತಾತ್ಮರಾಗಿದ್ದ ಕ್ಯಾಪ್ಟನ್​ ಪ್ರಾಂಜಲ್ ಅವರ ಅಂತಿಮ ಸಂಸ್ಕಾರ ನೆರವೇರಿದೆ. ಶನಿವಾರ ಕೂಡ್ಲುಗೇಟ್‌ನ ಸೋಮಸುಂದರ್ ಪಾಳ್ಯ ರಸ್ತೆಯ ವಿದ್ಯುತ್ ಚಿತಾಗಾರದಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿಸಲಾಗಿದೆ.

ಇದನ್ನೂ ಓದಿ: 3ನೇ ತರಗತಿಯಲ್ಲೇ ಯೋಧನಾಗುವ ಕನಸು.. 2 ವರ್ಷಗಳ ಹಿಂದಷ್ಟೇ ಮದುವೆ – ‘ಆಲ್ ಓಕೆ’ ಎಂದು ತಂದೆಗೆ ಮೆಸೇಜ್ ಕಳಿಸಿದ್ದರು ಪ್ರಾಂಜಲ್

ಜಮ್ಮುವಿನ ರಜೌರಿಯಲ್ಲಿ ಬುಧವಾರ (ನ.22) ದಂದು ಭಯೋತ್ಪಾದಕರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಕ್ಯಾಪ್ಟನ್ ಎಂ.ವಿ ಪ್ರಾಂಜಲ್ ಹುತಾತ್ಮರಾಗಿದ್ದರು. ಶುಕ್ರವಾರ ಕ್ಯಾಪ್ಟನ್ ಪ್ರಾಂಜಲ್ ​ಅವರ ಪಾರ್ಥಿವ ಶರೀರವನ್ನು ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಜಿಗಣಿ ಬಳಿಯ ನಂದನವನ ಲೇಔಟ್​​ನ ನಿವಾಸಕ್ಕೆ ತರಲಾಗಿತ್ತು. ಶನಿವಾರ ಸಾರ್ವಜನಿಕರಿಗೆ  ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಮಧ್ಯಾಹ್ನ 12.30ಕ್ಕೆ ನಿವಾಸದಿಂದ ತೆರೆದ ವಾಹನದಲ್ಲಿ ಕಲ್ಲುಬಾಳು ರಸ್ತೆ ಮೂಲಕ ಜಿಗಣಿಯ ಒಡಿಸಿ ಸರ್ಕಲ್​, ಜಿಗಣಿ ರಸ್ತೆ ಮೂಲಕ ಹರಪನ್ನಹಳ್ಳಿ – ಕೊಪ್ಪ ಗೇಟ್ – ಬೇಗಿಹಳ್ಳಿ – ಬನ್ನೇರುಘಟ್ಟ ರಸ್ತೆ – ನೈಸ್​ ರೋಡ್ – ಕೂಡ್ಲುಗೇಟ್​ ಮೂಲಕ ಸುಮಾರು 30 ಕಿ.ಮೀ ವರೆಗೆ ಅಂತಿಮ ಯಾತ್ರೆ ನಡೆಸಲಾಗಿತ್ತು. ಬಳಿಕ ಸರ್ಕಾರಿ ಗೌರವಗಳೊಂದಿಗೆ   ಸೋಮಸುಂದರಪಾಳ್ಯ ವಿದ್ಯುತ್​ ಚಿತಾಗಾರದಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಕ್ಯಾಪ್ಟನ್​ ಪ್ರಾಂಜಲ್​ ಅವರ ಅಂತ್ಯಕ್ರಿಯೆ ನೆರವೇರಿದೆ.

ಬ್ರಾಹ್ಮಣ ಸಂಪ್ರದಾಯದಂತೆ ಎಂ.ವಿ ಪ್ರಾಂಜಲ್ ಅವರ ತಂದೆ ವೆಂಕಟೇಶ್​ ಅವರು ಅಂತಿಮ ವಿಧಿವಿಧಾನ ಪೂರೈಸಿದರು. ಭಾರತೀಯ ಸೇನೆಯಿಂದ ಕುಶಾಲ ತೋಪು ಸಿಡಿಸಿದ ಸೇನಾಧಿಕಾರಿಗಳು, ಎಂ.ವಿ ಪ್ರಾಂಜಲ್​ಗೆ ಅಂತಿಮ ನಮನ ಸಲ್ಲಿಸಿದರು. ಬಳಿಕ ಪ್ರಾಂಜಲ್ ಪಾರ್ಥಿವ ಶರೀರದ ಮೇಲಿದ್ದ ತ್ರಿವರ್ಣಧ್ವಜವನ್ನು ಪೋಷಕರಿಗೆ ಹಸ್ತಾಂತರಿಸಿದರು. ಎಲ್ಲೇಡೆ ಕ್ಯಾಪ್ಟನ್ ಎಂ.ವಿ ಪ್ರಾಂಜಲ್​ ಅಮರ್ ರಹೇ ಎಂಬ ಘೋಷಣೆ ಮುಗಿಲು ಮುಟ್ಟಿತ್ತು.

ಇನ್ನು ಹುತಾತ್ಮ ಯೋಧ ಕ್ಯಾಪ್ಟನ್ ಎಂ.ವಿ ಪ್ರಾಂಜಲ್​ಗೆ ಸರ್ಕಾರಿ ಗೌರವ ಸಲ್ಲಿಸಿದ್ದು, ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ನಂದನವನ ಲೇಔಟ್​ನ ನಿವಾಸದ ಎದುರು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್​, ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್ ಹಾಗೂ ಬೆಂಗಳೂರು ಗ್ರಾಮಾಂತರ SP ಮಲ್ಲಿಕಾರ್ಜುನ ಬಾಲದಂಡಿ ಅವರು ಅಂತಿಮ ನಮನ ಸಲ್ಲಿಸಿದರು. ಜೊತೆಗೆ ಮೆರವಣಿಗೆ ವೇಳೆ ಮಹಿಳೆ, ಮಕ್ಕಳು ಸೇರಿದಂತೆ ಸಾವಿರಾರು ಜನ ದರ್ಶನ ಪಡೆದುಕೊಂಡರು.

Shwetha M