31 ಕೃಷ್ಣ ಮೃಗಗಳ ಸಾವಿನ ರಹಸ್ಯ ಬಹಿರಂಗ – ಹೆಮರೇಜಿಕ್ ಸೆಪ್ಟಿಸಿಮಿಯಾ  ಬ್ಯಾಕ್ಟೀರಿಯಾ ಸೋಂಕು ಕಾರಣ

31 ಕೃಷ್ಣ ಮೃಗಗಳ ಸಾವಿನ ರಹಸ್ಯ ಬಹಿರಂಗ – ಹೆಮರೇಜಿಕ್ ಸೆಪ್ಟಿಸಿಮಿಯಾ  ಬ್ಯಾಕ್ಟೀರಿಯಾ ಸೋಂಕು  ಕಾರಣ

ಬೆಳಗಾವಿ ಜಿಲ್ಲೆಯ  ರಾಣಿ ಚನ್ನಮ್ಮ ಮೃಗಾಲಯದಲ್ಲಿ  ಸಂಭವಿಸಿದ ಕೃಷ್ಣಮೃಗಗಳ ಸರಣಿ  ಸಾವಿಗೆ ಕಾರಣ ಪತ್ತೆಯಾಗಿದೆ. ಅಕ್ಟೋಬರ್ 13ರಿಂದ 16ರ ಅವಧಿಯಲ್ಲಿ ಒಟ್ಟು 31 ಕೃಷ್ಣ ಮೃಗಗಳು ಸಾವನ್ನಪ್ಪಿದ್ದವು. ಮರಣೋತ್ತರ ಪರೀಕ್ಷೆ ಹಾಗೂ ತಜ್ಞರ ಪರಿಶೀಲನೆಗಳ ನಂತರ ಈ ಸಾವಿಗೆ HS ಅಂದ್ರೆ ಹೆಮರೇಜಿಕ್ ಸೆಪ್ಟಿಸಿಮಿಯಾ  ಬ್ಯಾಕ್ಟೀರಿಯಾ ಸೋಂಕೇ ಮುಖ್ಯ ಕಾರಣ ಎಂದು ವರದಿಗಳು ತಿಳಿಸಿವೆ.

ಮೃತ ಮೃಗಗಳ ಮೇಲೆ ಬನ್ನೇರುಘಟ್ಟದ ತಜ್ಞ ವೈದ್ಯರ ತಂಡ ನಡೆಸಿದ ಮರಣೋತ್ತರ ಪರೀಕ್ಷೆಯ ವರದಿ ಕೂಡ HS ಸೋಂಕೇ ಸಾವಿನ ಕಾರಣ ಎಂದು ದೃಢಪಡಿಸಿದೆ. ಜೀವಿತ ಉಳಿದಿರುವ ಏಳು ಕೃಷ್ಣ ಮೃಗಗಳಿಗೂ ತಕ್ಷಣ ಚಿಕಿತ್ಸೆ ಆರಂಭಿಸಲಾಗಿದ್ದು, ಅವುಗಳಲ್ಲಿ ಹಲವಾರು ಮೃಗಗಳು ಚೇತರಿಕೆ  ಕಾಣುತ್ತಿವೆ. ಈಗಾಗಲೇ ಅವುಗಳನ್ನು ತೀವ್ರ ನಿಗಾದಲ್ಲಿ ಇಟ್ಟುಕೊಂಡು ಮುಂದುವರೆದ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಿಬ್ಬಂದಿ ತಂಡವು ಎಚ್ಚೆತ್ತು ಕಾರ್ಯನಿರ್ವಹಿಸುತ್ತವೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: LSGಗೆ ಶಮಿ ಮಾರಾಟ – SRH ತಂಡಕ್ಕೆ ಕಮಿನ್ಸ್ ನಾಯಕ

ಸಾವು ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ, ಬೆಂಗಳೂರಿನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ತಜ್ಞ ಡಾ. ಚಂದ್ರಶೇಖರ್ ಅವರನ್ನು ತಕ್ಷಣ ಬೆಳಗಾವಿಗೆ ಕಳುಹಿಸಲಾಗಿತ್ತು. ಅವರು ಮೃಗಾಲಯದ ವೈದ್ಯರು ಹಾಗೂ ಅಧಿಕಾರಿಗಳೊಂದಿಗೆ ನಡೆಸಿದ ಸಂಯುಕ್ತ ತನಿಖೆಯ ಬಳಿಕ, HS ಎಂಬ ತೀವ್ರವಾಗಿ ಹರಡುವ ಬ್ಯಾಕ್ಟೀರಿಯಾ ಸೋಂಕು ಕೃಷ್ಣ ಮೃಗಗಳಲ್ಲಿ ವೇಗವಾಗಿ ವ್ಯಾಪಿಸಿರುವುದು ಸ್ಪಷ್ಟ ಎಂದು ಮಾಹಿತಿ ಬಿಡುಗಡೆ ಮಾಡಿದ್ದಾರೆ. ಸಾಂಕ್ರಾಮಿಕ ರೋಗದ ಸ್ವಭಾವ ಗಮನಿಸಿದ ತಜ್ಞರು, ಮೃಗಾಲಯದಲ್ಲಿ ತುರ್ತು ಪ್ರೋಟೋಕಾಲ್ ಜಾರಿಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ರೋಗ ಮತ್ತಿತರ ಜಾತಿಯ ಪ್ರಾಣಿಗಳಿಗೆ ಹರಡುವ ಸಾಧ್ಯತೆಯನ್ನು ಹೊಂಚು ಹಾಕಿರುವ ಹಿನ್ನೆಲೆಯಲ್ಲಿ, ತಕ್ಷಣವೇ ಪ್ರತ್ಯೇಕಣೆ, ನಿತ್ಯ ಸ್ನಾನ-ಶುಚಿಗೊಳಿಸುವಿಕೆ, ಸಾಕಾಣಿಕೆ ಪ್ರದೇಶಗಳ ಸ್ಯಾನಿಟೈಸೇಶನ್ ಹಾಗೂ ಸಿಬ್ಬಂದಿಗೆ ಸುರಕ್ಷತಾ ಮಾರ್ಗಸೂಚಿಗಳನ್ನು ಕಡ್ಡಾಯಗೊಳಿಸುವಂತೆ ಸಲಹೆ ನೀಡಲಾಗಿದೆ.

ರಾಣಿ ಚನ್ನಮ್ಮ ಮೃಗಾಲಯದಲ್ಲಿ ಕೃಷ್ಣ ಮೃಗಗಳ ಜೊತೆಗೆ ಹುಲಿ, ಸಿಂಹ, ಚಿರತೆ, ಕರಡಿ, ಕತ್ತೆ ಕಿರುಬಗಳು ಹಾಗೂ ವಿವಿಧ ಜಿಂಕೆ ಪ್ರಬೇಧಗಳು ವಾಸಿಸುತ್ತಿದ್ದು, ಯಾವುದೇ ಹೊಸ ಪ್ರಕರಣಗಳ ಆತಂಕವನ್ನು ತಪ್ಪಿಸಲು ಸಂಪೂರ್ಣ ಜಾಗೃತಿ ಮತ್ತು ಸಕಾಲಿಕ ಕ್ರಮಗಳು ಮುಂದುವರೆದಿವೆ. ಈ ಘಟನೆ ಮೃಗಾಲಯದ ನಿರ್ವಹಣೆ, ಆರೋಗ್ಯ ನಿಗಾದ ವ್ಯವಸ್ಥೆ ಹಾಗೂ ತುರ್ತು ರೋಗ ನಿಯಂತ್ರಣ ಕ್ರಮಗಳ ಕಾರ್ಯಕ್ಷಮತೆ ಕುರಿತು ಗಂಭೀರ ಚರ್ಚೆಗೆ ಕಾರಣವಾಗಿದೆ. ಅಧಿಕಾರಿಗಳು ಮೃಗಾಲಯವನ್ನು ಸಂದರ್ಶಿಸುವ ನಾಗರಿಕರಿಗೆ ಆತಂಕ ಪಡುವ ಅಗತ್ಯವಿಲ್ಲವೆಂದು ತಿಳಿಸಿದರೂ, ಮೃಗಾಲಯದಲ್ಲಿ ಮುಂದಿನ ಕೆಲವು ದಿನಗಳು ಕಟ್ಟುನಿಟ್ಟಿನ ನಿಯಮಾವಳಿ ಜಾರಿಯಲ್ಲಿರಲಿದೆ ಎಂದು ಅಧಿಕಾರಿ ವಲಯ ತಿಳಿಸಿದೆ.

Kishor KV