ಮೋದಿ ವಿರುದ್ಧದ ಮಾನಹಾನಿ ಮೊಕದ್ದಮೆ ಕೇಸ್ ಸಾಬೀತು – ರಾಹುಲ್ ಗಾಂಧಿಗೆ ತಪ್ಪಲ್ವಾ ಸಂಕಷ್ಟ?

ಮೋದಿ ವಿರುದ್ಧದ ಮಾನಹಾನಿ ಮೊಕದ್ದಮೆ ಕೇಸ್ ಸಾಬೀತು – ರಾಹುಲ್ ಗಾಂಧಿಗೆ ತಪ್ಪಲ್ವಾ ಸಂಕಷ್ಟ?

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಭಾರಿ ಸಂಕಷ್ಟ ಎದುರಾಗಿದೆ. ಮೋದಿ ಸರ್​​ ನೇಮ್ ವಿಚಾರವಾಗಿ ರಾಹುಲ್​ ಮೇಲಿನ ಮಾನಹಾನಿ ಮೊಕದ್ದಮೆ ಕೇಸ್ ಸಾಬೀತಾಗಿದ್ದು, ಕಾಂಗ್ರೆಸ್ ನಾಯಕ ಅಪರಾಧಿ ಅಂತಾ ಗುಜರಾತ್​ನ ಸೂರತ್ ಕೋರ್ಟ್ ಆದೇಶ ನೀಡಿದೆ.

2019ರ ಲೋಕಸಭೆ ಚುನಾವಣೆಗೂ ಮುನ್ನ ಕರ್ನಾಟಕದ ಕೋಲಾರದಲ್ಲಿ ಪ್ರಚಾರದ ವೇಳೆ, ಎಲ್ಲಾ ಕಳ್ಳರಿಗೂ ಮೋದಿ ಅನ್ನೋದು ಕಾಮನ್​ ಸರ್​​ನೇಮ್ ಆಗಿರೋದ್ಯಾಕೆ? ಕಳ್ಳರೆಲ್ಲರೂ ಮೋದಿಗಳೇ ಅಂತಾ ರಾಹುಲ್​ ಗಾಂಧಿ ಹೇಳಿಕೆ ಕೊಟ್ಟಿದ್ರು. ಕಾಂಗ್ರೆಸ್​ ನಾಯಕನ ಈ ಹೇಳಿಕೆ ವಿರುದ್ಧ ಗುಜರಾತ್​ ಮಾಜಿ ಸಚಿವ ಪೂರ್ನೇಶ್ ಮೋದಿ ಮಾನನಷ್ಟ ಮೊಕದ್ದಮೆ ಕೇಸ್ ದಾಖಲಿಸಿ ಕೋರ್ಟ್ ಮೆಟ್ಟಿಲೇರಿದ್ರು.

ಇದನ್ನೂ ಓದಿ:  ಚುನಾವಣೆ ಹೊಸ್ತಿಲಲ್ಲೇ ದಿಲ್ಲಿ ನಾಯಕರ ಪರೇಡ್ – ಅಮಿತ್ ಶಾ, ಮೋದಿ ಬ್ಯಾಕ್ ಟು ಬ್ಯಾಕ್ ವಿಸಿಟ್!

ಮೋದಿ ಸಮುದಾಯವನ್ನ ರಾಹುಲ್​ ಅವಮಾನಿಸಿದ್ದಾರೆ ಅಂತಾ ಕೋರ್ಟ್​ನಲ್ಲಿ ವಾದ ಮಂಡಿಸಿದ್ರು. ಇದೀಗ ಸೂರತ್​ ಕೋರ್ಟ್, ರಾಹುಲ್ ಗಾಂಧಿ ಅಪರಾಧಿ ಅಂತಾ ಅಂತಿಮ ತೀರ್ಪು ನೀಡಿದೆ. ಅಷ್ಟೇ ಅಲ್ಲ ಕಾಂಗ್ರೆಸ್​ ನಾಯಕನಿಗೆ ಎರಡು ವರ್ಷಗಳ ಜೈಲು ಶಿಕ್ಷೆ ಕೂಡ ವಿಧಿಸಿದೆ. ಆದ್ರೆ ಆದೇಶ ಬರ್ತಿದ್ದಂತೆ ರಾಹುಲ್​​ ಜಾಮೀನು ಅರ್ಜಿ ಸಲ್ಲಿಸಿದ್ದು, 15 ಸಾವಿರ ರೂಪಾಯಿ ದಂಡ ಕಟ್ಟುವಂತೆ ಸೂಚಿಸಿ ಕೋರ್ಟ್ 30 ದಿನಗಳ ಕಾಲ​ ಜಾಮೀನು ಕೂಡ ನೀಡಿದೆ. ಹೀಗಾಗಿ ರಾಹುಲ್ ಗಾಂಧಿ ಜೈಲಿಗೆ ಹೋಗುವ ಪ್ರಮೇಯ ಬಂದಿಲ್ಲ.

ಮುಂದಿನ 30 ದಿನಗಳ ಒಳಗಾಗಿ ರಾಹುಲ್ ಸೂರತ್​ ಕೋರ್ಟ್​ ಆದೇಶ ಪ್ರಶ್ನಿಸಿ ಹೈಕೋರ್ಟ್​ ಮೆಟ್ಟಿಲೇರಬಹುದಾಗಿದೆ. ಇನ್ನು ಆದೇಶದ ಬಳಿಕ ನೀವೇನಾದ್ರೂ ಹೇಳಲು ಬಯಸುತ್ತೀರಾ ಅಂತಾ ಜಡ್ಜ್ ಕೇಳಿದ್ದು, ಇದಕ್ಕೆ ರಾಹುಲ್, ಭ್ರಷ್ಟಚಾರದ ವಿರುದ್ಧ ನಾನು ಹೋರಾಟ ನಡೆಸುತ್ತಿದ್ದೇನೆ. ನಾನು ನಾನು ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದವನು. ಯಾರನ್ನೂ ನೋಯಿಸುವ ಉದ್ದೇಶದಿಂದ ಈ ಹೇಳಿಕೆ ಕೊಟ್ಟಿಲ್ಲ ಅಂತಾ ರಾಹುಲ್ ಕೋರ್ಟ್​ನಲ್ಲಿ ಹೇಳಿಕೆ ಕೊಟ್ಟಿದ್ದಾರೆ.

ಜಾಮೀನು ಪಡೆದ ಬಳಿಕ ರಾಹುಲ್​ ಗಾಂಧಿ ನೇರವಾಗಿ ಸೂರತ್​​ನಲ್ಲಿರುವ ಸರ್ಕಿಟ್ ಹೌಸ್​​ಗೆ ತೆರಳಿದ್ದಾರೆ. ವಕೀಲರ ಜೊತೆಗೆ ಮುಂದಿನ ಕಾನೂನು ಹೋರಾಟದ ಬಗ್ಗೆ ಚರ್ಚೆ ನಡೆಸಿದ್ದಾರೆ. ಕಾಂಗ್ರೆಸ್ ನಾಯಕರ ಜೊತೆಗೂ ಮಾತುಕತೆ ನಡೆಸಿದ್ದಾರೆ. ಬಳಿಕ ನನ್ನ ಹೋರಾಟವೇನಿದ್ರೂ ಸತ್ಯಕ್ಕಾಗಿ ಮತ್ತು ಅಹಿಂಸೆಗಾಗಿ. ಸತ್ಯವೇ ನನ್ನ ದೇವರು. ಸತ್ಯಕ್ಕಾಗಿ ಅಹಿಂಸಾ ಮಾರ್ಗದಲ್ಲಿ ಹೋರಾಡುತ್ತೇನೆ ಅಂತಾ ಮಹಾತ್ಮ ಗಾಂಧಿ ಹೇಳಿಕೆಯನ್ನ ಉಲ್ಲೇಖಿಸಿ ರಾಹುಲ್ ಟ್ವೀಟ್ ಮಾಡಿದ್ದಾರೆ.

ಈ ನಡುವೆ, ರಾಹುಲ್ ಗಾಂಧಿ ಅಪರಾಧಿ ಅಂತಾ ಕೋರ್ಟ್ ಆದೇಶ ಬರುತ್ತಲೇ ಕಾಂಗ್ರೆಸ್​ ನಾಯಕರು ಕೆಂಡವಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಆಗಾಗ ಜಡ್ಜ್​​ಗಳನ್ನ ಬದಲಾಯಿಸ್ತಿದ್ರು. ಅವಾಗ್ಲೇ ನಮಗೆ ಹೀಗಾಗುತ್ತೆ ಅನ್ನೋ ಸುಳಿವು ಸಿಕ್ಕಿತ್ತು. ಆದ್ರೆ ನಾವು ಕಾನೂನು ಹೋರಾಟ ಮುಂದುವರಿಸ್ತೇವೆ ಅಂತಾ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಇನ್ನು ದೆಹಲಿ ಸಿಎಂ ಕೇಜ್ರಿವಾಲ್ ಕೂಡ ರಾಹುಲ್ ಬೆನ್ನಿಗೆ ನಿಂತಿದ್ದಾರೆ. ರಾಹುಲ್ ಕೇಸ್​ನಲ್ಲಿ ಕೋರ್ಟ್ ಆದೇಶವನ್ನ ನಾನು ಒಪ್ಪೋದಿಲ್ಲ. ಬಿಜೆಪಿಯೇತರ ನಾಯಕರು ಮತ್ತು ವಿಪಕ್ಷಗಳನ್ನ ನಾಶಗೊಳಿಸಲು ನಡೆಸಿರುವ ಸಂಚು ಇದು. ವಿಪಕ್ಷಗಳು ಮತ್ತು ಜನಸಾಮಾನ್ಯರಿಗೆ ಅಡಳಿತದಲ್ಲಿರುವವರನ್ನ ಪ್ರಶ್ನಿಸುವ ಹಕ್ಕಿದೆ. ಕೋರ್ಟ್​ನ ಈ ತೀರ್ಪನ್ನು ಒಪ್ಪಲು ಸಾಧ್ಯವಿಲ್ಲ ಅಂತಾ ಕೇಜ್ರಿವಾಲ್ ಹೇಳಿದ್ದಾರೆ.

ಮತ್ತೊಂದೆಡೆ ಬಿಜೆಪಿ ನಾಯಕರು ರಾಹುಲ್​ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಾಹುಲ್​ ಏನೇ ಮಾತನಾಡಿದ್ರೂ ಅವರ ಪಕ್ಷ ಮತ್ತು ದೇಶದ ಮೇಲೆ ನೆಗೆಟಿವ್ ಆಗಿಯೇ ಎಫೆಕ್ಟ್ ಆಗುತ್ತೆ. ಅವರ ಮಾತು, ವರ್ತನೆಯಿಂದಲೇ ಕಾಂಗ್ರೆಸ್ ಕುಗ್ಗುತ್ತಿದೆ ಅಂತಾ ಕೇಂದ್ರ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.

 

suddiyaana