ಎಟಿಎಂ ಸರ್ಕಾರದ ಕಲೆಕ್ಷನ್ ಬಾಕ್ಸ್ ಬೇಗ ತುಂಬಿಸುವವರಿಗೆ ಕುರ್ಚಿ -ಕಾಂಗ್ರೆಸ್ ವಿರುದ್ಧ ಬಿಜೆಪಿ ವ್ಯಂಗ್ಯ  

ಎಟಿಎಂ ಸರ್ಕಾರದ ಕಲೆಕ್ಷನ್ ಬಾಕ್ಸ್ ಬೇಗ ತುಂಬಿಸುವವರಿಗೆ ಕುರ್ಚಿ -ಕಾಂಗ್ರೆಸ್ ವಿರುದ್ಧ ಬಿಜೆಪಿ ವ್ಯಂಗ್ಯ  

ಬೆಂಗಳೂರು: ರಾಜ್ಯ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವಿನ ಟ್ವೀಟ್‌ ಸಮರ ನಿಲ್ಲುವಂತೆ ಕಾಣುತ್ತಿಲ್ಲ. ಸದಾ ಒಂದಲ್ಲ ಒಂದು ವಿಚಾರವಾಗಿ ಎರಡು ಪಕ್ಷಗಳು ಟ್ವೀಟ್‌ ಮಾಡಿ ಕಿಡಿಕಾರುತ್ತಲೇ ಇರುತ್ತವೆ. ಇದೀಗ ರಾಜ್ಯ ಬಿಜೆಪಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್‌ ವಿರುದ್ಧ ಟೀಕಾ ಪ್ರಹಾರ ನಡೆಸಿದೆ. ಲೂಟಿ ಸರ್ಕಾರ.. ಎಟಿಎಂ ಸರ್ಕಾರದ ಕಲೆಕ್ಷನ್‌ ಬಾಕ್ಸ್‌ ಎಂಬ ಚಿತ್ರವನ್ನು ಪೋಸ್ಟ್‌ ಮಾಡಿ ವ್ಯಂಗ್ಯವಾಡಿದೆ.

ಈ ಬಗ್ಗೆ ಸರಣಿ ಟ್ವೀಟ್‌ ಮಾಡಿರುವ ರಾಜ್ಯ ಬಿಜೆಪಿ, ಲೂಟಿ ಸರ್ಕಾರ.. ಎಟಿಎಂ ಸರ್ಕಾರದ ಕಲೆಕ್ಷನ್‌ ಬಾಕ್ಸ್‌ ಎಂಬ ಚಿತ್ರವನ್ನು ಪೋಸ್ಟ್‌ ಮಾಡಿದೆ. ಈ ಚಿತ್ರದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅಕ್ಕ ಪಕ್ಕದಲ್ಲಿ ಕುಳಿತಿದ್ದಾರೆ. ಇವರಿಬ್ಬರ ಮಧ್ಯದಲ್ಲಿ ಖಾಲಿ ಕುರ್ಚಿ ಇಟ್ಟು, ಇದರಲ್ಲಿ ‘ಎಟಿಎಂ ಸರ್ಕಾರದ ಕಲೆಕ್ಷನ್ ಬಾಕ್ಸ್’ ಎಂಬ ಬರಹದ ಜತೆ ಪೆಟ್ಟಿಗೆಯೊಂದರ ಚಿತ್ರವನ್ನು ಎಡಿಟ್ ಮಾಡಿ ಸೇರಿಸಿದೆ. ಜತೆಗೆ ಅದರ ಮೇಲೆ ಲೂಟಿ ಸರ್ಕಾರ ಎಂಬ ಬರಹವನ್ನೂ ಸೇರಿಸಿದೆ.

ಇದನ್ನೂ ಓದಿ: ಪತ್ನಿ ಮರಣದ ನಂತರ ಕಾಡಿತು ಒಂಟಿತನ.. – 62 ರ ವಯಸ್ಸಿನಲ್ಲಿ ತಂದೆಗೆ ಮದುವೆ ಮಾಡಿಸಿದ ಮಕ್ಕಳು!

ʼಯಾರು ನನ್ನನ್ನು ವೇಗವಾಗಿ ತುಂಬಿಸುತ್ತಾರೋ, ಅವರಿಗೆ ನನ್ನ ಈ ಕುರ್ಚಿ ಮೀಸಲು. ಎಟಿಎಂ ಸರ್ಕಾರದ ಕಲೆಕ್ಷನ್ ಬಾಕ್ಸ್ ಉವಾಚ’ ಎಂದು ಬಿಜೆಪಿ ಉಲ್ಲೇಖಿಸಿದೆ. ಇಷ್ಟೇ ಅಲ್ಲದೆ ಇನ್ನೂ ಹಲವು ವಿಚಾರಗಳನ್ನಿಟ್ಟುಕೊಂಡು ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.

ಕಾಂಗ್ರೆಸ್‌ನ ಐದು ತಿಂಗಳ ಆಡಳಿತದಲ್ಲಿ ಬ್ರ್ಯಾಂಡ್ ಬೆಂಗಳೂರಿನ ಅಸಲಿ ಚಿತ್ರಣ ಬೆಳಕಿಗೆ ಬಂದಿದೆ! ಒಂದೆಡೆ ರಸ್ತೆಯೊಳಗೆ ಗುಂಡಿಯೋ, ಗುಂಡಿಯೊಳಗಡೆ ರಸ್ತೆಯೋ ಎಂಬ ಸ್ಥಿತಿ ಬೆಂಗಳೂರಿಗರದ್ದು! ಗ್ರೀನ್ ಸಿಟಿ, ಗಾರ್ಡನ್ ಸಿಟಿಯಾಗಿದ್ದ ಬೆಂಗಳೂರು ಗಾರ್ಬೆಜ್ ಸಿಟಿಯಾಗುತ್ತಿದೆ. ಕೇವಲ ರಿಯಲ್ ಎಸ್ಟೇಟ್ ಮಾಫಿಯಾಗಳಿಗೆ, ಗೂಂಡಾಗಳಿಗೆ, ಭಯೋತ್ಪಾದಕರ ಅಡಗುತಾಣಗಳಿಗೆ ಮಾತ್ರ ಬೆಂಗಳೂರು ಸ್ವರ್ಗವಾಗಿದೆ ಹೊರತು ಜನಸಾಮಾನ್ಯರಿಗಲ್ಲ ಎಂದು ಮತ್ತೊಂದು ಸಂದೇಶದಲ್ಲಿ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

ಜನರ ಕಣ್ಣಿಗೆ ಮಣ್ಣೆರಚಿ ಮೋಸದಿಂದ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಈಗ ತೊಡಗಿರುವುದು ತನ್ನ ಅಸಾಮರ್ಥ್ಯ ಮರೆಮಾಚುವ ತಂತ್ರಗಾರಿಕೆಯಲ್ಲಿ. ಅತ್ತ ಗ್ಯಾರಂಟಿ ಮುಂದಿಟ್ಟು ಇತರೆ ಎಲ್ಲಾ ಯೋಜನೆಗಳನ್ನೂ ಹಳ್ಳಹಿಡಿಸಿದ್ದಾಗಿದೆ. ಇತ್ತ ತಾನೇ ಹೇಳಿದ ಗ್ಯಾರಂಟಿಗಳು ಹಳ್ಳ ಹಿಡಿದಿವೆ. ಗೃಹಲಕ್ಷ್ಮಿ ಹೆಸರಲ್ಲಿ ಮನೆಮನೆಯಲ್ಲೂ ಲಕ್ಷ್ಮಿಯರಿಗೆ ಮೋಸ ಮಾಡುತ್ತಿರುವ ಸಿದ್ದರಾಮಯ್ಯ ಅವರ ಸರ್ಕಾರಕ್ಕೇ ತಾಂತ್ರಿಕ ದೋಷದ ಸನ್ನಿ ಹಿಡಿದಿದೆ ಎಂದು ಬಿಜೆಪಿ ಟೀಕಿಸಿದೆ.

ಇನ್ನು ರಾಜ್ಯ ಬಿಜೆಪಿ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ವಿರುದ್ಧವೂ ಟೀಕಾ ಪ್ರಹಾರ ನಡೆಸಿದೆ. ಕುಟುಂಬ ರಾಜಕಾರಣದ ಯುವರಾಜ ರಾಹುಲ್ ಗಾಂಧಿ ಅವರು ಪುಂಗಿ ಪುರುಷೋತ್ತಮ ಎಂಬ ಸತ್ಯವನ್ನು ಸ್ವತಃ ಸಿದ್ದರಾಮಯ್ಯ ಅವರ ಸರ್ಕಾರವೇ ಸಾಬೀತು ಮಾಡಿದೆ. ಬಳ್ಳಾರಿಯನ್ನು ಜೀನ್ಸ್ ಕ್ಯಾಪಿಟಲ್ ಮಾಡುತ್ತೇನೆ,‌ ಇದಕ್ಕಾಗಿ ₹5,000 ಕೋಟಿ ನೀಡುತ್ತೇವೆ, ಇದು ನನ್ನ ಪರ್ಸನಲ್ ಗ್ಯಾರಂಟಿ ಎಂದು ‘ತೋಡೋ’ ಯಾತ್ರೆಯಲ್ಲಿ ರಾಹುಲ್ ಗಾಂಧಿ ಪುಂಗಿ ಊದಿದ್ದರು. ಹೇಳಿದ್ದು ಕೊಡುವುದು ಬಿಡಿ, ಈಗ ಕೈಗಾರಿಕೆ ನಡೆಯಲು ಅಗತ್ಯವಾದ ವಿದ್ಯುತ್‌ ಕೂಡ ಕೊಡಲಾಗದೆ ಕಾಂಗ್ರೆಸ್ ಕೈ ಎತ್ತಿದೆ. ಅನಿಯಮಿತ ಲೋಡ್ ಶೆಡ್ಡಿಂಗ್‌ನಿಂದ ಜೀನ್ಸ್ ಬಟ್ಟೆ ಉದ್ಯಮವನ್ನೇ ಮೂರಾಬಟ್ಟೆ ಮಾಡಿರುವ ಕಾಂಗ್ರೆಸ್‌ ಸರ್ಕಾರ 80 ಸಾವಿರಕ್ಕೂ ಅಧಿಕ ಕುಟುಂಬಗಳನ್ನು ಬೀದಿಗೆ ತಂದಿದೆ ಎಂದು ಬಿಜೆಪಿ ಆರೋಪಿಸಿದೆ.

ರಾಜ್ಯದಲ್ಲಿ ಸಿದ್ದರಾಮಯ್ಯ ಅವರ ಸರ್ಕಾರ ಅಧಿಕಾರಕ್ಕೆ ಬಂದಿದ್ದೇ ತಡ ಮತಾಂಧರು, ಗಲಭೆಕೋರರು, ಪಿಎಫ್‌ಐ ಗೂಂಡಾಗಳು ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕದಡಿ ಕೋಮುಗಲಭೆಗೆ ಮುನ್ನುಡಿ ಇಟ್ಟಿದ್ದಾರೆ. ಶಾಲಾ-ಕಾಲೇಜಿನಲ್ಲಿ ಮಕ್ಕಳ ನಡುವೆ ಸಮಾನತೆ ಕಾಪಾಡುವುದಕ್ಕಾಗಿ ಸಮವಸ್ತ್ರ ನಿಯಮ ಜಾರಿಯಲ್ಲಿದೆ. ಉಡುಪಿಯ ಹಿಜಾಬ್ ಪ್ರಕರಣಕ್ಕೆ ಸಂಬಂಧಿಸಿ ಕೋರ್ಟ್ ಆದೇಶವಿದ್ದರೂ ಕಾಂಗ್ರೆಸ್ ಸರ್ಕಾರ ಇದೀಗ ಮತ್ತೆ ವಿಷಯವನ್ನು ಮುನ್ನಲೆಗೆ ತಂದು ಶಾಲೆಗಳಲ್ಲಿ ಹಿಜಾಬ್‌ ಅನ್ನು ಅಧಿಕೃತಗೊಳಿಸಿ ಪಿಎಫ್‌ಐಗೆ ಋಣ ಸಂದಾಯ ಮಾಡಿ ಸಂತೃಪ್ತಿಗೊಳಿಸುತ್ತಿದೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

Shwetha M