ಕಾಟಾಚಾರಕ್ಕೆ ವಾಗ್ದೇವಿ ದರ್ಶನವನ್ನು ಮಾಡಿದ ಹಿಂದೂ ವಿರೋಧಿ ಸಿಎಂ ಸಿದ್ದರಾಮಯ್ಯ – ಬಿಜೆಪಿ ಕಿಡಿ
![ಕಾಟಾಚಾರಕ್ಕೆ ವಾಗ್ದೇವಿ ದರ್ಶನವನ್ನು ಮಾಡಿದ ಹಿಂದೂ ವಿರೋಧಿ ಸಿಎಂ ಸಿದ್ದರಾಮಯ್ಯ – ಬಿಜೆಪಿ ಕಿಡಿ](https://suddiyaana.com/wp-content/uploads/2024/01/6-1.jpg)
ಸಿಎಂ ಸಿದ್ಧರಾಮಯ್ಯ ಅವರು ಹಿಂದೂ ವಿರೋಧಿ.. ಅಲ್ಪಸಂಖ್ಯಾತರಿಗೆ ಮಾತ್ರ ಅನುದಾನ ನೀಡುತ್ತಾರೆ ಅಂತಾ ಬಿಜೆಪಿ ಕಿಡಿಕಾರುತ್ತಲೇ ಬಂದಿದೆ. ಇದೀಗ ಸಿಎಂ ಸಿದ್ಧರಾಮಯ್ಯ ಅವರು ವಿಜಯಪುರದ ದ್ಯಾಬೇರಿ ಗ್ರಾಮದ ವಾಗ್ದೇವಿ ದೇವಿಯ ದರ್ಶನ ತಾನು ಬರೋದಿಲ್ಲ ಅಂತಾ ಹೇಳಿದ್ದಾರೆ. ಸಿದ್ಧರಾಮಯ್ಯ ಅವರ ಈ ನಡೆಯನ್ನು ರಾಜ್ಯ ಬಿಜೆಪಿ ಖಂಡಿಸಿದೆ. ವಾಗ್ದೇವಿ ದರ್ಶನವನ್ನು ಕಾಟಾಚಾರಕ್ಕೆ ಮಾಡಿದ್ದಾರೆ ಅಂತಾ ಬಿಜೆಪಿ ಕಿಡಿಕಾರಿದೆ.
ಇದನ್ನೂ ಓದಿ: 3 ದಶಕಗಳ ಹಿಂದಿನ ಗಲಭೆಗೆ ಮರುಜೀವ – ರಾಮನ ಹೆಸರಲ್ಲಿ ದ್ವೇಷ ಸಾಧಿಸ್ತಿದ್ಯಾ ಕಾಂಗ್ರೆಸ್?
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ, ಸಿದ್ದರಾಮಯ್ಯನವರು ಮಸೀದಿ, ದರ್ಗಾಗಳಿಗೆ ಹೋಗಿ ಅವರು ನೀಡಿದ್ದೆಲ್ಲವನ್ನೂ ಮೈ ಮೇಲೆ ಹಾಕಿಕೊಳ್ಳುತ್ತಾರೆ. ಆದರೆ ದೇವಿ ದರ್ಶನ ಮಾಡಲು ಸಮಯವಿಲ್ಲ ಎಂದು ಹೇಳಿ ತರಾಟೆಗೆ ತೆಗೆದುಕೊಂಡಿದೆ.
ಅಲ್ಪಸಂಖ್ಯಾತರಿಗೆ 10 ಸಾವಿರ ಕೋಟಿ ನೀಡಿ, ರಾಮಮಂದಿರಕ್ಕೆ ಒಂದು ರೂ. ಸಹ ದೇಣಿಗೆ ನೀಡದ ಚುನಾವಣಾ ಹಿಂದೂ ಸಿಎಂ ಸಿದ್ದರಾಮಯ್ಯರವರ ಅಸಲಿ ಮುಖ ಇದು. ವಿಜಯಪುರದ ದ್ಯಾಬೇರಿ ಗ್ರಾಮದ ವಾಗ್ದೇವಿ ದೇವಿಯ ದರ್ಶನವನ್ನು ಕಾಟಾಚಾರಕ್ಕೆ ಮಾಡಿದ ಹಿಂದೂ ವಿರೋಧಿ ಸಿದ್ದರಾಮಯ್ಯರವರು ಪ್ರಭು ಶ್ರೀರಾಮರ ಅಪರಾವತಾರವಂತೆ ಎಂದು ಲೇವಡಿ ಮಾಡಿದೆ.
ಸಿಎಂ ಸಿದ್ದರಾಮಯ್ಯನವರೇ ಮಸೀದಿ, ದರ್ಗಾಗಳಿಗೆ ಹೋಗಿ ಅವರು ನೀಡಿದ್ದೆಲ್ಲವನ್ನೂ ಮೈ ಮೇಲೆ ಹಾಕಿಕೊಂಡು ಫೋಸು ಕೊಡುವ ನಿಮಗೆ, ದೇವಿಯ ಬಳಿ ನಾಡಿನ ಒಳಿತಿಗಾಗಿ ಭಕ್ತಿಯಿಂದ ಕೈ ಮುಗಿಯುವಷ್ಟು ಸಮಯವಿಲ್ಲ. ಹಿಂದೂ ಧರ್ಮ, ಹಿಂದೂ ದೈವ ಹಾಗೂ ಹಿಂದೂಗಳನ್ನು ಕಂಡರೆ ಈ ಪರಿ ಅಸಡ್ಡೆ ಏಕೆ ಎಂದು ಬಿಜೆಪಿ ಪ್ರಶ್ನಿಸಿದೆ.
ವಿಡಿಯೋದಲ್ಲಿ ಏನಿದೆ?
ಸಿದ್ದರಾಮಯ್ಯ ಅವರು ಮಂಗಳವಾರ ವಿಜಯಪುರ ಜಿಲ್ಲೆಗೆ ಪ್ರವಾಸ ಕೈಗೊಂಡಿದ್ದರು. ಇದೇ ವೇಳೆ, ಸಿದ್ದರಾಮಯ್ಯ ಮತ್ತು ಎಂಬಿ ಪಾಟೀಲ್ ವಿಜಯಪುರದ ದ್ಯಾಬೇರಿ ಗ್ರಾಮದ ವಾಗ್ದೇವಿ ದೇವಿ ದೇವಸ್ಥಾನಕ್ಕೆ ಬಂದಿರುತ್ತಾರೆ. ದೇವಸ್ಥಾನದ ಒಳಗಡೆ ಎಂಬಿ ಪಾಟೀಲ್ ಹೋದ ಬಳಿಕ ಅವರು ಮುಖ್ಯಮಂತ್ರಿಗಳನ್ನು ಒಳಗೆ ಬನ್ನಿ ಎಂದು ಕರೆಯುತ್ತಾರೆ. ಇದಕ್ಕೆ ಸಿಎಂ ಬರಲ್ಲ ಎಂದು ಹೇಳುತ್ತಾರೆ. ಈ ವೇಳೆ ಎಂಬಿ ಪಾಟೀಲ್ ಕೈ ಮುಗಿದು ಬನ್ನಿ ಬನ್ನಿ ಎಂದು ಮನವಿ ಮಾಡುತ್ತಾರೆ. ಇದಕ್ಕೆ ಸಿದ್ದರಮಯ್ಯ ಕೈ ಸನ್ನೆಯ ಮೂಲಕ ನಾನು ಬರುವುದಿಲ್ಲ ಎಂದು ಹೇಳುತ್ತಾರೆ.