ಬಿಜೆಪಿ ಮೂರನೇ ಪಟ್ಟಿ ರಿಲೀಸ್ – ಹಿರಿಯ ನಾಯಕರಿಗೆ ಕೊಕ್!

ಬಿಜೆಪಿ ಮೂರನೇ ಪಟ್ಟಿ ರಿಲೀಸ್ – ಹಿರಿಯ ನಾಯಕರಿಗೆ ಕೊಕ್!

ಬೆಂಗಳೂರು: ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಸೋಮವಾರ ಸಂಜೆ  ಘೋಷಣೆ ಮಾಡಿದೆ. ಅಭ್ಯರ್ಥಿಗಳ ಮೂರನೇ ಪಟ್ಟಿಯಲ್ಲಿ ಒಟ್ಟು 10 ವಿಧಾನ ಸಭಾ ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು, ಹಲವು ಹಿರಿಯ ನಾಯಕರಿಗೆ ಕೊಕ್ ಕೊಡಲಾಗಿದೆ.

ಇದನ್ನೂ ಓದಿ: ಬೊಮ್ಮಾಯಿಯನ್ನೇ ಸೋಲಿಸಿದ್ದ ಶೆಟ್ಟರ್.. ಸತತ 6 ಸಲ ಶಾಸಕ – ಜಗದೀಶ್ ಶೆಟ್ಟರ್ ಹಾದಿಯೇ ರೋಚಕ!

ಮಹದೇವಪುರ ಕ್ಷೇತ್ರದಲ್ಲಿ ಹಾಲಿ ಶಾಸಕ ಅರವಿಂದ ಲಿಂಬಾವಳಿ ಬದಲು ಅವರ ಪತ್ನಿಗೆ ಟಿಕೆಟ್ ನೀಡಿ ಸೇಫ್ ಗೇಮ್ ಆಡಿದೆ. ಇನ್ನು ಹೆಬ್ಬಾಳ ಕ್ಷೇತ್ರದಲ್ಲಿ ಹಿರಿಯ ನಾಯಕ ಕಟ್ಟಾ ಸುಬ್ರಹ್ಮಣ್ಯ ಅವರ ಬದಲು ಅವರ ಪುತ್ರ ಕಟ್ಟಾ ಜಗದೀಶ್ ಗೆ ಟಿಕೆಟ್ ಘೋಷಿಸಲಾಗಿದೆ. ಮೈಸೂರಿನ ಕೃಷ್ಣರಾಜ ಕ್ಷೇತ್ರದಲ್ಲಿ ಹಿರಿಯ ನಾಯಕ ಎಸ್ ಎ ರಾಮದಾಸ್ ಬದಲು ಹೊಸ ಮುಖ ಶ್ರೀವತ್ಸ ಅವರಿಗೆ ಟಿಕೆಟ್ ನೀಡಲಾಗಿದೆ. ಹಾಗೆಯೇ ಜಗದೀಶ್ ಶೆಟ್ಟರ್ ರಾಜೀನಾಮೆ‌ ನಂತರ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರಕ್ಕೆ ಮಹೇಶ್ ಟೆಂಗಿನಕಾಯಿಯವರನ್ನು  ಅಭ್ಯರ್ಥಿಯಾಗಿ ಆಯ್ಕೆ‌‌ ಮಾಡಲಾಗಿದೆ‌. ಇನ್ನು ವಿ.ಸೋಮಣ್ಣ ಪ್ರತಿನಿಧಿಸುತ್ತಿದ್ದ ಗೋವಿಂದರಾಜನಗರ ಕ್ಷೇತ್ರದಲ್ಲಿ ಸೋಮಣ್ಣ‌ ಪುತ್ರನ ಬದಲು ಉಮೇಶ್‌ ಶೆಟ್ಟಿಯವರಿಗೆ ಟಿಕೆಟ್‌ ನೀಡಲಾಗಿದೆ. ಹಾಲಿ ಶಾಸಕರಲ್ಲಿ‌ ರೋಣ‌ ಶಾಸಕ ಕಳಕಪ್ಪ‌ ಬಂಡಿ ಮತ್ತು ಸೇಡಂ ಶಾಸಕ ರಾಜಕುಮಾರ್ ಪಾಟೀಲ್‌ ತೇಲ್ಕೂರು‌ ಕಡೆಗೂ ಮೂರನೇ‌ ಪಟ್ಟಿಯಲ್ಲಿ ಟಿಕೆಟ್ ಪಡೆಯುಲ್ಲಿ ಯಶಸ್ವಿಯಾಗಿದ್ದಾರೆ. ಶಿವಮೊಗ್ಗ ಕ್ಷೇತ್ರದಲ್ಲಿ ಈಶ್ವರಪ್ಪ ಪುತ್ರನಿಗೆ ಟಿಕೆಟ್ ಸಿಗುತ್ತಾ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. 224 ಕ್ಷೇತ್ರಗಳ ಪೈಕಿ ಶಿವಮೊಗ್ಗ ನಗರ ಮತ್ತು ಮಾನ್ವಿ ಕ್ಷೇತ್ರಗಳ ಅಭ್ಯರ್ಥಿ ಘೋಷಣೆ ಬಾಕಿ ಉಳಿದಿದೆ.

ಮೂರನೇ ಪಟ್ಟಿಯಲ್ಲಿ ಯಾರಿಗೆಲ್ಲಾ ಬಿಜೆಪಿ ಟಿಕೆಟ್?

  • ಹುಬ್ಬಳ್ಳಿ ಧಾರವಾಡ ಸೆಂಟ್ರಲ್ – ಮಹೇಶ್ ಟೆಂಗಿನಕಾಯಿ
  • ಹಗರಿ ಬೊಮ್ಮನಹಳ್ಳಿ – ಬಿ. ರಾಮಣ್ಣ
  • ಗೋವಿಂದರಾಜನಗರ – ಉಮೇಶ್ ಶೆಟ್ಟಿ
  • ಮಹದೇವಪುರ – ಮಂಜುಳಾ ಅರವಿಂದ್ ಲಿಂಬಾವಳಿ
  • ಸೇಡಂ – ರಾಜಕುಮಾರ್ ಪಾಟೀಲ್
  • ಹೆಬ್ಬಾಳ – ಕಟ್ಟಾ ಜಗದೀಶ್
  • ಕೊಪ್ಪಳ – ಮಂಜುಳಾ ಅಮರೇಶ್
  • ಕೃಷ್ಣರಾಜ – ಶ್ರೀವತ್ಸ
  • ರೋಣ – ಕಳಕಪ್ಪ ಬಂಡಿ
  • ನಾಗಾಠಾಣ – ಸಂಜೀವ ಐಹೊಳೆ

suddiyaana