ಪಂಚರಾಜ್ಯಗಳ ಚುನಾವಣೆಗೆ ಬಿಜೆಪಿ ಹೈ ಅಲರ್ಟ್‌! – ರಾಜ್ಯ ಬಿಜೆಪಿ ಶಾಸಕರಿಗೆ ಹೈಕಮಾಂಡ್ ಜವಾಬ್ದಾರಿ ಹಂಚಿದ್ದೇಕೆ?

ಪಂಚರಾಜ್ಯಗಳ ಚುನಾವಣೆಗೆ ಬಿಜೆಪಿ ಹೈ ಅಲರ್ಟ್‌! – ರಾಜ್ಯ ಬಿಜೆಪಿ ಶಾಸಕರಿಗೆ ಹೈಕಮಾಂಡ್ ಜವಾಬ್ದಾರಿ ಹಂಚಿದ್ದೇಕೆ?

ನವದೆಹಲಿ: ತೀವ್ರ ಕುತೂಹಲ ಕೆರಳಿಸಿರುವ ಪಂಚ ರಾಜ್ಯಗಳ ವಿಧಾನಸಭೆಗೆ ಚುನಾವಣೆಗೆ ಈಗಾಗಲೇ ದಿನಾಂಕ ಘೋಷಣೆಯಾಗಿದೆ. ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ, ಮಿಜೋರೋಂ, ಛತ್ತೀಸ್‍ಗಢದಲ್ಲಿ ನವೆಂಬರ್ 7 ರಿಂದ ನವೆಂಬರ್ 30 ರವರೆಗೆ ವಿವಿಧ ಹಂತಗಳಲ್ಲಿ ಮತದಾನ ನಡೆಯಲಿದ್ದು, ಡಿಸೆಂಬರ್ 3 ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ಚುನಾವಣಾ ದಿನಾಂಕ ಘೋಷಣೆಯಾಗುತ್ತಿದ್ದಂತೆ ರಾಜಕೀಯ ಪಕ್ಷಗಳ ಮತದಾರರ ಮನವೋಲಿಸಲು ನಾನಾ ರೀತಿಯ ಸರ್ಕಸ್‌ ಮಾಡುತ್ತಿವೆ. ಪಂಚ ರಾಜ್ಯಗಳ ಚುನಾವಣೆ ಹಿನ್ನೆಲೆ ಬಿಜೆಪಿ ಹೈಕಮಾಂಡ್‌ ಪಕ್ಷದ ಶಾಸಕರಿಗೆ ಜವಾಬ್ದಾರಿ ಹಂಚಿಕೆ ಮಾಡಿದೆ ಎಂದು ಮೂಲಗಳು ತಿಳಿಸಿವೆ.

ಬಿಜೆಪಿ ಹೈಕಮಾಂಡ್‌ ಪಂಚರಾಜ್ಯದ ಚುನಾವಣೆಯ ಜವಬ್ದಾರಿಯನ್ನು ಪಕ್ಷದ 40 ರಿಂದ 45 ಶಾಸಕರಿಗೆ ಹಂಚಿಕೆ ಮಾಡಿದೆ. ಇಂದಿನಿಂದಲೇ (ಗುರುವಾರ) ರಾಜ್ಯ ಬಿಜೆಪಿ ಶಾಸಕರು ಪಂಚ ರಾಜ್ಯಗಳಲ್ಲಿ ಪಕ್ಷದ ಅಭ್ಯರ್ಥಿಗಳ ಚುನಾವಣಾ ಕೆಲಸಗಳನ್ನು ನಿರ್ವಹಿಸಲಿದ್ದಾರೆ. ಶಾಸಕ ಮುನಿರತ್ನಗೆ ತೆಲಂಗಾಣ ಚುನಾವಣೆಯಲ್ಲಿ ಕಾರ್ಯನಿರ್ವಹಿಸುವ ಹೊಣೆ ನೀಡಲಾಗಿದ್ದು, ಇಂದು (ಅ.12) ಬೆಳಗ್ಗೆ ತೆಲಂಗಾಣಕ್ಕೆ ತೆರಳಿದ್ದಾರೆ. ಇಂದಿನಿಂದ 10 ದಿನಗಳ ಕಾಲ ಮೊದಲ ಹಂತದಲ್ಲಿ ಚುನಾವಣಾ ಚಟುವಟಿಕೆಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಮೂಲಗಳು ಹೇಳುತ್ತಿವೆ.

ಇದನ್ನೂ ಓದಿ: ಬೀಪ್‌ ಸೌಂಡ್‌ನೊಂದಿಗೆ ಬಂತು ಎಮರ್ಜೆನ್ಸಿ ಅಲರ್ಟ್ ಮೆಸೇಜ್‌! – ಸರ್ಕಾರ ಫೋನ್‌ಗೆ ಸಂದೇಶ ಕಳುಹಿಸಿದ್ದು ಯಾಕೆ?

ನವೆಂಬರ್ 7 ರಂದು ಮಿಜೋರಾಂನಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಛತ್ತೀಸಗಢದಲ್ಲಿ ನ.7 ಮತ್ತು ನ.17 ರಂದು ಎರಡು ಹಂತಗಳಲ್ಲಿ ಮತದಾನ ಇರುತ್ತದೆ. ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯು ನ.17 ರಂದು ಒಂದೇ ಹಂತದಲ್ಲಿ ನಡೆಯಲಿದೆ. ನಂತರ ನ.23 ರಂದು ರಾಜಸ್ಥಾನದಲ್ಲಿ ಮತ್ತು ನ.30 ರಂದು ತೆಲಂಗಾಣದಲ್ಲಿ ಮತದಾನ ನಡೆಯಲಿದೆ. ಡಿಸೆಂಬರ್ 3ಕ್ಕೆ ಐದು ರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.

ಮಿಜೋರಾಂನಲ್ಲಿ 8.52 ಲಕ್ಷ, ಛತ್ತೀಸ್‌ಗಢದಲ್ಲಿ 2.03 ಕೋಟಿ, ಮಧ್ಯಪ್ರದೇಶದಲ್ಲಿ 5.6 ಕೋಟಿ, ರಾಜಸ್ಥಾನದಲ್ಲಿ 5.25 ಕೋಟಿ ಮತ್ತು ತೆಲಂಗಾಣದಲ್ಲಿ 3.17 ಕೋಟಿ ಮತದಾರರಿದ್ದಾರೆ. ಸುಮಾರು 60 ಲಕ್ಷ ಯುವಜನತೆ ಮೊದಲ ಬಾರಿಗೆ (18-19 ವರ್ಷ) 5 ರಾಜ್ಯಗಳ ಚುನಾವಣೆಗಳಲ್ಲಿ ಭಾಗವಹಿಸುತ್ತಾರೆ. ಅರ್ಹತಾ ದಿನಾಂಕಗಳ ತಿದ್ದುಪಡಿಯಿಂದಾಗಿ 15.39 ಲಕ್ಷ ಯುವ ಮತದಾರರು ಚುನಾವಣೆಯಲ್ಲಿ ಭಾಗವಹಿಸಲು ಅರ್ಹರಾಗಿದ್ದಾರೆ. ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಾಗಿ ಒಟ್ಟು 679 ವಿಧಾನಸಭಾ ಕ್ಷೇತ್ರಗಳಲ್ಲಿ 1.77 ಲಕ್ಷ ಮತಗಟ್ಟೆಗಳನ್ನು ಸ್ಥಾಪಿಸುವುದಾಗಿ ಚುನಾವಣಾ ಆಯೋಗ ತಿಳಿಸಿದೆ.

Shwetha M