ತ್ಯಾಗದ ಮೂಲಕ ಮನೆ ಮಂದಿ ಮನಸ್ಸು ಗೆದ್ದ ಸೂರಜ್‌! – ರಿಷಾ,  ರಘು ಸ್ವಾರ್ಥ.. ಮನೆ ಮಂದಿ ಆಕ್ರೋಶ!

ತ್ಯಾಗದ ಮೂಲಕ ಮನೆ ಮಂದಿ ಮನಸ್ಸು ಗೆದ್ದ ಸೂರಜ್‌! – ರಿಷಾ,  ರಘು ಸ್ವಾರ್ಥ.. ಮನೆ ಮಂದಿ ಆಕ್ರೋಶ!

ಬಿಗ್‌ ಬಾಸ್‌ ಮನೆಯ ಆಟ ದಿನದಿಂದ ದಿನಕ್ಕೆ ರೋಚಕತೆ ಪಡೆದುಕೊಳ್ತಿದೆ. ಆರಂಭದಲ್ಲಿ ಒಂಟಿ, ಜಂಟಿ ಕಾನ್ಸೆಪ್ಟ್‌ ಇತ್ತು. ಅದಾದ ಬಳಿಕ ಕೈಗೆ ಹಾಕಿರೋ ಹಗ್ಗ ಕಟ್‌ ಮಾಡಿ, ಒಂಟಿಯಾಗಿ ಟಾಸ್ಕ್‌ ಆಡಲು ಬಿಡಲಾಗಿತ್ತು. ಇದೀಗ ವೈಲ್ಡ್‌ ಕಾರ್ಡ್‌ ಎಂಟ್ರಿಯಾಗಿದೆ. ಮೂವರು ಸ್ಪರ್ಧಿಗಳು ಹಲವು ಅಧಿಕಾರಗಳನ್ನು ಪಡೆದುಕೊಂಡಿದ್ದಾರೆ. ಮನೆಯೊಳಗೆ ಬರುತ್ತಿದ್ದಂತೆ ಇವರಿಂದ ಮಲ್ಲಮ್ಮ, ಅಭಿಷೇಕ್ ಮತ್ತು ಕಾಕ್ರೋಚ್ ಸುಧಿ ನಾಮಿನೇಷನ್‌ ಪ್ರಕ್ರಿಯೆಯಿಂದ ಸೇವ್ ಆಗಿದ್ದರು. ಹಾಗೇ ವೈಲ್ಡ್‌ಕಾರ್ಡ್ ಮೂವರು ಸ್ಪರ್ಧಿಗಳನ್ನು ನಾಮಿನೇಟ್ ಮಾಡುವಂತಿಲ್ಲ ಅಂತ ಬಿಗ್‌ಬಾಸ್ ಆದೇಶಿಸಿದ್ದರು. ಇವೆಲ್ಲದ್ರ ಮಧ್ಯೆ ಸೂರಜ್‌ ತ್ಯಾಗದ ಮೂಲಕ ಟೀಮ್‌ ಮನಸ್ಸ ಗೆದ್ದಿದ್ದಾರೆ.

ಇದನ್ನೂ ಓದಿ: ರಿಷಭ್ ಪಂತ್‌ಗೆ ಒಲಿದ ನಾಯಕತ್ವ – ಸೌತ್ ಆಫ್ರಿಕಾ ವಿರುದ್ಧದ ಸರಣಿಗೆ ಸಾಯಿ ಸುದರ್ಶನ್ ಉಪ ನಾಯಕ

ಬಿಗ್‌ ಬಾಸ್‌ ಮನೆಯಲ್ಲಿ ಕ್ಯಾಪ್ಟನ್ಸಿ ಟಾಸ್ಕ್‌ ನಡೆಯುತ್ತಿದೆ. ಈ ಟಾಸ್ಕ್‌ನಿಂದ ಇಬ್ಬರನ್ನು ಹೊರಗಿಡುವ ಅಧಿಕಾರವನ್ನ ವೈಲ್ಡ್‌ ಕಾರ್ಡ್ ಸ್ಪರ್ಧಿಗಳು ಪಡೆದುಕೊಂಡಿದ್ದರು. ಮೂವರು ಚರ್ಚಿಸಿ ಅಶ್ವಿನಿ ಗೌಡ ಮತ್ತು ಕಾಕ್ರೋಚ್ ಸುಧಿ ಅವರನ್ನು ಟಾಸ್ಕ್‌ನಿಂದ ಹೊರಗಿಟ್ಟಿದ್ದಾರೆ. ಇಷ್ಟು ಮಾತ್ರವಲ್ಲ ಕ್ಯಾಪ್ಟನ್ಸಿ ಟಾಸ್ಕ್‌ನ ತಂಡಗಳಿಗೆ ಈ ಮೂವರೇ ಲೀಡರ್ ಆಗಿದ್ದಾರೆ. ಇದೀಗ ಬಿಗ್‌ಬಾಸ್ ನೀಡಿದ ಮತ್ತೊಂದು ಟ್ವಿಸ್ಟ್‌ನಿಂದ ಮನೆಯಲ್ಲಿ ಕೋಲಾಹಲ ಸೃಷ್ಟಿಯಾಗಿದೆ. ರಿಷಾ ಮತ್ತು ರಘು ವಿರುದ್ಧ ಅವರ ತಂಡದವರು ತಿರುಗಿ ಬಿದ್ದಿದ್ದಾರೆ.

ತಂಡದ ಕ್ಯಾಪ್ಟನ್ ಆಗಿರುವ ಮೂವರಿಗೂ ವಿಶೇಷ ಆಯ್ಕೆಯೊಂದನ್ನು ಬಿಗ್‌ಬಾಸ್ ನೀಡಿದ್ರು. ತಮ್ಮ ಮುಂದಿರುವ ಪವರ್ ಇರೋ ನಾಣ್ಯ ತೆಗೆದುಕೊಂಡ್ರೆ ನೇರವಾಗಿ ಕ್ಯಾಪ್ಟನ್ಸಿ ಆಟಕ್ಕೆ ಆಯ್ಕೆಯಾಗುತ್ತೀರಿ. ಆದ್ರೆ ನಿಮ್ಮ ತಂಡದ ಸದಸ್ಯರೆಲ್ಲರೂ ಆಟದಿಂದ ಹೊರಗುಳಿಯುತ್ತಾರೆ ಎಂದು ಬಿಗ್‌ಬಾಸ್ ಹೇಳುತ್ತಾರೆ. ಮೂವರ ಪೈಕಿ ರಿಷಾ ಮತ್ತು ರಘು ವಿಶೇಷ ಪವರ್ ಇರೋ ನಾಣ್ಯ ಸ್ವೀಕರಿಸುತ್ತಾರೆ. ಸೂರಜ್ ಮಾತ್ರ ತಮ್ಮ ತಂಡದೊಂದಿಗೆ ನಿಂತಿದ್ದಾರೆ. ಕನ್ಫೆಷನ್ ರೂಮ್‌ನಲ್ಲಿ ನಡೆದ ಈ ಪ್ರಕ್ರಿಯೆಯನ್ನು ಮನೆ ಮಂದಿಯೆಲ್ಲರೂ ಲಿವಿಂಗ್ ರೂಮ್‌ನಲ್ಲಿ ಟಿವಿ ಮೂಲಕ ನೋಡಿದ್ದಾರೆ. ಮೂವರು ಕನ್ಫೆಷನ್ ರೂಮ್‌ನಿಂದ ಹೊರ ಬರುತ್ತಿದ್ದಂತೆಮ ರಿಷಾ ಮತ್ತು ರಘು ವಿರುದ್ಧ ಅವರ ತಂಡದ ಆಟಗಾರರು ಮುಗಿಬಿದ್ದಿದ್ದಾರೆ. ತಮ್ಮನ್ನು ಆಟದಲ್ಲಿ ಉಳಿಸಿಕೊಂಡಿದ್ದ ಸೂರಜ್ ತಂಡದ ಸದಸ್ಯರು ಖುಷಿಯಾಗಿದ್ದಾರೆ.

ನೀವು ಒಬ್ಬರು ಕ್ಯಾಪ್ಟನ್ಸಿ ಟಾಸ್ಕ್ ಹೋದ್ರೆ ನಮಗೇನು ಸಿಕ್ತು ಎಂದು ಧನುಷ್ ಪ್ರಶ್ನೆ ಮಾಡಿದ್ದಾರೆ. ನೀವು ತುಂಬಾ ಸ್ವಾರ್ಥಿಯಾಗಿದ್ದು, ಇಡೀ ತಂಡವನ್ನ ಅರ್ಧದಲ್ಲಿಯೇ ಬಿಟ್ಟು ಹೋಗಿದ್ರಿ ಎಂದು ರಿಷಾ ವಿರುದ್ಧ ರಕ್ಷಿತಾ ವಾಗ್ದಾಳಿ ನಡೆಸಿದ್ದಾರೆ. ಟೀಂ ಗೆಲ್ಲಿಸುವೆ ಎಂಬುವುದು ಕ್ಯಾಪ್ಟನ್‌ಗಿರೋ ಜವಾಬ್ದಾರಿ ಎಂದು ಗಿಲ್ಲಿ ನಟ ಹೇಳಿದ್ದಾರೆ. ಇಬ್ಬರ ನಿರ್ಧಾರ ಮಾತ್ರ ಯಾಕೆ ಹೀಗಾಯ್ತು ಎಂದು ಅಶ್ವಿನಿ ಗೌಡ ಸಹ ಪ್ರಶ್ನಿಸಿದ್ದಾರೆ. ಪವರ್ ನಾಣ್ಯ ಬಿಟ್ಟುಬಂದ ಸೂರಜ್ ಒಬ್ಬ ಫೂಲ್ ಅಂತಾ ರಿಷಾ ಹೇಳಿದ್ದಾರೆ.

 

Shwetha M