ಇನ್ಮುಂದೆ ಕರಿಮಣಿ ಮಾಲೀಕ ನಾನಲ್ಲ – ಪ್ರೀತಿಸಿ ಒಂದಾಗಿದ್ದ ಕಿರಿಕ್ ಕೀರ್ತಿ, ಅರ್ಪಿತಾ ದಾಂಪತ್ಯ ವಿಚ್ಛೇದನದಲ್ಲಿ ಅಂತ್ಯ

ಇನ್ಮುಂದೆ ಕರಿಮಣಿ ಮಾಲೀಕ ನಾನಲ್ಲ – ಪ್ರೀತಿಸಿ ಒಂದಾಗಿದ್ದ ಕಿರಿಕ್ ಕೀರ್ತಿ, ಅರ್ಪಿತಾ ದಾಂಪತ್ಯ ವಿಚ್ಛೇದನದಲ್ಲಿ ಅಂತ್ಯ

ಪ್ರೀತಿಸಿ ಮದುವೆಯಾಗಿದ್ದ ಜೋಡಿ ಅದು. ಹೆತ್ತವರ ವಿರೋಧದ ನಡುವೆ ಬಾಳಿ ಬದುಕಿ ತೋರಿಸುತ್ತೇವೆಂದು ಸವಾಲು ಹಾಕಿ ಒಂದಾಗಿದ್ದರು. ಆದರೆ ಈಗ ಸುಂದರ ಸಂಸಾರ ಛಿದ್ರವಾಗಿದೆ. ಒಂದೇ ದೋಣಿ ಮೇಲೆ ಹೊರಟವರು ನಾನೊಂದು ತೀರ ನೀನೊಂದು ತೀರ ಎಂದು ಬೇರೆ ಬೇರೆ ದಿಕ್ಕಿಗೆ ಸಾಗಿದ್ದಾರೆ. ಪತ್ರಕರ್ತ, ನಿರೂಪಕ, ಬಿಗ್‌ ಬಾಸ್‌ ಸೇರಿದಂತೆ ಕೆಲ ರಿಯಾಲಿಟಿ ಶೋಗಳಲ್ಲೂ ಭಾಗಿಯಾಗಿದ್ದ ಕಿರಿಕ್ ಕೀರ್ತಿ ಮತ್ತು ಅವರ ಪತ್ನಿ ಅರ್ಪಿತಾ ಜೋಡಿಯ ದಾಂಪತ್ಯ ಅಂತ್ಯವಾಗಿದೆ. ಇನ್ಮೇಲೆ ಕರಿಮಣಿ ಮಾಲೀಕ ನಾನಲ್ಲ ಎಂದು ಕೀರ್ತಿ ಸೋಶಿಯಲ್ ಮೀಡಿಯಾದಲ್ಲಿ ಘೋಷಣೆ ಮಾಡಿದ್ದಾರೆ.

ಇದನ್ನೂ ಓದಿ : ತವರು ಮನೆಗೆ ಬಂದಿದ್ದ ಮಗಳು ಕಾಡಾನೆ ದಾಳಿಗೆ ಬಲಿ – ಈ ಸಾವು ನ್ಯಾಯವೇ ಎಂದು ಕೇಳುತ್ತಿದ್ದಾರೆ ಗ್ರಾಮಸ್ಥರು

ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದ ಕಿರಿಕ್‌ ಕೀರ್ತಿ, ತಮ್ಮ ದಾಂಪತ್ಯದ ವಿಚಾರವಾಗಿ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ. ಪತ್ನಿ ಅರ್ಪಿತಾ ಜತೆಗೆ ವಿಚ್ಛೇದನ ಪಡೆದಿರುವ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ. ಈ ಹಿಂದೆಯೇ ಕಿರಿಕ್‌ ಕೀರ್ತಿ ಮತ್ತು ಅರ್ಪಿತಾ ನಡುವೆ ಯಾವುದೂ ಸರಿಯಿಲ್ಲ ಎಂಬ ವದಂತಿ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡಿತ್ತು. ಅದ್ಯಾವ ಮಟ್ಟಿಗೆ ಎಂದರೆ, ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೂ ಕೀರ್ತಿ ಬಂದಿದ್ದರಂತೆ. ಆಗ ಕೇಳಿ ಬಂದ ವದಂತಿಗೆ ಕೀರ್ತಿ ಪ್ರತಿಕ್ರಿಯೆ ನೀಡಿದ್ದರು. ಬೇಸರದಲಿಯೇ ಮನದ ನೋವನ್ನು ಲೈವ್‌ನಲ್ಲಿ ಹಂಚಿಕೊಂಡಿದ್ದರು. ಪ್ಲೀಸ್‌ ನಮ್ಮನ್ನು ಬದುಕೋಕೆ ಬಿಡ್ರಪ್ಪ, ಯಾಕ್‌ ಹಿಂಗ್‌ ಟಾರ್ಚರ್‌ ಕೊಡ್ತೀರ? ಎಂದಿದ್ದರು. ಇದೀಗ ಅಂದು ಹರಿದಾಡಿದ ಸುದ್ದಿ ನಿಜವಾಗಿದೆ. ಪ್ರೀತಿಸಿ ಮದುವೆಯಾದ ಈ ಜೋಡಿ ಇದೀಗ ವಿಚ್ಛೇದನ ನೀಡಿ ಪರಸ್ಪರ ದೂರವಾಗಿದ್ದಾರೆ. ಈ ವಿಚಾರವನ್ನು ಸೋಷಿಯಲ್‌ ಮೀಡಿಯಾದಲ್ಲಿಯೂ ಹಂಚಿಕೊಂಡಿದ್ದಾರೆ. ತುಂಭಾ ಭಾವನಾತ್ಮಕವಾಗಿ ಕೀರ್ತಿ ಪೋಸ್ಟ್ ಶೇರ್ ಮಾಡಿದ್ದಾರೆ.

ಪೋಸ್ಟ್‌ ಆರಂಭದಲ್ಲಿ ಸಕಲರಿಗೂ ಸನ್ಮಂಗಳವಾಗಲಿ ಎಂದು ಬರೆದುಕೊಂಡು, ‘ಕಾನೂನಿನ ಪ್ರಕಾರ ಇವತ್ತು ನನ್ನ ಮತ್ತು ಅರ್ಪಿತಾ ಜೊತೆಗಿನ ಪತಿ-ಪತ್ನಿಯ ಸಂಬಂಧಕ್ಕೆ ಪೂರ್ಣ ವಿರಾಮ ಸಿಕ್ಕಿದೆ. ಇನ್ನು ಮುಂದೆ ನನ್ನ ವೈಯಕ್ತಿಕ, ವ್ಯಾವಹಾರಿಕ ವಿಚಾರಗಳಿಗೂ ಅವಳಿಗೂ ಯಾವುದೇ ಸಂಬಂಧ ಇರುವುದಿಲ್ಲ. ಕಾರಣ ಇಷ್ಟೇ.. ಅಧಿಕೃತವಾಗಿ ಇನ್ನು ಮುಂದೆ ಕರಿಮಣಿ ಮಾಲೀಕ ನಾನಲ್ಲ. ಒಂದೊಳ್ಳೆಯ ಬದುಕು ಅವಳಿಗೂ ಸಿಗಲಿ, ಕಹಿನೆನಪುಗಳು ಮರೆತು ಹೊಸಜೀವನಕ್ಕೆ ನಾಂದಿ ಹಾಡಲಿ, ನನಗೂ ನಿಮ್ಮ ಪ್ರೀತಿ ಹಾರೈಕೆ ಮುಂದುವರಿಯಲಿ’ ಎಂದು ಬರೆದುಕೊಂಡಿದ್ದಾರೆ.

ಇನ್ನು ಡಿವೋರ್ಸ್‌ ವಿಚಾರಕ್ಕೂ ಮೊದಲು ಆಗಸ್ಟ್‌ 15ರಂದು ತಮ್ಮ ಫೇಸ್‌ಬುಕ್‌ ಪುಟದಲ್ಲಿಯೂ ಕಿರು ಬರಹವೊಂದನ್ನು ಪೋಸ್ಟ್‌ ಮಾಡಿಕೊಂಡಿದ್ದರು. ‘ಸಾಕು.. ಇನ್ನು ನನ್ನ ಸಿದ್ದಾಂತ.. ದೇಶ ಪ್ರೇಮ, ಕನ್ನಡ ಪ್ರೇಮ, ಧರ್ಮದ ಅಭಿಮಾನ ನನ್ನ ಮನಸ್ಸಿನಲ್ಲಿ ಮಾತ್ರ… ನಿಮ್ಮ ದ್ವೇಷ, ಫೇಕ್ ನ್ಯೂಸ್, ಅವಮಾನಗಳು, ಬೈಗುಳಗಳು.. ಇದೇ ನಿಮ್ಮಾಸ್ತಿ… ನನಗೆ ಇದನ್ನೆಲ್ಲಾ ಎದುರಿಸೋ ಶಕ್ತಿ ಇದ್ದಂತಿಲ್ಲ… ಯಾಕಂದ್ರೆ ಇದು ನನ್ನಮ್ಮನ ಕಣ್ಣೀರಿಗೆ ಕಾರಣವಾಗಿದೆ. ಮಗನ ಭವಿಷ್ಯಕ್ಕೆ, ಕುಟುಂಬದ ನೆಮ್ಮದಿಗೆ ದೊಡ್ಡ ಅಡ್ಡಿಯಾಗಿದೆ. ಸಾಕ್ರಪ್ಪಾ ಸಾಕು. ನಾನು ಸೋತರೂ ಪರ್ವಾಗಿಲ್ಲ.. ನಿಮ್ಮ ಮಟ್ಟಿಗೆ ಇಳಿಯೋಕೆ ನಂಗೆ ಸಾಧ್ಯವಿಲ್ಲ. ನಿಮ್ಮಷ್ಟು ದ್ವೇಷ ನನಗೆ ಜೀವನದಲ್ಲಿ ಯಾವತ್ತೂ ಸಾಧ್ಯವಿಲ್ಲ. ಇನ್ನಾದ್ರೂ ನನ್ನ ಕುಟುಂಬ, ವೈಯಕ್ತಿಕ ಜೀವನವನ್ನು ಬಿಟ್ಟು ನೆಮ್ಮದಿಯಾಗಿ ಅವರನ್ನು ಬದುಕಲು ಬಿಡಿ ಎಂದಿದ್ದರು.

ಕಿರಿಕ್ ಕೀರ್ತಿ ದಂಪತಿ ಪ್ರೀತಿಸಿ ಮದುವೆಯಾಗಿದ್ದರು. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿದ್ದ ಜೋಡಿ ನಂಬರ್ 01 ಕಾರ್ಯಕ್ರಮದಲ್ಲಿ 10 ಜೋಡಿಗಳ ಪೈಕಿ ಕಿರಿಕ್ ಕೀರ್ತಿ ದಂಪತಿ ಕೂಡ ಭಾಗವಹಿಸಿದ್ರು. ಪತಿ-ಪತ್ನಿಯರ ನಡುವಿನ ಸಂಬಂಧವನ್ನು ಇನ್ನುಷ್ಟು ಗಟ್ಟಿ ಮಾಡೋ ಕಾರ್ಯಕ್ರಮದ ಫಿನಾಲೆಯಲ್ಲಿ ಜೋಡಿ ನಂಬರ್ 1 ಪಟ್ಟವನ್ನು ನಟ ಅಭಿಜಿತ್ ಮತ್ತು ಅವರ ಪತ್ನಿ ರೋಹಿಣಿ ಅಲಂಕರಿಸಿದ್ದರು. ಕಾರ್ಯಕ್ರಮದಲ್ಲಿ ಮೊದಲ ರನ್ನರ ಅಪ್ ನ್ನು ಕಿರಿಕ್ ಕೀರ್ತಿ ಮತ್ತು ಅರ್ಪಿತ ಪಡೆದಿದ್ದರು.

ಕೀರ್ತಿ ಮತ್ತು ಅರ್ಪಿತಾ ಕನ್ನಡ ಪ್ರೇಕ್ಷಕರಿಗೆ ಹೊಸಬರೇನಲ್ಲ. ಕೀರ್ತಿ ಅವರು ಬಹಳ ಸಮಯದಿಂದ ಮನರಂಜನೆ ಮತ್ತು ಸುದ್ದಿ ಮಾಧ್ಯಮದಲ್ಲಿದ್ದಾರೆ. ಪ್ರತಿಷ್ಠಿತ ವಾಹಿನಿಗಳಲ್ಲಿ ಮಾಧ್ಯಮದವರಾಗಿ ಕೆಲಸ ಮಾಡಿ ತನಗೊಂದು ಗೂಡು ಕಟ್ಟಿಕೊಂಡಿದ್ದಾರೆ. ಕನ್ನಡ ಭಾಷೆಯ ಮೇಲಿನ ಪ್ರೀತಿಗೆ ಹೆಸರಾಗಿದ್ದರೂ ಅವರಿಗೆ ಅಪಾರ ಜನಪ್ರಿಯತೆ ತಂದುಕೊಟ್ಟಿದ್ದು ಬಿಗ್ ಬಾಸ್ ಕನ್ನಡ ಸೀಸನ್ 4. ಅವರು ಆ ಸೀಸನ್ ನ ರನ್ನರ್ ಅಪ್ ಆಗಿ ಹೊರಹೊಮ್ಮಿದರು. ಮತ್ತೊಂದೆಡೆ, ಕೀರ್ತಿ ಪತ್ನಿ ಅರ್ಪಿತಾ ಕೂಡ ಇತ್ತೀಚಿನ ದಿನಗಳಲ್ಲಿ ಅಷ್ಟೇ ಜನಪ್ರಿಯರಾಗಿದ್ದಾರೆ. ಅವರು ರುಕ್ಕು ಮತ್ತು ನಾಗಿಣಿ 2 ನಂತಹ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಜೊತೆಗೆ ಅರ್ಪಿತಾ ಪೌಷ್ಟಿಕತಜ್ಞೆ ಕೂಡ.

ಅರ್ಪಿತಾ ಮತ್ತು ಕಿರಿಕ್ ಕೀರ್ತಿ ದಂಪತಿ ನಡುವೆ ಪ್ರೀತಿ ಶುರುವಾಗಿದ್ದು ಒಂದು ಕಾಲೇಜಿನಲ್ಲಿ. ಅರ್ಪಿತಾ ತನ್ನ ಕಾಲೇಜಿನಲ್ಲಿ ಕೀರ್ತಿಯನ್ನು ಮೊದಲ ಬಾರಿಗೆ ನೋಡಿದ್ದಾಗಿ ಹೇಳಿಕೊಂಡಿದ್ದರು. ವಿದ್ಯಾರ್ಥಿನಿಯರ ಕಾಲೇಜಿಗೆ ಸಮಾರಂಭವೊಂದಕ್ಕೆ ಕೀರ್ತಿ ಭೇಟಿ ನೀಡಿದ್ದ ವೇಳೆ ಅರ್ಪಿತಾ ಮತ್ತು ಅವರ ನಡುವೆ ಸ್ನೇಹವಾಗಿತ್ತು. ಸ್ನೇಹ ಪ್ರೀತಿಯಾಗಿ ಬದಲಾಗಿತ್ತು. ಆದರೆ ಇಬ್ಬರ ಪ್ರೀತಿಗೆ ಅರ್ಪಿತಾ ಮನೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು.  ಅಲ್ಲದೆ ಕೀರ್ತಿಯನ್ನ ಮರೆಯುವಂತೆ ನನಗೆ ಥಳಿಸಿದ್ದರು ಎಂದು ಅರ್ಪಿತಾ ಹೇಳಿಕೊಂಡಿದ್ದರು. 45 ದಿನಗಳ ಕಾಲ ಮನೆಯಲ್ಲಿ ಇರಿಸಿ ಯಾರನ್ನೂ ಸಂಪರ್ಕಿಸಲು ಅಥವಾ ಮನೆಯಿಂದ ಹೊರಬರಲು ಅವಕಾಶವಿರಲಿಲ್ಲ. ಆದಾಗ್ಯೂ, ಕೀರ್ತಿ ಮೇಲಿನ ಪ್ರೀತಿ ಎಂದಿಗೂ ಮರೆಯಾಗಲಿಲ್ಲ. ಆ 45 ದಿನಗಳ ಕಾಲ ಕೇವಲ ಮೊಸರು ಅನ್ನವನ್ನೇ ಸೇವಿಸಿ ಬದುಕಿ ಬಂದಿದ್ದೇನೆ ಎಂದು ಹೇಳಿಕೊಂಡು ಕಣ್ಣೀರಿಟ್ಟಿದ್ದರು. ಇನ್ನು ಕೀರ್ತಿ ಕೂಡ ತನ್ನ ಪತ್ನಿಯ ಹೆಸರನ್ನ ಹಚ್ಛೆ ಹಾಕಿಸಿಕೊಂಡಿದ್ದರು.

ಆದರೆ ಇತ್ತೀಚೆಗೆ ಕಿರಿಕ್ ಕೀರ್ತಿ ಪಬ್ ವೊಂದರಲ್ಲಿ ಕುಡಿದು ಗಲಾಟೆ ಮಾಡಿಕೊಂಡಿದ್ದಾರೆ ಎಂದು ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗಿತ್ತು. ಇದಾಗ ಬಳಿಕ ಇಬ್ಬರ ದಾಂಪತ್ಯದಲ್ಲಿ ಕಲಹ ಏರ್ಪಟ್ಟಿತ್ತು. ಬಳಿಕ ಇಬ್ಬರು ಕೂಡ ಬೇರೆ ಬೇರೆಯಾಗಿ ವಾಸಿಸಲು ಶುರು ಮಾಡಿದ್ದರು. ಅನಂತರದ ದಿನಗಳಲ್ಲಿ ಕಿರಿಕ್ ಕೀರ್ತಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿತ್ತು. ಹೀಗೆ ಸಾಲು ಸಾಲು ವದಂತಿಗಳ ನಡುವೆ ಕಿರಿಕ್ ಕೀರ್ತಿ ಹಾಗೂ ಅರ್ಪಿತಾ ತಮ್ಮ ದಾಂಪತ್ಯಕ್ಕೆ ಅಂತ್ಯ ಹಾಡಿದ್ದಾರೆ.  ಸದ್ಯಕ್ಕೆ ಅರ್ಪಿತ ತಮ್ಮ ಮಗನೊಂದಿಗೆ ತಂದೆಯ ಮನೆಯಲ್ಲಿದ್ದು ಕಿರಿಕ್ ಕೀರ್ತಿ ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದಾರೆ.

 

suddiyaana