ಜಿರಳೆ ಕೊಂದು ಹಾಲಲ್ಲಿ ಬೆರೆಸಿ ಕುಡಿದ ಜಯಂತ್ – ಪಾಪ.. ಜಾಹ್ನವಿ ಕಥೆ ಮುಂದೇನು?

ಜಿರಳೆ ಕೊಂದು ಹಾಲಲ್ಲಿ ಬೆರೆಸಿ ಕುಡಿದ ಜಯಂತ್ – ಪಾಪ.. ಜಾಹ್ನವಿ ಕಥೆ ಮುಂದೇನು?

ಒಂದು ಸೀರಿಯಲ್ ನೋಡುವವರಿಗೆ ಮನರಂಜನೆ ಕೊಡ್ಬೇಕು. ಇಲ್ಲಾಂದ್ರೆ, ಅಯ್ಯೋ ಹೀಗಾಯ್ತಲ್ಲಾ, ನಮ್ಮನೆ ಕಥೆ ಕೂಡಾ ಇದೇ ಥರ ಇದೆ ಅನ್ನೋವಷ್ಟರ ಮಟ್ಟಿಗೆ ನೋವು ಕೊಡ್ಬೇಕು. ಕಥೆ ರೀಲ್ ಆದ್ರೂ ರಿಯಾಲಿಟಿ ಸ್ವಲ್ಪವಾದ್ರೂ ಕನೆಕ್ಟ್ ಆಗುವಂತೆ ಇರಬೇಕು. ಕಿರುತೆರೆಯನ್ನು ವೀಕ್ಷಕರು ಇಷ್ಟಪಡೋದು ಕೂಡಾ ಅದೇ ಕಾರಣಕ್ಕೆ. ಆದ್ರೆ, ಲಕ್ಷ್ಮೀ ನಿವಾಸ ಅನ್ನೋ ಸೀರಿಯಲ್‌ನಲ್ಲಿ ಒಂದು ಎಪಿಸೋಡ್ ಪ್ರಸಾರವಾಗಿದ್ದನ್ನು ನೋಡಿದ್ರೆ, ಅಬ್ಬಬ್ಬಾ.. ಮನೆ ಮಂದಿಯೊಂದಿಗೆ ಕುಳಿತು ನೋಡಿದ್ರೆ ತಲೆಕೆಡೋದು ಗ್ಯಾರಂಟಿ. ನೋವು, ಕಣ್ಣೀರು, ನಲಿವು ಇರಬೇಕು. ಆದ್ರೆ, ಇಷ್ಟೊಂದು ವಿಕೃತಿಯೂ ಬೇಕಾ ಅನ್ನೋ ರೀತಿಯಿದೆ  ಲಕ್ಷ್ಮೀ ನಿವಾಸ ಸೀರಿಯಲ್.

ಇದನ್ನೂ ಓದಿ: ರೀಲ್ಸ್ ರಾಣಿ ಆ ರಾತ್ರಿ ಹೋಗಿದ್ದೆಲ್ಲಿಗೆ? – ಸೋನು ಶ್ರೀನಿವಾಸ್‌ ಗೌಡ ಮಾಡ್ಕೊಂಡ ಎಡವಟ್ಟುಗಳೇನು?

ಲಕ್ಷ್ಮೀ ನಿವಾಸ ಸೀರಿಯಲ್ ಸ್ಟಾರ್ಟ್ ಆದಾಗ ತಾರಾಬಳಗ ನೋಡಿಯೇ ವೀಕ್ಷಕರು ತುಂಬಾ ಖುಷಿಪಟ್ಟಿದ್ರು. ಮಧ್ಯಮವರ್ಗದ ದಂಪತಿಯ ಕಥೆ ವ್ಯಥೆ, ಮನೆ ಕಟ್ಟುವ ಕನಸು, ಮಕ್ಕಳ ಮದುವೆಯ ಜವಾಬ್ದಾರಿಯ ಕಥೆಯನ್ನಾಧಾರಿಸಿ ಬರುವ ಸೀರಿಯಲ್ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆಯೂ ಇತ್ತು. ಆದ್ರೆ, ಸೀರಿಯಲ್ ಸ್ಟಾರ್ಟ್ ಆಗ್ತಿದ್ದಂತೆ ಬರೀ ನೋವು, ಸಾವು, ಕಣ್ಣೀರು ನೋಡಿ ವೀಕ್ಷಕರು ಇದು ಬರೀ ಸ್ಯಾಡ್ ಸೀರಿಯಲ್ ಅಂತಾ ಫೀಲ್ ಮಾಡ್ಕೊಂಡಿದ್ರು. ಕೊನೆಗೂ ಸಿದ್ದೇಗೌಡರ ಕ್ಯಾರೆಕ್ಟರ್ ಎಂಟ್ರಿಯಾದ್ಮೇಲೆ ನಗು, ಲವ್ ಸ್ಟೋರಿಯಿಂದಾಗಿ ಸೀರಿಯಲ್ ಒಂದು ಲಯಕ್ಕೆ ಬಂದಿತ್ತು. ಟಿಆರ್‌ಪಿಯಲ್ಲೂ ಸಡನ್ ಏರಿಕೆ ಕಂಡಿತ್ತು.  ನಂತರ ಶುರುವಾಗಿದ್ದೇ ಜಯಂತ್ ಜಾಹ್ನವಿ ಮದುವೆ ಮಾತುಕತೆ. ಆಗ್ಲೇ ವೀಕ್ಷಕರಿಗೆ ಒಂದು ಡೌಟ್ ಬಂದಿತ್ತು. ಶ್ರೀಮಂತ ಹುಡುಗ ಮನೆಬಾಗಿಲವರೆಗೂ ಹೆಣ್ಣು ಕೇಳಿಕೊಂಡು ಬರ್ತಾನೆ ಅಂದ್ರೆ ಆತ ಏನೋ ಮಸಲತ್ತು ಮಾಡಿಕೊಂಡೇ ಬಂದಿರಬೇಕು ಅಂತಾ. ಇನ್ನು ಜಯಂತ್ ಮುಖ ನೋಡಿದ್ರೆ ಅವನು ಕೆಟ್ಟವನು ಅಂತಾ ಅನ್ನಿಸೋದೇ ಇಲ್ಲ. ಸಣ್ಣ ಸ್ಮೈಲ್​ನೊಂದಿಗೆ ಸಾಫ್ಟ್ ಆಗಿ ಮಾತಾಡ್ತಾ ಪ್ರೇಕ್ಷಕರ ಮನ ಗೆದ್ದಿದ್ದ. ಜಾಹ್ನವಿಗೆ ಒಳ್ಳೆ ಹುಡುಗ ಸಿಕ್ಕ ಅಂತಾ ಒಂದಷ್ಟು ಜನ ಅಂದುಕೊಳ್ತಿದ್ರು. ಇನ್ನೂ ಕೆಲವ್ರು ಜಯಂತ್ ತೀರಾ ಒಳ್ಳೆಯವನ ಥರಾ ಇರೋದನ್ನ ನೋಡಿ ಆತನ ಎಂಟ್ರಿ ಆರಂಭದಲ್ಲೇ ಸೀರಿಯಲ್ ವಿಲನ್ ಅಂತಾನೂ ವೀಕ್ಷಕರಿಗೆ ಸಂದೇಹ ಬಂದಿತ್ತು. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ಕೂಡಾ ಶುರುವಾಗಿತ್ತು. ಈಗ ವೀಕ್ಷಕರು ಅಂದುಕೊಂಡಿದ್ದೇ ನಿಜವಾಗಿದೆ. ಮದುವೆಯಾದ ಜಾಹ್ನವಿ ಬಾಳಲ್ಲಿ ಮೊದಲ ದಿನವೇ ಬಿರುಗಾಳಿಯೆದ್ದಿದೆ.

ಇತ್ತ ಹೆತ್ತವರು ಮಗಳು ಶ್ರೀಮಂತನ ಮನೆ ಸೊಸೆ ಎಂದು ಸಮಾಧಾನದಿಂದ ಇದ್ದರೆ, ಇತ್ತ ರಿಚ್ ಉದ್ಯಮಿ ಜಯಂತ್ ರಿಯಲ್ ಕ್ಯಾರೆಕ್ಟರ್ ರಿವೀಲ್ ಆಗಿದೆ. ಜಾಹ್ನವಿಗೆ ಅಂಗೈಲಿ ಆಕಾಶ ತೋರಿಸಿದ ಜಯಂತ್, ಪಾಪದ ಹುಡುಗಿಯ ಮನದಲ್ಲಿ ಆಶಾಗೋಪುರ ಕಟ್ಟಿಸಿದ್ದ. ಆದ್ರೆ ಮುಗ್ಧೆ ಜಾನುಗೆ ಪ್ರೀತಿಯ ಮತ್ತು ಬರಿಸಿದ್ದ ಜಯಂತ್ ನಿಜಕ್ಕೂ ಒಳ್ಳೆಯವನಲ್ಲ.. ಆತನೊಬ್ಬ ಸೈಕೋ. ಹೌದು, ಸ್ನೇಹಿತರೇ, ಜಯಂತ್ ಅತೀವಿನಯದ ಹಿಂದೆ ವಿಕೃತ ಮನಸಿದೆ ಎಂಬುದು ಬಯಲಾಗಿದೆ. ಜಯಂತ್ ಒಳ್ಳೆಯನಂತೆ ನಟಿಸುತ್ತಿದ್ದಾನೆ. ಯಾಕೋ ಆತಂಕವಾಗ್ತಿದೆ ಅಂತಾ ವೀಕ್ಷಕರು ಹೇಳಿದ್ದೇ ಸತ್ಯವಾಗಿದೆ. ಪಾಪ.. ಜಾನು ಪರಿಸ್ಥಿತಿ ನೋಡೋಕೆ ಆಗ್ತಿಲ್ಲ. ಪ್ರತಿಯೊಬ್ಬ ಹೆಣ್ಣಿಗೂ ಫಸ್ಟ್‌ನೈಟ್ ಬಗ್ಗೆ ಮಧುರವಾದ ಕಲ್ಪನೆಗಳು ಇರುತ್ತದೆ. ಮೆಚ್ಚಿ ಮದುವೆಯಾದ ಗಂಡನ ಮೇಲೆ ಒಲವು ತುಂಬಿರುತ್ತದೆ. ಗಂಡನ ಸ್ಪರ್ಷಕ್ಕೆ ಹೆಂಡತಿ ಕಾಯುತ್ತಿರುತ್ತಾಳೆ. ಆದರೆ, ಜಾನುಗೆ ಮೊದಲ ರಾತ್ರಿಯೇ ಗಂಡನ ನಿಜರೂಪ ಗೊತ್ತಾಗಿದೆ. ಅರಳಿದ ತಾವರೆಯಾಗಬೇಕಿದ್ದ ಜಾನು, ಮುದುಡಿ ಹೋಗಿದ್ದಾಳೆ.

ಸೀರಿಯಲ್ ಅಂದಾಗ ನಮ್ಮನೆ ಕಥೆ ಹೀಗೆ ಸ್ವಾಮಿ ಅನ್ನುವಷ್ಟು ನಿಜಜೀವನಕ್ಕೆ ಸ್ವಲ್ಪವಾದ್ರೂ ಟಚ್ ಆಗುತ್ತೆ. ಆದ್ರೆ, ಈ ಸೀರಿಯಲ್‌ನಲ್ಲಿ ಸೈಕೋ ಬುದ್ದಿಯನ್ನು ತೋರಿಸೋಕೆ ಹೋಗಿ ವಿಕೃತ ಮನಸನ್ನು ಜಾಸ್ತಿಯೇ ತೋರಿಸಿದ್ದಾರೆ. ಇದೇ ಈಗ ಚರ್ಚೆಗೂ ಎಡೆಮಾಡಿಕೊಟ್ಟಿದೆ. ಸಾಮಾನ್ಯವಾಗಿ ಜಿರಳೆ ಕಂಡ್ರೇನೇ ತುಂಬಾ ಜನ್ರಿಗೆ ಒಂಥರಾ ಅಲರ್ಜಿ. ಇನ್ನು ಅದನ್ನ ಕೈಯಲ್ಲಿ ಹಿಡಿದು ಕೊಲ್ಲೋದು, ನಂತರ ಕುಡಿಯುವ ಹಾಲಿಗೆ ಜಿರಳೆಯನ್ನ ಹಾಕಿ ಕುಡಿಯುವುದು. ಅದನ್ನು ವೀಕ್ಷಕರಿಗೂ ತೋರಿಸಿಕೊಂಡೇ ಕುಡಿಯೋ ಸನ್ನಿವೇಶ ನೋಡಿ ಸೀರಿಯಲ್‌ನಲ್ಲೂ ಇಷ್ಟೊಂದು ವಿಕೃತಿ ಬೇಕಿತ್ತಾ ಎಂಬ ಪ್ರಶ್ನೆ ಎದುರಾಗಿದೆ.

ಇಲ್ಲಿಯವರೆಗೆ ಜಾನು ಕಂಡಿದ್ದು ಜಯಂತ್‌ನ ಹೊರಪ್ರಪಂಚದ ಜೀವನ. ಮನೆಯೊಳಗೆ ಇನ್ನೊಂದು ರೂಪವಿದೆ ಎಂದು ಕಣ್ಣಾರೆ ಕಂಡ ಜಾನು ಶಾಕ್‌ಗೊಳಗಾಗಿದ್ದಾಳೆ. ಇನ್ನು ಜಯಂತ್ ಜಿರಳೆ ಜೊತೆ ಮಾತಾಡುವ ರೀತಿ ಕೂಡಾ ಜಾನುಗೆ ನಡುಕ ಹುಟ್ಟಿಸಿದೆ. ನನ್ನ ಹೆಂಡತಿ ಮೈಮೇಲೆ ಹರಿದಾಡುವಷ್ಟು ಧೈರ್ಯಾನಾ ನಿನಗೆ, ಅವಳನ್ನು ನಾನು ಮಾತ್ರ ಮುಟ್ಟಬೇಕು, ಅವಳು ನನಗೆ ಮಾತ್ರ ಸ್ವಂತ ಎಂದು ಹೇಳಿ ಜಿರಳೆಯನ್ನು ಕೊಂದು, ನಂತರ ಹಾಲಲ್ಲಿ ಬೆರೆಸಿ ಜಿರಳೆ ಸಮೇತ ಕುಡಿದಿದ್ದಾನೆ. ಈ ಎಪಿಸೋಡ್ ನೋಡಿ ಜಾನು ಬಿಡಿ, ವೀಕ್ಷಕರೇ ಶಾಕ್ ಆಗಿದ್ದಾರೆ. ಅದಕ್ಕೆ ಹೇಳೋದು ಅತಿವಿನಯಂ ದೂರ್ತಲಕ್ಷಣಂ ಅಂತಾ.

Sulekha