ಆರ್‌ಸಿಬಿಗೆ ‘ಹೈ’ ಟೆನ್ಶನ್ – ರಾಜಭವನದಲ್ಲಿದ್ದ RCB ಸನ್ಮಾನಿಸುವ ಪ್ಲ್ಯಾನ್ ರದ್ದಾಗಿದ್ದೇಕೆ?

ಆರ್‌ಸಿಬಿಗೆ ‘ಹೈ’ ಟೆನ್ಶನ್  –  ರಾಜಭವನದಲ್ಲಿದ್ದ RCB ಸನ್ಮಾನಿಸುವ ಪ್ಲ್ಯಾನ್ ರದ್ದಾಗಿದ್ದೇಕೆ?

ಕಪ್​ ಗೆದ್ದ ಸಂಭ್ರಮ ಕಸಿದುಕೊಂಡ ಕಾಲ್ತುಳಿತದ ಘಟನೆ ಹೈಕೋರ್ಟ್​ ಮೆಟ್ಟಿಲೇರಿದೆ. ಘಟನೆ ಬಗ್ಗೆ ಸ್ವಯಂಪ್ರೇರಿತ ಪಿಐಎಲ್ ದಾಖಲಿಸಿಕೊಂಡಿದ್ದ ಹೈಕೋರ್ಟ್​ ದುರಂತವನ್ನ ಗಂಭೀರವಾಗಿ ಪರಿಗಣಿಸಿದೆ. ಸರ್ಕಾರಕ್ಕೆ ಒಂದಷ್ಟು ಪ್ರಶ್ನೆಗಳನ್ನ ಕೇಳಿದ್ದ ನ್ಯಾಯಾಲಯ ಚಾಟಿ ಬೀಸಿತ್ತು. ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದ ಹೈಕೋರ್ಟ್​, ಸರ್ಕಾರದ ವೈಫಲ್ಯ, KSCA ನಿರ್ಲ್ಯಕ್ಷದ ಬಗ್ಗೆ ​​​​ ತರಾಟೆಗೆ ತೆಗೆದುಕೊಂಡು   ವಿಚಾರಣೆ ನಡೆಸಿದೆ.

 ಹೆಚ್ಚಿನ ಕಾಲಾವಕಾಶ ನೀಡದ ಹೈಕೋರ್ಟ್

ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಹೈಕೋರ್ಟ್​ನಲ್ಲಿ ಪಿಐಎಲ್ ಅರ್ಜಿ ವಿಚಾರಣೆ ನಡೆಸಲಾಗಿದೆ. ಹೈಕೋರ್ಟ್ ದ್ವಿಸದಸ್ಯ ಪೀಠದಲ್ಲಿ ವಿಚಾರಣೆ ನಡೆದಿದ್ದು, ಹಂಗಾಮಿ ನ್ಯಾಯಮೂರ್ತಿ ಕಾಮೇಶ್ವರ ರಾವ್ ಮತ್ತು ನ್ಯಾ. ಸಿ ಎಂ ಜೋಶಿ ವಾದ ಆಲಿಸಿದ್ದಾರೆ. ಕಳೆದ ವಿಚಾರಣೆ ವೇಳೆ ಇಂದು ಅಂದ್ರೆ ಜೂನ್  10ಕ್ಕೆ ತನಿಖೆಯ  ರಿಪೋರ್ಟ್ ನೀಡುವಂತೆ ನ್ಯಾಯಲಯ ಪೀಠ ಸೂಚಿಸಿತ್ತು. ಇದೇ ವೇಳೆ ತನಿಖಾ ವರದಿ ಸಲ್ಲಿಕೆಗೆ ಅಡ್ವೊಕೇಟ್​ ಜನರಲ್​ ಸಮಯ ಕೋರಿದ್ರು. ಹೆಚ್ಚಿನ ಕಾಲಾವಕಾಶ ನೀಡಲು ಕೋರ್ಟ್ ನಿರಾಕರಿಸಿದೆ. ವರದಿ ಸಲ್ಲಿಕೆಗೆ ಕಾಲಾವಕಾಶ ನೀಡಿ ಹೈಕೋರ್ಟ್ ನ್ಯಾಯಾಧೀಶರ ಮುಂದೆ ತನಿಖಾ ವರದಿ ಸಲ್ಲಿಕೆಗೆ ಎಜಿ ಸಮಯಾವಕಾಶ ಕೋರಿ ವಾದ ಮಂಡಿಸಿದ್ರು. ಜ್ಯುಡಿಷಿಯಲ್ ತನಿಖೆ ನಡೀತಿದೆ. ಜಿಲ್ಲಾಧಿಕಾರಿ ನೇತೃತ್ವದಲ್ಲಿ ತನಿಖೆ ಆಗ್ತಿದೆ ಎಂದಿದ್ದಾರೆ. ಈ ವೇಳೆ ಪೀಠ, ಈಗ ಕೇಳಿದ್ದ ವರದಿ ಸಲ್ಲಿಕೆ ಮಾಡೋದಿಲ್ವಾ? ವರದಿ ಸಲ್ಲಿಸಲು ಏನು ಕಷ್ಟ ಎಂದು ಹಂಗಾಮಿ ಮುಖ್ಯ ನ್ಯಾ. ಕಾಮೇಶ್ವರ ರಾವ್ ಪ್ರಶ್ನೆ ಮಾಡಿದ್ದಾರೆ.

ಜೂನ್ 12ರೊಳಗೆ ವರದಿ ಸಲ್ಲಿಕೆಗೆ ಸೂಚನೆ

ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸಲಾಗುವುದು ಆದ್ರೆ ಕಾಲಾವಕಾಶ ನೀಡಿ ಎಂದು ಕೋರ್ಟ್ ಬಳಿ ಎಜಿ ಮನವಿ ಮಾಡಿದ್ರು. ಆದ್ರೆ ಹೈಕೋರ್ಟ್​, ವರದಿ ಸಲ್ಲಿಕೆಗೆ ಎರಡು ದಿನ ಮಾತ್ರ ಅವಕಾಶ ನೀಡಲಾಗುವುದು ಎಂದಿದೆ. ಅದಕ್ಕಿಂತ ಹೆಚ್ಚಿನ ಸಮಯ ನೀಡಲು ಸಾಧ್ಯವಿಲ್ಲ. ಜೂನ್ 12 ರೊಳಗೆ ಮುಚ್ಚಿದ ಲಕೋಟೆಯಲ್ಲಿ ವರದಿ ನೀಡಿ ಹೈಕೋರ್ಟ್ ಆದೇಶ ನೀಡಿದೆ. ಜೂನ್ 16 ರವರೆಗೆ ಕಾಲಾವಕಾಶ ನೀಡುವಂತೆ ಎಜಿ ಮನವಿ ಮಾಡಿದ್ರು. ಆದೇಶದ ಬಳಿಕ ನ್ಯಾಯಾಧೀಶರು ಜೂ.12 ಮಧ್ಯಾಹ್ನ 2.30ಕ್ಕೆ ವಿಚಾರಣೆ ಮುಂದೂಡಿಕೆ ಮಾಡಿದ್ದಾರೆ.

ಸೋಸಲೆಗೆ ಮಧ್ಯಂತರ ಪರಿಹಾರ ನಿರಾಕರಿಸಿದ ಕರ್ನಾಟಕ ಹೈಕೋರ್ಟ್

 11 ಜನರು ಮೃತಪಟ್ಟ ಪ್ರಕರಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು   ತಂಡದ ಮಾರ್ಕೆಟಿಂಗ್ ಮುಖ್ಯಸ್ಥ ನಿಖಿಲ್ ಸೋಸಲೆ ಅವರಿಗೆ ಯಾವುದೇ ಮಧ್ಯಂತರ ಪರಿಹಾರ ನೀಡಲು ಕರ್ನಾಟಕ ಹೈಕೋರ್ಟ್   ನಿರಾಕರಿಸಿದೆ. ನ್ಯಾಯಾಲಯವು ಅವರ ಅರ್ಜಿಯ ಮೇಲಿನ ಆದೇಶವನ್ನು ಜೂನ್ 11 ರವರೆಗೆ ಕಾಯ್ದಿರಿಸಿದೆ. ತಮ್ಮ ಬಂಧನವನ್ನು ಕಾನೂನುಬಾಹಿರ ಎಂದು ಆರೋಪಿಸಿ ನಿಖಿಲ್ ಸೋಸಲೆ ಅವರು ಹೈಕೋರ್ಟ್‌ನಲ್ಲಿ ರಿಟ್ ಅರ್ಜಿಯನ್ನು ಸಲ್ಲಿಸಿದ್ದಾರೆ. ಪೊಲೀಸ್ ಕ್ರಮವು ರಾಜಕೀಯ ನಿರ್ದೇಶನಗಳಿಂದ ಪ್ರಭಾವಿತವಾಗಿದೆ ಎಂದು ಅವರು ಆರೋಪಿಸಿದ್ದಾರೆ. ನಾಳೆ ನಿಖಿಲ್ ಸೋಸಲೆ ಭವಿಷ್ಯ ನಿರ್ಧಾರ ಆಗಲಿದ್ದು, ಬೇಲೆ ಸಿಗುತ್ತಾ ಅಥವಾ ಜೈಲೇ ಮುಂದುವರಿಯುತ್ತಾ ಅನ್ನೋ ಕುತೂಹಲ ಮನೆ ಮಾಡಿದೆ. ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್ 6ರಂದು ಆರ್‌ಸಿಬಿಯ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ನಿಖಿಲ್ ಸೋಸಲೆ, ಡಿಎನ್ಎ ಮ್ಯಾನೇಜ್‌ಮೆಂಟ್ ಸಿಬ್ಬಂದಿ ಸುನೀಲ್ ಮ್ಯಾಥ್ಯು, ಕಿರಣ್ ಮತ್ತು ಸುಮಂತ್ ಎಂಬುವವರನ್ನು ಕೇಂದ್ರ ಅಪರಾಧ ದಳ  ಬಂಧಿಸಿತ್ತು.

ರಾಜಭವನದಲ್ಲಿದ್ದ RCB ಸನ್ಮಾನಿಸುವ ಪ್ಲ್ಯಾನ್ ರದ್ದಾಗಿದ್ದೇಕೆ?

ನಗರದ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಕಾಲ್ತುಳಿತದ ಘಟನೆ ಹಲವು ತಿರುವುಗಳನ್ನು ಪಡೆಯುತ್ತದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ತುರ್ತಾಗಿ ದೆಹಲಿಗೆ ಬರುವಂತೆ ಹೈಕಮಾಂಡ್ ಸೂಚನೆಯನ್ನು ನೀಡಿದೆ.  ಇನ್ನು, ವಿಧಾನಸೌಧದಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ರಾಜ್ಯಪಾಲರಾದ  ಗೆಹ್ಲೋಟ್ ಕೂಡಾ ಭಾಗವಹಿಸಿದ್ದರು. ಅಸಲಿಗೆ, ರಾಜಭವನವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸನ್ಮಾನಿಸಲು ಯೋಚಿಸಿತ್ತು ಎನ್ನುವ ಮಾಹಿತಿಯನ್ನು ರಾಜಭವನದ ಮೂಲಗಳೇ ನೀಡಿವೆ. ರಾಯಲ್ ಚಾಲೆಂಜರ್ಸ್ ಆಟಗಾರರಿಗೆ ಸನ್ಮಾನ ಕಾರ್ಯಕ್ರಮ ಸರ್ಕಾರದ ಕಾರ್ಯಕ್ರಮವಲ್ಲ, ಅದನ್ನು ಕರ್ನಾಟಕ ಕ್ರಿಕೆಟ್ ಸಂಸ್ಥೆಯದ್ದು  . ಅವರೇ, ರಾಜ್ಯಪಾಲರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು ಎಂದು ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು.

ಆದ್ರೆ ಇದ್ದಕ್ಕೆ ಈಗ ಟ್ವಿಸ್ಟ್ ಸಿಕ್ಕಿದೆ. ಕರ್ನಾಟಕದ ರಾಜ್ಯಪಾಲರು ಆರ್‌ಸಿಬಿ ಆಟಗಾರರನ್ನು ರಾಜಭವನದಲ್ಲಿ ಸನ್ಮಾನಿಸಲು ಕಾರ್ಯಕ್ರಮ ಆಯೋಜಿಸಲು ಯೋಜಿಸಿದ್ದರು. ಆದರೆ, ಕಾರ್ಯಕ್ರಮವನ್ನು ವಿಧಾನಸೌಧದಲ್ಲಿ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು, ರಾಜ್ಯಪಾಲರನ್ನು ಅಧಿಕೃತವಾಗಿ ಆಹ್ವಾನಿಸಿದ್ರು ಎಂದು ರಾಜ್ಯಪಾಲರ ಕಚೇರಿ  ಹೇಳಿದೆ.

ಸಿಎಂ ಸಿದ್ದರಾಮಯ್ಯನವರ ಇಂದಿನ ಮತ್ತು ಹಿಂದಿನ ಹೇಳಿಕೆಗಳಲ್ಲಿ ಸಾಕಷ್ಟು ವ್ಯತ್ಯಾಸ ಕಂಡು ಬರುತ್ತಿರುವ ಹಿನ್ನಲೆಯಲ್ಲಿ ರಾಜಭವನ ಈ ಸ್ಪಷ್ಟನೆಯನ್ನು ನೀಡಿದೆ. ಕಾಲ್ತುಳಿತದ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾದ ಹಿನ್ನಲೆಯಲ್ಲಿ ಸಿಎಂ ಮೇಲಿನ ಹೇಳಿಕೆಯನ್ನು ನೀಡಿದ್ದಾರೆ.  ಕಾಲ್ತುಳಿತದ ಘಟನೆ ಮತ್ತು ಬೆಂಗಳೂರು ಕಮಿಷನರ್ ದಯಾನಂದ್ ಅವರ ಅಮಾನತಿನ ವಿಚಾರವನ್ನು ಇಟ್ಟುಕೊಂಡು, ಬಿಜೆಪಿ ಮತ್ತು ಜೆಡಿಎಸ್ ರಾಜಕೀಯ ಮಾಡುತ್ತಿವೆ. ಇದರಲ್ಲಿ, ಸರ್ಕಾರದ ಏನೂ ಲೋಪದೋಷಗಳಿಲ್ಲ ಎಂದು ಸಿದ್ದರಾಮಯ್ಯ, ವಿಪಕ್ಷಗಳ ನಿಲುವನ್ನು ಖಂಡಿಸಿದ್ದಾರೆ. ಈಗಾಗಲೇ, ಹಲವು ಕ್ರಮಗಳನ್ನು ಸರ್ಕಾರ ತೆಗೆದುಕೊಂಡಿದೆ ಎಂದು ಸಿಎಂ ಹೇಳಿದ್ದಾರೆ.

ಕಾರ್ಯಕ್ರಮ ಮತ್ತು ಕಾಲ್ತುಳಿತದ ಬಗ್ಗೆ ಆರಂಭಿಕ ಹಂತದಲ್ಲಿ ಹೆಚ್ಚಿನ ಮಾಹಿತಿ ನನಗಿರಲಿಲ್ಲ ಎಂದು ಸಿದ್ದರಾಮಯ್ಯ ಈಗಾಗಲೇ ಹೇಳಿದ್ದಾರೆ. ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮಕ್ಕೆ ಡಿಪಿಎಆರ್ ಇಲಾಖೆ ಅನುಮತಿಯನ್ನು ನೀಡಿತ್ತು. ಆದರೆ, ವಿಧಾನಸೌಧದ ಮೆಟ್ಟಿಲುಗಳಲ್ಲಿ ಸಮಾರಂಭ ನಡೆಸಲು ನಾನು ಹೇಳಿರಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಅಸಲಿಗೆ, ಐಪಿಎಲ್ ಫೈನಲ್ ಮರುದಿನ ವಿಜಯೋತ್ಸವ ನಡೆಸಲು ಬೆಂಗಳೂರು ಪೊಲೀಸರು ಅನುಮತಿಯನ್ನು ನೀಡಿರಲಿಲ್ಲ. ಅದರ ಬದಲು ಭಾನುವಾರ ಅಂದ್ರೆ ಜೂನ್8ಕ್ಕೆ  ನಡೆಸುವಂತೆ ಸೂಚಿಸಿತ್ತು. ಆದರೆ, ಕೆಲವು ಕಾರಣಗಳನ್ನು ನೀಡಿ, ಮರುದಿನವೇ ಸಂಭ್ರಮಾಚರಣೆ ಮಾಡಬೇಕೆಂದು ಹಠ ಹಿಡಿದ ಹಿನ್ನಲೆಯಲ್ಲಿ ಇಷ್ಟೆಲ್ಲಾ ಅನಾಹುತಕ್ಕೆ ಕಾರಣವಾಗಿದೆ ಅನ್ನೋ ಮಾತು ಕೇಳಿ ಬರ್ತಿದೆ.

 ಸರ್ಕಾರದ ವಿರುದ್ಧ ಸಾಲು ಸಾಲು ಆರೋಪ 

ರಾಜ್ಯ ಸರ್ಕಾರದ ವಿರುದ್ಧ ಇದೀಗ ಆರ್‌ಸಿಬಿ, KSCA ಮತ್ತು ಡಿಎನ್‌ಎ ಕಂಪನಿಗಳೇ ಮುಗಿಬಿದ್ದಿವೆ.ವಿಧಾನಸೌಧ ಮತ್ತು ಚಿನ್ನಸ್ವಾಮಿ ಕ್ರೀಡಾಂಗಣ ಎರಡೂ ಕಡೆ ವಿಜಯೋತ್ಸವ ಕಾರ್ಯಕ್ರಮ ನಡೆಸಬೇಕು ಎಂದು ಸರ್ಕಾರ ಕೈಗೊಂಡ ನಿರ್ಧಾರದಿಂದಲೇ ಕಾಲ್ತುಳಿತ ದುರಂತ ನಡೆದಿದೆ. ಸರ್ಕಾರ ವಿಧಾನಸೌಧದಲ್ಲಿ ಕಾರ್ಯಕ್ರಮ ಆಯೋಜಿಸಿದ್ದರಿಂದಲೇ ಲಕ್ಷಾಂತರ ಜನ ವಿಧಾನಸೌಧಕ್ಕೆ ಬಂದು ನಂತರ ಕ್ರೀಡಾಂಗಣಕ್ಕೆ ಬಂದಿದ್ದೇ ಕಾಲ್ತುಳಿತ ಸಂಭವಿಸಲು ಕಾರಣ ಎಂದು ಪ್ರತ್ಯಾರೋಪ ಮಾಡಿವೆ.

ತೆರೆದ ಬಸ್‌ನಲ್ಲಿ ಮೆರವಣಿಗೆ ನಡೆಸಲು ಅನುಮತಿ ಕೋರಿ ಜೂ.3 ರಂದು ಪತ್ರ ಬರೆಯಲಾಗಿತ್ತು. ಆದರೆ, ಇದಕ್ಕೆ ಪೊಲೀಸರು ಅನುಮತಿ ನಿರಾಕರಿಸಿದ್ದರು. ವಿಧಾನಸೌಧ ಹಾಗೂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ವಿಜಯೋತ್ಸವ ಕಾರ್ಯಕ್ರಮ ನಡೆಸಲು ಸರ್ಕಾರವೇ ಮುಖ್ಯಕಾರ್ಯದರ್ಶಿಯೊಂದಿಗೆ ಚರ್ಚಿಸಿ ಯೋಜನೆ ರೂಪಿಸಿತು. ಸರ್ಕಾರ ವಿಧಾನಸೌಧದಲ್ಲಿ ಕಾರ್ಯಕ್ರಮ ಆಯೋಜಿಸಿದ್ದರಿಂದಲೇ ಅಲ್ಲಿಗೆ ಲಕ್ಷಾಂತರ ಜನ ಬಂದಿದ್ದರು. ನಂತರ ಸ್ಟೇಡಿಯಂಗೆ ಬಂದಿದ್ದೇ ಕಾಲ್ತುಳಿತ ಸಂಭವಿಸಲು ಕಾರಣ ಎಂದು ಅರ್ಜಿದಾರ ಸಂಸ್ಥೆಗಳು ಅರ್ಜಿಯಲ್ಲಿ ಆರೋಪಿಸಿವೆ.

ವಿಧಾನಸೌಧದ ಕಾರ್ಯಕ್ರಮಕ್ಕೆ ಹೆಚ್ಚಿನ ಭದ್ರತೆ ನೀಡಿದ್ದ ಪೊಲೀಸರು, ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಅಗತ್ಯವಿದ್ದಷ್ಟು ಭದ್ರತೆ ನೀಡಿಲಿಲ್ಲ. ಅಲ್ಲಿ ಕಡಿಮೆ ಪ್ರಮಾಣದಲ್ಲಿ ಪೊಲೀಸರು ಇದ್ದರು. ಇದರಿಂದ ತಾವೇ 584 ಖಾಸಗಿ ಸಿಬ್ಬಂದಿಯನ್ನು ನೇಮಿಸಿಕೊಂಡಿದ್ದೆವು. ಮಧ್ಯಾಹ್ನ 3.30ಗೆ ಗೇಟ್ ತೆರೆದ ಬಳಿಕವೂ ಅಭಿಮಾನಿಗಳ ದಟ್ಟಣೆ ಇತ್ತು. ನಂತರ ಪೊಲೀಸರು ಬಂದು ಲಾಠಿ ಚಾರ್ಜ್ ನಡೆಸಿದ್ದರಿಂದ ಕಾಲ್ತುಳಿತ ಉಂಟಾಯಿತು. ಘಟನೆ ದಿನ ಪೊಲೀಸರಿಗೆ 2450 ಆಹಾರ ಪೊಟ್ಟಣ ಸಿದ್ದಪಡಿಸಲಾಗಿತ್ತು. ಆದರೆ ಪೊಲೀಸರು ಕಡಿಮೆ ಸಂಖ್ಯೆಯಲ್ಲಿದ್ದು. ಇದರಿಂದ ಮಧ್ಯಾಹ್ನ 600 ಆಹಾರ ಪೊಟ್ಟಣಗಳನ್ನು ಮಾತ್ರ ಸ್ವೀಕರಿಸಿದರು. ರಾತ್ರಿ ಭೋಜನಕ್ಕೆ ಮಾತ್ರ 2,450 ಆಹಾರ ಪೊಟ್ಟಣ ಸ್ವೀಕರಿಸಿದರು ಎಂದು ಅರ್ಜಿದಾರ ಸಂಸ್ಥೆಗಳು ಆರೋಪಿಸಿವೆ. ಒಟ್ನಲ್ಲಿ ಯಾರದ್ದೋ ತಪ್ಪಿಗೆ ಅಮಾಯಕ ಜೀವಗಳು ಪ್ರಾಣ ಬಿಟ್ಟುದ್ದು, ಈಗ ಒಬ್ಬರ ಮೇಲೆ ಒಬ್ಬೊಬ್ಬರು ಆರೋಪ  ಪ್ರತ್ಯಾರೋಪ ಮಾಡುತ್ತಾ ಕುಳಿತ್ತಿದ್ದಾರೆ.

Kishor KV

Leave a Reply

Your email address will not be published. Required fields are marked *