ಶ್ವಾನ ಬೊಗಳಿದ್ದಕ್ಕೆ ರೊಚ್ಚಿಗೆದ್ದ ವ್ಯಕ್ತಿ – ನಾಯಿ ಮಾಲೀಕ ಎಂದು ಅಮಾಯಕನಿಗೆ ಚಾಕು ಚುಚ್ಚಿಯೇ ಬಿಟ್ಟ!

ಶ್ವಾನ ಬೊಗಳಿದ್ದಕ್ಕೆ ರೊಚ್ಚಿಗೆದ್ದ ವ್ಯಕ್ತಿ – ನಾಯಿ ಮಾಲೀಕ ಎಂದು  ಅಮಾಯಕನಿಗೆ ಚಾಕು ಚುಚ್ಚಿಯೇ ಬಿಟ್ಟ!

ಬೆಂಗಳೂರು: ವ್ಯಕ್ತಿಯೊಬ್ಬ ಕೆಲಸ ಮುಗಿಸಿ ಬರುವ ವೇಳೆ ನಾಯಿಯೊಂದು ಬೊಗಳಿದೆ. ನಾಯಿ ಪಕ್ಕದಲ್ಲಿದ್ದ ವ್ಯಕ್ತಿಯೇ ತನ್ನ ಮೇಲೆ ಶ್ವಾನವನ್ನು ಛೂಬಿಟ್ಟಿದ್ದಾನೆಂದು ತಪ್ಪಾಗಿ ಭಾವಿಸಿ ದಾರಿಯಲ್ಲಿ ಹೋಗುತ್ತಿದ್ದ ವ್ಯಕ್ತಿಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಿರುವಂತಹ ಘಟನೆ ಮಲ್ಲೇಶ್ವರಂನ 7ನೇ ಕ್ರಾಸ್‌ನಲ್ಲಿ ನಡೆದಿದೆ.

ಹೆಚ್‌. ರಾಜು ಎಂಬಾತ ದಿನಗೂಲಿ ಮಾಡಿ ಮನೆಗೆ ಹೋಗುತ್ತಿದ್ದ. ಈ ವೇಳೆ ಆತನನ್ನು ಕಂಡು ನಾಯಿಯೊಂದು ಬೊಗಳಿದೆ. ರಾಜಾಜಿನಗರ ನಿವಾಸಿ ಬಾಲಸುಬ್ರಹ್ಮಣ್ಯ ಎಂಬುವವರು ಆತನ ಎದುರು ಇದ್ದರು. ಅವರನ್ನು ನೋಡಿದ ರಾಜು ಇವರೇ ಸಾಕು ನಾಯಿಯ ಮಾಲೀಕ ಎಂದು ತಪ್ಪಾಗಿ ಭಾವಿಸಿ, ಕೋಪಗೊಂಡು ಚಾಕುವಿನಿಂದ ಇರಿದಿದ್ದಾನೆ. ಇದೀಗ ಪೊಲೀಸರು ರಾಜು ಎಂಬಾತನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಇನ್ನೇನು ತಾಳಿ ಕಟ್ಟಬೇಕು ಅನ್ನುವಷ್ಟರಲ್ಲಿ ಮದುವೆ ಬೇಡ ಎಂದ ವಧು! –  ಕೊನೆಗೆ ಪ್ರಿಯಕರನ ಜೊತೆ ಹೋದ ಯುವತಿ

ಗಾಯಗೊಂಡಿರುವ ಬಾಲಸುಬ್ರಮಣ್ಯ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ಕುರಿತಾಗಿ ಬಾಲಸುಬ್ರಮಣ್ಯ ಮಾತನಾಡಿದ್ದು, ಆತ ನನ್ನ ಕಡೆಗೆ ಬರಲು ಆರಂಭಿಸಿದ್ದು, ಜೊತೆಗೆ ನನ್ನನ್ನು ನಿಂದಿಸಿದ. ಆತ ಏನು ಹೇಳುತ್ತಿದ್ದಾನೆಂದು ನನಗೆ ಅರ್ಥವಾಗಿಲ್ಲ. ನಾನು ವಿವರಿಸುವ ಮೊದಲೇ ನನ್ನ ಮೇಲೆ ಚಾಕುವಿನಿಂದ ಇರಿದಿದ್ದಾನೆ.

ನನ್ನ ಕೈ ಮತ್ತು ಬೆರಳುಗಳಿಗೂ ಚಾಕುವಿನಿಂದ ಇರಿದಿದ್ದಾನೆ. ನಾನು ನೋವಿನಿಂದ ನರಳಾಡಲು  ಪ್ರಾರಂಭಿಸಿದೆ. ಬಳಿಕ ಕೆಲವು ದಾರಿಹೋಕರು ನನ್ನನ್ನು ಆಸ್ಪತ್ರೆಗೆ ಸೇರಿಸಿದರು ಎಂದು ಬಾಲಸುಬ್ರಮಣ್ಯ ಹೇಳಿದ್ದಾರೆ ಎಂದು ವರದಿಯಾಗಿದೆ.

ಸದ್ಯ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಎಫ್‌ಐಆರ್‌ ದಾಖಲಿಸಿಕೊಂಡಿರುವ ಪೊಲೀಸ್​ ಎಚ್‌ ರಾಜು ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ.

suddiyaana