ಖರ್ಗೆ ಸೋಲಿಸಲು ರಣವ್ಯೂಹ! – ಬಿಜೆಪಿ ನಾಯಕರ ತಂತ್ರಗಾರಿಕೆ ಏನು..?

ಖರ್ಗೆ ಸೋಲಿಸಲು ರಣವ್ಯೂಹ! – ಬಿಜೆಪಿ ನಾಯಕರ ತಂತ್ರಗಾರಿಕೆ ಏನು..?

ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ ಹಬ್ಬ ಲೋಕಸಭಾ ಚುನಾವಣೆಗೆ ಇಡೀ ಭಾರತ ಸಜ್ಜಾಗುತ್ತಿದೆ. ಪ್ರಧಾನಿ ಮೋದಿ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ವಿಪಕ್ಷಗಳೆಲ್ಲಾ ಒಟ್ಟಾಗಿ ಬಿಜೆಪಿಯನ್ನ ಸೋಲಿಸೋಕೆ ರಣರಂತ್ರ ರೂಪಿಸುತ್ತಿವೆ. ಆದ್ರೆ ಮೈತ್ರಿಕೂಟದ ಪ್ರಭಾವಿ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆಯವ್ರನ್ನ ಸೋಲಿಸೋಕೆ ದೊಡ್ಡ ಚಕ್ರವ್ಯೂಹ ಹೆಣೆಯಲಾಗ್ತಿದೆ. ಸೋಲಿಲ್ಲದ ಸರದಾರನೆಂದೇ ಹೆಸರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತಮ್ಮ ಶಿಷ್ಯನಿಂದಲೇ ಸೋಲು ಕಂಡಿದ್ರು. ಈ ಬಾರಿಯೂ ಖರ್ಗೆಯವ್ರನ್ನ ಸೋಲಿಸೋಕೆ ರಾಜ್ಯ ಬಿಜೆಪಿ ನಾಯಕರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಅಷ್ಟಕ್ಕೂ ಏನದು ಪ್ಲ್ಯಾನ್..? ಖರ್ಗೆಗೆ ಹೇಗೆ ಎಫೆಕ್ಟ್ ಆಗುತ್ತೆ..? ಬಿಜೆಪಿ ನಾಯಕರ ತಂತ್ರಗಾರಿಕೆ ಏನು..? ಈ ಬಗೆಗಿನ ಕಂಪ್ಲೀಟ್ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಅರುಣ್ ಕುಮಾರ್ ಪುತ್ತಿಲ ಬೇಡಿಕೆಗೆ ಬಿಜೆಪಿ ನಾಯಕರಿಂದ ಅಸ್ತು – ಪುತ್ತಿಲ ಬಿಜೆಪಿಗೆ ಬರೋದು ಫಿಕ್ಸ್

ರಾಜ್ಯದಲ್ಲಿ ಕಳೆದ ವಿಧಾನಸಭೆ ಸೋಲಿನಿಂದ ಕಂಗೆಟ್ಟಿರೋ ಕಮಲ ಪಡೆ ಲೋಕಸಭೆಗೆ ಭರ್ಜರಿ ತಾಲೀಮು ನಡೆಸುತ್ತಿದೆ. ಶತಾಯಗತಾಯ ರಾಜ್ಯದಲ್ಲಿ 28 ಕ್ಕೆ 28 ಕ್ಷೇತ್ರಗಳನ್ನೂ ಗೆಲ್ಲೋಕೆ ಪಣ ತೊಟ್ಟಿದೆ. ಇದೇ ಕಾರಣಕ್ಕೆ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಸ್ಪರ್ಧೆಗಿಳಿಯಲು ಸಜ್ಜಾಗಿದೆ. ಆದ್ರೆ ಬಿಜೆಪಿಯ ಮೇನ್ ಟಾರ್ಗೆಟ್ ಆಗೊರೋದು ಮಲ್ಲಿಕಾರ್ಜುನ ಖರ್ಗೆ. ಎಐಸಿಸಿ ಅಧ್ಯಕ್ಷರಾಗಿರುವ ಖರ್ಗೆಯವರ ಕೋಟೆಯನ್ನ ಮತ್ತೊಮ್ಮೆ ಭೇದಿಸೋಕೆ ಮಾಸ್ಟರ್ ‌ಪ್ಲಾನ್ ರೂಪಿಸಿದ್ದಾರೆ.

ಖರ್ಗೆ ಸೋಲಿಸಲು ರಣವ್ಯೂಹ! 

ಕಲಬುರಗಿ ಜಿಲ್ಲೆ ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜು ಖರ್ಗೆಯವರ ತವರೂರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಖರ್ಗೆ ತವರೂರಲ್ಲಿ ಕಾಂಗ್ರೆಸ್ ಭರ್ಜರಿ ಜಯಗಳಿಸಿದೆ. ಕಲಬುರಗಿ ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳ ಪೈಕಿ 7 ರಲ್ಲಿ ಕಾಂಗ್ರೆಸ್ ಗೆದ್ದು ಬೀಗಿದೆ. ಕಾಂಗ್ರೆಸ್ ಇನ್ನೂ ಅದೇ ಗೆಲುವಿನ ಗುಂಗಿನಲ್ಲಿದ್ರೆ ಬಿಜೆಪಿ ಮಾತ್ರ ಈ ಬಾರಿ ಶತಾಯಗತಾಯ ಮತ್ತೊಮ್ಮೆ ಖರ್ಗೆ ಕೋಟೆಯನ್ನ ಭೇದಿಸೋಕೆ ಸಜ್ಜಾಗಿದೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಾಂಗ್ರೆಸ್ ತೊರೆದು ಬಿಜೆಪಿ ತೆಕ್ಕೆಗೆ ಮರಳುತ್ತಿದ್ದಂತೆ ಕಲಬುರಗಿಯಲ್ಲೂ ಘರ್ ವಾಪ್ಸಿ ಕಾರ್ಯಾಚರಣೆ ಜೋರಾಗಿದೆ. ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಬಾಬುರಾವ್ ಚಿಂಚನಸೂರಗೆ ಬಿಜೆಪಿ ಗಾಳ ಹಾಕಿದೆ ಎನ್ನಲಾಗಿದೆ. ಚಿಂಚನಸೂರ ಕಳೆದ ಬಾರಿ ಬಿಜೆಪಿ ಟಿಕೆಟ್ ಕೈತಪ್ಪಿದ ಕಾರಣ ಪಕ್ಷ ಬಿಟ್ಟು ಕಾಂಗ್ರೆಸ್ ಸೇರಿದ್ದರು. ಗುರುಮಿಠಕಲ್ ಕ್ಷೇತ್ರದಲ್ಲಿ ಕಾಂಗ್ರೆಸ್​ನಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು. ಕಲಬುರಗಿ ಭಾಗದ ಪ್ರಬಲ ಕೋಲಿ ಸಮಾಜದ ಮುಖಂಡರಾಗಿರೋ ಬಾಬುರಾವ್ ಚಿಂಚನಸೂರ‌ರನ್ನು ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಬಿಜೆಪಿಗೆ ಮತ್ತೆ ಕರೆತರಲು ಸಿದ್ದತೆ ನಡೆಸಿದ್ದಾರೆ.

ಈಗಾಗಲೇ ಬಿಜೆಪಿ ನಾಯಕರು ಚಿಂಚನಸೂರ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಕಲಬುರಗಿ ಲೋಕಸಭಾ ಕ್ಷೇತ್ರದ ಬಿಜೆಪಿ ಉಸ್ತುವಾರಿ ಹೊಣೆ ಹೊತ್ತಿರುವ ಸುರಪುರ ಮಾಜಿ ಶಾಸಕ ರಾಜುಗೌಡ ಕಲಬುರಗಿ  ಕ್ಷೇತ್ರವನ್ನ ಮತ್ತೆ ಉಳಿಸಿಕೊಳ್ಳಲು ಈಗಿನಿಂದಲೇ ತಂತ್ರಗಾರಿಕೆ ಮಾಡ್ತಿದ್ದಾರೆ. ಯಾಕಂದ್ರೆ ಕಲಬುರಗಿ ಲೋಕಸಭಾ ಕ್ಷೇತ ವ್ಯಾಪ್ತಿಯಲ್ಲಿ ಕೋಲಿ ಸಮಾಜದ ಮತಗಳು ಹೆಚ್ಚಿವೆ. ಕೋಲಿ ಸಮಾಜಕ್ಕೆ ಸೇರಿದ ಚಿಂಚನಸೂರ ಅವರನ್ನ ಬಿಜೆಪಿಗೆ ಸೆಳೆದ್ರೆ ಅನೂಕುಲವಾಗುತ್ತೆ ಅನ್ನೋದು ಬಿಜೆಪಿ ನಾಯಕರ ಲೆಕ್ಕಾಚಾರ.

ಕೋಲಿ ಸಮಾಜದ ಮೇಲೆ ಕಣ್ಣು!   

‌ಕಲಬುರಗಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಒಟ್ಟು ಮತದಾರರ ಸಂಖ್ಯೆ 19 ಲಕ್ಷದ 76 ಸಾವಿರ.. ಈ ಪೈಕಿ 3 ಲಕ್ಷಕ್ಕೂ ಹೆಚ್ಚು ಕೋಲಿ ಸಮಾಜದ ಮತದಾರರಿದ್ದಾರೆ. ಈ ಮತಗಳ ಮೇಲೆ ಕಣ್ಣಿಟ್ಟೇ ಬಾಬುರಾವ್ ಚಿಂಚನಸೂರಗೆ ಬಿಜೆಪಿ ಮರಳಿ ಗಾಳ ಹಾಕಿದೆ. ಯಾಕಂದ್ರೆ ಕಳೆದ ಲೋಕಸಭೆ ಚುನಾವಣೆಯಲ್ಲಿ ಬಾಬುರಾವ್ ಚಿಂಚನಸೂರ್, ಮಾಲೀಕಯ್ಯ ಗುತ್ತೆದಾರ್ ಅವರಂತಹ ಹಿಂದುಳಿದ ವರ್ಗದ ನಾಯಕರ‌ನ್ನ ಬಿಜೆಪಿ ತನ್ನತ್ತ ಸೆಳೆದಿತ್ತು. ಘಟಾನುಘಟಿ ನಾಯಕರು ಖರ್ಗೆಗೆ ಕೈ ಕೊಟ್ಟು ಕಮಲ ಮುಡಿದಿದ್ದರು. ಅದಕ್ಕಾಗೇ 2019 ರಲ್ಲಿ ಖರ್ಗೆ ಮೊದಲ ಬಾರಿಗೆ ಸೋಲಿನ ಕಹಿ ಅನುಭವಿಸಿದ್ದರು. ಸದ್ಯ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ತೊರೆದ ಬಾಬುರಾವ್ ಚಿಂಚನಸೂರ್, ನಿತೀನ್ ಗುತ್ತೆದಾರರಂತ ಮುಖಂಡರನ್ನ ಬಿಜೆಪಿ ಮತ್ತೊಮ್ಮೆ ಸೆಳೆಯುತ್ತಿದೆ. ಬಿಜೆಪಿಯಿಂದ ಟಿಕೆಟ್ ಕೈತಪ್ಪಿದ್ದಕ್ಕೆ ನಿತೀನ್ ಗುತ್ತೆದಾರ್ ಅಫಜಲಪುರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಬಿಜೆಪಿ ಸೋಲಿಗೆ ಕಾರಣವಾಗಿದ್ದರು. ಅಲ್ಲದೇ ಬರೋಬ್ಬರಿ 51 ಸಾವಿರಕ್ಕಿಂತ ಹೆಚ್ಚು ಮತ ಪಡೆದಿದ್ದರು. ಹೀಗಾಗಿ ಗುತ್ತೇದಾರ್ ವಾಪಸ್ ಕರೆತರೋಕೆ ಬಿಜೆಪಿ ನಾಯಕ ಸಿ.ಟಿ ರವಿ ಗೌಪ್ಯ ಮಾತುಕತೆ ನಡೆಸಿದ್ದಾರೆ.

ಬಿಜೆಪಿ ತೊರೆದಿದ್ದ ನಾಯಕರನ್ನು ಮರಳಿ ಪಕ್ಷಕ್ಕೆ ಕರೆತರಲು ಭರ್ಜರಿ ಪ್ಲ್ಯಾನ್ ನಡೆದಿದೆ. ಇದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಕೂಡ ಒಪ್ಪಿಗೆ ನೀಡಿದ್ದಾರೆ. ಒಟ್ಟಾರೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಈ ಬಾರಿ ಚುನಾವಣೆಗೆ ಸ್ಪರ್ಧಿಸೋ ಬಗ್ಗೆಯೇ ಇನ್ನೂ ಅಂತಿಮವಾಗಿಲ್ಲ. ಆದ್ರೆ ಯಾರೇ ಸ್ಪರ್ಧಿಸಿದರೂ ಕಲಬುರಗಿಯಲ್ಲಿ ಮತ್ತೊಮ್ಮೆ ಕಮಲ ಅರಳಲೇಬೇಕು ಎನ್ನೋದು ಕಮಲ ಪಡೆಯ ಉದ್ದೇಶ. ಅದಕ್ಕಾಗಿ  ಎಲ್ಲಾ ರಣತಂತ್ರಗಳ‌ನ್ನ ಹೆಣೆಯುತ್ತಿದೆ. ಕಲಬುರಗಿ ಕ್ಷೇತ್ರ ಕೂಡ ಈ ಬಾರಿ ಹೈವೋಲ್ಟೇಜ್ ಕಣವಾಗೋದ್ರಲ್ಲಿ ಯಾವುದೇ ಡೌಟ್ ಇಲ್ಲ.

Shwetha M